Protect the Constitution and democracy: Mamata Banerjees emotional appeal to CJI
x

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 

ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಿಸಿ: ಸಿಜೆಐಗೆ ಮಮತಾ ಬ್ಯಾನರ್ಜಿ ಭಾವನಾತ್ಮಕ ಮನವಿ

ಕಲ್ಕತ್ತಾ ಹೈಕೋರ್ಟ್‌ನ ಜಲ್ಪೈಗುರಿ ಸರ್ಕ್ಯೂಟ್ ಬೆಂಚ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಿಜೆಐ ಸೂರ್ಯ ಕಾಂತ್ ಅವರ ಸಮ್ಮುಖದಲ್ಲೇ ಮಮತಾ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.


Click the Play button to hear this message in audio format

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ (ಜನವರಿ 17), ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ವಿಪತ್ತಿನಿಂದ ರಕ್ಷಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ತುರ್ತು ಮನವಿ ಮಾಡಿದ್ದಾರೆ. ಕಲ್ಕತ್ತಾ ಹೈಕೋರ್ಟ್‌ನ ಜಲ್ಪೈಗುರಿ ಸರ್ಕ್ಯೂಟ್ ಬೆಂಚ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಿಜೆಐ ಸೂರ್ಯ ಕಾಂತ್ ಅವರ ಸಮ್ಮುಖದಲ್ಲೇ ಮಮತಾ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಯಾವುದೇ ನಿರ್ದಿಷ್ಟ ಪ್ರಕರಣದ ಹೆಸರನ್ನು ಉಲ್ಲೇಖಿಸದೆಯೇ ಮಾತನಾಡಿದ ಮಮತಾ ಬ್ಯಾನರ್ಜಿ, "ಕೇಂದ್ರ ತನಿಖಾ ಸಂಸ್ಥೆಗಳಿಂದ ದೇಶದ ಜನರನ್ನು ಸುಖಾಸುಮ್ಮನೆ ಗುರಿ ಮಾಡಲಾಗುತ್ತಿದೆ. ನೀವು ನಮ್ಮ ಸಂವಿಧಾನದ ರಕ್ಷಕರು, ನಾವು ನಿಮ್ಮ ಕಾನೂನಾತ್ಮಕ ಪೋಷಕತ್ವದಲ್ಲಿದ್ದೇವೆ. ದಯವಿಟ್ಟು ಈ ದೇಶದ ಇತಿಹಾಸ, ಭೂಗೋಳ ಮತ್ತು ಪ್ರಜಾಪ್ರಭುತ್ವವನ್ನು ವಿನಾಶದಿಂದ ಕಾಪಾಡಿ," ಎಂದು ಕೋರಿದರು. ಇದೇ ವೇಳೆ ಅವರು 'ಮಾಧ್ಯಮ ವಿಚಾರಣೆ' ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಕರಣಗಳು ಇತ್ಯರ್ಥವಾಗುವ ಮೊದಲೇ ಮಾಧ್ಯಮಗಳಲ್ಲಿ ತೀರ್ಪು ನೀಡುವುದು ನಿಲ್ಲಬೇಕು ಎಂದು ಒತ್ತಾಯಿಸಿದರು.

ಐ-ಪ್ಯಾಕ್ ದಾಳಿ ಮತ್ತು ಸುಪ್ರೀಂ ಕೋರ್ಟ್ ವಿಚಾರಣೆ

ಈ ಮನವಿಯು ಐ-ಪ್ಯಾಕ್ ಸಂಸ್ಥೆಯ ಮೇಲೆ ಇತ್ತೀಚೆಗೆ ನಡೆದ ಇ.ಡಿ ದಾಳಿಯ ಹಿನ್ನೆಲೆಯಲ್ಲಿ ಬಂದಿದೆ. ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿಯಲ್ಲಿ ಇ.ಡಿ ಶೋಧ ನಡೆಸುತ್ತಿದ್ದಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಸ್ತಕ್ಷೇಪ ಮಾಡಿದ್ದಾರೆ ಮತ್ತು ಪ್ರಮುಖ ಸಾಕ್ಷ್ಯಗಳನ್ನು (ಮೊಬೈಲ್, ಹಾರ್ಡ್ ಡಿಸ್ಕ್) ತೆಗೆದುಕೊಂಡು ಹೋಗಿದ್ದಾರೆ ಎಂದು ಇ.ಡಿ ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಇ.ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಮಮತಾ ಬ್ಯಾನರ್ಜಿ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯಿಸಿದೆ.

ಸುಪ್ರೀಂ ಕೋರ್ಟ್‌ನ ಕಟು ಟೀಕೆ

ಇತ್ತೀಚೆಗಷ್ಟೇ ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ವಿಪುಲ್ ಪಂಚೋಲಿ ಅವರ ಪೀಠವು, ಇ.ಡಿ ಆರೋಪಗಳನ್ನು "ಅತ್ಯಂತ ಗಂಭೀರ" ಎಂದು ಕರೆದಿತ್ತು. "ರಾಜ್ಯದ ಕಾನೂನು ಜಾರಿ ಸಂಸ್ಥೆಗಳ ರಕ್ಷಣೆಯಲ್ಲಿದ್ದುಕೊಂಡು ಯಾರೂ ತನಿಖೆಗೆ ಅಡ್ಡಿಪಡಿಸಬಾರದು. ಇಂತಹ ಘಟನೆಗಳು ನಡೆದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ" ಎಂದು ಕೋರ್ಟ್ ಎಚ್ಚರಿಸಿದೆ. ಅಲ್ಲದೆ, ಇ.ಡಿ ಅಧಿಕಾರಿಗಳ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಫೆಬ್ರವರಿ 3ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.

ರಾಜಕೀಯ ಸಮರ

ಒಂದೆಡೆ ಮಮತಾ ಬ್ಯಾನರ್ಜಿ ಅವರು ಇದನ್ನು ಪ್ರಜಾಪ್ರಭುತ್ವದ ಕೊಲೆ ಎಂದು ಕರೆಯುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕರು ಮಮತಾ ಅವರ ನಡೆಯನ್ನು "ಜಂಗಲ್ ರಾಜ್" ಎಂದು ಟೀಕಿಸಿದ್ದಾರೆ. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ತೃಣಮೂಲ ಕಾಂಗ್ರೆಸ್‌ನ ಮುಖ್ಯ ಆರೋಪವಾಗಿದೆ.

ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಪಶ್ಚಿಮ ಬಂಗಾಳದ ರಾಜಕೀಯ ಭವಿಷ್ಯ ಮತ್ತು ಕೇಂದ್ರ-ರಾಜ್ಯಗಳ ನಡುವಿನ ಸಂಬಂಧದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.

Read More
Next Story