
ಸೇಲಂ ಉಕ್ಕು ಸ್ಥಾವರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇಂಗಾಲ ಶೂನ್ಯಮಟ್ಟಕ್ಕಿಳಿಸುವ ಬದ್ದತೆಯೊಂದಿಗೆ ಸೇಲಂ ಉಕ್ಕು ಸ್ಥಾವರ ಕಾರ್ಯ: ಸಚಿವ ಹೆಚ್ಡಿಕೆ
"ನಾನು ಇಲ್ಲಿ ವೀಕ್ಷಿಸಿದ ತಾಂತ್ರಿಕ ಅತ್ಯಾಧುನಿಕತೆ ಮತ್ತು ಉತ್ಪಾದನೆಯ ಕ್ಷಮತೆಯ ಮಟ್ಟವು ಶ್ಲಾಘನೀಯ. ಈ ಸ್ಥಾವರವು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗಳ ಅಡಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ." ಎಂದು ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸೇಲಂ ಉಕ್ಕು ಸ್ಥಾವರದ ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ ಆಧಾರಿತ ಕಾರ್ಯವು ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸಿ ಸುಸ್ಥಿರ ಉಕ್ಕಿನ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಉನ್ನತ ಅಧಿಕಾರಿಗಳ ಜತೆ ಶುಕ್ರವಾರ(ಜೂ.20) ಸಂಜೆ ಉಕ್ಕು ಸ್ಥಾವರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸ್ಥಾವರದ ಉತ್ಪಾದನೆ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಕ್ಕು ಸ್ಥಾವರದಲ್ಲಿ ಕಚ್ಚಾ ಹಳೇ ಉಕ್ಕನ್ನು ಕರಗಿಸಿ ತಯಾರು ಮಾಡಲಾಗುತ್ತಿರುವ ಗ್ರೀನ್ ಸ್ಟೀಲ್ ಉತ್ಪಾದನೆ ಪ್ರಕ್ರಿಯೆ, ಸ್ಕ್ರ್ಯಾಪ್ ಯಾರ್ಡ್, ಉಕ್ಕು ಘನೀಕೃತ ವಿಭಾಗ, ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ (ಇಎಎಫ್) ಸೇರಿದಂತೆ ಕೆಲ ಪ್ರಮುಖ ಕಾರ್ಯಾಚರಣೆಯ ವಿಭಾಗಗಳಿಗೆ ಭೇಟಿ ನೀಡಿ ಟಾರ್ಚ್ ಕಟಿಂಗ್ ಮಷಿನ್ ಮತ್ತು ಕರಗಿದ ಕಬ್ಬಿಣವನ್ನು ಹಾಟ್ ರೋಲ್ಡ್ ಕಾಯಿಲ್ಗಳು, ಕೋಲ್ಡ್ ರೋಲಿಂಗ್ನ್ನಾಗಿ ಪರಿವರ್ತಿಸುವುದನ್ನು ವೀಕ್ಷಿಸಿದರು.
"ನಾನು ಇಲ್ಲಿ ವೀಕ್ಷಿಸಿದ ತಾಂತ್ರಿಕ ಅತ್ಯಾಧುನಿಕತೆ ಮತ್ತು ಉತ್ಪಾದನೆಯ ಕ್ಷಮತೆಯ ಮಟ್ಟವು ಶ್ಲಾಘನೀಯ. ಈ ಸ್ಥಾವರವು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗಳ ಅಡಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ." ಎಂದು ಸಂತಸ ವ್ಯಕ್ತಪಡಿಸಿದರು.
300 ದಶಲಕ್ಷ ಟನ್ ಉತ್ಪಾದನೆ ಗುರಿ
2030ರ ವೇಳೆಗೆ ಭಾರತವು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಬೇಕು ಎನ್ನುವ ಗುರಿ ನಿಗದಿ ಮಾಡಲಾಗಿದೆ. 2070ರ ವೇಳೆಗೆ ಉಕ್ಕು ಉತ್ಪಾದನೆ ಪ್ರಕ್ರಿಯೆಯಲ್ಲಿ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವ ಗುರಿಯನ್ನು ಹೊಂದಲಾಗಿದ್ದು 2047ರ ವೇಳೆಗೆ ವಿಕಸಿತ ಭಾರತ್ ಗುರಿಯನ್ನು ಸಾಧಿಸುವ ದಿಸೆಯಲ್ಲಿ ಉಕ್ಕು ಸಚಿವಾಲಯದ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಸೇಲಂ ಉಕ್ಕು ಸ್ಥಾವರದಲ್ಲಿ ಕೈಗೊಳ್ಳಲಾಗಿರುವ ಸುಧಾರಣಾ ಕ್ರಮಗಳ ಬಗ್ಗೆ ಸ್ಥಾವರದ ಉನ್ನತ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಉಕ್ಕು ಯಾವುದಕ್ಕೆ ಬಳಕೆ?
ಈ ಸ್ಥಾವರವು ಸ್ಟೇನ್ಲೆಸ್ ಸ್ಟೀಲ್ ಪೈಪ್ಗಳು, ರೈಲ್ವೆ ವ್ಯಾಗನ್ಗಳು, ಸೇತುವೆಗಳ ನಿರ್ಮಾಣ, ಸಬ್ಮರ್ಸಿಬಲ್ ಪಂಪ್ ಘಟಕ, ಖಾಲಿ ನಾಣ್ಯಗಳು, ಎಸ್ಎಸ್ ರೂಫ್ ಶೀಟ್ಗಳು, ದೇಶೀಯ ಎಲ್ಪಿಜಿ ಸಿಲಿಂಡರ್ಗಳನ್ನು ತಯಾರಿಸುವುದಕ್ಕೆ ಅಗತ್ಯವಾದ ಉಕ್ಕನ್ನು ಪೂರೈಸುವ ಮೂಲಕ ಬಹುರಾಷ್ಟ್ರೀಯ ಆದ್ಯತೆಗಳಿಗೆ ಕೊಡುಗೆ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರೈಲ್ವೆ, ರಕ್ಷಣೆ, ಇಂಧನ, ಮೂಲಸೌಕರ್ಯ ಮತ್ತು ಗೃಹೋಪಯೋಗಿ ವಸ್ತುಗಳ ತಯಾರಿಕೆಯಂತಹ ನಿರ್ಣಾಯಕ ವಲಯಗಳಿಗೆ ಉಕ್ಕು ಒದಗಿಸುತ್ತಿದೆ. ಹೀಗಾಗಿ ಈ ಸ್ಥಾವರವನ್ನು ಭಾರತದ ಸ್ಟೇನ್ಲೆಸ್ ಸ್ಟೀಲ್ ಪರಿಸರ ವ್ಯವಸ್ಥೆಯಲ್ಲಿ ಒಂದು ಮೂಲ ಆಧಾರ ಸ್ತಂಭ ಎಂದು ಪರಿಗಣಿಸಲಾಗಿದೆ ಎಂದು ಹೇಳಿದರು.