
ರೂರ್ಕೆಲಾ ಉಕ್ಕು ಸ್ಥಾವರ; 9ಸಾವಿರ ಕೋಟಿ ರೂ. ವೆಚ್ಚದ ಆಧುನೀಕರಣ ಕಾರ್ಯಕ್ಕೆ ಚಾಲನೆ
ರೂರ್ಕೆಲಾ ಉಕ್ಕು ಸ್ಥಾವರದಲ್ಲಿ ಸುಮಾರು 9 ಸಾವಿರ ಕೋಟಿ ರೂ. ವೆಚ್ಚದ ಬೃಹತ್ ಪ್ರಮಾಣದ ಆಧುನೀಕರಣ ಮತ್ತು ವಿಸ್ತರಣಾ ಕಾರ್ಯಕ್ರಮಗಳಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರಿದ್ದಾರೆ.
ವೈಜಾಗ್ ಉಕ್ಕು ಕಾರ್ಖಾನೆಗೆ ಕಾಯಕಲ್ಪ, ಬೋಕಾರೊ ಉಕ್ಕು ಸ್ಥಾವರದಲ್ಲಿ 20ಸಾವಿರ ಕೋಟಿ ರೂ. ಮೊತ್ತದ ವಿಸ್ತರಣಾ ಯೋಜನೆ ನಂತರ ಇದೀಗ ಒಡಿಶಾದ ರೂರ್ಕೆಲಾ ಉಕ್ಕು ಸ್ಥಾವರದಲ್ಲಿ ಬೃಹತ್ ಮೊತ್ತದ ಆಧುನೀಕರಣ ಯೋಜನೆಗಳನ್ನು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ರೂರ್ಕೆಲಾ ಉಕ್ಕು ಸ್ಥಾವರದಲ್ಲಿ ಸುಮಾರು 9 ಸಾವಿರ ಕೋಟಿ ರೂ. ವೆಚ್ಚದ ಬೃಹತ್ ಪ್ರಮಾಣದ ಆಧುನೀಕರಣ ಮತ್ತು ವಿಸ್ತರಣಾ ಕಾರ್ಯಕ್ರಮಗಳಿಗೆ ಹಸಿರು ನಿಶಾನೆ ತೋರಲಾಗಿದೆ.
ಕಾರ್ಖಾನೆಗೆ ಭೇಟಿ ನೀಡಿದ ವೇಳೆ ಸಚಿವ ಎಚ್.ಡಿ.ಕುಮಾರಸ್ವಾಮಿ, ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯ ಗರಿಷ್ಠಗೊಳಿಸುವ ಮತ್ತು ಉತ್ಪಾದನಾ ಮೌಲ್ಯ ಸರಪಳಿಯನ್ನು ಬಲಪಡಿಸುವ ಕಾರ್ಯತಂತ್ರದ ಭಾಗವಾಗಿ ಈ ವಿಸ್ತರಣಾ ಯೋಜನೆಯನ್ನು ಕಾರ್ಯಗತಗೊಳಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ 2047ಕ್ಕೆ ವಿಕಸಿತ ಭಾರತ ಸಾಕಾರಕ್ಕೆ ಅಗತ್ಯವಿರುವ ಮಹತ್ವದ ಕಾಣಿಕೆಯನ್ನು ಭಾರತೀಯ ಉಕ್ಕು ಕ್ಷೇತ್ರ ನೀಡುತ್ತಿದೆ. ಅವರ ಕನಸಿನಂತೆ ಉಕ್ಕು ಕಾರ್ಖಾನೆಗಳಿಗೆ ಶಕ್ತಿ ತುಂಬಲಾಗುತ್ತಿದೆ ಎಂದು ಹೇಳಿದರು.
9 ಸಾವಿರ ಕೋಟಿ ರೂ. ಮೊತ್ತದ ವಿಸ್ತರಣಾ ಯೋಜನೆಗಳ ಹೊರತಾಗಿಯು ರೂರ್ಕೆಲಾ ಉಕ್ಕು ಸ್ಥಾವರದಲ್ಲಿ 9,513 ಕೋಟಿ ರೂ. ಮೊತ್ತದ ಇತರೆ ವಿಸ್ತರಣಾ ಮತ್ತು ಅಭಿವೃದ್ಧಿ ಯೋಜನೆಗಳು ಜಾರಿಯ ಹಂತದಲ್ಲಿವೆ. ಉಕ್ಕಿನ ಹೊಸ ಮೆಲ್ಟಿಂಗ್ ಶಾಪ್, ಹೊಸ ಕೋಲ್ಡ್ ರೋಲಿಂಗ್ ಗಿರಣಿ, ಉತ್ಪನ್ನ ಪರೀಕ್ಷೆ ಮತ್ತು ಪ್ರಮಾಣೀಕರಣ ಪ್ರಯೋಗಾಲಯ ಮತ್ತು ರಕ್ಷಣಾ ದರ್ಜೆಯ ಉಕ್ಕಿಗಾಗಿ ಕೋಲ್ಡ್ ಪ್ಲೇಟ್ ಲೆವೆಲರ್ ಗಳ ಅಭಿವೃದ್ಧಿ ವೇಗಗತಿಯಲ್ಲಿ ನಡೆದಿದೆ. ಇವೆಲ್ಲವೂ ಪ್ರಧಾನಿಗಳ ವಿಕಸಿತ ಭಾರತ ಕನಸು ನನಸು ಮಾಡುವ ಕೈಗಾರಿಕಾ ದೃಷ್ಟಿಕೋನದೊಂದಿಗೆ ಕಾರ್ಯಗತವಾಗುತ್ತಿವೆ ಎಂದರು.
ಭಾರತೀಯ ಉಕ್ಕು ಕ್ಷೇತ್ರದ ಅಧಾರ ಸ್ತಂಭಗಳಲ್ಲಿ ಒಂದಾದ ರೂರ್ಕೆಲಾ ಉಕ್ಕು ಸ್ಥಾವರವು ಪರಿವರ್ತನಾತ್ಮಕ ಹಂತವನ್ನು ಪ್ರವೇಶಿಸಿದೆ. ಉತ್ಪಾದನಾ ಸಾಮರ್ಥ್ಯದ ವಿಷಯದಲ್ಲಿ ಮಾತ್ರವಲ್ಲದೆ, ತಂತ್ರಜ್ಞಾನ, ದಕ್ಷತೆ, ಸುಸ್ಥಿರತೆ ಮತ್ತು ಉತ್ಪನ್ನ ಸಾಮರ್ಥ್ಯದಲ್ಲೂ ಸಹ ನಮ್ಮ ಗುರಿ ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಕಾರ್ಖಾನೆಯು ಆಧುನಿಕ, ಅತ್ಯುತ್ತಮ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ಭವಿಷ್ಯಕ್ಕೆ ಸಿದ್ಧವಾದ ಉಕ್ಕಿನ ಉತ್ಪಾದನೆಯ ಕೇಂದ್ರಬಿಂದುವಾಗಿ ಹೊರಹೊಮ್ಮಬೇಕು. ಕಚ್ಚಾ ಉಕ್ಕಿನ ಸಾಮರ್ಥ್ಯವನ್ನು ವಾರ್ಷಿಕ 3.8 ಮೆಟ್ರಿಕ್ ಟನ್ ನಿಂದ 4.2 ಮೆಟ್ರಿಕ್ ಟನ್ ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಪೆಲೆಟ್ ಪ್ಲಾಂಟ್ ನ ಹೊರೆ ಮತ್ತು ಗುಣಮಟ್ಟವನ್ನು ಸುಧಾರಿಸಲು, ಕೋಕ್ ದರವನ್ನು ಕಡಿಮೆ ಮಾಡಲು ಮತ್ತು ಊದು ಕುಲುಮೆ (ಬ್ಲಾಸ್ಟ್ ಫರ್ನೇಸ್) ಗಳ ಉತ್ಪಾದಕತೆಯನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸ್ವಚ್ಛ ಮತ್ತು ಇಂಧನದ ಕ್ಷಮತೆ ನೀಡಬಲ್ಲ ಕೋಕ್ ಉತ್ಪಾದನೆಗಾಗಿ ಉಪ ಉತ್ಪನ್ನ ನಿರ್ವಹಣಾ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ ಎಂದು ವಿವರಿಸಿದರು.
ತಾಂತ್ರಿಕ ನೈಪುಣ್ಯತೆ ಮತ್ತು ಕ್ಷಮತೆಯಲ್ಲಿ ರಾಜಿ ಇಲ್ಲ. ವೆಚ್ಚ ಸ್ಪರ್ಧಾತ್ಮಕತೆ, ದಕ್ಷತೆ ಮತ್ತು ಸುಸ್ಥಿರ ಉತ್ಪಾದನೆಯನ್ನು ಸುಧಾರಿಸಿದಾಗ ಮಾತ್ರ ಸಾಮರ್ಥ್ಯ ವಿಸ್ತರಣೆ ಪರಿಪೂರ್ಣವಾಗುತ್ತದೆ. ಕಾರ್ಖಾನೆಯು ಸಂಪೂರ್ಣ ಸ್ಪಷ್ಟತೆ ಮತ್ತು ನಿರ್ಧಿಷ್ಟ ಗುರಿಯೊಂದಿಗೆ ಅಧಿನೀಕರಣದತ್ತ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಬೆಂಬಲದಿಂದ ಉಕ್ಕು ಕ್ಷೇತ್ರದಲ್ಲಿ ಇಷ್ಟೆಲ್ಲ ಅಭಿವೃದಿ, ಪರಿವರ್ತನೆ ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

