ತಿರುಪರಂಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಲು ಹೈಕೋರ್ಟ್ ಗ್ರೀನ್ ಸಿಗ್ನಲ್!
x
ತಿರುಪರಂಕುಂದ್ರಂ ಬೆಟ್ಟ

ತಿರುಪರಂಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಲು ಹೈಕೋರ್ಟ್ ಗ್ರೀನ್ ಸಿಗ್ನಲ್!

ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಭೂಮಿಯ ಮಾಲೀಕತ್ವ ಮತ್ತು ಸರ್ಕಾರದ ವಾದದ ಬಗ್ಗೆ ನ್ಯಾಯಾಲಯ ನೀಡಿದ ಖಡಕ್ ಎಚ್ಚರಿಕೆಯ ಪೂರ್ಣ ವಿವರ ಇಲ್ಲಿದೆ.


ಮಧುರೈನ ತಿರುಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ಪುರಾತನ ಕಲ್ಲಿನ ದೀಪಸ್ತಂಭದಲ್ಲಿ (ದೀಪಾತೂನ್) ಕಾರ್ತಿಕ ದೀಪವನ್ನು ಬೆಳಗಿಸಬೇಕು ಎಂಬ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ಎತ್ತಿ ಹಿಡಿದಿದೆ. ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರಿದ್ದ ಪೀಠವು ಸರ್ಕಾರದ 20ಕ್ಕೂ ಹೆಚ್ಚು ಮೇಲ್ಮನವಿಗಳನ್ನು ವಜಾಗೊಳಿಸಿ ಮಂಗಳವಾರ ಈ ಮಹತ್ವದ ತೀರ್ಪು ನೀಡಿದೆ.

ದೇವಸ್ಥಾನಕ್ಕೆ ಸೇರಿದ ಜಾಗ

ದೀಪ ಬೆಳಗುವ 'ದೀಪಾತೂನ್' ಸ್ತಂಭವು ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ದೇವಸ್ಥಾನಂಗೆ ಸೇರಿದ ಜಮೀನಿನಲ್ಲಿದೆ. ಆದ್ದರಿಂದ ಅಲ್ಲಿ ಧಾರ್ಮಿಕ ವಿಧಿವಿಧಾನದಂತೆ ದೀಪ ಬೆಳಗುವುದನ್ನು ತಡೆಯಲು ಯಾವುದೇ ಸಮರ್ಥನೀಯ ಕಾರಣಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸರ್ಕಾರಕ್ಕೆ ಛೀಮಾರಿ

"ಸಾರ್ವಜನಿಕ ಶಾಂತಿ ಭಂಗದ ನೆಪವೊಡ್ಡಿ ಸಂಪ್ರದಾಯವನ್ನು ತಡೆಯುವುದು ಒಪ್ಪಲು ಸಾಧ್ಯವಿಲ್ಲ. ಸರ್ಕಾರವು ರಾಜಕೀಯ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸಬಾರದು" ಎಂದು ಪೀಠವು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಶಾಂತಿ ಸಂಧಾನ ಸಮಿತಿಗಳು ಸಮುದಾಯಗಳ ನಡುವೆ ವಿಭಜನೆಯನ್ನು ಹೆಚ್ಚಿಸಿವೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಕಟ್ಟುನಿಟ್ಟಿನ ನಿಯಮಗಳು

ಬೆಟ್ಟದ ಮೇಲಿನ ಸ್ತಂಭದಲ್ಲಿ ದೀಪ ಬೆಳಗಲು ಅನುಮತಿ ನೀಡಲಾಗಿದೆಯಾದರೂ, ಸಾರ್ವಜನಿಕರಿಗೆ ಬೆಟ್ಟ ಹತ್ತಲು ಅವಕಾಶವಿಲ್ಲ. ಭಾರತೀಯ ಪುರಾತತ್ವ ಇಲಾಖೆ (ASI), ಪೊಲೀಸ್ ಮತ್ತು ದೇವಸ್ಥಾನದ ಆಡಳಿತ ಮಂಡಳಿಯು ಜಂಟಿಯಾಗಿ ಚರ್ಚಿಸಿ, ಪೂಜಾ ಕಾರ್ಯಕ್ಕೆ ಎಷ್ಟು ಜನರನ್ನು ಅನುಮತಿಸಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಪೀಠ ತಿಳಿಸಿದೆ.

ವಿವಾದದ ಹಿನ್ನೆಲೆ

ತಿರುಪರಂಕುಂದ್ರಂ ಬೆಟ್ಟವು ಮುರುಗನ ಆರು ಪವಿತ್ರ ನೆಲೆಗಳಲ್ಲಿ ಒಂದಾದ ಸುಬ್ರಮಣ್ಯ ಸ್ವಾಮಿ ದೇವಾಲಯ ಮತ್ತು ಹಜರತ್ ಸುಲ್ತಾನ್ ಸಿಕಂದರ್ ಬಾದ್‌ಶಾ ದರ್ಗಾ ಎರಡನ್ನೂ ಹೊಂದಿದೆ. ಇಲ್ಲಿನ ಕಲ್ಲಿನ ಸ್ತಂಭದಲ್ಲಿ ದೀಪ ಬೆಳಗುವ ವಿಚಾರದಲ್ಲಿ ದರ್ಗಾ ಮಂಡಳಿ ಮತ್ತು ದೇವಸ್ಥಾನದ ನಡುವೆ ದೀರ್ಘಕಾಲದ ವಿವಾದವಿತ್ತು. 2025ರ ಡಿಸೆಂಬರ್ 1ರಂದು ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ದೀಪ ಬೆಳಗಲು ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಸರ್ಕಾರ ಮತ್ತು ದರ್ಗಾ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಈಗ ವಜಾಗೊಳಿಸಲಾಗಿದೆ.

ಬೆಟ್ಟದ ಮೇಲಿರುವ ಒಂದು ಪುರಾತನ ಕಲ್ಲಿನ ಸ್ತಂಭದಲ್ಲಿ (ದೀಪಾತೂನ್) ಕಾರ್ತಿಕ ದೀಪವನ್ನು ಬೆಳಗಿಸುವುದು ಸಂಪ್ರದಾಯ ಎಂದು ಹಿಂದೂ ಸಂಘಟನೆಗಳು ವಾದಿಸುತ್ತವೆ. ಈ ಸ್ತಂಭವು ದರ್ಗಾಕ್ಕೆ ಸಮೀಪದಲ್ಲಿದೆ ಮತ್ತು ಅಲ್ಲಿ ದೀಪ ಬೆಳಗಿದರೆ ಕೋಮು ಸೌಹಾರ್ದತೆಗೆ ಧಕ್ಕೆಯಾಗಬಹುದು ಎಂಬ ನೆಪವೊಡ್ಡಿ ದರ್ಗಾ ಮಂಡಳಿ ಮತ್ತು ತಮಿಳುನಾಡು ಸರ್ಕಾರ (DMK) ಇದಕ್ಕೆ ಅಡ್ಡಿಪಡಿಸುತ್ತಾ ಬಂದಿವೆ.

ಕಾನೂನು ಸಮರ

ಜಿ.ಆರ್. ಸ್ವಾಮಿನಾಥನ್ ಅವರು ಬೆಟ್ಟದ ಮೇಲಿನ ದೀಪಸ್ತಂಭದಲ್ಲಿ ದೀಪ ಬೆಳಗಲು ಅನುಮತಿ ನೀಡಿದ್ದರು. ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಈ ಆದೇಶ ಪಾಲಿಸಲು ನಿರಾಕರಿಸಿತ್ತು. ನಂತರ ನ್ಯಾಯಮೂರ್ತಿಗಳು ಭಕ್ತರೇ ದೀಪ ಹಚ್ಚಬಹುದು ಎಂದು ಆದೇಶಿಸಿದ್ದರು, ಆದರೆ ಅದನ್ನು ಕೂಡ ತಡೆಯಲಾಯಿತು.

ಈ ಆದೇಶ ನೀಡಿದ ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ವಿರುದ್ಧ ಇಂಡಿಯಾ (I.N.D.I.A) ಒಕ್ಕೂಟದ ಸಂಸದರು ಲೋಕಸಭೆಯಲ್ಲಿ ದನಿ ಎತ್ತಿ, ಅವರ ಪದಚ್ಯುತಿಗೆ ಸಹಿ ಸಂಗ್ರಹಿಸಿದ್ದರು. ಇದರಲ್ಲಿ ಕರ್ನಾಟಕದ ಮೂವರು ಕಾಂಗ್ರೆಸ್ ಸಂಸದರು ಭಾಗಿಯಾಗಿದ್ದು ದೊಡ್ಡ ಸುದ್ದಿಯಾಗಿತ್ತು.

Read More
Next Story