
ನಟ ವಿಜಯ್ ರ್ಯಾಲಿಯಲ್ಲಿ ಮಹಾ ದುರಂತ: ಕಾಲ್ತುಳಿತಕ್ಕೆ 36 ಮಂದಿ ಬಲಿ, ಹೆಚ್ಚುತ್ತಿದೆ ಸಾವಿನ ಸಂಖ್ಯೆ
ಕರೂರಿನಲ್ಲಿ ನಡೆದ ರ್ಯಾಲಿಯ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಕಾಲ್ತುಳಿತ ಸಂಭವಿಸಿದ ನಂತರ ವಿಜಯ್ ತಮ್ಮ ಭಾಷಣ ಮುಗಿಸಿ ಸ್ಥಳದಿಂದ ಹೊರಟು ಹೋದರು. ರಕ್ಷಣಾ ಕಾರ್ಯಾಚರಣೆಗಾಗಿ ಹೆಚ್ಚಿನ ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಆಗಮಿಸಿವೆ.
ನಟ-ರಾಜಕಾರಣಿ ವಿಜಯ್ ಅವರ 'ತಮಿಳು ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ಶನಿವಾರ ಕರೂರಿನಲ್ಲಿ ಆಯೋಜಿಸಿದ್ದ 'ವೆಳಿಚ್ಚಂ ವೆಳಿಯೇರು' ಪ್ರಚಾರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
ವಿಜಯ್ ಭಾಷಣ ಮಾಡುತ್ತಿದ್ದಂತೆಯೇ ಜನಸಂದಣಿ ನಿಯಂತ್ರಣ ಮೀರಿ ಮುಂದಕ್ಕೆ ನುಗ್ಗಿದ್ದರಿಂದ ಈ ಭೀಕರ ದುರಂತ ಸಂಭವಿಸಿದೆ. ಮೃತರ ಪೈಕಿ 16 ಮಹಿಳೆಯರು, 9 ಪುರುಷರು ಮತ್ತು 6 ಮಕ್ಕಳು ಸೇರಿದ್ದಾರೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಖಚಿತಪಡಿಸಿದ್ದಾರೆ.
ಕರೂರು-ಈರೋಡ್ ಹೆದ್ದಾರಿಯ ವೆಲುಸಾಮಿಪುರಂನಲ್ಲಿ ನಡೆದ ಈ ರ್ಯಾಲಿಗೆ ನಿರೀಕ್ಷೆಗೂ ಮೀರಿ ಜನಸಂದಣಿ ಸೇರಿತ್ತು. ಸುಮಾರು 30,000 ಜನರಿಗೆ ಅನುಮತಿ ಪಡೆಯಲಾಗಿದ್ದರೂ, 60,000ಕ್ಕೂ ಹೆಚ್ಚು ಜನರು ಸೇರಿದ್ದರು ಎಂದು ವರದಿಯಾಗಿದೆ. ಸಂಜೆ 7:45ರ ಸುಮಾರಿಗೆ, ವಿಜಯ್ ಅವರನ್ನು ಹತ್ತಿರದಿಂದ ನೋಡಲು ಅಭಿಮಾನಿಗಳು ವೇದಿಕೆಯ ಬ್ಯಾರಿಕೇಡ್ಗಳತ್ತ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಉಸಿರುಗಟ್ಟಿಸುವ ನೂಕುನುಗ್ಗಲಿನಲ್ಲಿ ಹಲವರು ಪ್ರಜ್ಞೆ ತಪ್ಪಿ ಬಿದ್ದರೆ, ಅನೇಕರು ಕಾಲ್ತುಳಿತಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರು.
ವಿಜಯ್ ಅವರ ಭಾಷಣ ಆರಂಭವಾಗುತ್ತಿದ್ದಂತೆ ಜನರಲ್ಲಿ ಉನ್ಮಾದ ಹೆಚ್ಚಾಗಿ, ವೇದಿಕೆಯತ್ತ ಮುನ್ನುಗ್ಗಲು ಆರಂಭಿಸಿದರು. ಈ ವೇಳೆ ರಕ್ಷಣಾ ವ್ಯವಸ್ಥೆಗಳು ವಿಫಲವಾದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಕ್ಕಾಗಿ ಸ್ಥಳಕ್ಕೆ ಧಾವಿಸಿದ ಆಂಬ್ಯುಲೆನ್ಸ್ಗಳು ಕೂಡಾ ಜನಸಂದಣಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸಬೇಕಾಯಿತು.
ಘಟನಾ ಸ್ಥಳದಲ್ಲಿನ ಕರುಳು ಹಿಂಡುವ ದೃಶ್ಯ
ಕಾಲ್ತುಳಿತ ಸಂಭವಿಸುತ್ತಿದ್ದಂತೆ "ಪೊಲೀಸರೇ, ಸಹಾಯ ಮಾಡಿ!" ಎಂಬ ಆರ್ತನಾದ ಮುಗಿಲು ಮುಟ್ಟಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಿಜಯ್, ತಮ್ಮ ಭಾಷಣವನ್ನು ತಕ್ಷಣವೇ ನಿಲ್ಲಿಸಿ, ಪ್ರಜ್ಞೆ ತಪ್ಪಿ ಬೀಳುತ್ತಿದ್ದ ಅಭಿಮಾನಿಗಳಿಗೆ ತಮ್ಮ ಪ್ರಚಾರ ವಾಹನದಿಂದಲೇ ನೀರಿನ ಬಾಟಲಿಗಳನ್ನು ವಿತರಿಸಿದರು. ಜನಜಂಗುಳಿಯಲ್ಲಿ ಕಳೆದುಹೋದ ಮಗುವೊಂದನ್ನು ಪತ್ತೆಹಚ್ಚಲು ವಿಜಯ್ ಅವರು ಮೈಕ್ನಲ್ಲಿ ಕೂಗಿ ಹೇಳುತ್ತಿದ್ದ ದೃಶ್ಯಗಳು ಸಹ ವರದಿಯಾಗಿವೆ.
ಸರ್ಕಾರದ ಕ್ರಮಗಳು ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ
ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಕರೂರಿನಿಂದ ಬರುತ್ತಿರುವ ವರದಿಗಳು ಕಳವಳಕಾರಿಯಾಗಿವೆ," ಎಂದು ಹೇಳಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಉತ್ತಮ ಚಿಕಿತ್ಸೆ ಒದಗಿಸುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಮತ್ತು ಮಾಜಿ ಸಚಿವ ಸೆಂಥಿಲ್ ಬಾಲಾಜಿ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ತಿರುಚ್ಚಿ, ಸೇಲಂ ಮತ್ತು ದಿಂಡಿಗಲ್ನಿಂದ ಹೆಚ್ಚುವರಿ ವೈದ್ಯರ ತಂಡಗಳನ್ನು ಕರೂರಿಗೆ ರವಾನಿಸಲಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸುವ ಸಾಧ್ಯತೆ ಇದೆ. ಜಿಲ್ಲಾಡಳಿತವು ಘಟನೆಯ ಕುರಿತು ಮ್ಯಾಜಿಸ್ಟ್ರೇಟ್ ಮಟ್ಟದ ವಿಚಾರಣೆಗೆ ಆದೇಶಿಸಿದೆ.
ಎಐಎಡಿಎಂಕೆ ಮತ್ತು ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳಿಗೆ ಮತ್ತು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ದುರಂತವು ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ರಾಜಕೀಯ ಸಭೆ-ಸಮಾರಂಭಗಳಲ್ಲಿನ ಜನಸಂದಣಿ ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
Live Updates
- 27 Sept 2025 11:30 PM IST
ಕಾಲ್ತುಳಿತ ದುರಂತದಲ್ಲಿ ಮೃತರ ಕುಟುಂಬಗಳಿಗೆ ಸಂತಾಪ ತಿಳಿಸಿದ ಪ್ರಧಾನಿ
ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು ದುರದೃಷ್ಟಕರ, ಈ ಘಟನೆ ತೀವ್ರ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
- 27 Sept 2025 11:25 PM IST
ಅಸಹನೀಯ ನೋವು; ದುಃಖ ಆವರಿಸಿದೆ: ವಿಜಯ್ ಪ್ರತಿಕ್ರಿಯೆ
ನನ್ನ ಹೃದಯ ಒಡೆದು ಹೋಗಿದೆ, ನಾನು ಅಸಹನೀಯ, ಭರಿಸಲಾಗದ ನೋವು ಮತ್ತು ದುಃಖದಲ್ಲಿದ್ದೇನೆ.
ಕರೂರಿನಲ್ಲಿ ಪ್ರಾಣ ಕಳೆದುಕೊಂಡ ನನ್ನ ಪ್ರೀತಿಯ ಸಹೋದರ, ಸಹೋದರಿಯರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳನ್ನು ಸಲ್ಲಿಸುತ್ತೇನೆ ಎಂದು ಟಿವಿಕೆ ಸಂಸ್ಥಾಪಕ ಹಾಗೂ ನಟ ವಿಜಯ್ ಕಂಬನಿ ಮಿಡಿದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
- 27 Sept 2025 11:20 PM IST
ಕರೂರು ದುರಂತ: ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ
ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ. ಮುಖ್ಯಮಂತ್ರಿಯವರ ಸಾರ್ವಜನಿಕ ಪರಿಹಾರ ನಿಧಿಯಿಂದ ಈ ಆರ್ಥಿಕ ನೆರವನ್ನು ತಕ್ಷಣವೇ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ (ICU) ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 1 ಲಕ್ಷ ರೂಪಾಯಿ ನೆರವು ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ಈ ಘಟನೆಯನ್ನು ಆಘಾತಕಾರಿ ಎಂದು ಬಣ್ಣಿಸಿರುವ ಸಿಎಂ ಸ್ಟಾಲಿನ್, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಮತ್ತು ಗಾಯಾಳುಗಳ ಆರೋಗ್ಯ ವಿಚಾರಿಸಲು ಖುದ್ದಾಗಿ ಕರೂರಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ದುರಂತದ ಕುರಿತು ಸಮಗ್ರ ತನಿಖೆ ನಡೆಸಲು, ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ಅವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ರಚಿಸಲಾಗಿದೆ.
- 27 Sept 2025 11:13 PM IST
ಕಾಲ್ತುಳಿತ ದುರಂತ: ರಾಷ್ಟ್ರಪತಿ ಸಂತಾಪ
"ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ನಡೆದ ಕಾಲ್ತುಳಿತದ ದುರದೃಷ್ಟಕರ ಘಟನೆಯಲ್ಲಿ ಸಂಭವಿಸಿದ ದುರಂತ ಸಾವುಗಳ ಬಗ್ಗೆ ತಿಳಿದು ದುಃಖವಾಗಿದೆ. ಮೃತರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 'ಎಕ್ಸ್' (X) ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
- 27 Sept 2025 11:10 PM IST
"ನನ್ನ ಹೃದಯ ನಡುಗುತ್ತಿದೆ": ನಟ ಕಮಲ್ ಹಾಸನ್ ತೀವ್ರ ಸಂತಾಪ
ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತದ ಬಗ್ಗೆ ನಟ ಹಾಗೂ ಮಕ್ಕಳ್ ನೀದಿ ಮೈಯಂ (MNM) ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ತಮ್ಮ ಹೃದಯವನ್ನು ನಡುಗಿಸಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಎಕ್ಸ್ (X) ಖಾತೆಯಲ್ಲಿ ತಮಿಳಿನಲ್ಲಿ ಸಂತಾಪ ಸೂಚಿಸಿರುವ ರಾಜ್ಯಸಭಾ ಸದಸ್ಯ ಕಮಲ್ ಹಾಸನ್, "ನನ್ನ ಹೃದಯ ನಡುಗುತ್ತಿದೆ. ಕರೂರಿನಿಂದ ಬರುತ್ತಿರುವ ಸುದ್ದಿಗಳು ಆಘಾತಕಾರಿ. ಜನಸಂದಣಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಮುಗ್ಧ ಜನರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ," ಎಂದು ಬರೆದುಕೊಂಡಿದ್ದಾರೆ.
"ಜನಸಂದಣಿಯಿಂದ ಪಾರಾದವರಿಗೆ ಸೂಕ್ತ ಚಿಕಿತ್ಸೆ ಮತ್ತು ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ನಾನು ತಮಿಳುನಾಡು ಸರ್ಕಾರವನ್ನು ಒತ್ತಾಯಿಸುತ್ತೇನೆ," ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಕಮಲ್ ಹಾಸನ್ ಅವರಲ್ಲದೆ, ಸೂಪರ್ಸ್ಟಾರ್ ರಜನಿಕಾಂತ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಈ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ.
- 27 Sept 2025 11:07 PM IST
"ಯಾವುದೇ ಕಾಲ್ತುಳಿತ ನಡೆದಿಲ್ಲ, ಇದು ಸರ್ಕಾರದ ಷಡ್ಯಂತ್ರ": ಟಿವಿಕೆ ಬೆಂಬಲಿಗರ ಆರೋಪ
ನಟ ವಿಜಯ್ ಅವರ ರ್ಯಾಲಿಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದಂತೆ, ಇದು ಕಾಲ್ತುಳಿತವೇ ಅಲ್ಲ, ಬದಲಿಗೆ ಆಡಳಿತಾರೂಢ ಡಿಎಂಕೆ ಸರ್ಕಾರದ ವ್ಯವಸ್ಥಿತ ಷಡ್ಯಂತ್ರ ಎಂದು ಕೆಲವು 'ತಮಿಳು ವೆಟ್ರಿ ಕಳಗಂ' (ಟಿವಿಕೆ) ಬೆಂಬಲಿಗರು ಗಂಭೀರ ಆರೋಪ ಮಾಡಿದ್ದಾರೆ. ವಿಜಯ್ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಸರ್ಕಾರ, "ಅನಗತ್ಯ ಪ್ರಚಾರ" ಸೃಷ್ಟಿಸುತ್ತಿದೆ ಎಂದು ಅವರು ದೂರಿದ್ದಾರೆ.
ಕೆಲವು ವಿಡಿಯೋ ತುಣುಕುಗಳನ್ನು ಉಲ್ಲೇಖಿಸಿರುವ ಬೆಂಬಲಿಗರು, "ಕರೂರು ನಗರದಾದ್ಯಂತ ಖಾಲಿ ಆಂಬುಲೆನ್ಸ್ಗಳನ್ನು ಓಡಾಡಿಸುವ ಮೂಲಕ, ದೊಡ್ಡ ದುರಂತ ನಡೆದಿದೆ ಎಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ಯಾವುದೇ ಸಾವು ಸಂಭವಿಸಿಲ್ಲ ಮತ್ತು ಕಾಲ್ತುಳಿತವೂ ನಡೆದಿಲ್ಲ," ಎಂದು ಪ್ರತಿಪಾದಿಸಿದ್ದಾರೆ.
ಈ ಆರೋಪಗಳು ದುರಂತದ ಕುರಿತು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ರಾಜಕೀಯ ತಿರುವು ಪಡೆದುಕೊಂಡಿದೆ. ಒಂದೆಡೆ ಸರ್ಕಾರದ ಭದ್ರತಾ ವೈಫಲ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಟಿವಿಕೆ ಬೆಂಬಲಿಗರು ಇದನ್ನು ಸರ್ಕಾರದ ಷಡ್ಯಂತ್ರ ಎಂದು ಬಣ್ಣಿಸುತ್ತಿದ್ದಾರೆ.
- 27 Sept 2025 11:03 PM IST
ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಪರಿಹಾರ ಘೋಷಣೆ
ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿ ತಮಿಳುನಾಡು ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆಯೋಗ ರಚಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ. ದುರಂತದ ಸ್ಥಳಕ್ಕೆ ಸಿಎಂ ಎಂ.ಕೆ.ಸ್ಟಾಲಿನ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
- 27 Sept 2025 11:02 PM IST
ಕರೂರು ದುರಂತ: ತಪ್ಪು ವಿಜಯ್ ಅವರದ್ದಲ್ಲ, ಸರ್ಕಾರದ ಹೊಣೆಗೇಡಿತನ: ಸ್ಥಳೀಯರ ಆಕ್ರೋಶ
ನಟ ವಿಜಯ್ ಅವರ ರ್ಯಾಲಿಯಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ತಮಿಳುನಾಡು ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ ಎಂದು ರ್ಯಾಲಿಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಮತ್ತು ಪ್ರತ್ಯಕ್ಷದರ್ಶಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಈ ದುರಂತಕ್ಕೆ ನಾವು ವಿಜಯ್ ಅವರನ್ನು ದೂಷಿಸುವುದಿಲ್ಲ. ಇದಕ್ಕೆ ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಕರೂರು ಶಾಸಕ ಸೆಂಥಿಲ್ ಬಾಲಾಜಿ ಅವರೇ ಹೊಣೆ," ಎಂದು ರ್ಯಾಲಿಯಲ್ಲಿದ್ದ ಮಹಿಳೆಯೊಬ್ಬರು 'ಪುದಿಯತಲೈಮುರೈ' ಟಿವಿ ಚಾನೆಲ್ಗೆ ಆಕ್ರೋಶದಿಂದ ಹೇಳಿದ್ದಾರೆ.
ದುರಂತದ ನಂತರ ಸ್ಥಳೀಯರು ಮತ್ತು ಸಂತ್ರಸ್ತರ ಕುಟುಂಬಗಳು ಸರ್ಕಾರದ ವಿರುದ್ಧ ನೇರವಾಗಿ ಆರೋಪಗಳನ್ನು ಮಾಡುತ್ತಿದ್ದು, ಅವರ ಮಾತುಗಳಲ್ಲಿನ ಪ್ರಮುಖ ಅಂಶಗಳು ಇಲ್ಲಿವೆ. "ಘಟನಾ ಸ್ಥಳದಲ್ಲಿ ಒಬ್ಬನೇ ಒಬ್ಬ ಪೊಲೀಸ್ ಕೂಡ ಇರಲಿಲ್ಲ. ಸರಿಯಾದ ಭದ್ರತೆ ಒದಗಿಸಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ನಮ್ಮ ಮಕ್ಕಳಿಗೆ ಸರ್ಕಾರ ಸುರಕ್ಷತೆ ನೀಡಲಿಲ್ಲ," ಎಂದು ಇನ್ನೊಬ್ಬ ಮಹಿಳೆ ಕಣ್ಣೀರು ಹಾಕಿದ್ದಾರೆ. "ರ್ಯಾಲಿ ನಡೆಯುತ್ತಿದ್ದಾಗ ವಿದ್ಯುತ್ ಕಡಿತಗೊಂಡಿತು. ಇದರಿಂದಾಗಿ ಮೈಕ್ಗಳು ಆಫ್ ಆಗಿ ವಿಜಯ್ ಅವರ ಮಾತು ಕೇಳಿಸುತ್ತಿರಲಿಲ್ಲ. ಅವರ ಮಾತನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲು ಜನರು ವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದರು, ಇದು ಕಾಲ್ತುಳಿತಕ್ಕೆ ಕಾರಣವಾಯಿತು," ಎಂದು ರ್ಯಾಲಿಯಲ್ಲಿದ್ದ ಮಹಿಳೆಯೊಬ್ಬರು ವಿವರಿಸಿದ್ದಾರೆ.
"ಇದು ಕೇವಲ ರಾಜಕೀಯ ರ್ಯಾಲಿ ಆಗಿರಲಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಬಂದಿದ್ದರು. ಅವರಿಗೆ ಸುರಕ್ಷತೆ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ," ಎಂದು ಸ್ಥಳೀಯರು ಆರೋಪಿಸಿದ್ದಾರೆ. ಡಿಎಂಕೆ ವಕ್ತಾರರೊಬ್ಬರು, "ಜನರನ್ನು ಉದ್ದೇಶಪೂರ್ವಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲಾಗಿತ್ತು," ಎಂದು ಟಿವಿಕೆ ಪಕ್ಷದ ಮೇಲೆ ಆರೋಪಿಸಿದ್ದಾರೆ. ಈ ದುರಂತಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಸುಮಾರು 30,000 ಜನರಿಗೆ ಅನುಮತಿ ಪಡೆದಿದ್ದರೂ, 60,000 ದಿಂದ ಒಂದು ಲಕ್ಷದವರೆಗೆ ಜನ ಸೇರಿದ್ದರು. ಇದು ಭದ್ರತಾ ವ್ಯವಸ್ಥೆಯ ಮೇಲೆ ತೀವ್ರ ಒತ್ತಡವನ್ನುಂಟುಮಾಡಿತು. ರ್ಯಾಲಿ ಆರಂಭವಾಗುವ 6 ಗಂಟೆಗಳ ಮೊದಲೇ ಜನರು ಸೇರಿದ್ದು, ವಿಜಯ್ ಅವರು ತಡವಾಗಿ ಬಂದಿದ್ದರಿಂದ ಜನರ ಸಂಯಮ ಮತ್ತಷ್ಟು ಕಡಿಮೆಯಾಗಿತ್ತು.
- 27 Sept 2025 10:59 PM IST
ಕಾಲ್ತುಳಿತ ದುರಂತದ ವರದಿ ಕೇಳಿದ ಕೇಂದ್ರ
ಕರೂರಿನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ತಮಿಳುನಾಡು ಸರ್ಕಾರದಿಂದ ವರದಿ ಕೇಳಿದೆ.
ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿದೆ.