NMC cancels permission of Vaishno Devi Medical College: Political pressure alleged, students future uncertain
x

ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿರ್ಧಾರದ ಕುರಿತು ಶ್ರೀ ಮಾತಾ ವೈಷ್ಣೋದೇವಿ ಸಂಘರ್ಷ ಸಮಿತಿಯ ಅಧ್ಯಕ್ಷ ಕರ್ನಲ್ ಸುಖ್‌ಬೀರ್ ಸಿಂಗ್ ಮಂಕೋಟಿಯಾ (ಎಡದಿಂದ ಎರಡನೇ ಸ್ಥಾನದಲ್ಲಿರುವವರು) ಮಾತನಾಡಿದರು. 

ವೈಷ್ಣೋದೇವಿ ವೈದ್ಯಕೀಯ ಕಾಲೇಜಿನ ಅನುಮತಿ ರದ್ದು: ರಾಜಕೀಯ ಒತ್ತಡದ ಆರೋಪ, ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

2025-26ರ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಜಮ್ಮು ಮತ್ತು ಕಾಶ್ಮೀರದ ಇತರ ವೈದ್ಯಕೀಯ ಸಂಸ್ಥೆಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.


Click the Play button to hear this message in audio format

ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಪ್ರತಿಷ್ಠಿತ 'ಶ್ರೀ ಮಾತಾ ವೈಷ್ಣೋದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್'ಗೆ ನೀಡಿದ್ದ ಅನುಮತಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ದಿಢೀರ್ ಹಿಂಪಡೆದಿದೆ. ಕಾಲೇಜಿನ ಮೊದಲ ಶೈಕ್ಷಣಿಕ ಸಾಲು ಆರಂಭವಾದ ಕೆಲವೇ ತಿಂಗಳುಗಳಲ್ಲಿ ಈ ಬೆಳವಣಿಗೆ ಸಂಭವಿಸಿದ್ದು, ನೂರಾರು ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಯ ಭವಿಷ್ಯದ ಮೇಲೆ ಕಳವಳದ ಛಾಯೆ ಆವರಿಸಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿ (MARB), ಜನವರಿ 2 ರಂದು ಕಾಲೇಜಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ವೇಳೆ ಕಾಲೇಜು "ಕನಿಷ್ಠ ಮಾನದಂಡಗಳನ್ನು" ಪೂರೈಸುವಲ್ಲಿ ವಿಫಲವಾಗಿದೆ ಎಂಬ ಕಾರಣ ನೀಡಿ ಜನವರಿ 6 ರಂದು ಕಾಲೇಜಿನ ಅನುಮತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. 2025-26ರ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಜಮ್ಮು ಮತ್ತು ಕಾಶ್ಮೀರದ ಇತರ ವೈದ್ಯಕೀಯ ಸಂಸ್ಥೆಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.

ನಿರ್ಧಾರದ ಹಿಂದೆ ರಾಜಕೀಯ ಒತ್ತಡದ ಆರೋಪ

ಎನ್‌ಎಂಸಿಯ ಈ ನಿರ್ಧಾರವು ಶೈಕ್ಷಣಿಕ ಕಾರಣಗಳಿಗಿಂತ ಹೆಚ್ಚಾಗಿ ಸ್ಥಳೀಯ ರಾಜಕೀಯ ಒತ್ತಡದಿಂದ ಕೂಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಾಲೇಜಿನ ಪ್ರಸಕ್ತ ಸಾಲಿನ ಬ್ಯಾಚ್‌ನಲ್ಲಿ ನೀಟ್ ಮೂಲಕ ಆಯ್ಕೆಯಾದ 50 ವಿದ್ಯಾರ್ಥಿಗಳ ಪೈಕಿ 42 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದಂತೆ ಏಳು ಮಂದಿ ಹಿಂದೂ ಮತ್ತು ಒಬ್ಬ ಸಿಖ್ ವಿದ್ಯಾರ್ಥಿ ಪ್ರವೇಶ ಪಡೆದಿದ್ದರು.

ಈ ಆಯ್ಕೆ ಪಟ್ಟಿಯನ್ನು ವಿರೋಧಿಸಿ ಕಳೆದ ಕೆಲವು ವಾರಗಳಿಂದ ಬಲಪಂಥೀಯ ಸಂಘಟನೆಗಳ ಒಕ್ಕೂಟವಾದ 'ಸಂಘರ್ಷ ಸಮಿತಿ' ಪ್ರತಿಭಟನೆ ನಡೆಸುತ್ತಿತ್ತು. ಮೆರಿಟ್ ಆಧಾರಿತ ಪ್ರವೇಶ ಪಟ್ಟಿಯನ್ನು ರದ್ದುಗೊಳಿಸಿ, ಎಲ್ಲಾ ಸೀಟುಗಳನ್ನು ಹಿಂದೂ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿಡಬೇಕು ಎಂದು ಈ ಸಂಘಟನೆಗಳು ಒತ್ತಾಯಿಸುತ್ತಿದ್ದವು. ಈ ಪ್ರತಿಭಟನೆಗಳ ಬೆನ್ನಲ್ಲೇ ಎನ್‌ಎಂಸಿ ಅನುಮತಿ ರದ್ದುಗೊಳಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೂಲಸೌಕರ್ಯದ ಕೊರತೆ ಇಲ್ಲ: ಬೋಧಕರ ವಾದ

"ನಮ್ಮ ಕಾಲೇಜು ಕೇಂದ್ರಾಡಳಿತ ಪ್ರದೇಶದಲ್ಲೇ ಅತ್ಯುತ್ತಮ ಮೂಲಸೌಕರ್ಯ ಮತ್ತು ಬೋಧಕ ವರ್ಗವನ್ನು ಹೊಂದಿದೆ. ಎಲ್ಲಾ ಮಾನದಂಡಗಳನ್ನು ಪೂರೈಸಿದ ನಂತರವೇ ನಮಗೆ ಅನುಮತಿ ಸಿಕ್ಕಿತ್ತು" ಎಂದು ಕಾಲೇಜಿನ ಹಿರಿಯ ಬೋಧಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಲೋಪದೋಷಗಳಿದ್ದಲ್ಲಿ ಆಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ನೀಡುವ ಸಂಪ್ರದಾಯವಿದೆ. ಆದರೆ, ಯಾವುದೇ ಪೂರ್ವ ಸೂಚನೆ ನೀಡದೆ ನೇರವಾಗಿ ಅನುಮತಿ ರದ್ದುಗೊಳಿಸಿರುವುದು ಕಾನೂನುಬಾಹಿರ ಮತ್ತು ಅಸಹಜವಾದ ಆತುರದ ನಿರ್ಧಾರ ಎಂದು ಸಿಬ್ಬಂದಿ ದೂರಿದ್ದಾರೆ.

ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ಸರ್ಕಾರಿ ಮತ್ತು ಖಾಸಗಿ ಕೆಲಸಗಳನ್ನು ಬಿಟ್ಟು ಈ ಸಂಸ್ಥೆಗೆ ಸೇರಿದ್ದರು. ಈಗ ಅವರ ಉದ್ಯೋಗದ ಭವಿಷ್ಯವೂ ಅನಿಶ್ಚಿತವಾಗಿದೆ.

ಕಣ್ಣೀರಲ್ಲಿ ಕೈತೊಳೆಯುತ್ತಿರುವ ವಿದ್ಯಾರ್ಥಿಗಳು

"ನಾವು ಕಷ್ಟಪಟ್ಟು ಓದಿ ನೀಟ್ ಮೂಲಕ ಈ ಕಾಲೇಜಿಗೆ ಪ್ರವೇಶ ಪಡೆದಿದ್ದೆವು. ಧರ್ಮದ ಆಧಾರದ ಮೇಲೆ ನಮ್ಮ ನಡುವೆ ಯಾವುದೇ ಭೇದಭಾವ ಇರಲಿಲ್ಲ. ಆದರೆ ಹೊರಗಿನ ರಾಜಕೀಯದಿಂದಾಗಿ ನಮ್ಮ ಕನಸುಗಳು ಭಗ್ನವಾಗುತ್ತಿವೆ" ಎಂದು ಬುದ್ಗಾಮ್‌ನ ವಿದ್ಯಾರ್ಥಿನಿ ಬಿಲ್ಕಿಸ್ ಬೇಸರ ವ್ಯಕ್ತಪಡಿಸಿದ್ದಾರೆ. "ಇದು ನಮ್ಮ ಕಾಲ ಮೇಲೆ ನಾವೇ ಕೊಡಲಿ ಹಾಕಿಕೊಂಡಂತೆ" ಎಂದು ಉಧಮ್‌ಪುರದ ವಿದ್ಯಾರ್ಥಿ ಮಹಿತ್ ಶ್ರೀವಾಸ್ತವ ಪ್ರತಿಕ್ರಿಯಿಸಿದ್ದಾರೆ.

ಕಾಲೇಜಿನ ಭವಿಷ್ಯವನ್ನು ಉಳಿಸಲು ಬೋಧಕ ವರ್ಗ ಎರಡು ಆಯ್ಕೆಗಳನ್ನು ಸರ್ಕಾರದ ಮುಂದಿಟ್ಟಿದೆ. ಉತ್ತರ ಪ್ರದೇಶದ ಶಾರದಾ ವಿಶ್ವವಿದ್ಯಾಲಯದ ಮಾದರಿಯಲ್ಲಿ, ಕೇಂದ್ರ ಸರ್ಕಾರದ ಕೌನ್ಸಿಲಿಂಗ್ ಮೂಲಕ ರಾಷ್ಟ್ರೀಯ ಮಟ್ಟದ ಮೆರಿಟ್ ಆಧಾರದಲ್ಲಿ ಪ್ರವೇಶಾತಿ ನಡೆಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡುವುದು.

ಕಾಲೇಜಿಗೆ 'ಡೀಮ್ಡ್ ವಿಶ್ವವಿದ್ಯಾಲಯ' ಸ್ಥಾನಮಾನವನ್ನು ಪಡೆದುಕೊಳ್ಳುವುದು. ವೈಷ್ಣೋದೇವಿ ಶ್ರೈನ್ ಬೋರ್ಡ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Read More
Next Story