ಸಂಸತ್ತಿನಲ್ಲಿ ಕೇರಳದ ಧ್ವನಿಗೆ ಮನ್ನಣೆ: ಪ್ರಧಾನಿ
x

ಸಂಸತ್ತಿನಲ್ಲಿ ಕೇರಳದ ಧ್ವನಿಗೆ ಮನ್ನಣೆ: ಪ್ರಧಾನಿ


ಏಪ್ರಿಲ್‌ 15-ಲೋಕಸಭೆ ಚುನಾವಣೆ ನಂತರ ಸಂಸತ್ತಿನಲ್ಲಿ ಕೇರಳದ ಧ್ವನಿಯು ಖಾತ್ರಿಯಾಗಿ ಕೇಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತ್ರಿಶೂರಿನಲ್ಲಿ ಹೇಳಿದರು.

ʻಇದು ಕೇರಳದ ಪ್ರಗತಿಯ ವರ್ಷವಾಗಲಿದೆʼ ಎಂದ ಪ್ರಧಾನಿ, ಭಾನುವಾರ ಬಿಡುಗಡೆಯಾದ ಬಿಜೆಪಿ ಪ್ರಣಾಳಿಕೆಯಲ್ಲಿರುವ ನಾನಾ ಭರವಸೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು.

ʻಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ಟ್ರೈನಿನಂತೆ ಉತ್ತರ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಬುಲೆಟ್ ರೈಲುಗಳಿಗೆ ಸಮೀಕ್ಷೆ ಕಾರ್ಯ ಪ್ರಾರಂಭಿಸುತ್ತದೆ. ಕಾಂಗ್ರೆಸ್ ಜಗತ್ತಿನ ಕಣ್ಣಿನಲ್ಲಿ ದೇಶದ ಬಗ್ಗೆ ದುರ್ಬಲ ಚಿತ್ರಣವನ್ನು ಮೂಡಿಸಿದೆ. ಆದರೆ, ಬಿಜೆಪಿ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿಸಿದೆʼ ಎಂದು ಹೇಳಿದರು.

ಕೇಂದ್ರದ ಯೋಜನೆಗಳಿಗೆ ಅಡ್ಡಿ: ʻಕಳೆದ 10 ವರ್ಷಗಳ ಎನ್‌ಡಿಎ ಆಡಳಿತದಲ್ಲಿ ದೇಶದಲ್ಲಿ ನಡೆದಿರುವುದು ಕೇವಲ ಟ್ರೇಲರ್; ಕೇರಳ ಮತ್ತು ಭಾರತಕ್ಕೆ ಹೆಚ್ಚಿನದನ್ನು ಮಾಡಬೇಕಿದೆ. ಕೇಂದ್ರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರಾಜ್ಯದ ಎಡ ಸರ್ಕಾರ ಅಡ್ಡಿಪಡಿಸುತ್ತಿದೆ. ಎಡರಂಗ ಈ ಹಿಂದೆ ಅಧಿಕಾರದಲ್ಲಿದ್ದ ಇತರ ರಾಜ್ಯಗಳಲ್ಲಿ ಮಾಡಿದಂತೆ ಕೇರಳವನ್ನು ಹಾಳುಮಾಡುತ್ತಿದೆʼ ಎಂದು ದೂರಿದರು.

ಕರುವನ್ನೂರ್ ಸಹಕಾರಿ ಬ್ಯಾಂಕ್ ಹಗರಣವನ್ನು ಉಲ್ಲೇಖಿಸಿದ ಅವರು ಎಡ ಪಕ್ಷ ಬಡವರ ಹಣವನ್ನು ಲೂಟಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೇರಳಕ್ಕೆ ಆರನೇ ಭೇಟಿ: ಕೇರಳಕ್ಕೆ ಇದು ಅವರ ಆರನೇ ಭೇಟಿ. ಮಾರ್ಚ್ 15 ರಂದು ಪಥನಂತಿಟ್ಟದಲ್ಲಿ ಸಾರ್ವಜನಿಕ ಸಭೆ, ಮಾರ್ಚ್ 19 ರಂದು ಪಾಲಕ್ಕಾಡ್ ಜಿಲ್ಲೆಯಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಇದಕ್ಕೂ ಮುನ್ನ ಜನವರಿಯಲ್ಲಿ ಎರಡು ಬಾರಿ ಹಾಗೂ ಫೆಬ್ರವರಿಯಲ್ಲಿ ಒಮ್ಮೆ ರಾಜ್ಯಕ್ಕೆ ಭೇಟಿ ನೀಡಿದ್ದರು.

ಕೇರಳದಲ್ಲಿ ಏಪ್ರಿಲ್ 26 ರಂದು ಎಲ್ಲ 20 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Read More
Next Story