ಲೈಂಗಿಕ ಅಪರಾಧಿ ಬಿಡುಗಡೆ: ಕೋಲ್ಕತ್ತಾ ಹೈಕೋರ್ಟ್‌ ತೀರ್ಪು ರದ್ದುಗೊಳಿಸಿದ ಸುಪ್ರೀಂ
x

ಲೈಂಗಿಕ ಅಪರಾಧಿ ಬಿಡುಗಡೆ: ಕೋಲ್ಕತ್ತಾ ಹೈಕೋರ್ಟ್‌ ತೀರ್ಪು ರದ್ದುಗೊಳಿಸಿದ ಸುಪ್ರೀಂ

ಲೈಂಗಿಕ ದೌರ್ಜನ್ಯದ ಬಲಿಪಶುಗಳನ್ನು ವಿವಿಧ ನ್ಯಾಯಾಲಯಗಳು ʻಅವಮಾನಿಸುವಿಕೆʼ ಮತ್ತು ʻಪಡಿಯಚ್ಚುʼಗಳಂತೆ ನೋಡುವ ಪ್ರವೃತ್ತಿ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಸಮ್ಮತಿ ವ್ಯಕ್ತಪಡಿಸಿತು. ಸಮಾಜ ಮಹಿಳೆಯರ ಮೇಲೆ ಹೇರುವ ಕರ್ತವ್ಯಗಳು ಅವರ ವೈಯಕ್ತಿಕ ಹಕ್ಕುಗಳನ್ನು ಹತ್ತಿಕ್ಕಬಾರದು ಎಂದು ಹೇಳಿತು.


ʻಹರೆಯದ ಹುಡುಗಿಯರು ತಮ್ಮ ಲೈಂಗಿಕ ಅಪೇಕ್ಷೆಗಳನ್ನು ನಿಯಂತ್ರಿಸಬೇಕುʼ ಎಂಬ ಟೀಕೆಯೊಂದಿಗೆ ಲೈಂಗಿಕ ಅಪರಾಧದ ಆರೋಪ ಹೊತ್ತ ಯುವಕನನ್ನು ಬಿಡುಗಡೆಗೊಳಿಸಿದ್ದ ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಳ್ಳಿಹಾಕಿದೆ.

ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ 20 ವರ್ಷದ ಯುವಕನನ್ನು ದೋಷಮುಕ್ತಗೊಳಿಸಿದ್ದ ಕಲ್ಕತ್ತಾ ಹೈಕೋರ್ಟ್ ನ ಅಕ್ಟೋಬರ್ 18, 2023 ರ ತೀರ್ಪು ಆಕ್ರೋಶಕ್ಕೆ ಕಾರಣವಾಗಿತ್ತು.

ಸ್ವಯಂಪ್ರೇರಿತ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಹೈಕೋರ್ಟ್‌ ತೀರ್ಪು ವಜಾಗೊಳಿಸಿತು.

ಅನಗತ್ಯ ಟೀಕೆ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿಯಲ್ಲಿ ಯುವಕನ ಶಿಕ್ಷೆಯನ್ನು ರದ್ದುಗೊಳಿಸಿದ ಹೈಕೋರ್ಟ್, ಹದಿಹರೆಯದವರ, ವಿಶೇಷವಾಗಿ, ಹದಿಹರೆಯದ ಹುಡುಗಿಯರ ಲೈಂಗಿಕ ನಡವಳಿಕೆ ಬಗ್ಗೆ ವ್ಯಾಪಕ ಟೀಕೆ ಮಾಡಿತು.ʻಪ್ರಬುದ್ಧ ವಯಸ್ಕರ ಸಮ್ಮತಿಯ ಲೈಂಗಿಕ ನಡವಳಿಕೆಯನ್ನು ಗುರುತಿಸುವಲ್ಲಿನ ಕೊರತೆಯು ಲೈಂಗಿಕ ಚಟುವಟಿಕೆಗಳ ಅಪರಾಧೀಕರಣಕ್ಕೆ ಕಾರಣವಾಗಿದೆ; ಸಮ್ಮತಿ ಇರುವ ಮತ್ತು ಸಮ್ಮತಿಯಿಲ್ಲದ ಚಟುವಟಿಕೆಗಳ ಮಿಶ್ರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿತು.

ಸಂತ್ರಸ್ತೆ ಅಪರಾಧಿಯನ್ನು ಮದುವೆಯಾಗಿದ್ದು, ಮಗು ಜನಿಸಿದೆ ಎಂಬ ಅಂಶವನ್ನು ಹೈಕೋರ್ಟ್ ಗಣನೆಗೆ ತೆಗೆದುಕೊಂಡಿತು. ಜೊತೆಗೆ, ಹದಿಹರೆಯದ ಹುಡುಗರು ಮತ್ತು ಹುಡುಗಿಯರು ಪಾಲಿಸಬೇಕಾದ ಕರ್ತವ್ಯಗಳನ್ನು ವಿಧಿಸಿತು. ಈ ಅಭಿಪ್ರಾಯಗಳು ಸಂವಿಧಾನದ 21ನೇ ಪರಿಚ್ಛೇದ ನೀಡಿದ ಹದಿಹರೆಯದವರ ಹಕ್ಕುಗಳನ್ನು ಉಲ್ಲಂಘಿಸುವುದರಿಂದ, ʻಅತ್ಯಂತ ಆಕ್ಷೇಪಾರ್ಹʼ ಮತ್ತು ʻಸಂಪೂರ್ಣವಾಗಿ ಅನಗತ್ಯʼ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೈಕೋರ್ಟ್ ತನ್ನ ಮಿತಿಯನ್ನು ಮೀರಿ ಆದೇಶ ನೀಡಿರುವುದಕ್ಕೆ, ನ್ಯಾಯಾಧೀಶರು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಮತ್ತು ಉಪದೇಶ ನೀಡಿರುವುದನ್ನು ಸುಪ್ರೀಂ ಕೋರ್ಟ್ ಟೀಕಿಸಿದೆ.

ತೀರ್ಪು ಬರೆಯಲು ಮಾರ್ಗಸೂಚಿ: ಲೈಂಗಿಕ ದೌರ್ಜನ್ಯದ ಬಲಿಪಶುಗಳನ್ನು ವಿವಿಧ ನ್ಯಾಯಾಲಯಗಳು ʻಅವಮಾನಿಸುವಿಕೆʼ ಮತ್ತು ʻಪಡಿಯಚ್ಚುʼಗಳಂತೆ ನೋಡುವ ಪ್ರವೃತ್ತಿ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಸಮ್ಮತಿ ವ್ಯಕ್ತಪಡಿಸಿತು.

ʻಅಂತಹ ತೀರ್ಪುಗಳನ್ನು ಬರೆಯುವುದು ಸಂಪೂರ್ಣವಾಗಿ ತಪ್ಪುʼ ಎಂದು ದ್ವಿಸದಸ್ಯ ಪೀಠ ಹೇಳಿದೆ. ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಓಕಾ ಅವರು, ʻತೀರ್ಪುಗಳನ್ನು ಹೇಗೆ ಬರೆಯಬೇಕು ಎಂಬ ಕುರಿತು ಮಾರ್ಗಸೂಚಿಗಳನ್ನು ನೀಡಲಾಗಿದೆ,ʼ ಎಂದು ಹೇಳಿದರು.

ಸಮಾಜ ಮಹಿಳೆಯರ ಮೇಲೆ ಹೇರುವ ಕರ್ತವ್ಯಗಳು ಅವರ ವೈಯಕ್ತಿಕ ಹಕ್ಕುಗಳನ್ನು ಅನಿಶ್ಚಿತಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ.

ವೈಯಕ್ತಿಕ ಪಕ್ಷಪಾತ ಸರಿಯಲ್ಲ: ಅಮಿಕಸ್ ಕ್ಯೂರಿ, ಹಿರಿಯ ವಕೀಲೆ ಮಾಧವಿ ದಿವಾನ್, ʻನ್ಯಾಯಾಧೀಶರು ವೈಯಕ್ತಿಕ ಪಕ್ಷಪಾತಕ್ಕಿಂತ ಹೆಚ್ಚಾಗಿ ಸಾಂವಿಧಾನಿಕ ನೈತಿಕತೆ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು,ʼ ಎಂದು ವಾದಿಸಿದರು. ಸಂಭೋಗ 'ಸಮ್ಮತಿ'ಯೊಂದಿಗೆ ನಡೆದಿದೆ ಎಂಬ ಆಧಾರದ ಮೇಲೆ ಪೋಕ್ಸೊ ಕಾಯ್ದೆಯಡಿ ನೀಡುವ ಶಿಕ್ಷೆಯನ್ನು ರದ್ದುಗೊಳಿಸಿದ ಹೈಕೋರ್ಟ್‌ ಆದೇಶವನ್ನು ನ್ಯಾಯಾಧೀಶರು ಪ್ರಶ್ನಿಸಿದರು.

ಪಶ್ಚಿಮ ಬಂಗಾಳ ರಾಜ್ಯವು ಹೈಕೋರ್ಟ್ ತೀರ್ಪು ಪ್ರಶ್ನಿಸಿ, ವಿಶೇಷ ರಜೆ ಅರ್ಜಿ ಸಲ್ಲಿಸಿತು. ಕ್ರಿಮಿನಲ್ ಅಪರಾಧಗಳನ್ನು ಕಾನೂನುಗಳ ಆಧಾರದ ಮೇಲೆ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಹಿರಿಯ ವಕೀಲ ಹುಝೆಫಾ ಅಹ್ಮದಿ ಹೇಳಿದರು.

Read More
Next Story