ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ ಬಿಜೆಪಿ
x

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ ಬಿಜೆಪಿ

ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ (TDB) ಆಡಳಿತ ಪಕ್ಷದ ಬೆಂಬಲಿಗರೇ ತುಂಬಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.


Click the Play button to hear this message in audio format

ಶಬರಿಮಲೆ ದೇವಸ್ಥಾನದ 'ದ್ವಾರಪಾಲಕ' ವಿಗ್ರಹಗಳ ಮೇಲಿದ್ದ ಚಿನ್ನ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶ ನೀಡುವಂತೆ ಕೋರಿ, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸೋಮವಾರ (ಡಿ.1) ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ರಾಜೀವ್ ಚಂದ್ರಶೇಖರ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದೇವಸ್ಥಾನದಿಂದ ನಾಪತ್ತೆಯಾಗಿರುವ ಚಿನ್ನವು ಕೇವಲ ಕೇರಳಕ್ಕೆ ಸೀಮಿತವಾಗಿಲ್ಲ. ಅದು ಬೇರೆ ರಾಜ್ಯಗಳಿಗೂ ಹಂಚಿಕೆಯಾಗಿರುವ ಶಂಕೆ ಇದೆ. ಈ ಜಾಲದಲ್ಲಿ ಕೇರಳದ ಹೊರಗಿನ ಪ್ರಭಾವಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಶಾಮೀಲಾಗಿರುವ ಸಾಧ್ಯತೆ ಹೆಚ್ಚಿದೆ. ಅಂತರರಾಜ್ಯ ವ್ಯಾಪ್ತಿಯನ್ನು ಹೊಂದಿರುವ ಇಂತಹ ಪ್ರಕರಣವನ್ನು ಭೇದಿಸಲು ರಾಜ್ಯ ಪೊಲೀಸರ ವಿಶೇಷ ತನಿಖಾ ತಂಡಕ್ಕೆ (SIT) ಸಾಧ್ಯವಿಲ್ಲ. ಆದ್ದರಿಂದ, ಕೇಂದ್ರೀಯ ತನಿಖಾ ದಳದ (CBI) ತನಿಖೆಯೇ ಸೂಕ್ತ ಎಂದು ಅವರು ವಾದಿಸಿದ್ದಾರೆ.

ಪ್ರಭಾವಿಗಳ ರಕ್ಷಣೆಗೆ ಯತ್ನ?

ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ (TDB) ಆಡಳಿತ ಪಕ್ಷದ ಬೆಂಬಲಿಗರೇ ತುಂಬಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಪ್ರಭಾವಿ ರಾಜಕಾರಣಿಗಳು ಮತ್ತು ಮಂಡಳಿಯ ಹೊರಗಿನ ವ್ಯಕ್ತಿಗಳು ಈ ಹಗರಣದ ಫಲಾನುಭವಿಗಳಾಗಿದ್ದಾರೆ. ಹೀಗಾಗಿ, ಎಸ್‌ಐಟಿ ತನಿಖೆಯಲ್ಲಿ ಮಂಡಳಿಯ ಸದಸ್ಯರನ್ನು ರಕ್ಷಿಸುವ ಸಾಧ್ಯತೆಗಳಿವೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಾಜಿ ಟಿಡಿಬಿ ಸದಸ್ಯರೊಬ್ಬರ ಪುತ್ರನಾಗಿರುವ ಐಪಿಎಸ್ ಅಧಿಕಾರಿಯೊಬ್ಬರು ತನಿಖೆಯನ್ನು ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ತನಿಖೆ ಎಲ್ಲಿಗೆ ಬಂದಿದೆ?

ಸದ್ಯ ಹೈಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡ (SIT) ಈ ಪ್ರಕರಣದ ತನಿಖೆ ನಡೆಸುತ್ತಿದೆ. 'ದ್ವಾರಪಾಲಕ' ವಿಗ್ರಹಗಳು ಮತ್ತು ಗರ್ಭಗುಡಿಯ ಬಾಗಿಲಿನ ಚೌಕಟ್ಟಿನಲ್ಲಿದ್ದ ಚಿನ್ನದ ಲೇಪನ ನಾಪತ್ತೆಯಾದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈವರೆಗೆ ಆರು ಜನರನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಟಿಡಿಬಿ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರು ಜಾಮೀನು ಕೋರಿ ಕೊಲ್ಲಂ ವಿಜಿಲೆನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ. ಚಿನ್ನದ ಲೇಪನವಿರುವ ಪ್ಲೇಟ್‌ಗಳನ್ನು ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೋಟ್ಟಿ ಅವರಿಗೆ ಹಸ್ತಾಂತರಿಸುವ ನಿರ್ಧಾರವನ್ನು ಇಡೀ ಮಂಡಳಿ ತೆಗೆದುಕೊಂಡಿತ್ತು. ಆದರೆ, ತನ್ನನ್ನು ಮಾತ್ರ ಬಲಿಪಶು ಮಾಡಲಾಗಿದೆ ಎಂದು ಪದ್ಮಕುಮಾರ್ ವಾದಿಸಿದ್ದಾರೆ. ಅವರ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ (ಡಿ.2) ನಡೆಯಲಿದೆ.

ರಾಜೀವ್ ಚಂದ್ರಶೇಖರ್ ಅವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಕೆ.ವಿ. ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ಅರ್ಜಿಯಲ್ಲಿ ಕೆಲವು ತಾಂತ್ರಿಕ ದೋಷಗಳಿರುವುದನ್ನು ಗಮನಿಸಿದ ಕೋರ್ಟ್, ಮುಂದಿನ ವಾರ ಮತ್ತೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಮತ್ತೊಂದೆಡೆ, ಎಸ್‌ಐಟಿ ತನಿಖೆಯ ಪ್ರಗತಿಯನ್ನು ಹೈಕೋರ್ಟ್ ಬುಧವಾರ (ಡಿ.3) ಪರಿಶೀಲಿಸಲಿದೆ.

Read More
Next Story