
ಹನಿಮೂನ್ ಹತ್ಯೆ ಪ್ರಕರಣ: ನವ ವಧು ಸೋನಮ್ ಬಂಧನದ ಬಳಿಕವೂ ಉಳಿದಿರುವ ರಹಸ್ಯಗಳೇನು?
ಚಿರಾಪುಂಜಿಯಲ್ಲಿ ಮದುಮಗ ರಾಜಾ ರಘುವಂಶಿಯ ಮೃತದೇಹ ಪತ್ತೆಯಾದ ಬಳಿಕ ಈ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಪತ್ನಿ ಸೋನಮ್ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಕಳೆದ ಎರಡು ವಾರಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಮೇಘಾಲಯದಲ್ಲಿ ಹನಿಮೂನ್ಗೆ ತೆರಳಿದ್ದ ದಂಪತಿಯ ಕಣ್ಮರೆ ಪ್ರಕರಣವು ಸೋಮವಾರ (ಜೂನ್ 9) ಆಘಾತಕಾರಿ ತಿರುವು ಪಡೆದುಕೊಂಡಿದೆ. ಕಾಣೆಯಾಗಿದ್ದ ಪತ್ನಿ ಸೋನಮ್ ರಘುವಂಶಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದ್ದು, ಆಕೆಯೇ ಪತಿ ರಾಜಾ ರಘುವಂಶಿಯನ್ನು ಕೊಲೆ ಮಾಡಿಸಿರುವುದು ಬಹಿರಂಗವಾಗಿದೆ. ಅದಕ್ಕಾಗಿ ಆಕೆ ನಾಲ್ಕು ಬಾಡಿಗೆ ಕೊಲೆಗಾರರಿಗೆ ಸುಪಾರಿ ನೀಡಿದ್ದಳು ಎಂಬ ಆಘಾತಕಾರಿ ಅಂಶ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಮೇಘಾಲಯ ಪೊಲೀಸರು ಈ ಪ್ರಕರಣದಲ್ಲಿ ಯಾವುದೇ ಸ್ಥಳೀಯರ ಕೈವಾಡ ಇಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರೂ, ಪ್ರಕರಣದ ರಹಸ್ಯ ಇನ್ನಷ್ಟೇ ಬಹಿರಂಗವಾಗಬೇಕಾಗಿದೆ. ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದವರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಇನ್ನೂ ಉಳಿದಿವೆ. ಹೀಗಾಗಿ ಈ ಪ್ರಕರಣದ ಕುರಿತು ಇದುವರೆಗೆ ತಿಳಿದಿರುವ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಇದುವರೆಗೆ ತಿಳಿದು ಬಂದ ವಿಷಯಗಳೇನು?
ಮೇಘಾಲಯದ ಡಿಜಿಪಿ ಐ.ನಾಂಗ್ರಾಂಗ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದಂತೆ, ಮಧ್ಯಪ್ರದೇಶದ ಇಂದೋರ್ನಿಂದ ಬಂದಿದ್ದ ರಾಜಾ ರಘುವಂಶಿಯನ್ನು ಪತ್ನಿ ಸೋನಮ್ ತಮ್ಮ ಹನಿಮೂನ್ ಸಂದರ್ಭದಲ್ಲಿ ನಾಲ್ಕು ಕಾಂಟ್ರಾಕ್ಟ್ ಕಿಲ್ಲರ್ಗಳನ್ನು ನೇಮಿಸಿ ಕೊಲೆ ಮಾಡಿಸಿದ್ದಾಳೆ. ಬಳಿಕ ಸೋನಮ್ (24) ಸೋಮವಾರ ಉತ್ತರ ಪ್ರದೇಶದ ಘಾಜಿಪುರದ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ.
ವಿಶೇಷ ತನಿಖಾ ತಂಡ (ಎಸ್ಐಟಿ) ರಾತ್ರಿ ನಡೆಸಿದ ಕಾರ್ಯಾಚರಣೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದೆ. ಇವರಲ್ಲಿ ಇಬ್ಬರು ಇಂದೋರ್ನವರಾಗಿದ್ದರೆ, ಒಬ್ಬ ಉತ್ತರ ಪ್ರದೇಶದ ಲಲಿತ್ಪುರದವ. ಮತ್ತೊಬ್ಬನನ್ನು ಮಧ್ಯಪ್ರದೇಶದ ಸದರ್ ಜಿಲ್ಲೆಯಿಂದ ಬಂಧಿಸಲಾಗಿದೆ.
ಪೂರ್ವ ಖಾಸಿ ಹಿಲ್ಸ್ನ ಎಸ್ಪಿ ವಿವೇಕ್ ಸೈಯಮ್ ಪ್ರಕಾರ, ಬಂಧಿತ ಆರೋಪಿಗಳು 19 ವರ್ಷದ ಆಕಾಶ್ ರಾಜ್ಪುತ್ (ಲಲಿತ್ಪುರ), 22 ವರ್ಷದ ವಿಶಾಲ್ ಸಿಂಗ್ ಚೌಹಾಣ್ (ಇಂದೋರ್), ಮತ್ತು 21 ವರ್ಷದ ರಾಜ್ ಸಿಂಗ್ ಕುಶ್ವಾಹ (ಇಂದೋರ್). 23 ವರ್ಷದ ಆನಂದ್ ಕುರ್ಮಿಯನ್ನು (ಮಧ್ಯಪ್ರದೇಶದ ಸದರ್ ಜಿಲ್ಲೆ) ಬಂಧಿಸಲಾಗಿದೆ.
ಸುದ್ದಿ ಸಂಸ್ಥೆಗಳ ಪ್ರಕಾರ, ಸೋನಮ್ ಸೋಮವಾರ ಮುಂಜಾನೆ 1 ಗಂಟೆ ಸುಮಾರಿಗೆ ಘಾಜಿಪುರದ ಕಾಶಿ ಡಾಬಾದಲ್ಲಿ ಒಂಟಿಯಾಗಿ ಕಾಣಿಸಿಕೊಂಡಿದ್ದಳು. ಡಾಬಾ ಮಾಲೀಕ ಸಾಹಿಲ್ ಯಾದವ್ ಆಕೆಯ ಕುಟುಂಬಕ್ಕೆ ಕರೆ ಮಾಡಲು ಸಹಾಯ ಮಾಡಿದ್ದ. ಯಾದವ್ ಪ್ರಕಾರ, ಸೋನಮ್ ಮಾನಸಿಕವಾಗಿ ಕುಗ್ಗಿದಂತೆ ಕಂಡಿದ್ದಳು.
ಸೋನಮ್ ಪತ್ತೆಯಾದದ್ದು ಹೇಗೆ?
ಸೋನಮ್ ಮುಂಜಾನೆ 1 ಗಂಟೆ ಸುಮಾರಿಗೆ ಘಾಜಿಪುರದ ಕಾಶಿ ಡಾಬಾಗೆ ಬಂದಿದ್ದಳು. ಡಾಬಾ ಮಾಲೀಕ ಸಾಹಿಲ್ ಯಾದವ್ ಬಳಿ ತನ್ನ ಕುಟುಂಬದವರ ಜತೆ ಮಾತನಾಡಲು ಫೋನ್ ಕೇಳಿದ್ದಳು. ಆಕೆಯ ಕುಟುಂಬದೊಂದಿಗೆ ಅಳುತ್ತಾ ಮಾತುಕತೆ ನಡೆಸಿದ್ದಳು. ಯಾದವ್ ಅವರೇ ಕುಟುಂಬಕ್ಕೆ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಸೋನಮ್ನನ್ನು ಕರೆದೊಯ್ದಿದ್ದರು. ಆದರೆ, ಡಿಜಿಪಿ ನಾಂಗ್ರಾಂಗ್ ಅವರು ಸೋನಮ್ ಯುಪಿಯ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ ಎಂದು ಹೇಳಿದ್ದಾರೆ. ಈ ಎರಡು ಹೇಳಿಕೆಗಳು ಗೊಂದಲಕ್ಕೆ ಕಾರಣವಾಗಿವೆ.
ಪ್ರಕರಣದಲ್ಲಿನ ಗೊಂದಲಗಳು
ಹನಿಮೂನ್ಗೆ ತೆರಳುವಾಗ ಸೋನಮ್ ಮತ್ತು ರಾಜಾ ಎಲ್ಲಾ ಚಿನ್ನ ಮತ್ತು ವಜ್ರದ ಆಭರಣಗಳನ್ನು ಧರಿಸಿದ್ದರು ಎಂದು ರಾಜಾ ಅವರ ತಾಯಿ ಉಮಾ ರಘುವಂಶಿ ಬಹಿರಂಗಪಡಿಸಿದ್ದಾರೆ. ರಾಜಾ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ವಜ್ರದ ಉಂಗುರ, ಸರ ಮತ್ತು ಕಂಕಣ ಧರಿಸಿದ್ದ. ಅವುಗಳು ಇನ್ನೂ ಸಿಕ್ಕಿಲ್ಲ.
ಮೇಘಾಲಯ ಪ್ರವಾಸದ ಎಲ್ಲಾ ಬುಕಿಂಗ್ಗಳನ್ನು (ಪ್ರಯಾಣ ಮತ್ತು ವಾಸ್ತವ್ಯ) ಸೋನಮ್ ಮಾಡಿದ್ದಳು, ಆದರೆ ಆಕೆ ರಿಟರ್ನ್ ಟಿಕೆಟ್ ಬುಕ್ ಮಾಡಿರಲಿಲ್ಲ. (ಬಾನಲ್ಲೇ ಮಧು ಚಂದ್ರಿಕೆ ಸಿನಿಮಾದ ರೀತಿಯಲ್ಲಿ) ಶಿಲ್ಲಾಂಗ್ಗೆ ಹನಿಮೂನ್ಗೆ ಭೇಟಿ ನೀಡುವ ಯೋಚನೆಯೂ ಸೋನಮ್ನದ್ದು ಆಗಿತ್ತು. ರಾಜಾನಿಗೆ ಈ ಪ್ರವಾಸದ ಬಗ್ಗೆ ನಂತರ ತಿಳಿಯಿತು ಎಂದು ಉಮಾ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.
ಕೊಲೆಯ ಉದ್ದೇಶದ ಬಗ್ಗೆ ಅನುಮಾನಗಳು
ಮೇಘಾಲಯ ಪೊಲೀಸರು ಪ್ರಕಾರ, ಸೋನಮ್ ಬಂಧಿತರಲ್ಲಿ ಒಬ್ಬನಾದ ಕುಶ್ವಾಹನ ಜತೆ ಪ್ರೀತಿಯ ಸಂಬಂಧ ಹೊಂದಿದ್ದಳು. ಆದಾಗ್ಯೂ ರಾಜಾ ಜತೆ ಮದುವೆ ಒಪ್ಪಿದ್ದಳು. ಸೋನಮ್ ಕುಶ್ವಾಹನೊಂದಿಗೆ ಸೇರಿ ಕೊಲೆ ರೂಪಿಸಿದ್ದಾಳೆ ಎಂದು ಹೇಳಲಾಗಿದೆ. ರಾಜಾನ ಸಹೋದರ ವಿಪುಲ್ ಪ್ರಕಾರ, ಕುಶ್ವಾಹ ಸೋನಮ್ ತಂದೆಯ ಕಂಪನಿಯಲ್ಲಿ ಉದ್ಯೋಗಿ. ಅವರಿಬ್ಬರು ಗಂಟೆಗಟ್ಟಲೇ ಫೋನ್ನಲ್ಲಿ ಮಾತನಾಡುತ್ತಿದ್ದರು. ಎಸ್ಪಿ ಸೈಯಮ್ ಅವರು ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಪ್ರಿಯತಮ ಕುಶ್ವಾಹ ಬಂಧನಕ್ಕೊಳಗಾದ ನಂತರ ಸೋನಮ್ ಒತ್ತಡದಿಂದ ಶರಣಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದರು.
ಪೊಲೀಸರಿಗೆ ಸುಳಿವು ದೊರಕಿದ್ದು ಹೇಗೆ?
ಮಾವ್ಲಾಖಿಯಾತ್ನ ಪ್ರವಾಸಿ ಗೈಡ್ ಆಲ್ಬರ್ಟ್ ಎಂಬುವರು ಮೊದಲು ಸುಳಿವು ನೀಡಿದ್ದರು. ರಾಜಾ ಮತ್ತು ಸೋನಮ್ ಅವರನ್ನು ಮೂವರು ಪುರುಷರು ಮೇ 23ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾಂಗ್ರಿಯಾತ್ನಿಂದ ಮಾವ್ಲಾಖಿಯಾತ್ಗೆ 3,000ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರುತ್ತಿರುವಾಗ ಹಿಂಬಾಲಿಸಿದ್ದರು. ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಹೇಳಿದ್ದರು.
ರಾಜಾನ ಶವದ ಬಳಿ ಕಂಡುಬಂದ ರಕ್ತದ ಕಲೆಯಿರುವ ಹೊಸ ಮಚ್ಚು ಕಂಡು ಬಂದಿತ್ತು. ಅದು ಯೋಜಿತ ಕೊಲೆಗೆ ಸಿಕ್ಕ ಮೊದಲ ಸಾಕ್ಷಿಯಾಗಿತ್ತು.
ಮೇ 26ರಂದು ರಾಜಾನ ಶವ ಕಂಡುಬಂದ ಕಂದಕದ ಮಧ್ಯದ ಮಾವ್ಕ್ಮ ಗ್ರಾಮದಲ್ಲಿ ಕಲೆಯಿರುವ ರೇನ್ಕೋಟ್ ಸಿಕ್ಕಿತ್ತು. ಅದು ಸೋನಮ್ ಧರಿಸಿದ್ದಾಗಿತ್ತು.
ಪ್ರಕರಣದ ಸಂಕ್ಷಿಪ್ತ ವಿವರಣೆ ಇಲ್ಲಿದೆ
- ಮೇ 11: ರಾಜಾ ಮತ್ತು ಸೋನಮ್ ಇಂದೋರ್ನಲ್ಲಿ ವಿವಾಹವಾಗಿದ್ದರು.
- ಮೇ 20: ದಂಪತಿ ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿದ್ದರು.
- 21, ಸಂಜೆ 6 ಗಂಟೆ: ಶಿಲ್ಲಾಂಗ್ನ ಬಾಲಾಜಿ ಗೆಸ್ಟ್ ಹೌಸ್ಗೆ ಚೆಕ್-ಇನ್ ಮಾಡಿದ್ದರು.
- ಮೇ 22, ಬೆಳಗ್ಗೆ: ಕೀಟಿಂಗ್ ರಸ್ತೆಯಿಂದ ಸ್ಕೂಟಿ ಬಾಡಿಗೆಗೆ ಪಡೆದು, ಬಾಲಾಜಿ ಗೆಸ್ಟ್ ಹೌಸ್ಗೆ ಮರಳಿ ಚೆಕ್-ಔಟ್ ಮಾಡಿದ್ದರು. ಮೇ 25 ರೊಳಗೆ ಮರಳುವುದಾಗಿ ಹೇಳಿ ಸೋಹ್ರಾ (ಚಿರಾಪುಂಜಿ)ಗೆ ತೆರಳಿದ್ದರು.
- ಮೇ 22, ಸಂಜೆ: ಪೂರ್ವ ಖಾಸಿ ಹಿಲ್ಸ್ನ ಮಾವ್ಲಾಖಿಯಾತ್ಗೆ ಆಗಮಿಸಿ, ಸ್ಕೂಟಿಯನ್ನು ನಿಲ್ಲಿಸಿ ನಾಂಗ್ರಿಯಾತ್ ಗ್ರಾಮದ ಶಿಪಾರಾ ಹೋಮ್ಸ್ಟೇಗೆ ಟ್ರೆಕ್ ಮಾಡಲು ಗೈಡ್ ಬುಕ್ ಮಾಡಿದ್ದರು.
- ಮೇ 23, ಬೆಳಗ್ಗೆ: ಶಿಪಾರಾ ಹೋಮ್ಸ್ಟೇಯಿಂದ ಚೆಕ್-ಔಟ್ ಮಾಡಿ, ಗೈಡ್ ಇಲ್ಲದೆ ಮಾವ್ಲಾಖಿಯಾತ್ಗೆ ಮರಳುತ್ತಾರೆ. ಅಂದೇ ದಿನ, ಅವರು ಮಾವ್ಲಾಖಿಯಾತ್ನಿಂದ ಹೊರಟು ನಾಪತ್ತೆಯಾಗಿದ್ದರು.
- ಮೇ 24: ಸೋಹ್ರಾರಿಮ್ ಗ್ರಾಮದಲ್ಲಿ ಸ್ಕೂಟಿ ಪತ್ತೆಯಾಗಿತ್ತು.
- ಮೇ 25: ಪೊಲೀಸರು ಸ್ಕೂಟಿಯ ಮಾಲೀಕನನ್ನು ಪತ್ತೆ ಹಚ್ಚಲಾಗಿತ್ತು. ಇಂದೋರ್ನಿಂದ ಬಂದ ರಾಜಾ ರಘುವಂಶಿ (27) ಮತ್ತು ಸೋನಮ್ (25) ಇದನ್ನು ಬಾಡಿಗೆಗೆ ಪಡೆದಿದ್ದು ಗೊತ್ತಾಗಿತ್ತು.
- ಮೇ 26: ಸೋಹ್ರಾರಿಮ್ನಲ್ಲಿ ಶೋಧ ಕಾರ್ಯ ಆರಂಭವಾಗುತ್ತದೆ.
- ಜೂನ್ 2: ಪೊಲೀಸರ ಡ್ರೋನ್ ವೀ ಸಾವ್ಡಾಂಗ್ ಫಾಲ್ಸ್ ಕೆಳಗಿನ ಕಂದಕದಲ್ಲಿ ಕೊಳೆತ ಶವವನ್ನು ಪತ್ತೆ ಹಚ್ಚಿದ್ದರು. ರಾಜಾನ ಕುಟುಂಬದವರು ಅದನ್ನು ಗುರುತಿಸಿದ್ದರು. ಚಿನ್ನದ ಉಂಗುರ ಮತ್ತು ಕತ್ತಿನ ಸರ ಕಾಣೆಯಾಗಿತ್ತು.
- ಜೂನ್ 3: ರಕ್ತದ ಕಲೆಯಿರುವ ಮಚ್ಚು ಶವದ ಬಳಿ ಕಂಡು ಬಂದಿತ್ತು.
ಉತ್ತರ ಸಿಗದ ಪ್ರಶ್ನೆಗಳು
- ಕೊಲೆಯ ನಿಖರ ಉದ್ದೇಶ ಏನಾಗಿತ್ತು?
- ರಾಜಾ ಅವರ ಶವ ಕಂದಕದಲ್ಲಿ ಹೇಗೆ ಸಿಕ್ಕಿತು?
- ಅವರನ್ನು ಎಲ್ಲಿ ಕೊಲೆ ಮಾಡಲಾಯಿತು?
- ಸೋನಮ್ ಒಬ್ಬಳೇ ಘಾಜಿಪುರ ತಲುಪಿದ್ದು ಹೇಗೆ?
ಕುಟುಂಬದವರ ಪ್ರತಿಕ್ರಿಯೆ ಏನು?
ರಾಜಾ ಮತ್ತು ಸೋನಮ್ನ ಕುಟುಂಬಗಳು ಸಿಬಿಐ ತನಿಖೆಗೆ ಒತ್ತಾಯಿಸಿವೆ. ಆದರೆ, ಸೋನಮ್ ಕುಟುಂಬ ಮಗಳನ್ನು ನಿರಪರಾಧಿ ಎನ್ನುತ್ತಿದೆ.
"ನನ್ನ ಮಗಳು ನೂರಕ್ಕೆ ನೂರು ನಿರಪರಾಧಿ. ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ," ಎಂದು ಸೋನಮ್ನ ತಂದೆ ದೇವಿ ಸಿಂಗ್ ರಘುವಂಶಿ ಹೇಳಿದ್ದಾರೆ. ಮೇಘಾಲಯ ಪೊಲೀಸರು, ತನ್ನ ಮಗಳ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಜಾನ ಸಹೋದರ ವಿಪಿನ್ ಕೂಡ, "ಸುಪಾರಿ ಕೊಲೆಗಾರರನ್ನು ಸೋನಮ್ಗೆ ಮುಖಾಮುಖಿ ಮಾಡುವ ತನಕ ಯಾವುದನ್ನೂ ನಾವು ನಂಬಲಾರೆವು" ಎಂದು ಹೇಳಿದ್ದಾರೆ. ದೇವಿ ಸಿಂಗ್ ಮುಂದುವರಿದು, ಈ ಹಿಂದೆ ಸೋನಮ್ನನ್ನು ಅಪಹರಣ ಮಾಡಲಾಗಿತ್ತು. ಮೇಘಾಲಯ ಪೊಲೀಸರು ಈ ವಿಷಯವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸೋನಮ್ ಪ್ರಸ್ತುತ ಉತ್ತರ ಪ್ರದೇಶ ಪೊಲೀಸರ ವಶದಲ್ಲಿದ್ದಾಳೆ ಮತ್ತು ಆಕೆಯನ್ನು ಕರೆದುಕೊಂಡು ಹೋಗಲು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತಿದೆ. ಎಸ್ಪಿ ನೇತೃತ್ವದಲ್ಲಿ ಮತ್ತು ನಾಲ್ಕು ಡಿಎಸ್ಪಿಗಳಿಂದ ಸಹಾಯವಾದ ವಿಶೇಷ ತನಿಖಾ ತಂಡ (ಎಸ್ಐಟಿ) ಈ ವಿಷಯವನ್ನು ತನಿಖೆ ಮಾಡುತ್ತಿದೆ.