ನ್ಯಾಯಾಂಗದ ಮೇಲೆ ಪಟ್ಟಭದ್ರರ ಹಿಡಿತ;  600ಕ್ಕೂ ಹೆಚ್ಚು ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ
x

ನ್ಯಾಯಾಂಗದ ಮೇಲೆ ಪಟ್ಟಭದ್ರರ ಹಿಡಿತ; 600ಕ್ಕೂ ಹೆಚ್ಚು ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ

ಮಾರ್ಚ್ 26 ರ ಪತ್ರಕ್ಕೆ ಮನನ್ ಕುಮಾರ್ ಮಿಶ್ರಾ, ಆದೀಶ್ ಅಗರ್ವಾಲಾ, ಚೇತನ್ ಮಿತ್ತಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್, ಉದಯ್ ಹೊಳ್ಳ ಮತ್ತು ಸ್ವರೂಪಮಾ ಚತುರ್ವೇದಿ ಮತ್ತಿತರರು ಸಹಿ ಹಾಕಿದ್ದಾರೆ.


ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದಿರುವ 600ಕ್ಕೂ ಹೆಚ್ಚು ವಕೀಲರು, ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ತರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತಿತರ ವಕೀಲರು, ʻಪಟ್ಟಭದ್ರ ಹಿತಾಸಕ್ತಿ ಗುಂಪುʼ ನ್ಯಾಯಾಂಗ ಪ್ರಕ್ರಿಯೆಯನ್ನು ತಿದ್ದಲು, ತೀರ್ಪುಗಳ ಮೇಲೆ ಪ್ರಭಾವ ಬೀರಲು ಮತ್ತು ರಾಜಕೀಯ ಕಾರ್ಯಸೂಚಿಯೊಂದಿಗೆ ನ್ಯಾಯಾಂಗದ ಪ್ರತಿಷ್ಠೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮಾರ್ಚ್ 26 ರ ಪತ್ರಕ್ಕೆ ಮನನ್ ಕುಮಾರ್ ಮಿಶ್ರಾ, ಆದೀಶ್ ಅಗರ್ವಾಲಾ, ಚೇತನ್ ಮಿತ್ತಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್, ಉದಯ್ ಹೊಳ್ಳ ಮತ್ತು ಸ್ವರೂಪಮಾ ಚತುರ್ವೇದಿ ಮತ್ತಿತರರು ಸಹಿ ಹಾಕಿದ್ದಾರೆ.

ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಇದು ಸತ್ಯ. ನ್ಯಾಯಾಲಯದ ತೀರ್ಪುಗಳನ್ನು ತಳ್ಳಿಹಾಕಲು ಮತ್ತು ನ್ಯಾಯಾಂಗಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

'ಬೆಂಚ್ ಫಿಕ್ಸಿಂಗ್'

ಪತ್ರದಲ್ಲಿ ಪೀಠಗಳ ಸಂಯೋಜನೆ ಮೇಲೆ ಪ್ರಭಾವ ಬೀರುವ ಪ್ರಯತ್ನಗಳ ಉಲ್ಲೇಖವಿದೆ. ʻಬೆಂಚ್ ಫಿಕ್ಸಿಂಗ್‌ʼ ನಡೆಯುತ್ತಿದೆ ಎಂಬ ಕಲ್ಪನೆ ಹಾಗೂ ನ್ಯಾಯಾಧೀಶರ ಸಮಗ್ರತೆ ಮೇಲೆ ಸಂಶಯ ಮೂಡಿಸುವ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ʻನಮ್ಮ ನ್ಯಾಯಾಲಯಗಳನ್ನು ಕಾನೂನುಗಳೇ ಇಲ್ಲದ ದೇಶಗಳಿಗೆ ಹೋಲಿಸುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ನ್ಯಾಯಾಂಗ ಸಂಸ್ಥೆಗಳಲ್ಲಿ ನ್ಯಾಯಸಮ್ಮತವಲ್ಲದ ಕ್ರಿಯೆಗಳು ನಡೆಯುತ್ತವೆ ಎಂದು ದೂರುತ್ತಾರೆʼ ಎಂದು ಪತ್ರದಲ್ಲಿ ಇದೆ.

ಸಾರ್ವಜನಿಕ ನಂಬಿಕೆಗೆ ಧಕ್ಕೆ: ʻಇವು ಕೇವಲ ಟೀಕೆಗಳಲ್ಲ; ನ್ಯಾಯಾಂಗದಲ್ಲಿ ಸಾರ್ವಜನಿಕರ ನಂಬಿಕೆಯನ್ನು ಹಾಳುಮಾಡಲು ಮತ್ತು ಕಾನೂನುಗಳ ನ್ಯಾಯೋಚಿತ ಅನ್ವಯಿಸುವಿಕೆಗೆ ಬೆದರಿಕೆಯುಂಟು ಮಾಡುವ ನೇರ ದಾಳಿಗಳಾಗಿವೆ. ರಾಜಕಾರಣಿಗಳು ಬೇರೆಯವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುವುದು ಮತ್ತು ಅವರನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುವುದು ಆಶ್ಚರ್ಯಕರ. ನ್ಯಾಯಾಲಯದ ನಿರ್ಧಾರಗಳು ಅವರ ಪರ ಇರದಿದ್ದರೆ, ಅವರು ನ್ಯಾಯಾಲಯಗಳನ್ನುಟೀಕಿಸುತ್ತಾರೆ. ಇಂಥ ದ್ವಿಮುಖ ನಡವಳಿಕೆ ಕಾನೂನು ವ್ಯವಸ್ಥೆ ಬಗ್ಗೆ ಜನಸಾಮಾನ್ಯರಿಗೆ ಇರುವವರಿಗೆ ಹಾನಿಕರ,ʼ ಎಂದು ದೂರಿದ್ದಾರೆ.

ʻದೇಶ ಚುನಾವಣೆಗೆ ಹೋಗುತ್ತಿರುವಾಗ ಇಂಥವರ ಕಾರ್ಯತಂತ್ರದ ನಿಕಟ ಪರಿಶೀಲನೆ ಅಗತ್ಯವಿದೆ. ಬಾಹ್ಯ ಒತ್ತಡಗಳಿಂದ ನ್ಯಾಯಾಂಗ ವನ್ನು ರಕ್ಷಿಸಲು ಮತ್ತು ಕಾನೂನು-ಸುವ್ಯವಸ್ಥೆಯನ್ನು ಎತ್ತಿಹಿಡಿಯಲು ದೃಢವಾದ ಕ್ರಮ ತೆಗೆದುಕೊಳ್ಳಬೇಕುʼ ಎಂದು ವಕೀಲರು ಸುಪ್ರೀಂ ಕೋರ್ಟ್‌ ನ್ನು ಕೋರಿದ್ದಾರೆ.

ʻಮೌನವಾಗಿರುವುದು ಅಥವಾ ನಿಷ್ಕ್ರಿಯತೆ ಹಾನಿ ಮಾಡುವವರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆʼ ಎಂದು ವಕೀಲರು ಹೇಳಿದ್ದಾರೆ.

Read More
Next Story