
ಬಾಹ್ಯಾಕಾಶಕ್ಕೆ ಹಾರಲು ಸಿದ್ದರಾಗಿರುವ ಶುಭಾಂಶು ಶುಕ್ಲಾ
Shubhanshu Shukla| ಬೆಂಗಳೂರಿನ ನೆನಪು, ಮೈಸೂರಿನ ಆಹಾರದೊಂದಿಗೆ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ ಶುಭಾಂಶು ಶುಕ್ಲಾ!
ತಾಂತ್ರಿಕ ಜ್ಞಾನ ಮತ್ತು ಐಐಎಸ್ಸಿಯ ಪ್ರಮುಖ ವೈಜ್ಞಾನಿಕ ಸಮುದಾಯದೊಂದಿಗಿನ ಒಡನಾಟವು ಶುಭಾಂಶು ಶುಕ್ಲಾ ಪರೀಕ್ಷಾ ಪೈಲಟ್ ಆಗಿ ಮಾತ್ರವಲ್ಲದೆ, ಬಾಹ್ಯಾಕಾಶ ಹಾರಾಟದಂತಹ ಕಠಿಣ ಸವಾಲುಗಳಿಗೆ ಸಿದ್ಧಪಡಿಸಿದೆ.
ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಲು ಕ್ಷಣಗಣನೆ ಆರಂಭವಾಗಿದೆ. ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಕ್ಕೆ ಕಾಲಿಡುವ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರ ಈ ಬಾಹ್ಯಾಕಾಶ ಯಾನವು ಕೇವಲ ವೈಜ್ಞಾನಿಕ ಸಾಧನೆಯಾಗಿರದೆ, ಬೆಂಗಳೂರಿನೊಂದಿಗಿನ ಅವರ ಆಳವಾದ ಸಂಬಂಧ ಮತ್ತು ಮೈಸೂರಿನ ಆಹಾರದಂತಹ ಭಾವನಾತ್ಮಕ ನಂಟನ್ನೂ ಹೊಂದಿದೆ. ಇಡೀ ದೇಶದ ಗಮನ ಸೆಳೆದಿರುವ ಈ ಐತಿಹಾಸಿಕ ಪಯಣ ಮುಂದಿನ ಗುರುವಾರ (ಜೂನ್ ೧೯ರಂದು) ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಪ್ರಾರಂಭವಾಗಲಿದೆ.
ಅಂದ ಹಾಗೆ, ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ ಶುಭಾಂಶು ಶುಕ್ಲಾ ಅವರ ವೃತ್ತಿಪರ ಮತ್ತು ಶೈಕ್ಷಣಿಕ ಜೀವನದಲ್ಲಿ ಬೆಂಗಳೂರು ಮಹತ್ತರ ಪಾತ್ರ ವಹಿಸಿದೆ. ಅವರ ಉನ್ನತ ಶಿಕ್ಷಣವು ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿ (ಎಂ.ಟೆಕ್) ಪದವಿಯೊಂದಿಗೆ ಮುಗಿದಿದೆ.
ತಾಂತ್ರಿಕ ಜ್ಞಾನ ಮತ್ತು ಐಐಎಸ್ಸಿಯ ಪ್ರಮುಖ ವೈಜ್ಞಾನಿಕ ಸಮುದಾಯದೊಂದಿಗಿನ ಒಡನಾಟವು ಅವರನ್ನು ಪರೀಕ್ಷಾ ಪೈಲಟ್ ಆಗಿ ಮಾತ್ರವಲ್ಲದೆ, ಬಾಹ್ಯಾಕಾಶ ಹಾರಾಟದಂತಹ ಕಠಿಣ ಸವಾಲುಗಳಿಗೆ ಸಿದ್ಧಪಡಿಸಿದೆ. 2019 ರಲ್ಲಿ ಭಾರತದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕಾಗಿ ಆಯ್ಕೆಯಾದ ನಂತರ, ಶುಭಾಂಶು ಅವರು ಬೆಂಗಳೂರಿನಲ್ಲಿರುವ ಇಸ್ರೋದ ಗಗನಯಾತ್ರಿ ತರಬೇತಿ ಸಂಸ್ಥೆಯಲ್ಲಿ ಕಠಿಣ ತರಬೇತಿಯನ್ನು ಪಡೆದಿದ್ದಾರೆ.
'ಗಗನಯಾನ್' ಮಿಷನ್ಗೆ ಮತ್ತು ಅವರು ಭಾಗವಹಿಸಲಿರುವ 'ಆಕ್ಸಿಯಮ್ ಮಿಷನ್ 4 (Ax-4)' ನಂತಹ ಕಾರ್ಯಾಚರಣೆಗಳಿಗೆ ಈ ತರಬೇತಿ ಅತ್ಯಗತ್ಯವಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿಯೇ, ಶುಭಾಂಶು ಅವರ ಈ ಬಾಹ್ಯಾಕಾಶ ಯಾನವು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಅವರೊಂದಿಗೆ, ಬೆಂಗಳೂರಿನ ಐಐಎಸ್ಸಿ ವಿನ್ಯಾಸಗೊಳಿಸಿದ ವಿಶಿಷ್ಟವಾದ ಪೋಸ್ಟ್ಕಾರ್ಡ್ಗಳು ಸಹ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿವೆ/ ಇದು ದೇಶದ ಪ್ರಮುಖ ವಿಜ್ಞಾನ ಸಂಸ್ಥೆಯೊಂದರ ಬಾಹ್ಯಾಕಾಶ ಆಕಾಂಕ್ಷೆಗಳಿಗೆ ಸಾಂಕೇತಿಕ ಗೌರವ
ಬಾಹ್ಯಾಕಾಶದಲ್ಲಿ ಮೈಸೂರಿನ ಸ್ವಾದ : ಡಿಎಫ್ಆರ್ಎಲ್ನ ಕೊಡುಗೆ
ಶುಭಾಂಶು ಶುಕ್ಲಾ ಒಳಗೊಂಡಂತೆ ನಾಲ್ವರು ಗಗನಯಾತ್ರಿಗಳು ತಮ್ಮ ಬಾಹ್ಯಾಕಾಶ ಯಾನದಲ್ಲಿ ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ಆರ್ಎಲ್) ತಯಾರಿಸಿರುವ ವಿವಿಧ ಭಾರತೀಯ ಭಕ್ಷ್ಯಗಳನ್ನು ಸವಿಯಲಿದ್ದಾರೆ. ಮಾವಿನ ರಸ, ಹೆಸರು ಬೇಳೆ ಹಲ್ವಾ, ಕ್ಯಾರೆಟ್ ಹಲ್ವಾ ಹಾಗೂ ಕೆಲವು ವಿಧದ ಅನ್ನವೂ ಸೇರಿದಂತೆ ಭಾರತೀಯ ಅಡುಗೆಯ ವೈವಿಧ್ಯಮಯ ರುಚಿಗಳು ಬಾಹ್ಯಾಕಾಶದಲ್ಲಿ ಲಭ್ಯವಾಗಲಿವೆ. ನಾಸಾ ತನ್ನ ಗಗನಯಾನಿಗಳಿಗೆ 'ಸ್ಪೇಸ್ ಫುಡ್ ಸಿಸ್ಟಮ್ಸ್ ಲ್ಯಾಬೋರೇಟರಿ'ಯಿಂದ ತಯಾರಿಸಿದ ಆಹಾರವನ್ನು ನೀಡಲಾಗುತ್ತದೆ. ಡಿಎಫ್ಆರ್ಎಲ್ನ ಈ ಕೊಡುಗೆ ಭಾರತದ ಸ್ವಾವಲಂಬನೆ ಮತ್ತು ವೈಜ್ಞಾನಿಕ ಸಾಮರ್ಥ್ಯಕ್ಕೆ ಮತ್ತೊಂದು ನಿದರ್ಶನವಾಗಿದೆ. ಶುಭಾಂಶು ಶುಕ್ಲಾ ಅವರು ಈಗಾಗಲೇ ಡಿಎಫ್ಆರ್ಎಲ್ ತಯಾರಿಸಿದ್ದ 50ಕ್ಕೂ ಹೆಚ್ಚು ಆಹಾರ ಮಾದರಿಗಳನ್ನು ರುಚಿ ನೋಡಿದ್ದು, ಬಾಹ್ಯಾಕಾಶ ಯಾತ್ರೆಯಲ್ಲಿ ಆಹಾರ ಆಯ್ಕೆಗಳನ್ನು ಮೌಲ್ಯಮಾಪನ ಮಾಡುವುದು ಈ ಅಧಿವೇಶನದ ಉದ್ದೇಶವಾಗಿತ್ತು.
ಆಕ್ಸಿಯಮ್-4 ಮಿಷನ್: 'ಮಿಷನ್ ಆಕಾಶ್ ಗಂಗಾ'ದ ಹೆಜ್ಜೆಗಳು
ಶುಭಾಂಶು ಶುಕ್ಲಾ ಅವರು 'ಆಕ್ಸಿಯಮ್-4' ಮಿಷನ್ ಅಡಿಯಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುತ್ತಿದ್ದಾರೆ. ಈ ಮಿಷನ್ಗೆ 'ಮಿಷನ್ ಆಕಾಶ್ ಗಂಗಾ' ಎಂಬ ಅಡ್ಡಹೆಸರು ಸಹ ಇದೆ. ಆರಂಭದಲ್ಲಿ ಜೂನ್ 10 ರಂದು ಹಾರಾಟ ನಡೆಸಬೇಕಿದ್ದರೂ, ಹವಾಮಾನ ವೈಪರೀತ್ಯದಿಂದಾಗಿ ಅದು ಮುಂದೂಡಲ್ಪಟ್ಟಿತ್ತು. ಈಗ, ಜೂನ್ 11, 2025 ರಂದು ಭಾರತೀಯ ಕಾಲಮಾನ ಸಂಜೆ 5.30 ಕ್ಕೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ಮಹತ್ವದ ಯಾನ ಆರಂಭವಾಗಲಿದೆ. ಸ್ಪೇಸ್ಎಕ್ಸ್ನ ಕ್ರೂ ಡ್ರ್ಯಾಗನ್ C213 ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ISS ಗೆ ಪ್ರಯಾಣಿಸಲಿದ್ದಾರೆ. ಈ ಕಾರ್ಯಾಚರಣೆಗೆ ಭಾರತ ಸರ್ಕಾರ ಸುಮಾರು ₹550 ಕೋಟಿಗಳನ್ನು ವಿನಿಯೋಗಿಸಿದೆ. ಆಕ್ಸ್-4 ಮಿಷನ್ ಸ್ಪೇಸ್ಎಕ್ಸ್ನ 53ನೇ ಡ್ರ್ಯಾಗನ್ ಮಿಷನ್ ಆಗಿದ್ದು, ಶುಭಾಂಶು ಶುಕ್ಲಾ ಅವರಲ್ಲದೆ, ಯುಎಸ್ ಕಮಾಂಡರ್ ಪೆಗ್ಗಿ ವಿಟ್ಟನ್, ಪೋಲೆಂಡ್ನ ಸ್ಲಾವೋಜ್ ಉಜ್ನಾನ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಪು ಕೂಡ ತಂಡದಲ್ಲಿ ಇದ್ದಾರೆ.
ಬಾಹ್ಯಾಕಾಶದಲ್ಲಿ ವೈಜ್ಞಾನಿಕ ಪ್ರಯೋಗಗಳು ಮತ್ತು ಮುಂದಿನ ದೃಷ್ಟಿ
ಆಕ್ಸಿಯಮ್-4 ಕಾರ್ಯಾಚರಣೆಯಲ್ಲಿ ಶುಭಾಂಶು ಶುಕ್ಲಾ ಅವರನ್ನು ಪೈಲಟ್ ಆಗಿ ಆಯ್ಕೆ ಮಾಡಲಾಗಿದೆ. ಅವರು ಬಾಹ್ಯಾಕಾಶ ಕೇಂದ್ರದಲ್ಲಿ ಏಳು ಪ್ರಮುಖ ಪ್ರಯೋಗಗಳನ್ನು ನಡೆಸಲಿದ್ದಾರೆ. ಇವುಗಳಲ್ಲಿ ಸಸ್ಯ ಬೀಜಗಳು ಮತ್ತು ಮಾನವ ದೇಹದ ಮೇಲೆ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮದ ಅಧ್ಯಯನಗಳು ಮುಖ್ಯವಾಗಿವೆ. ಇಸ್ರೋ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ (DBT) ಸಹಾಯದೊಂದಿಗೆ, ಮೆಂತ್ಯೆ ಮತ್ತು ಹೆಸರುಕಾಳಿನ ಮೊಳಕೆಯೊಡೆಯುವ ಪ್ರಕ್ರಿಯೆಯನ್ನು ಬಾಹ್ಯಾಕಾಶದಲ್ಲಿ ಪ್ರಯೋಗಿಸಿ, ನಂತರ ಭೂಮಿಗೆ ಮರಳಿ ತಂದು ಬೆಳೆಸುವ ಪ್ರಯೋಗವನ್ನು ನಡೆಸಲಾಗುವುದು. ದೀರ್ಘಾವಧಿಯ ಬಾಹ್ಯಾಕಾಶ ಪ್ರಯಾಣಕ್ಕಾಗಿ ಪೋಷಣೆ ಮತ್ತು ಜೀವ ಬೆಂಬಲ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಇದಲ್ಲದೆ, ಅವರು ನಾಸಾ ಸಹಯೋಗದೊಂದಿಗೆ ಐದು ಹೆಚ್ಚುವರಿ ಪ್ರಯೋಗಗಳಲ್ಲಿ ಭಾಗಿಯಾಗಿದ್ದಾರೆ.
ಶುಭಾಂಶು ಶುಕ್ಲಾ ಅವರ ಮಿಲಿಟರಿ ವೃತ್ತಿಜೀವನವೂ ಗಮನಾರ್ಹವಾಗಿದೆ. 2006 ರಲ್ಲಿ ಭಾರತೀಯ ವಾಯುಪಡೆಯಲ್ಲಿ ಸೇವೆ ಆರಂಭಿಸಿದ ಅವರು, MiG-21, MiG-29, ಸುಖೋಯ್-30 MKI, ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು AN-32 ನಂತಹ ಅನೇಕ ಫೈಟರ್ ಮತ್ತು ಸಾರಿಗೆ ವಿಮಾನಗಳನ್ನು ಹಾರಿಸಿದ್ದಾರೆ. ಅವರಿಗೆ ಮಾರ್ಚ್ 2024 ರಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆಯನ್ನು ನೀಡಲಾಯಿತು. 2019 ರಲ್ಲಿ ಇಸ್ರೋ ಗಗನಯಾನ ಮಿಷನ್ಗಾಗಿ ಅವರನ್ನು ಆಯ್ಕೆ ಮಾಡಿದ ನಂತರ, ಅವರು ರಷ್ಯಾದ ಯೂರಿ ಗಗಾರಿನ್ ತರಬೇತಿ ಕೇಂದ್ರದಲ್ಲಿ ಸುಮಾರು ಒಂದು ವರ್ಷ ಕಠಿಣ ತರಬೇತಿ ಪಡೆದರು. ಫೆಬ್ರವರಿ 2024 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಂಶು ಅವರನ್ನು 'ಗಗನಯಾನ'ದ ನಾಲ್ಕು ಸಂಭಾವ್ಯ ಗಗನಯಾತ್ರಿಗಳಲ್ಲಿ ಸೇರಿಸಿದ್ದರು.
ರಾಕೇಶ್ ಶರ್ಮಾ ನಂತರ ಎರಡನೆಯವರು
1984 ರಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಮಿಷನ್ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ರಾಕೇಶ್ ಶರ್ಮಾ ನಂತರ, ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಕಾಲಿಡಲಿರುವ ಎರಡನೇ ಭಾರತೀಯರಾಗಿದ್ದಾರೆ. ರಾಕೇಶ್ ಶರ್ಮಾ ಬಾಹ್ಯಾಕಾಶದಿಂದ ಭಾರತವನ್ನು ನೋಡುತ್ತಾ 'ಸಾರೆ ಜಹಾಂ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ' ಎಂದು ಹಾಡಿದ್ದರು. ಇದೀಗ, ಶುಭಾಂಶು ಶುಕ್ಲಾ ಅವರ ಈ ಬಾಹ್ಯಾಕಾಶ ಹಾರಾಟಕ್ಕೆ ಇಡೀ ಭಾರತ ಶುಭ ಹಾರೈಸುತ್ತಿದೆ. ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ನಾಯರ್ ಅವರಿಗೆ ಶುಭಾಂಶು ಶುಕ್ಲಾ ಅವರ ಬ್ಯಾಕಪ್ ಆಗಿ ತರಬೇತಿ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದರೆ, ಪ್ರಶಾಂತ್ ನಾಯರ್ ಅವರನ್ನು ಕಳುಹಿಸಲು ಸಿದ್ಧರಿದ್ದಾರೆ. ಬೆಂಗಳೂರಿನೊಂದಿಗಿನ ಬಲವಾದ ನಂಟು, ಮೈಸೂರಿನ ಆಹಾರದೊಂದಿಗೆ, ಶುಭಾಂಶು ಶುಕ್ಲಾ ಅವರು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಅಧ್ಯಾಯವನ್ನು ತೆರೆಯಲಿದ್ದಾರೆ.