
ಜಗನ್ನಾಥ ಸ್ನಾನ ಯಾತ್ರೆ; ನಿಗದಿತ ದಿನಾಂಕದಂದೇ ನಡೆಸಲು ಇಸ್ಕಾನ್ಗೆ ಪುರಿ ದೇವಸ್ಥಾನ ಸಮಿತಿ ಸೂಚನೆ
ಇಸ್ಕಾನ್ ದೇವಾಲಯಗಳು ವಿಶ್ವದಾದ್ಯಂತ ಸ್ನಾನ ಯಾತ್ರೆ ಮತ್ತು ರಥಯಾತ್ರೆಯನ್ನು ವಿವಿಧ ದಿನಾಂಕಗಳಲ್ಲಿ ನಡೆಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ವಿಶ್ವದಾದ್ಯಂತ ಶ್ರೀ ಜಗನ್ನಾಥನ ಸ್ನಾನ ಯಾತ್ರೆ ಮತ್ತು ರಥಯಾತ್ರೆಯನ್ನು ಶಾಸ್ತ್ರಗಳನ್ನು ನಿಗದಿಪಡಿಸಿದ ದಿನಾಂಕಗಳಲ್ಲಿ ಇಸ್ಕಾನ್ ನಡೆಸುತ್ತಿಲ್ಲ ಎಂದು ಒಡಿಶಾದ ಪುರಿಯ ಶ್ರೀ ಜಗನ್ನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆರೋಪಿಸಿದ್ದು, ನಿಯಮಗಳನ್ನು ಪಾಲಿಸುವಂತೆ ಪತ್ರ ಬರೆದಿದೆ.
ಸಮಿತಿಯ ಅಧ್ಯಕ್ಷರಾದ ಪುರಿಯ ಗಜಪತಿ ಮಹಾರಾಜ ದಿಬ್ಯಸಿಂಘ ದೇಬ್, ಕೆಲವು ಇಸ್ಕಾನ್ ದೇವಾಲಯಗಳು ವಿಶ್ವದಾದ್ಯಂತ ಸ್ನಾನ ಯಾತ್ರೆ ಮತ್ತು ರಥಯಾತ್ರೆಯನ್ನು ವಿವಿಧ ದಿನಾಂಕಗಳಲ್ಲಿ ನಡೆಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಪದ್ಧತಿಗಳು ಶಾಸ್ತ್ರಗಳನ್ನು ಮತ್ತು ಹಿಂದೂ ಕ್ಯಾಲೆಂಡರ್ಗೆ ವಿರೋಧ ಎಂದು ಅವರು ಆರೋಪಿಸಿದ್ದಾರೆ.
ಮಾಯಾಪುರದ ಇಸ್ಕಾನ್ ಗವರ್ನಿಂಗ್ ಬಾಡಿ ಕಮಿಷನ್ನ ಅಧ್ಯಕ್ಷ ಶ್ರೀ ಗೋವರ್ಧನ್ ದಾಸ್ ಪ್ರಭುಗೆ ಬರೆದ ಪತ್ರದಲ್ಲಿ, ದೇಬ್, "ವಿಶ್ವದ ಯಾವುದೇ ಇಸ್ಕಾನ್ ದೇವಾಲಯ ಅಥವಾ ಕೇಂದ್ರವು ಶಾಸ್ತ್ರಗಳು ಮತ್ತು ಸಂಪ್ರದಾಯಗಳಿಂದ ಅನುಮೋದಿತವಲ್ಲದ ದಿನಾಂಕ/ತಿಥಿಯಲ್ಲಿ 'ಸ್ನಾನ ಯಾತ್ರೆ' ಅಥವಾ 'ರಥಯಾತ್ರೆ'ಯನ್ನು ನಡೆಸಬಾರದು ಎಂದು ನಾನು ವಿನಂತಿಸುತ್ತೇನೆ" ಎಂದು ತಿಳಿಸಿದ್ದಾರೆ. ಭಾರತದ ಹೊರಗಿನ ಇಸ್ಕಾನ್ ದೇವಾಲಯಗಳು "ಶಾಸ್ತ್ರೀಯವಲ್ಲದ ದಿನಾಂಕ/ತಿಥಿಗಳಲ್ಲಿ ಶ್ರೀ ಜಗನ್ನಾಥನ ಸ್ನಾನ ಯಾತ್ರೆ ಮತ್ತು ರಥಯಾತ್ರೆಯನ್ನು ಆಚರಿಸುತ್ತಿವೆ" ಎಂದು ಅವರು ದೂರಿದ್ದಾರೆ. ಈ ಸಂಬಂಧದಲ್ಲಿ ನ್ಯೂಯಾರ್ಕ್ ಸಿಟಿ, ಕ್ಯಾಲ್ಗರಿ, ಮತ್ತು ಲೀಸೆಸ್ಟರ್ನ ಇಸ್ಕಾನ್ ದೇವಾಲಯಗಳಿಂದ ಮಾಡಲಾದ ಕೆಲವು ಘೋಷಣೆಗಳ ದಾಖಲೆಗಳನ್ನು ದೇಬ್ ತಮ್ಮ ಪತ್ರದೊಂದಿಗೆ ಲಗತ್ತಿಸಿದ್ದಾರೆ.
ಸ್ನಾನ ಯಾತ್ರೆಯನ್ನು ಕೇವಲ ಜ್ಯೇಷ್ಠ ಪೂರ್ಣಿಮಾ ತಿಥಿಯಂದು (ಈ ವರ್ಷ ಜೂನ್ 11) ಮತ್ತು ರಥಯಾತ್ರೆಯನ್ನು (ಗುಂಡಿಚಾ ಯಾತ್ರೆ ಮತ್ತು ಬಹುದಾ ಯಾತ್ರೆ) ಆಷಾಢ ಶುಕ್ಲ-ಪಕ್ಷ ದ್ವಿತೀಯ ತಿಥಿಯಿಂದ (ಜೂನ್ 27) ಆಷಾಢ ಶುಕ್ಲ-ಪಕ್ಷ ದಶಮಿ ತಿಥಿಯವರೆಗೆ (ಜುಲೈ 5) ಒಂಬತ್ತು ದಿನಗಳ ಶುಭ ಕಾಲದಲ್ಲಿ ಮಾತ್ರ ನಡೆಸಬೇಕು ಎಂದು ವಿದ್ವಾಂಸರು ದೃಢವಾಗಿ ತೀರ್ಮಾನಿಸಿದ್ದಾರೆ.
"ಈ ಪವಿತ್ರ ಯಾತ್ರೆಗಳನ್ನು ಇತರ ಯಾವುದೇ ತಿಥಿ/ದಿನಾಂಕದಲ್ಲಿ ನಡೆಸುವುದು ನಮ್ಮ ಶಾಸ್ತ್ರಗಳಿಗೆ ಮತ್ತು ಪುರಾತನ ಸಂಪ್ರದಾಯಗಳಿಗೆ ವಿರುದ್ಧವಾಗಿದೆ" ಎಂದು ಪುರಿಯ ಗಜಪತಿ ಮಹಾರಾಜ ದೇಬ್ ಸ್ಪಷ್ಟಪಡಿಸಿದ್ದಾರೆ. ಇಸ್ಕಾನ್ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ, ಶ್ರೀ ಜಗನ್ನಾಥನ ಪ್ರಥಮ ಸೇವಕರಾದ ದೇಬ್, "ನಮ್ಮ ವಿದ್ವಾಂಸರಿಂದ ಈ ವಿಷಯದಲ್ಲಿ ಸಂಪೂರ್ಣ ವಿವರಣೆಯನ್ನು ಶೀಘ್ರದಲ್ಲೇ ನಿಮಗೆ ಕಳುಹಿಸಲಾಗುವುದು" ಎಂದು ತಿಳಿಸಿದ್ದಾರೆ.