Sexual assault in custody: ರಾಜಭವನದ ಬಳಿ ಧರಣಿ, ಸಿಎಂ ಮನೆಗೆ ಘೇರಾವ್ ಯತ್ನ
x

'Sexual assault' in custody: ರಾಜಭವನದ ಬಳಿ ಧರಣಿ, ಸಿಎಂ ಮನೆಗೆ ಘೇರಾವ್ ಯತ್ನ

ಸೇನಾ ಅಧಿಕಾರಿ ಮತ್ತು ಅವರ ಸ್ನೇಹಿತೆ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಬಿಜೆಡಿ, ಕಾಂಗ್ರೆಸ್ ಪ್ರತಿಭಟನೆ ತೀವ್ರಗೊಳಿಸಿವೆ


ಪೊಲೀಸ್ ಕಸ್ಟಡಿಯಲ್ಲಿ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ, ಪ್ರತಿಪಕ್ಷ ಬಿಜು ಜನತಾ ದಳ (ಬಿಜೆಡಿ)ದ ಮಹಿಳಾ ಘಟಕ ಶನಿವಾರ (ಸೆಪ್ಟೆಂಬರ್ 21) ರಾಜಭವನದ ಮುಂದೆ ಪ್ರತಿಭಟನೆ ನಡೆಸಿತು.

ಇನ್ನೊಂದೆಡೆ, ಕಾಂಗ್ರೆಸ್ ಕಾರ್ಯಕರ್ತರು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರ ರಾಜೀನಾಮೆಗೆ ಒತ್ತಾಯಿಸಿ, ಅಧಿಕೃತ ನಿವಾಸಕ್ಕೆ ಘೇರಾವ್ ಮಾಡಲು ಪ್ರಯತ್ನಿಸಿದರು. ಮಾಝಿ ಗೃಹ ಖಾತೆಯನ್ನೂ ಹೊಂದಿದ್ದಾರೆ.

ಬಿಜೆಡಿ ಧರಣಿ: ಭುವನೇಶ್ವರದ ಭರತ್‌ಪುರ ಪೊಲೀಸ್ ಠಾಣೆಯಲ್ಲಿ ಸೇನಾ ಅಧಿಕಾರಿ ಮತ್ತು ಆತನ ಸ್ನೇಹಿತೆಗೆ ಚಿತ್ರಹಿಂಸೆ ನೀಡಿದ ಆರೋಪ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ಎಸ್‌ಐಟಿ ತನಿಖೆ ಮತ್ತು ನ್ಯಾಯಾಂಗ ತನಿಖೆಗೆ ಬಿಜೆಡಿ ಒತ್ತಾಯಿಸಿದೆ.

ಭಿತ್ತಿಪತ್ರ ಮತ್ತು ಬ್ಯಾನರ್‌ ಹಿಡಿದ ಬಿಜೆಡಿಯ ನೂರಾರು ಮಹಿಳಾ ಸದಸ್ಯರು ರಾಜಭವನದ ಹೊರಗೆ ಧರಣಿ ನಡೆಸಿದರು. ರಾಜ್ಯದ ಬಿಜೆಪಿ ಸರ್ಕಾರ ಮಹಿಳೆಯರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ʻನಾವು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ. ರಾಜ್ಯ ಸರ್ಕಾರಕ್ಕೆ ಆಡಳಿತ ಮತ್ತು ಪೊಲೀಸರ ಮೇಲೆ ಹಿಡಿತವಿಲ್ಲ. ಸೇನಾಧಿಕಾರಿ ಮತ್ತು ಆತನ ಸ್ನೇಹಿತೆ ಮೇಲೆ ದೈಹಿಕ, ಲೈಂಗಿಕ ಹಲ್ಲೆ ಘಟನೆಯಿಂದ ಇದು ಸ್ಪಷ್ಟವಾಗಿದೆ. ಇಂಥ ಘಟನೆ ಸುಸಂಸ್ಕೃತ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ,ʼ ಎಂದು ಬಿಜೆಡಿ ನಾಯಕಿ ಲೇಖಾಶ್ರೀ ಸಮಂತಸಿಂಗ್ ಹೇಳಿದರು.

ಬಿಜೆಡಿ ನಾಯಕಿ ಹಾಗೂ ಭುವನೇಶ್ವರದ ಮೇಯರ್ ಸುಲೋಚನಾ ದಾಸ್ ಮಾತನಾಡಿ, ‘ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ಮತ್ತು ನ್ಯಾಯಾಂಗ ತನಿಖೆ ನಡೆಸಬೇಕು. ಭರತ್‌ಪುರ ಪೊಲೀಸ್ ಠಾಣೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಎಲ್ಲಿ ಹೋದವು?ʼ ಎಂದು ಪ್ರಶ್ನಿಸಿದರು.

ಬಿಜೆಡಿ ಸಂಸದೆ ಸುಲತಾ ಡಿಯೊ ಅವರು, ರಾಷ್ಟ್ರಪತಿ ಕೂಡ ಮಹಿಳೆಯಾಗಿರುವುದರಿಂದ ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಅವರ ಮಧ್ಯಸ್ಥಿಕೆಯನ್ನು ಕೋರಲು ಪಕ್ಷ ನಿರ್ಧರಿಸಿದೆ ಎಂದರು.

ಕಾಂಗ್ರೆಸ್ ಪ್ರತಿಭಟನೆ: ಸಿಎಂ ರಾಜೀನಾಮೆಗೆ ಒತ್ತಾಯಿಸಿ ಸಿಎಂ ಅಧಿಕೃತ ನಿವಾಸಕ್ಕೆ ಘೇರಾವ್‌ ಮಾಡಲು ಕಾಂಗ್ರೆಸ್‌ ಕಾರ್ಯಕರ್ತರು ಪ್ರಯತ್ನಿಸಿದರು.ಸಿಎಂ ಮನೆ ಮೇಲೆ ಪ್ರತಿಭಟನಾಕಾರರು ಟೊಮೆಟೊ ಮತ್ತು ಮೊಟ್ಟೆ ಎಸೆದರು.

ಸೆಪ್ಟೆಂಬರ್ 15 ರಂದು ಪಶ್ಚಿಮ ಬಂಗಾಳದಲ್ಲಿ ಸೇವೆಯಲ್ಲಿರುವ ಸೇನಾ ಅಧಿಕಾರಿ ಮತ್ತು ಅವರ ಭಾವಿ ಪತ್ನಿ ಭರತ್‌ಪುರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಠಾಣೆಯಲ್ಲಿ ಅಧಿಕಾರಿ ಮತ್ತು ಅವರ ಸ್ನೇಹಿತೆ ಮೇಲೆ ಹಲ್ಲೆ ನಡೆದಿದೆ.

Read More
Next Story