Pahalgam Terror Attack | ಕಾಶ್ಮೀರದಲ್ಲಿ ಎನ್ಐಎ ತಂಡ; ಪರಿಹಾರ ಘೋಷಿಸಿದ ಜಮ್ಮು-ಕಾಶ್ಮೀರ ಸರ್ಕಾರ
ಈ ಘಟನೆಯನ್ನು ಕಾಶ್ಮೀರದ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿಗಳಲ್ಲಿ ಒಂದಾಗಿದೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತಯ್ಬಾದ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಾಹಲ್ಗಾಮ್ನ ಬೈಸರಾನ್ ವ್ಯಾಲಿಯಲ್ಲಿ ಮಂಗಳವಾರ (ಏಪ್ರಿಲ್ 22ರಂದು) ನಡೆದ ಭಯೋತ್ಪಾದಕ ದಾಳಿಯಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ 26 ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದು, ಈ ಘಟನೆಯನ್ನು ಕಾಶ್ಮೀರದ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿಗಳಲ್ಲಿ ಒಂದಾಗಿದೆ. ಈ ದಾಳಿಯ ಜವಾಬ್ದಾರಿಯನ್ನು ಲಷ್ಕರ್-ಎ-ತಯ್ಬಾದ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ.
ಕಾಶ್ಮೀರ ಬಂದ್
ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಕಾಶ್ಮೀರದ ವ್ಯಾಪಾರೋದ್ಯಮ ಮತ್ತು ಪ್ರವಾಸೋದ್ಯಮ ಸಂಘಟನೆಗಳು ಬುಧವಾರ ಸಂಪೂರ್ಣ ಬಂದ್ ಆಚರಿಸಲು ಕರೆ ನೀಡಿವೆ.
ದಾಳಿಯಿಂದಾಗಿ ಇಡೀ ಕಾಶ್ಮೀರ ಆಘಾತಕ್ಕೆ ಒಳಗಾಗಿದೆ. ದಾಳಿಯನ್ನು ವ್ಯಾಪಕವಾಗಿ ಖಂಡಿಸಲಾಗಿದೆ. ಕಾಶ್ಮೀರ ವಾಣಿಜ್ಯೋದ್ಯಮ ಸಂಘಟನೆ (ಸಿಸಿಐಕೆ), ಜಮ್ಮು ಮತ್ತು ಕಾಶ್ಮೀರ ಹೋಟೆಲ್ ಮಾಲೀಕರ ಕ್ಲಬ್ (ಜೆಕೆೆಎಚ್ಸಿ), ಎಲ್ಲ ಪ್ರಮುಖ ಟ್ರಾವೆಲ್ ಸಂಘಟನೆಗಳು, ರೆಸ್ಟೋರೆಂಟ್ ಮಾಲೀಕರು, ನಾಗರಿಕ ಸಮುದಾಯದ ಸಂಘಟನೆಗಳು ಕಾಶ್ಮೀರ ಬಂದ್ಗೆ ಕರೆ ನೀಡಿವೆ.
ದಾಳಿ ಹೇಗಾಯಿತು?
ದಾಳಿಯು ಮಧ್ಯಾಹ್ನ 2.30ರಿಂದ 3 ಗಂಟೆಯ ಒಳಗೆಬೈಸರಾನ್ ವ್ಯಾಲಿಯಲ್ಲಿ ನಡೆದಿದೆ, ಈ ಪ್ರದೇಶವನ್ನು 'ಮಿನಿ ಸ್ವಿಟ್ಜರ್ಲೆಂಡ್' ಎಂದು ಹೇಳಲಾಗಿದೆ. ಈ ಸ್ಥಳವು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ಸಾಗಬಹುದಾದ ಪ್ರವಾಸಿ ತಾಣವಾಗಿದೆ. ಎರಡರಿಂದ ಮೂರು ಭಯೋತ್ಪಾದಕರು, ಸೇನೆಯ ವೇಷದಲ್ಲಿ ಬಂದು ಕುದುರೆ ಸವಾರಿ ಮಾಡುತ್ತಿದ್ದ ಅಥವಾ ಟ್ರೆಕ್ಕಿಂಗ್ನಲ್ಲಿ ತೊಡಗಿದ್ದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಕೋರರು ಗುಂಡುಗಳನ್ನು ಗೊತ್ತು- ಗುರಿಯಿಲ್ಲದೇ ಹಾರಿಸಿದ್ದಾರೆ, ಇದರಿಂದ ಮಹಿಳೆಯರು, ವೃದ್ಧರು, ಮತ್ತು ಮಕ್ಕಳು ಸೇರಿದಂತೆ ಅನೇಕರು ಬಲಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೃತ್ಯಗಳ ವಿಡಿಯೊ ವೈರಲ್ ಆಗಿದ್ದು, ಮಹಿಳೆಯೊಬ್ಬರು ತಮ್ಮ ಪತಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ವಿಷಯವನ್ನು ವಿವರಿಸಿದ್ದಾರೆ. "ಅವರು ಮೊದಲು ನನ್ನ ಗಂಡನ ಹೆಸರು ಮತ್ತು ಧರ್ಮವನ್ನು ಕೇಳಿದರು, ನಂತರ ಅವನನ್ನು ಗುಂಡಿಕ್ಕಿದರು," ಎಂದು ಆಕೆ ಅಳುತ್ತಾ ಹೇಳುವುದನ್ನು ಕೇಳಿಸಿಕೊಳ್ಳಬಹುದು. ಇನ್ನೊಬ್ಬರು ದಾಳಿಕೋರರು ಗುಂಡುಗಳನ್ನು ಸಮೀಪದಿಂದ ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ, .
ಸಾವು-ನೋವು
ವರದಿಗಳ ಪ್ರಕಾರ, ಸಾವಿನ ಸಂಖ್ಯೆ ಇನ್ನೂ ನಿಖರವಾಗಿಲ್ಲ. ಕೆಲವು ಮೂಲಗಳು 26ರಿಂದ 27 ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಶಂಕಿಸಿವೆ, ಅದೇ ರೀತಿ ಕನಿಷ್ಠ 12 ರಿಂದ 24 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಪಾಹಲ್ಗಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರನ್ನು ಶ್ರೀನಗರದ ಜಿಎಂಸಿ ಅನಂತನಾಗ್ಗೆ ಸ್ಥಳಾಂತರಿಸಲಾಗಿದೆ.
ಮೃತರಲ್ಲಿ ಕರ್ನಾಟಕದ ಶಿವಮೊಗ್ಗದ ನಿವಾಸಿ 47 ವರ್ಷದ ಮಂಜುನಾಥ್ ರಾವ್ ಸೇರಿದ್ದಾರೆ, ಅವರು ತಮ್ಮ ಪತ್ನಿ ಪವಿತ್ರಾ ಮತ್ತು ಮಗನೊಂದಿಗೆ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಅವರ ಪತ್ನಿ ಮತ್ತು ಮಗ ಸುರಕ್ಷಿತವಾಗಿದ್ದಾರೆ. ಇದರ ಜೊತೆಗೆ, ವಿದೇಶಿ ಪ್ರಜೆಗಳ ಸಾವಿನ ಬಗ್ಗೆ ವರದಿಗಳಿವೆ, ಆದರೆ ಅವರ ಗುರುತು ಅಥವಾ ರಾಷ್ಟ್ರೀಯತೆಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ರಕ್ಷಣಾ ಕಾರ್ಯಾಚರಣೆ
ಬೈಸರಾನ್ ವ್ಯಾಲಿಯ ದುರ್ಗಮ ಪರಿಸರಿಂದಾಗಿ ರಕ್ಷಣಾ ಕಾರ್ಯಾಚರಣೆ ಸವಾಲಿನದಾಗಿತ್ತು. ಸ್ಥಳೀಯರು ಗಾಯಾಳುಗಳನ್ನು ಕುದುರೆಗಳ ಮೇಲೆ ಕೆಳಗಿಳಿಸುವಲ್ಲಿ ಸಹಾಯ ಮಾಡಿದ್ದಾರೆ, ಜೊತೆಗೆ ಹೆಲಿಕಾಪ್ಟರ್ಗಳನ್ನು ಗಾಯಾಳುಗಳ ಸ್ಥಳಾಂತರಕ್ಕೆ ಬಳಸಲಾಗಿದೆ. ಭದ್ರತಾ ಪಡೆಗಳು, ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಮತ್ತು ಸಿಆರ್ಪಿಎಫ್ನ ವಿಶೇಷ ದಳಗಳು ಸ್ಥಳವನ್ನು ಸುತ್ತುವರಿದು ದಾಳಿಕೋರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿವೆ.
ರಾಜಕೀಯ ಪ್ರತಿಕ್ರಿಯೆಗಳು
ಈ ದಾಳಿಯನ್ನು ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸೌದಿ ಅರೇಬಿಯಾದಲ್ಲಿದ್ದಾಗಲೇ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಫೋನ್ನಲ್ಲಿ ಮಾತನಾಡಿ, ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಶಾ ಅವರು ಶ್ರೀನಗರಕ್ಕೆ ತೆರಳಿ ಭದ್ರತಾ ವಿಮರ್ಶೆ ಸಭೆ ನಡೆಸಿದ್ದಾರೆ. ಮೋದಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ, "ಈ ಘೋರ ಕೃತ್ಯದ ಹಿಂದಿರುವವರನ್ನು ಕ್ಷಮಿಸಲಾಗದು, ಅವರಿಗೆ ಪಾಠ ಕಲಿಸಲಾಗುವುದು," ಎಂದು ಭರವಸೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ದಾಳಿಯನ್ನು "ನಾಗರಿಕರ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ದಾಳಿ" ಎಂದು ವಿವರಿಸಿದ್ದಾರೆ. "ಈ ದಾಳಿಯ ರೂವಾರಿಗಳು ಪ್ರಾಣಿಗಳಿಗಿಂತ ಕಡಿಮೆ, ಅಮಾನವೀಯರು," ಎಂದು ಅವರು ಖಂಡಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, "ಪ್ರವಾಸಿಗರಂತಹ ನಿರಾಯುಧ ನಾಗರಿಕರ ಮೇಲಿನ ದಾಳಿ ಕ್ಷಮಾರ್ಹವಲ್ಲ," ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಈ ದಾಳಿಯು ಮಾನವೀಯತೆಗೆ ಕಳಂಕವಾಗಿದೆ," ಎಂದು ಟೀಕಿಸಿದ್ದಾರೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, "ಕಾಶ್ಮೀರವು ಐತಿಹಾಸಿಕವಾಗಿ ಪ್ರವಾಸಿಗರ ಸ್ವರ್ಗ. ಈ ದಾಳಿಯು ಆತಂಕಕಾರಿ," ಎಂದು ತಿಳಿಸಿದ್ದಾರೆ.
ಭಯೋತ್ಪಾದಕರ ಉದ್ದೇಶ
ದಾಳಿಯ ನೇತೃತ್ವ ವಹಿಸಿರುವ ಟಿಆರ್ಎಫ್ ಸಂಘಟನೆ ತನ್ನ ಹೇಳಿಕೆಯಲ್ಲಿ, "ಪ್ರವಾಸಿಗರಂತೆ ಬಂದು ನಂತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವವರ ವಿರುದ್ಧ ದಾಳಿಗಳನ್ನು ಇನ್ನಷ್ಟು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದೆ.
ಭದ್ರತಾ ಕ್ರಮಗಳು
ಈ ದಾಳಿಯ ಬಳಿಕ, ಭದ್ರತಾ ಪಡೆಗಳು ಪಾಹಲ್ಗಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ವಹಿಸಿಕೊಳ್ಳಲಿದ್ದು, ಏಪ್ರಿಲ್ 23ರಂದು ಸ್ಥಳಕ್ಕೆ ಭೇಟಿ ನೀಡಲಿದೆ. ಈ ಘಟನೆಯು ಜುಲೈ 3ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಯ ಭದ್ರತೆಯ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ.
ಕಾಶ್ಮೀರದ ಪ್ರವಾಸೋದ್ಯಮದ ಮೇಲೆ ಪರಿಣಾಮ
ಕಾಶ್ಮೀರವು ಇತ್ತೀಚಿನ ವರ್ಷಗಳಲ್ಲಿ ದಾಳಿಗಳ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿತ್ತು. 2025ರಲ್ಲಿ ಶ್ರೀನಗರ, ಗುಲ್ಮಾರ್ಗ್, ಮತ್ತು ಪಾಹಲ್ಗಾಮ್ನಲ್ಲಿ ಎಲ್ಲಾ ಹೋಟೆಲ್ಗಳು ಪೂರ್ಣವಾಗಿ ಬುಕ್ ಆಗಿದ್ದವು. ಈ ವರ್ಷ 2 ಕೋಟಿಗೂ ಅಧಿಕ ಪ್ರವಾಸಿಗರ ಆಗಮನದ ನಿರೀಕ್ಷೆಯಿತ್ತು. ಆದರೆ, ಈ ದಾಳಿಯು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಆತಂಕವನ್ನು ಮೂಡಿಸಿದ್ದು, ಕಾಶ್ಮೀರದ ಆರ್ಥಿಕತೆಗೆ ಧಕ್ಕೆ ತರುವ ಸಾಧ್ಯತೆಯಿದೆ.
Live Updates
- 23 April 2025 12:30 PM IST
ಭಯೋತ್ಪಾದಕರ ರೇಖಾಚಿತ್ರ ಬಿಡುಗಡೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಪ್ರವಾಸಿಗರು ಸಾವನ್ನಪ್ಪಿದ್ದರು. ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಭಯೋತ್ಪಾದಕರ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅವರ ಬಂಧನಕ್ಕೆ ಬಹುಮಾನ ಘೋಷಿಸಿದ್ದಾರೆ.
- 23 April 2025 12:20 PM IST
ಕೂದಲೆಳೆಯಲ್ಲಿ ಪಾರಾದ ಮಾಜಿ ಬಳ್ಳಾರಿ ವಿವಿ ಸಿಂಡಿಕೇಟ್ ಸಮಿತಿಯ ಸದಸ್ಯರ ಕುಟುಂಬ
ಕಾಶ್ಮೀರದ ಪಹಲ್ಗಾಮ್ನಲ್ಲಿ ಗುಂಡಿನ ದಾಳಿಯ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಪ್ರವಾಸದಲ್ಲಿದ್ದ ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸಿಂಡಿಕೇಟ್ ಸಮಿತಿ ಮಾಜಿ ಸದಸ್ಯ ಟಿ.ಎಂ.ರಾಜಶೇಖರ ಅವರು ಮತ್ತು ಅವರ ಕುಟುಂಬದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
- 23 April 2025 12:11 PM IST
ನಾಗರಿಕರ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ; ಆಂಟೋನಿಯೊ ಗುಟೆರೆಸ್
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತೀವ್ರವಾಗಿ ಖಂಡಿಸಿದ್ದಾರೆ. ನಾಗರಿಕರ ಮೇಲಿನ ದಾಳಿ ಯಾವುದೇ ಸಂದರ್ಭದಲ್ಲೂ ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿದ್ದಾರೆ.
- 23 April 2025 12:06 PM IST
ಪ್ರವಾಸಿಗರ ನೆರವಿಗೆ ಸರ್ಕಾರದಿಂದ ಸಹಾಯವಾಣಿ
ಕಾಶ್ಮೀರದ ಪಾಹಲ್ಗಾಮ್ನ ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26ಮಂದಿ ಸಾವನ್ನಪ್ಪಿದ್ದಾರೆ. ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ರಾಜ್ಯಕ್ಕೆ ಮರಳಿ ತರಲು ಸರ್ಕಾರವು ಪಯತ್ನಿಸುತ್ತಿದೆ. ಆದ್ದರಿಂದ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆಗಳು ಹೀಗಿವೆ - 080-43344334, 080-43344335, 080-43344336, 080-43344342 2 ಎಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರ ವಿವರಗಳನ್ನು ಈ ಕೆಳಕಂಡ ಸಹಾಯವಾಣಿಗೆ ನೀಡಬೇಕು ಎಂದು ಇಲಾಖೆ ತಿಳಿಸಿದೆ.
- 23 April 2025 11:53 AM IST
ಅಪರಾಹ್ನ 3 ಗಂಟೆಗೆ ಬೆಂಗಳೂರು ತಲುಪಲಿರುವ ಭರತ್ ಭೂಷಣ್ ಮೃತದೇಹ
ಜಮ್ಮು ಮತ್ತು ಕಾಶ್ಮೀರದ ಪಹಲ್ಯಾಮ್ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಹಾವೇರಿಯ ಎಂಜಿನಿಯರ್ ಮತ್ತು ಬೆಂಗಳೂರಿನ ನಿವಾಸಿ ಭರತ್ ಭೂಷಣ್ (41) ಸೇರಿದ್ದಾರೆ. ಅವರ ಮೃತದೇಹವು ಬುಧವಾರ ಮಧ್ಯಾಹ್ನ 3 ಗಂಟೆಗೆ ಮುಂಬೈ ಮೂಲಕ ಬೆಂಗಳೂರಿಗೆ ವಿಮಾನ ಸಂಖ್ಯೆ 6E 3105 / 6E 5252 ರಲ್ಲಿ ಬಂದು ತಲುಪಲಿದೆ. ಇವರೊಂದಿಗೆ ಸುಜಾತಾ, ಹವಿಶ್, ಪ್ರೀತಂ ಚೆನ್ನವೀರಪ್ಪ ನರಸಿಂ, ಕೆ.ಜೆ.ಚಂದ್ರಶೇಖರ್, ಶ್ರೀಹರಿ ಪ್ರಸಾದ್ ಎನ್, ಎಂ. ದೀಪು, ಎಂ ಎಸ್ ರಾಹುಲ್ ಬಂದಿಳಿಯಲಿದ್ದಾರೆ.
- 23 April 2025 11:51 AM IST
ಆರು ಗಂಟೆಗೆ ಶಿವಮೊಗ್ಗ ತಲುಪಲಿದೆ ಮಂಜುನಾಥ ರಾವ್ ಮೃತದೇಹ
ಜಮ್ಮು ಮತ್ತು ಕಾಶ್ಮೀರದ ಪಹಲಾಮ್ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ಗುಂಡಿಗೆ ಬಲಿಯಾಗಿದ್ದ ಶಿವಮೊಗ್ಗ ಜಿಲ್ಲೆಯ ಮಂಜುನಾಥ ರಾವ್ ಅವರ ಮೃತದೇಹ ವಿಮಾನ ಸಂಖ್ಯೆ 6E 3103 / 6E 5269 / 6E 7731 ನಲ್ಲಿ ನವದೆಹಲಿ ಮತ್ತು ಬೆಂಗಳೂರು ಮೂಲಕ ಬುಧವಾರ ಶಿವಮೊಗ್ಗಕ್ಕೆ ಸಂಜೆ 6:00 ಗಂಟೆಗೆ ತಲುಪಲಿದೆ. ಪಲ್ಲವಿ ಆರ್ (ಪತ್ನಿ, 40), ಅಭಿಜಯ (ಮಗ, 18) ಅವರು ಜೊತೆಗಿರಲಿದ್ದಾರೆ.
- 23 April 2025 9:34 AM IST
ಕಾಶ್ಮೀರ ಬಂದ್ಗೆ ಕರೆ
ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಕಾಶ್ಮೀರದ ವ್ಯಾಪಾರೋದ್ಯಮ ಮತ್ತು ಪ್ರವಾಸೋದ್ಯಮ ಸಂಘಟನೆಗಳು ಬುಧವಾರ ಸಂಪೂರ್ಣ ಬಂದ್ ಆಚರಿಸಲು ಕರೆ ನೀಡಿವೆ.
ದಾಳಿಯಿಂದಾಗಿ ಇಡೀ ಕಾಶ್ಮೀರ ಆಘಾತಕ್ಕೆ ಒಳಗಾಗಿದೆ. ದಾಳಿಯನ್ನು ವ್ಯಾಪಕವಾಗಿ ಖಂಡಿಸಲಾಗಿದೆ. ಕಾಶ್ಮೀರ ವಾಣಿಜ್ಯೋದ್ಯಮ ಸಂಘಟನೆ (ಸಿಸಿಐಕೆ), ಜಮ್ಮು ಮತ್ತು ಕಾಶ್ಮೀರ ಹೋಟೆಲ್ ಮಾಲೀಕರ ಕ್ಲಬ್ (ಜೆಕೆೆಎಚ್ಸಿ), ಎಲ್ಲ ಪ್ರಮುಖ ಟ್ರಾವೆಲ್ ಸಂಘಟನೆಗಳು, ರೆಸ್ಟೋರೆಂಟ್ ಮಾಲೀಕರು, ನಾಗರಿಕ ಸಮುದಾಯದ ಸಂಘಟನೆಗಳು ಕಾಶ್ಮೀರ ಬಂದ್ಗೆ ಕರೆ ನೀಡಿವೆ.
- 23 April 2025 9:30 AM IST
ಕಾಶ್ಮೀರದಲ್ಲಿ ಕೊಪ್ಪಳದ 20 ಮಂದಿ ಸುರಕ್ಷಿತ
ಕಾಶ್ಮೀರದಲ್ಲಿ ಕೊಪ್ಪಳದ 20 ಮಂದಿ ಸುರಕ್ಷಿತ
ಕಾಶ್ಮೀರದಲ್ಲಿ ಕೊಪ್ಪಳದ 20 ಮಂದಿ ಸಿಲುಕಿರುವ ಮಾಹಿತಿ ಇದೆ.. ಸೋಮವಾರ ಕೊಪ್ಪಳದಿಂದ ನಾಲ್ಕು ಕುಟುಂಬಗಳ 20 ಸದಸ್ಯರು ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಇವರೆಲ್ಲ ಉಗ್ರರ ದಾಳಿ ನಡೆದ ಸ್ಥಳದಿಂದ 80 ಕಿಲೋ ಮೀಟರ್ ದೂರದಲ್ಲಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ . ಅವರನ್ನು ಮರಳಿ ಕರೆತರಲು ಸರ್ಕಾರ ಸಿದ್ಧತೆ
- 22 April 2025 11:51 PM IST
ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಕ್ರಮ: ಸಿದ್ದ ರಾಮಯ್ಯ ಭರವಸೆ
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಇಂದು ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಾಳಿಗೆ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಂಡರೆ ಎದೆ ನಲುಗುತ್ತದೆ. ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರಡ.
ಭಯೋತ್ಪಾದಕರ ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಕೂಡ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ.ಉ ಗ್ರಕೃತ್ಯದಿಂದಾಗಿ ದೂರದ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯದ ಅಧಿಕಾರಿಗಳ ತಂಡವನ್ನು ಸಂಜೆಯೇ ರವಾನಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ನೆರವಿನ ಅಗತ್ಯ ಇದೆ ಎನ್ನುವುದನ್ನು ಅರಿತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಕಾಶ್ಮೀರಕ್ಕೆ ತೆರಳಿ ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಸಿಎಂ ಹೇಳಿದ್ದಾರೆ.
- 22 April 2025 11:29 PM IST
ಸೌದಿ ಅರೇಬಿಯಾ ಪ್ರವಾಸ ಮೊಟಕು; ಪ್ರಧಾನಿ ಮೋದಿ ವಾಪಸ್
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ, ಇಂದು ರಾತ್ರಿ ಭಾರತಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಸೌದಿ ಅರೇಬಿಯಾ ಆಯೋಜಿಸಿದ್ದ ಅಧಿಕೃತ ಭೋಜನಕೂಟದಲ್ಲಿ ಭಾಗಿಯಾಗುವುದನ್ನು ತಪ್ಪಿಸಿಕೊಂಡು ತಮ್ಮ ಪ್ರವಾಸ ಮೊಟಕುಗೊಳಿಸಲು ನಿರ್ಧರಿಸಿದ್ದಾರೆ. ಅವರು ಇಂದು(ಮಂಗಳವಾರ) ರಾತ್ರಿ ಭಾರತಕ್ಕೆ ಮರಳಲಿದ್ದಾರೆ. ಅಧಿಕೃತವಾಗಿ ಬುಧವಾರ ರಾತ್ರಿಯೇ ಹಿಂತಿರುಗಬೇಕಿತ್ತು, ಆದರೆ ಈಗ ಬುಧವಾರ ಮುಂಜಾನೆ ಭಾರತಕ್ಕೆ ಆಗಮಿಸಲಿದ್ದಾರೆ.