ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಇನ್ನು ‘ಸುದ್ದಿ ಪತ್ರಿಕೆ’ಯೇ ಮೊದಲ ಗುರು!
x

ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಇನ್ನು ‘ಸುದ್ದಿ ಪತ್ರಿಕೆ’ಯೇ ಮೊದಲ ಗುರು!

ಪ್ರತಿದಿನ ಪತ್ರಿಕೆಗಳಿಂದ ಐದು ಕಠಿಣ ಅಥವಾ ಹೊಸ ಪದಗಳನ್ನು ಆರಿಸಿ, ಅವುಗಳ ಅರ್ಥ ಮತ್ತು ವಾಕ್ಯ ಪ್ರಯೋಗವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವರಿಸಬೇಕಾಗಿದೆ.


Click the Play button to hear this message in audio format

ಶಾಲಾ ವಿದ್ಯಾರ್ಥಿಗಳಲ್ಲಿ ಕೇವಲ ಪಠ್ಯದ ಜ್ಞಾನವಷ್ಟೇ ಅಲ್ಲದೆ, ಪ್ರಪಂಚದ ಆಗುಹೋಗುಗಳ ಅರಿವು ಮೂಡಿಸಲು ರಾಜಸ್ಥಾನ ಸರ್ಕಾರ ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂದಿನಿಂದ ಪ್ರತಿದಿನ ಬೆಳಿಗ್ಗೆ 10 ನಿಮಿಷಗಳ ಕಾಲ ಕಡ್ಡಾಯವಾಗಿ ಪತ್ರಿಕೆ ಓದುವ ನೂತನ ನಿಯಮವನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳ ಓದುವ ಹವ್ಯಾಸವನ್ನು ಉತ್ತೇಜಿಸುವುದು ಮತ್ತು ಅವರ ಪದಸಂಪತ್ತನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ಶಿಕ್ಷಣ ಇಲಾಖೆಯ ಹೊಸ ಆದೇಶದಂತೆ, ಪ್ರತಿದಿನ ಬೆಳಿಗ್ಗೆ ಶಾಲಾ ಪ್ರಾರ್ಥನಾ ಸಭೆಯ ಅವಧಿಯಲ್ಲಿ ಈ ಹತ್ತು ನಿಮಿಷಗಳನ್ನು ಮೀಸಲಿಡಲಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಅಂದಿನ ಪ್ರಮುಖ ಸುದ್ದಿಗಳನ್ನು ಓದುತ್ತಾರೆ. ಕೇವಲ ಸುದ್ದಿ ಕೇಳುವುದಷ್ಟೇ ಅಲ್ಲದೆ, ಪ್ರಸಕ್ತ ವಿದ್ಯಮಾನಗಳನ್ನು ವಿಶ್ಲೇಷಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಪ್ರಾಥಮಿಕ ಹಂತದಲ್ಲೇ ಬೆಳೆಸುವುದು ಸರ್ಕಾರದ ಗುರಿಯಾಗಿದೆ.

ಭಾಷಾ ಪ್ರೌಢಿಮೆಗೆ ಒತ್ತು

ಈ ಯೋಜನೆಗೆ ಸಂಬಂಧಿಸಿದಂತೆ ಪ್ರತಿಯೊಂದು ಶಾಲೆಯು ಕನಿಷ್ಠ ಎರಡು ಪತ್ರಿಕೆಗಳನ್ನು ಖರೀದಿಸುವುದು ಕಡ್ಡಾಯವಾಗಿದೆ. ಇಂಗ್ಲಿಷ್ ಮಾಧ್ಯಮ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು: ಒಂದು ಹಿಂದಿ ಮತ್ತು ಒಂದು ರಾಷ್ಟ್ರಮಟ್ಟದ ಇಂಗ್ಲಿಷ್ ಪತ್ರಿಕೆಯನ್ನು ತರಿಸಬೇಕು. ಮೇಲ್ಮಟ್ಟದ ಪ್ರಾಥಮಿಕ ಶಾಲೆಗಳು: ಕನಿಷ್ಠ ಎರಡು ಪ್ರಮುಖ ಹಿಂದಿ ದಿನಪತ್ರಿಕೆಗಳನ್ನು ಲಭ್ಯವಿರಿಸಿಕೊಳ್ಳಬೇಕು. ಈ ಪತ್ರಿಕೆಗಳ ಚಂದಾದಾರಿಕೆಯ ಸಂಪೂರ್ಣ ವೆಚ್ಚವನ್ನು ಜೈಪುರದ ರಾಜಸ್ಥಾನ ಶಾಲಾ ಶಿಕ್ಷಣ ಪರಿಷತ್ ಭರಿಸಲಿದೆ.

‘ದಿನಕ್ಕೊಂದು ಐದು ಹೊಸ ಪದ’: ಭಾಷಾ ಕೌಶಲ್ಯಕ್ಕೆ ಹೊಸ ರೂಪ

ಪತ್ರಿಕೆ ಓದುವುದರ ಜೊತೆಗೆ ವಿದ್ಯಾರ್ಥಿಗಳ ಭಾಷಾ ಜ್ಞಾನ ಹೆಚ್ಚಿಸಲು ಒಂದು ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಪ್ರತಿದಿನ ಪತ್ರಿಕೆಗಳಿಂದ ಐದು ಕಠಿಣ ಅಥವಾ ಹೊಸ ಪದಗಳನ್ನು ಆರಿಸಿ, ಅವುಗಳ ಅರ್ಥ ಮತ್ತು ವಾಕ್ಯ ಪ್ರಯೋಗವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವರಿಸಲಿದ್ದಾರೆ. ಅಲ್ಲದೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಂಪಾದಕೀಯ ಪುಟ, ಕ್ರೀಡೆ ಮತ್ತು ಅಂತರಾಷ್ಟ್ರೀಯ ಸುದ್ದಿಗಳನ್ನು ಆಧರಿಸಿ ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲು ಸೂಚಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬುನಾದಿ

"ಈ ಕ್ರಮದಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸಾಮಾನ್ಯ ಜ್ಞಾನ ವೃದ್ಧಿಯಾಗಲಿದೆ. ಭವಿಷ್ಯದಲ್ಲಿ ಐಎಎಸ್, ಕೆಎಎಸ್ ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇದು ಭದ್ರ ಬುನಾದಿಯಾಗಲಿದೆ," ಎಂದು ಹಿರಿಯ ಶಿಕ್ಷಣ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಮೊದಲು ಉತ್ತರ ಪ್ರದೇಶ ಸರ್ಕಾರ ಕೂಡ ಇಂತಹದ್ದೇ ನಿಯಮವನ್ನು ಜಾರಿಗೆ ತಂದಿದ್ದು, ಈಗ ರಾಜಸ್ಥಾನವು ಅದೇ ಮಾದರಿಯನ್ನು ಅಳವಡಿಸಿಕೊಂಡಿದೆ.

Read More
Next Story