
ಆಂಧ್ರಪ್ರದೇಶದಲ್ಲಿ ಖಾಸಗಿ ಬಸ್ ದುರಂತ; 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನ
ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರ್ಘಟನೆ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಿನ್ನ ಟೆಕೂರು ಗ್ರಾಮದಲ್ಲಿ ಬೈಕ್ಗೆ ಡಿಕ್ಕಿಯಾಗಿ ಈ ಘಟನೆ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಶುಕ್ರವಾರ (ಅ. 24) ಮುಂಜಾನೆ ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 20 ಜನರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಿನ್ನ ಟೆಕೂರು ಗ್ರಾಮದಲ್ಲಿ ಬೈಕ್ಗೆ ಡಿಕ್ಕಿ ಹೊಡೆದ ಬಳಿಕ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಖಾಸಗಿ ಎಸಿ ಬಸ್ನಲ್ಲಿ ಇಬ್ಬರು ಚಾಲಕರು ಸೇರಿದಂತೆ 42 ಮಂದಿ ಪ್ರಯಾಣಿಕರಿದ್ದರು.
" ಕಾವೇರಿ ಟ್ರಾವೆಲ್ಸ್ಗೆ ಸೇರಿದ ಈ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಬೆಂಕಿಯ ಕಿಡಿ ಸೋಕಿ ಅವಘಡಕ್ಕೆ ಕಾರಣವಾಗಿರಬಹುದು. 15 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ಹೇಳಿದ್ದಾರೆ.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ದುರಂತದ ಕುರಿತು ಸಮಗ್ರ ತನಿಖೆಗೆ ಸರ್ಕಾರ ಆದೇಶಿಸಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ.
"ಕರ್ನೂಲ್ ಜಿಲ್ಲೆಯ ಚಿನ್ನಾ ಟೇಕೂರ್ ಗ್ರಾಮದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಅಪಘಾತದ ಬಗ್ಗೆ ತಿಳಿದು ನನಗೆ ಆಘಾತವಾಗಿದೆ. ತಮ್ಮವರನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರು ಮತ್ತು ಸಂತ್ರಸ್ಥರ ಕುಟುಂಬಗಳಿಗೆ ಸರ್ಕಾರ ಸಾಧ್ಯವಿರುವ ಎಲ್ಲ ಬೆಂಬಲ ನೀಡಲಿದೆ" ಎಂದು ನಾಯ್ಡು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಅ. 14 ರಂದು ರಾಜಸ್ತಾನದ ಜೈಸಲ್ಮೇರ್ - ಜೋಧ್ಪುರ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು 22 ಪ್ರಯಾಣಿಕರು ಸಜೀವ ದಹನವಾಗಿದ್ದರು. ಹವಾನಿಯಂತ್ರಿತ (ಎಸಿ) ಬಸ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು.
Live Updates
- 24 Oct 2025 2:58 PM IST
ಆಂಧ್ರ ಗೃಹ ಸಚಿವರು ಕರ್ನೂಲ್ ಆಸ್ಪತ್ರೆಗೆ ಭೇಟಿ ನೀಡಿ, ಬಸ್ ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರ ಆರೋಗ್ಯ ವಿಚಾರಿಸಿದರು.
ಆಂಧ್ರಪ್ರದೇಶ ಗೃಹ ಸಚಿವೆ ಅನಿತಾ ವಂಗಲಪುಡಿ ಕರ್ನೂಲ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಕರ್ನೂಲ್ನ ಚಿನ್ನಾ ಟೇಕೂರ್ ಗ್ರಾಮದ ಬಳಿ ಬೆಂಕಿ ಹೊತ್ತಿಕೊಂಡ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಗಾಯಾಳುಗಳನ್ನು ಭೇಟಿ ಮಾಡಿದರು.
- 24 Oct 2025 2:51 PM IST
ಕರ್ನೂಲ್ ಬಸ್ ಅವಘಡ; ಎರಡು ಲಕ್ಷ ಪರಿಹಾರ ಘೋಷಣೆ
ಕರ್ನೂಲ್ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತೆಲಂಗಾಣ ಸರ್ಕಾರ 5 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಗಾಯಾಳುಗಳಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ರಾಜ್ಯ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ಹೇಳಿದ್ದಾರೆ.
- 24 Oct 2025 12:11 PM IST
ಸಿಎಂ ಚಂದ್ರಬಾಬು ನಾಯ್ಡು ಅವರಿಂದ ವಿಡಿಯೋ ಕಾನ್ಫರೆನ್ಸ್: ಕರ್ನೂಲ್ ಬಸ್ ಅಪಘಾತದ ಕುರಿತು ಉನ್ನತ ಮಟ್ಟದ ಸಭೆ
ಕರ್ನೂಲ್ ಬಸ್ ಅಪಘಾತದ ಕುರಿತು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಸಭೆಯಲ್ಲಿ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಘಟನೆಯ ಸಮಗ್ರ ತನಿಖೆಗಾಗಿ ಸಮನ್ವಯ ಸಾಧಿಸುವಂತೆ ಮುಖ್ಯಮಂತ್ರಿಗಳು ಇತರ ರಾಜ್ಯಗಳ ಸಾರಿಗೆ ಸಚಿವರು ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಲಿಪಶುಗಳನ್ನು ಗುರುತಿಸಲು ಮತ್ತು ಅವರ ಕುಟುಂಬಗಳಿಗೆ ತಕ್ಷಣದ ನೆರವು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿಗಳು ಆರೋಗ್ಯ ಇಲಾಖೆಗೆ ಆದೇಶಿಸಿದರು. ಎಲ್ಲಾ ಖಾಸಗಿ ಪ್ರಯಾಣ ಬಸ್ಗಳ ಫಿಟ್ನೆಸ್, ಸುರಕ್ಷತೆ ಮತ್ತು ಪರವಾನಗಿ ತಪಾಸಣೆಗಳನ್ನು ನಡೆಸಲು ನಿರ್ದೇಶನಗಳನ್ನು ನೀಡಲಾಯಿತು. ಎಲ್ಲಾ ಜಿಲ್ಲೆಗಳಲ್ಲಿ ಬಸ್ಗಳ ತಾಂತ್ರಿಕ ತಪಾಸಣೆಗಳನ್ನು ಪ್ರಾರಂಭಿಸಲು ಸಾರಿಗೆ ಇಲಾಖೆಗೆ ಸೂಚಿಸಲಾಯಿತು
- 24 Oct 2025 12:06 PM IST
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತೆಲಂಗಾಣ ಸರ್ಕಾರದ ನೆರವು
ಕರ್ನೂಲ್ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಹಾಯ ಮಾಡಲು ತೆಲಂಗಾಣ ಸರ್ಕಾರವು ತುರ್ತು ಸಹಾಯವಾಣಿಯನ್ನು ಸ್ಥಾಪಿಸಿದೆ. ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಈ ಸಹಾಯವಾಣಿಯನ್ನು ತೆರೆಯಲಾಗಿದೆ.
ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮತ್ತು ಮಾಹಿತಿ ನೀಡಲು ಎಂ. ಶ್ರೀರಾಮಚಂದ್ರ (ಮೊ: 9912919545) ಮತ್ತು ಇ. ಚಿಟ್ಟಿಬಾಬು (ಮೊ: 9440854433) ಎಂಬ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
- 24 Oct 2025 11:43 AM IST
ಸಂಚಾರ ನಿಯಮ ಉಲ್ಲಂಘನೆ: ಬಸ್ಗೆ 16 ಚಲನ್, 23,120 ರೂ.ದಂಡ ಬಾಕಿ
ತೆಲಂಗಾಣದಲ್ಲಿ ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಈ ಖಾಸಗಿ ಬಸ್ಗೆ ಒಟ್ಟು 16 ಸಂಚಾರ ನಿಯಮ ಉಲ್ಲಂಘನೆಗಳ ಚಲನ್ಗಳನ್ನು ವಿಧಿಸಲಾಗಿದ್ದು, ಒಟ್ಟು 23,120 ದಂಡ ಬಾಕಿ ಇದೆ ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಮಾಹಿತಿ ನೀಡಿದೆ.
ಜನವರಿ 27, 2024 ಮತ್ತು ಅಕ್ಟೋಬರ್ 9, 2025ರ ನಡುವೆ ಬಸ್ 16 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ಈ ಪೈಕಿ ಒಂಬತ್ತು ಉಲ್ಲಂಘನೆಗಳು 'ಪ್ರವೇಶ ನಿಷೇಧ' ವಲಯಗಳಿಗೆ ಪ್ರವೇಶಿಸಿದ್ದಕ್ಕೆ ಸಂಬಂಧಿಸಿದ್ದು, ಉಳಿದ ಉಲ್ಲಂಘನೆಗಳು ಅತಿ ವೇಗ ಮತ್ತು ಅಪಾಯಕಾರಿ ಚಾಲನೆಗೆ ಸಂಬಂಧಿಸಿವೆ.
ವೇಮುರಿ ಕಾವೇರಿ ಟ್ರಾವೆಲ್ಸ್ ಒಡೆತನದ ಈ ಬಸ್ ಅನ್ನು ಒಡಿಶಾದ ರಾಯಗಡ ನಿವಾಸಿ ವೇಮುರಿ ವಿನೋದ್ ಕುಮಾರ್ ನಿರ್ವಹಿಸುತ್ತಿದ್ದರು.
ಸಾರಿಗೆ ಇಲಾಖೆಯ ಹೇಳಿಕೆ
ಆಂಧ್ರಪ್ರದೇಶ ಸಾರಿಗೆ ಇಲಾಖೆಯ ಹೇಳಿಕೆಯ ಪ್ರಕಾರ, ಈ ಬಸ್ ಅನ್ನು DD01 N9490 ಸಂಖ್ಯೆಯ ಅಡಿಯಲ್ಲಿ ನೋಂದಾಯಿಸಲಾಗಿದೆ. ಅಧಿಕಾರಿಗಳು ಈ ಕುರಿತು ಮಾತನಾಡಿದ್ದು, ಬಸ್ ಯಾಂತ್ರಿಕವಾಗಿ ಉತ್ತಮವಾಗಿತ್ತು ಮತ್ತು ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದಾಗ ಉಂಟಾದ ತೀವ್ರ ಪರಿಣಾಮದಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.
ಈ ಬಸ್ 'ಕಾವೇರಿ ಟ್ರಾವೆಲ್ಸ್' ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದನ್ನು ಮೂಲತಃ ಮೇ 2, 2018 ರಂದು ದಮನ್ ಮತ್ತು ಡಿಯುನಲ್ಲಿ ನೋಂದಾಯಿಸಲಾಗಿತ್ತು. ಈ ವಾಹನವು ಏಪ್ರಿಲ್ 30, 2030 ರವರೆಗೆ ಮಾನ್ಯವಾಗಿರುವ ಪ್ರವಾಸಿ ಪರವಾನಗಿ, ಮಾರ್ಚ್ 31, 2027 ರವರೆಗೆ ಮಾನ್ಯವಾಗಿರುವ ಫಿಟ್ನೆಸ್ ಪ್ರಮಾಣಪತ್ರ ಮತ್ತು ಏಪ್ರಿಲ್ 20, 2026 ರವರೆಗೆ ಮಾನ್ಯ ವಿಮೆಯನ್ನು ಹೊಂದಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
- 24 Oct 2025 11:37 AM IST
ಕರ್ನೂಲ್ ಬಸ್ ದುರಂತ: ಸಹಾಯಕ್ಕಾಗಿ ಕಿರುಚಿದ ಪ್ರಯಾಣಿಕರು, ಸ್ಥಳೀಯರಿಂದ ರಕ್ಷಣಾ ಪ್ರಯತ್ನ
ಭೀಕರ ಬಸ್ ಅಗ್ನಿ ದುರಂತ ಸಂಭವಿಸಿದ ನಂತರ, ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಯಾಣಿಕರು ಸಹಾಯಕ್ಕಾಗಿ ಗಟ್ಟಿಯಾಗಿ ಕಿರುಚುತ್ತಿರುವುದನ್ನು ಸ್ಥಳೀಯರು ಕೇಳಿದ್ದಾರೆ ಎಂದು ವರದಿಯಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವ ಮುನ್ನವೇ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಲು ಧಾವಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಭೀಕರ ಅಗ್ನಿ ದುರಂತದ ಸುದ್ದಿ ತಿಳಿಯುತ್ತಿದ್ದಂತೆ, ಕರ್ನೂಲ್ನ ಅಗ್ನಿಶಾಮಕ ದಳದವರು ತಕ್ಷಣ ಕಾರ್ಯಪ್ರವೃತ್ತರಾದರು. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ನಾಲ್ಕು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಯಿತು. ಆದರೆ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ರಕ್ಷಣಾ ತಂಡಗಳು ತಕ್ಷಣವೇ ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಿ ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಿದವು. ಪ್ರಾಥಮಿಕ ವರದಿಗಳ ಪ್ರಕಾರ, ಬಸ್ನಲ್ಲಿದ್ದ ಬಹುತೇಕ ಪ್ರಯಾಣಿಕರು ಹೈದರಾಬಾದ್ ನಿವಾಸಿಗಳಾಗಿದ್ದರು ಎಂದು ತಿಳಿದುಬಂದಿದೆ. ದುರಂತದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
- 24 Oct 2025 11:23 AM IST
ಕರ್ನೂಲ್ ಬಸ್ ದುರಂತ: ಮೃತರ ಕುಟುಂಬಗಳಿಗೆ ಸಿಎಂ ಚಂದ್ರಬಾಬು ನಾಯ್ಡು 'ಹೃತ್ಪೂರ್ವಕ ಸಂತಾಪ'
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನಾ ಟೇಕೂರ್ ಗ್ರಾಮದ ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಅಧಿಕೃತ ಪ್ರವಾಸದ ನಿಮಿತ್ತ ದುಬೈನಲ್ಲಿರುವ ಮುಖ್ಯಮಂತ್ರಿಗಳು, ಜೀವಹಾನಿ ಬಗ್ಗೆ ಆಘಾತ ಮತ್ತು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
ಈ ಕುರಿತು 'X' ನಲ್ಲಿ ಪೋಸ್ಟ್ವೊಂದನ್ನು ಮಾಡಿರುವ ಅವರು,"ಕರ್ನೂಲ್ ಜಿಲ್ಲೆಯ ಚಿನ್ನಾ ಟೇಕೂರ್ ಗ್ರಾಮದ ಬಳಿ ಸಂಭವಿಸಿದ ಭೀಕರ ಬಸ್ ಬೆಂಕಿ ಅಪಘಾತದ ಬಗ್ಗೆ ತಿಳಿದು ನನಗೆ ಆಘಾತವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರು ಮತ್ತು ಪೀಡಿತ ಕುಟುಂಬಗಳಿಗೆ ಸರ್ಕಾರಿ ಅಧಿಕಾರಿಗಳು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಾರೆ ಎಂದು ಅವರು ಬರೆದುಕೊಂಡಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
- 24 Oct 2025 11:11 AM IST
ಕರ್ನೂಲ್ ಬಸ್ ದುರಂತ: ಬಾಗಿಲು ಸಿಲುಕಿಕೊಂಡಿದ್ದೇ ಹೆಚ್ಚಿನ ವಿಪತ್ತಿಗೆ ಕಾರಣ
ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಬಸ್ಸಿನ ಬಾಗಿಲು ತಕ್ಷಣ ತೆರೆಯದಿರುವುದು ಅವಘಡವನ್ನು ಹೆಚ್ಚಿಸಿದೆ ಎಂದು ಜಿಲ್ಲಾಧಿಕಾರಿಎ. ಸಿರಿ ಅವರು ತಿಳಿಸಿದ್ದಾರೆ. ಚಾಲಕ ಸೇರಿ ಒಟ್ಟು 41 ಜನರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಪೈಕಿ 21 ಜನರನ್ನು ಪತ್ತೆಹಚ್ಚಲಾಗಿದ್ದು, ಅಪಘಾತದಿಂದ ಪಾರಾದವರು ಸ್ಥಿರವಾಗಿದ್ದಾರೆ ಮತ್ತು ಅಪಾಯದಿಂದ ಹೊರಬಂದಿದ್ದಾರೆ.
ಹೆಚ್ಚಿನ ಪ್ರಯಾಣಿಕರು ರಾತ್ರಿ ನಿದ್ರೆಯಲ್ಲಿದ್ದಾಗ ಈ ದುರಂತ ಸಂಭವಿಸಿದ್ದರಿಂದ ಅನೇಕರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಸ್ಸಿನ ಬಾಗಿಲು ಸಿಲುಕಿಕೊಂಡಿದ್ದು ಹಾಗೂ ಕೆಲವು ತಂತಿಗಳು ತುಂಡಾಗಿದ್ದರಿಂದ ಬಸ್ಸಿನ ಬಾಗಿಲು ತಕ್ಷಣ ತೆರೆಯಲಿಲ್ಲ. ಇದರ ಪರಿಣಾಮವಾಗಿ, ಪ್ರಯಾಣಿಕರಿಗೆ ಬೇಗನೆ ಹೊರಬರಲು ಸಾಧ್ಯವಾಗದೆ ಹೆಚ್ಚಿನ ಸಾವು-ನೋವು ಸಂಭವಿಸಿತು ಎಂದು ಅವರು ತಿಳಿಸಿದ್ದಾರೆ.
ಅಪಘಾತದಲ್ಲಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಕೆಲವು ವರದಿಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್ನಿಂದ ಬಾಗಿಲು ಜಾಮ್ ಆಗಿ ಸಿಲುಕಿಕೊಂಡಿತ್ತು. ನಿದ್ರೆಯಲ್ಲಿದ್ದ ಪ್ರಯಾಣಿಕರು ಎಚ್ಚರಗೊಳ್ಳುವಷ್ಟರಲ್ಲಿ ಬೆಂಕಿ ವ್ಯಾಪಿಸಿತ್ತು ಮತ್ತು ಬಾಗಿಲು ತೆರೆಯದ ಕಾರಣ ಕೆಲವರು ಕಿಟಕಿ ಗಾಜುಗಳನ್ನು ಒಡೆದು ಪ್ರಾಣ ಉಳಿಸಿಕೊಂಡಿದ್ದಾರೆ. ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಹೈದರಾಬಾದ್ಗೆ ಸೇರಿದವರು ಎಂದು ಡಿ.ಸಿ. ಸಿರಿ ತಿಳಿಸಿದ್ದಾರೆ. ಪೊಲೀಸರು ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
- 24 Oct 2025 11:07 AM IST
ಕರ್ನೂಲ್ ಬಸ್ ದುರಂತ 'ತೀವ್ರ ದುಃಖಕರ': ಮಲ್ಲಿಕಾರ್ಜುನ ಖರ್ಗೆ
ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಸಂಭವಿಸಿದ ಭೀಕರ ಬಸ್ ಬೆಂಕಿ ದುರಂತದ ಕುರಿತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಅವರು "ತೀವ್ರ ದುಃಖಕರ" ಎಂದು ಬಣ್ಣಿಸಿದ್ದಾರೆ.
"ಆಂಧ್ರಪ್ರದೇಶದ ಕರ್ನೂಲ್ನ ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಬಸ್ಗೆ ಬೆಂಕಿ ಹೊತ್ತಿಕೊಂಡು ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡ ದುರಂತ ಘಟನೆಯು ತೀವ್ರವಾಗಿ ದುಃಖಕರವಾಗಿದೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ ಪ್ರಯಾಣಿಕರ ಕುಟುಂಬಗಳಿಗೆ ನಾನು ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಬಯಸುತ್ತೇನೆ. ಇಂತಹ ದುರದೃಷ್ಟಕರ ಮರುಕಳಿಸುವ ಘಟನೆಗಳಿಗೆ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ," ಎಂದು ಅವರು 'ಎಕ್ಸ್' ನಲ್ಲಿ ಬರೆದುಕೊಂಡಿದ್ದಾರೆ.
- 24 Oct 2025 11:05 AM IST
ಕರ್ನೂಲ್ ಬಸ್ ದುರಂತ: ಬಾಗಿಲುಗಳು ಲಾಕ್ ಆಗಿದ್ದವು, ಕಿಟಕಿಯಿಂದ ಜಿಗಿದು ಪಾರು ಬದುಕುಳಿದವರ ಹೇಳಿಕೆ
ಕರ್ನೂಲ್ ಜಿಲ್ಲೆಯ ಬಳಿ ಬೆಂಕಿ ಹೊತ್ತಿಕೊಂಡಿದ್ದ ದುರದೃಷ್ಟಕರ ಬಸ್ಸಿನಲ್ಲಿದ್ದ ಪ್ರಯಾಣಿಕ ಜಯಂತ್ ಕುಶ್ವಾಹ, ಬಸ್ ಬೆಂಕಿ ಹತ್ತಿಕೊಂಡಿದ್ದನ್ನು ನೋಡಿ ತಮಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಬಸ್ಸಿನ ಬಾಗಿಲುಗಳು ಲಾಕ್ ಆಗಿದ್ದವು ಮತ್ತು ತಮ್ಮ ಹಾಗೂ ಇತರ ಇಬ್ಬರು ಅಥವಾ ಮೂವರು ಪ್ರಯಾಣಿಕರು ಬಸ್ಸಿನಿಂದ ತಪ್ಪಿಸಿಕೊಳ್ಳಲು ತುರ್ತು ಕಿಟಕಿಗಳನ್ನು ಒಡೆಯಲು ಪ್ರಯತ್ನಿಸಿದ್ದಾಗಿ ಅವರು ವಿವರಿಸಿದ್ದಾರೆ.
ಸುಮಾರು 2:30 ರಿಂದ 2:40 ರ ಸುಮಾರಿಗೆ, ಬಸ್ ನಿಂತಿತು ಮತ್ತು ಎಚ್ಚರವಾದಾಗ ಬಸ್ಸು ಬೆಂಕಿ ಹೊತ್ತಿಕೊಂಡಿರುವುದನ್ನು ನಾನು ನೋಡಿದೆ. ಅದು ಬೆಂಕಿ ಎಂದು ನನಗೆ ನಂಬಲು ಸಾಧ್ಯವಾಗಲಿಲ್ಲ. ಆ ಕ್ಷಣಗಳಲ್ಲಿ, ನನಗೆ ಅದು ಬೆಂಕಿ ಎಂದು ಅರಿವಾಯಿತು. ಕೇವಲ ಇಬ್ಬರು ಅಥವಾ ಮೂವರು ಮಾತ್ರ ಎಚ್ಚರವಾಗಿದ್ದರು. ನಾವು ಕೂಗಿ ಎಲ್ಲರನ್ನೂ ಎಬ್ಬಿಸಿದೆವು. ಬಾಗಿಲುಗಳು ಲಾಕ್ ಆಗಿದ್ದವು. ನಮಗೆ ಚಾಲಕರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಮುಖ್ಯ ಬಾಗಿಲು ಲಾಕ್ ಆಗಿದ್ದರಿಂದ ನಾವು ತುರ್ತು ಕಿಟಕಿಯನ್ನು ಒಡೆದಿದ್ದೇವೆ. ನಾವು ಕಿಟಕಿಯಿಂದ ಹೊರಗೆ ಹಾರಿದ್ದೇವೆ. ಅನೇಕ ಜನರು ಕಿಟಕಿಗಳನ್ನು ಒಡೆದು ಬಸ್ಸಿನಿಂದ ಹೊರಗೆ ಹಾರಿದ್ದಾರೆ ಎಂದು ಜಯಂತ್ ಅವರು ತಿಳಿಸಿದ್ದಾರೆ.

