ವಿಬಿ-ಜಿ ರಾಮ್ ಜಿ ಮಸೂದೆಗೆ ಸೋನಿಯಾ ಗಾಂಧಿ ತೀವ್ರ ಆಕ್ರೋಶ
x

'ವಿಬಿ-ಜಿ ರಾಮ್ ಜಿ' ಮಸೂದೆಗೆ ಸೋನಿಯಾ ಗಾಂಧಿ ತೀವ್ರ ಆಕ್ರೋಶ

ಕೇಂದ್ರ ಸರ್ಕಾರವು ಮನರೇಗಾವನ್ನು ದುರ್ಬಲಗೊಳಿಸುವುದರ ಮೂಲಕ ದೇಶಾದ್ಯಂತ ಕೋಟ್ಯಂತರ ರೈತರು, ಕಾರ್ಮಿಕರು ಮತ್ತು ಭೂಹೀನರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ ಎಂದು ಸೋನಿಯಾ ಆರೋಪಿಸಿದ್ದಾರೆ.


Click the Play button to hear this message in audio format

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿರುವ 'ವಿಬಿ-ಜಿ ರಾಮ್ ಜಿ' ಮಸೂದೆಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯ ಮೂಲಕ ಮೋದಿ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು "ಹತ್ತಿಕ್ಕುತ್ತಿದೆ" ಎಂದು ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ವಿಡಿಯೋ ಸಂದೇಶದ ಮೂಲಕ ಮಾತನಾಡಿರುವ ಸೋನಿಯಾ ಅವರು, ಈ ಹೊಸ ಮಸೂದೆಯನ್ನು ಮನರೇಗಾವನ್ನು ರದ್ದುಗೊಳಿಸುವ ಉದ್ದೇಶ ಹೊಂದಿರುವ 'ಕರಾಳ ಕಾನೂನು' ಎಂದು ಬಣ್ಣಿಸಿದ್ದಾರೆ. ದೇಶಾದ್ಯಂತ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಈ ಕಾನೂನನ್ನು ಪ್ರತಿರೋಧಿಸುತ್ತಾರೆ ಎಂದು ಅವರು ಶಪಥ ಮಾಡಿದ್ದಾರೆ.

ಕಾರ್ಮಿಕರ ಹಿತಾಸಕ್ತಿಯ ಮೇಲೆ ದಾಳಿ

ಕೇಂದ್ರ ಸರ್ಕಾರವು ಮನರೇಗಾವನ್ನು ದುರ್ಬಲಗೊಳಿಸುವುದರ ಮೂಲಕ ದೇಶಾದ್ಯಂತ ಕೋಟ್ಯಂತರ ರೈತರು, ಕಾರ್ಮಿಕರು ಮತ್ತು ಭೂಹೀನರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ. ಕಳೆದ 11 ವರ್ಷಗಳಿಂದ ಗ್ರಾಮೀಣ ಬಡವರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದರು.

20 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮನರೇಗಾ ಕಾಯಿದೆಯನ್ನು ಸಂಸತ್ತಿನಲ್ಲಿ ಒಮ್ಮತದಿಂದ ಅಂಗೀಕರಿಸಿದ್ದ ಸಮಯವನ್ನು ಅವರು ನೆನಪಿಸಿಕೊಂಡರು. ಮನರೇಗಾದಿಂದಾಗಿ ಉದ್ಯೋಗ ಅರಸಿ ಹೋಗುವ ವಲಸೆ ನಿಂತಿತು, ಉದ್ಯೋಗಕ್ಕೆ ಕಾನೂನುಬದ್ಧ ಹಕ್ಕು ದೊರೆಯಿತು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಿದಂತಾಯಿತು ಎಂದರು.

"ಮನರೇಗಾದ ಮೂಲಕ, ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಬಲ ಹೆಜ್ಜೆಯನ್ನು ಇಡಲಾಗಿತ್ತು," ಎಂದು ಅವರು ಹೇಳಿದರು.

ಚರ್ಚೆ ಇಲ್ಲದೆ ಬದಲಾವಣೆ: ಸೋನಿಯಾ ಆರೋಪ

ಇತ್ತೀಚೆಗೆ ಸರ್ಕಾರವು ಮನರೇಗಾ ಮೇಲೆ ಬುಲ್ಡೋಜರ್ ಓಡಿಸಿರುವುದು ವಿಷಾದನೀಯ. ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಲ್ಲದೆ, ಯಾವುದೇ ಸಮಾಲೋಚನೆ ಇಲ್ಲದೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ವಿರೋಧ ಪಕ್ಷದೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಅದರ ಸ್ವರೂಪ ಮತ್ತು ರಚನೆಯನ್ನು ಬದಲಾಯಿಸಲಾಗಿದೆ," ಎಂದು ಕಾಂಗ್ರೆಸ್ ನಾಯಕಿ ಆರೋಪಿಸಿದರು.

ಹೊಸ ಕಾನೂನಿನಡಿಯಲ್ಲಿ, ಯಾರಿಗೆ ಎಷ್ಟು ಉದ್ಯೋಗ, ಎಲ್ಲಿ ಮತ್ತು ಯಾವ ರೀತಿಯಲ್ಲಿ ಸಿಗಬೇಕು ಎಂಬುದನ್ನು ನೆಲದ ವಾಸ್ತವಾಂಶಗಳಿಂದ ಸಂಪೂರ್ಣವಾಗಿ ದೂರವಿರುವ ದಿಲ್ಲಿಯಲ್ಲಿರುವ ಕೇಂದ್ರ ಸರ್ಕಾರವೇ ನಿರ್ಧರಿಸಲಿದೆ ಎಂದು ಅವರು ಟೀಕಿಸಿದರು.

ಕೆಳಹಂತದಲ್ಲಿ ಹೋರಾಟಕ್ಕೆ ಕಾಂಗ್ರೆಸ್‌ ಸಿದ್ಧತೆ

ಮನರೇಗಾ ಕಾನೂನನ್ನು ಜಾರಿಗೆ ತರುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿತ್ತು. ಅದು ಕೇವಲ ಒಂದು ಪಕ್ಷಕ್ಕೆ ಸಂಬಂಧಿಸಿದ ವಿಷಯವಾಗಿರದೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಜನರ ಹಿತಾಸಕ್ತಿಗೆ ಸಂಪರ್ಕ ಹೊಂದಿತ್ತು. ಈ ಕಾನೂನನ್ನು ದುರ್ಬಲಗೊಳಿಸುವುದರ ಮೂಲಕ ಮೋದಿ ಸರ್ಕಾರವು ಗ್ರಾಮೀಣ ವಲಯದ ಕೋಟ್ಯಂತರ ಬಡವರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ ಎಂದು ಸೋನಿಯಾ ಗಾಂಧಿ ಹೇಳಿದರು.

"ಈ ದಾಳಿಯನ್ನು ಎದುರಿಸಲು ನಾವೆಲ್ಲರೂ ಸಿದ್ಧರಿದ್ದೇವೆ. ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಬಡ ಸಹೋದರ ಸಹೋದರಿಯರಿಗೆ ಉದ್ಯೋಗದ ಹಕ್ಕನ್ನು ಭದ್ರಪಡಿಸಲು ನಾನು ಹೋರಾಡಿದ್ದೆ; ಇಂದು ಸಹ ಈ ಕರಾಳ ಕಾನೂನಿನ ವಿರುದ್ಧ ಹೋರಾಡಲು ಬದ್ಧಳಾಗಿದ್ದೇನೆ. ನನ್ನಂತೆ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ನಿಮ್ಮೊಂದಿಗೆ ನಿಲ್ಲುತ್ತಾರೆ," ಎಂದು ಅವರು ತಮ್ಮ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾವಾಗ ಜಾರಿಯಾದ ಕಾನೂನು

ಗುರುವಾರದಂದು ಸಂಸತ್ತಿನಲ್ಲಿ 'ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಔರ್ ಆಜೀವಿಕಾ ಮಿಷನ್ (ಗ್ರಾಮೀಣ)' (VB-G RAM G) ಮಸೂದೆಯು ಅಂಗೀಕರಿಸಲ್ಪಟ್ಟಿದೆ. ಈ ಮಸೂದೆಯು 20 ವರ್ಷಗಳ ಹಳೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆಯ ಸ್ಥಾನ ಪಡೆದುಕೊಂಡಿದೆ. ಹೊಸ ಮಸೂದೆಯು ಪ್ರತಿ ವರ್ಷ 125 ದಿನಗಳ ಗ್ರಾಮೀಣ ವೇತನ ಉದ್ಯೋಗವನ್ನು ಖಾತರಿಪಡಿಸುತ್ತದೆ. ಹಳೆಯ ಯೋಜನೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಈ ಮಸೂದೆ ಅಗತ್ಯ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸಮರ್ಥಿಸಿಕೊಂಡಿದ್ದಾರೆ.

ಈ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಆದರೆ ವಿರೋಧ ಪಕ್ಷವು ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಕ್ಕೆ ಹಾಗೂ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೇರಿದ್ದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತ್ತು.

Read More
Next Story