
ಆಪರೇಷನ್ ಸಿಂದೂರ್ ವೇಳೆ ಭಾರತಕ್ಕೆ ಯುದ್ಧ ವಿಮಾನ ನಷ್ಟಕ್ಕೆ ರಾಜಕೀಯ ಅಡ್ಡಿ; ದೂತಾವಾಸದಿಂದ ಸ್ಪಷ್ಟನೆ
ಕ್ಯಾಪ್ಟನ್ ಶಿವ್ ಕುಮಾರ್ ಅವರ ಹೇಳಿಕೆಯ ವಿಡಿಯೋ ಆನ್ಲೈನ್ನಲ್ಲಿ ಹರಿದಾಡುತ್ತಿದ್ದಂತೆ, ಇಂಡೋನೇಷ್ಯಾದ ಭಾರತೀಯ ದೂತಾವಾಸವು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಇಂಡೋನೇಷ್ಯಾದಲ್ಲಿರಯುವ ಭಾರತದ ರಕ್ಷಣಾ ಇಲಾಖೆ ಅಧಿಕಾರಿ ಕ್ಯಾಪ್ಟನ್ ಶಿವ್ ಕುಮಾರ್ ಅವರು 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯ ವೇಳೆ ಭಾರತೀಯ ವಾಯುಸೇನೆ (IAF) ಕೆಲವು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂದು ಹೇಳಿಕೆ ನೀಡಿದ ವಿಡಿಯೋ ವೈರಲ್ ಆಗಿ ಚರ್ಚಗೆ ಗ್ರಾಸವಾಗಿತ್ತು. ಇದೀಗ ಇಂಡೋನೇಷ್ಯಾದಲ್ಲಿನ ಭಾರತೀಯ ದೂತಾವಾಸವು ಸ್ಪಷ್ಟನೆ ನೀಡಿದ್ದು ತಪ್ಪು ನಿರೂಪಣೆ ಎಂದಿದೆ.
ಜೂನ್ 10ರಂದು ಜಕಾರ್ತಾದಲ್ಲಿ ನಡೆದ ಸೆಮಿನಾರ್ನಲ್ಲಿ ಕ್ಯಾಪ್ಟನ್ ಶಿವ್ ಕುಮಾರ್ ಮಾತನಾಡಿದ್ದರು. ಆಪರೇಷನ್ ಸಿಂದೂರ್ನ ಆರಂಭಿಕ ಹಂತದಲ್ಲಿ, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳು ಅಥವಾ ಸೈನಿಕ ಮೂಲಸೌಕರ್ಯಗಳನ್ನು ಗುರಿಯಾಗಿಸದಂತೆ ಭಾರತ ಸರ್ಕಾರದಿಂದ ಸ್ಪಷ್ಟ ಸೂಚನೆ ಇತ್ತು. ಈ ನಿರ್ಬಂಧದಿಂದಾಗಿ ವಾಯುಸೇನೆ ಕೆಲವು ಯುದ್ಧವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಕುಮಾರ್ ವಿವರಿಸಿದ್ದರು.
ಆರಂಭಿಕ ಹಿನ್ನಡೆಯ ನಂತರ, ಭಾರತೀಯ ಪಡೆಗಳು ತಮ್ಮ ತಂತ್ರವನ್ನು ಬದಲಾಯಿಸಿ, ಪಾಕಿಸ್ತಾನದ ವಾಯು ರಕ್ಷಣೆಯನ್ನು ದಮನಗೊಳಿಸಿ, ಸರ್ಫೇಸ್-ಟು-ಏರ್ ಮತ್ತು ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿ ಯಶಸ್ವಿಯಾಗಿ ದಾಳಿಗಳನ್ನು ನಡೆಸಿದವು ಎಂದು ಅವರು ಹೇಳಿದ್ದರು.
"ತಪ್ಪು ನಿರೂಪಣೆ" ಎಂದ ಧೂತವಾಸ
ಕ್ಯಾಪ್ಟನ್ ಶಿವ್ ಕುಮಾರ್ ಅವರ ಹೇಳಿಕೆಯ ವಿಡಿಯೋ ಆನ್ಲೈನ್ನಲ್ಲಿ ಹರಿದಾಡುತ್ತಿದ್ದಂತೆ, ಇಂಡೋನೇಷ್ಯಾದ ಭಾರತೀಯ ದೂತಾವಾಸವು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಕುಮಾರ್ ಅವರ ಹೇಳಿಕೆಯನ್ನು "ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಸಂದರ್ಭೋಚಿತವಲ್ಲ" ಎಂದು ದೂತಾವಾಸವು ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣ X ನಲ್ಲಿ ಮಾಡಿದ ಪೋಸ್ಟ್ನಲ್ಲಿ, ಮಾಧ್ಯಮ ವರದಿಗಳು ಕ್ಯಾಪ್ಟನ್ ಕುಮಾರ್ ಅವರ ಉದ್ದೇಶವನ್ನು ಸರಿಯಾಗಿ ಪ್ರತಿಬಿಂಬಿಸಿಲ್ಲ ಎಂದು ದೂತಾವಾಸ ತಿಳಿಸಿದೆ.
ಭಾರತೀಯ ಸಶಸ್ತ್ರ ಪಡೆಗಳು "ನಮ್ಮ ನೆರೆಯ ಕೆಲವು ದೇಶಗಳಂತೆ ಅಲ್ಲದೆ, ನಾಗರಿಕ ರಾಜಕೀಯ ನಾಯಕತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ" ಎಂದು ದೂತಾವಾಸವು ಪರೋಕ್ಷವಾಗಿ ಪಾಕಿಸ್ತಾನವನ್ನು ಉಲ್ಲೇಖಿಸಿದೆ. ಆಪರೇಷನ್ ಸಿಂದೂರ್ನ ಮುಖ್ಯ ಉದ್ದೇಶವು ಭಯೋತ್ಪಾದಕರ ಶಿಬಿರಗಳನ್ನು ಗುರಿಯಾಗಿಸುವುದು ಮತ್ತು ಯುದ್ಧದ ಉಲ್ಬಣವನ್ನು ತಡೆಯುವುದಾಗಿತ್ತು ಎಂದು ಅದು ಪುನರುಚ್ಚರಿಸಿದೆ.
ಜನರಲ್ ಅನಿಲ್ ಚೌಹಾಣ್ ಅವರ ಹೇಳಿಕೆಯೇನು?
ಒಂದು ತಿಂಗಳ ಹಿಂದೆ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಸಿಂಗಾಪುರದಲ್ಲಿ ಮಾತನಾಡುತ್ತಾ, ಭಾರತವು ಪಾಕಿಸ್ತಾನದೊಂದಿಗಿನ ಇತ್ತೀಚಿನ ಸೈನಿಕ ಘರ್ಷಣೆಯಲ್ಲಿ ಯುದ್ಧವಿಮಾನಗಳನ್ನು ಕಳೆದುಕೊಂಡಿರುವುದನ್ನು ದೃಢಪಡಿಸಿದ್ದರು. ಆದಾಗ್ಯೂ, ತಂತ್ರವನ್ನು ಬದಲಾಯಿಸಿ ಪಾಕಿಸ್ತಾನದೊಳಗೆ ಯಶಸ್ವಿಯಾಗಿ ದಾಳಿಗಳನ್ನು ನಡೆಸಲಾಯಿತು ಎಂದು ಅವರು ಹೇಳಿದ್ದರು. ಪಾಕಿಸ್ತಾನವು ಆರು ಭಾರತೀಯ ಯುದ್ಧವಿಮಾನಗಳನ್ನು ಹೊಡೆದುರುಳಿಸಿತು ಎಂಬ ಹೇಳಿಕೆಯನ್ನು ಅವರು "ತಪ್ಪು" ಎಂದು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು. "ಯುದ್ಧ ವಿಮಾನ ಉರುಳಿತು ಎಂಬುದಕ್ಕಿಂತ ಅದು ಯಾಕೆ ಉರುಳಿತು ಎಂಬುದು ಮುಖ್ಯ" ಎಂದಿದ್ದರು.
ಆಪರೇಷನ್ ಸಿಂದೂರ್
ಮೇ 7ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯು ಪಾಕಿಸ್ತಾನ-ನಿಯಂತ್ರಿತ ಪ್ರದೇಶಗಳಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿತು. ಈ ದಾಳಿಗಳು ನಾಲ್ಕು ದಿನಗಳ ಕಾಲ ತೀವ್ರ ಸೈನಿಕ ಘರ್ಷಣೆಗೆ ಕಾರಣವಾದವು. ಮೇ 10 ರಂದು, ಎರಡೂ ದೇಶಗಳು ಸೈನಿಕ ಕಾರ್ಯಾಚರಣೆಯನ್ನು ನಿಲ್ಲಿಸಲು ಒಪ್ಪಿಕೊಂಡವು. ಭಾರತವು ಪಾಕಿಸ್ತಾನಕ್ಕೆ "ಯುದ್ಧವನ್ನು ಉಲ್ಬಣಗೊಳಿಸಲು ಬಯಸುವುದಿಲ್ಲ" ಮತ್ತು ದಾಳಿಗಳು "ಕೇವಲ ಭಯೋತ್ಪಾದಕ ಬೀಡುಗಳಿಗೆ ಸೀಮಿತವಾಗಿವೆ" ಎಂದು ಸ್ಪಷ್ಟಪಡಿಸಿತ್ತು.