ಕಂಗನಾ ಟೀಕೆ|  ಹಿಮಾಚಲ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ, ಹರಿಯಾಣದಲ್ಲಿ ಎಎಪಿ ಪ್ರತಿಭಟನೆ
x

ಕಂಗನಾ ಟೀಕೆ| ಹಿಮಾಚಲ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ, ಹರಿಯಾಣದಲ್ಲಿ ಎಎಪಿ ಪ್ರತಿಭಟನೆ


ಶಿಮ್ಲಾ/ಚಂಡೀಗಢ: ರೈತರ ಪ್ರತಿಭಟನೆ ಕುರಿತು ಬಿಜೆಪಿ ಸಂಸದೆ ಕಂಗನಾ ರನೌತ್ ಅವರ ಹೇಳಿಕೆಯನ್ನು ಖಂಡಿಸಿ, ಹಿಮಾಚಲ ಪ್ರದೇಶ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿದೆ. ಆಪ್ ಹರಿಯಾಣದ ‌ಹಲವು ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದೆ.

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ ಕಂಗನಾ ತಮ್ಮ ಸಂದರ್ಶನದ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದರು. ʻ ದೇಶದಲ್ಲಿ ಪ್ರಬಲ ನಾಯಕತ್ವ ಇರುವುದರಿಂದ, ಬಾಂಗ್ಲಾದೇಶದಂತಹ ಪರಿಸ್ಥಿತಿ ಬರಲಿಲ್ಲʼ ಎಂದಿದ್ದರು. ʻಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಸಮಯದಲ್ಲಿ ದೇಹಗಳು ನೇತಾಡಿದವು ಮತ್ತು ಅತ್ಯಾಚಾರಗಳು ನಡೆದವು. ಈ ಪಿತೂರಿಯಲ್ಲಿ ಚೀನಾ ಮತ್ತು ಅಮೆರಿಕ ಭಾಗಿಯಾಗಿವೆ,ʼ ಎಂದು ಆರೋಪಿಸಿದ್ದರು.

ಅವರ ಹೇಳಿಕೆಯು ತವರು ರಾಜ್ಯವಾದ ಕಾಂಗ್ರೆಸ್‌ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ ವಾಗ್ವಾದಕ್ಕೆ ಕಾರಣವಾಯಿತು. ಅವರ ಹೇಳಿಕೆಯನ್ನು ಖಂಡಿಸಿ, ನಿರ್ಣಯವನ್ನು ಅಂಗೀಕರಿಸಲಾಯಿತು.

ಚುನಾವಣೆ ವಿಷಯ: ಅಕ್ಟೋಬರ್ 1 ರಂದು ಹರಿಯಾಣದಲ್ಲಿ ಚುನಾವಣೆ ನಡೆಯಲಿದ್ದು, ಪ್ರತಿಪಕ್ಷಗಳು ಕಂಗನಾ ಅವರ ಹೇಳಿಕೆಯನ್ನು ಗುರಿಯಾಗಿಸಿಕೊಂಡು ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿ ಮೇಲೆ ದಾಳಿ ನಡೆಸುತ್ತಿವೆ. ಆಮ್ ಆದ್ಮಿ ಪಕ್ಷ ದ ಹರಿಯಾಣ ಘಟಕವು ಜಿಂದ್, ಯಮುನಾನಗರ, ಪಂಚಕುಲ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿತು. ʻಕಂಗನಾ ಅವರ ಹೇಳಿಕೆಯು ರೈತರ ಬಗ್ಗೆ ಬಿಜೆಪಿಯ ಮನಸ್ಸು ಸೂಚಿಸುತ್ತದೆ,ʼ ಎಂದು ಪಕ್ಷದ ನಾಯಕರೊಬ್ಬರು ಹೇಳಿದರು.

ಶಿವಸೇನೆ (ಉದ್ಧವ್ ಠಾಕ್ರೆ) ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಕಂಗನಾ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದಿದ್ದಾರೆ.

ʻಕಂಗನಾ ರನೌತ್‌ ಅವರು ತಾವು ನೀಡಿದ ಹೇಳಿಕೆಗೆ ಕ್ಷಮೆಯಾಚಿಸಿಲ್ಲ. ಬಿಜೆಪಿ ಹೇಳಿಕೆಯು ವಿಷಾದ ವ್ಯಕ್ತಪಡಿಸಿಲ್ಲ. ಕಂಗನಾ ಬಿಜೆಪಿ ಸದಸ್ಯೆ ಮತ್ತು ಸಂಸದೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ಬಿಜೆಪಿ ಕೇವಲ ಬಾಯಿಮಾತು ಆಡುತ್ತಿದೆ ಎಂದುಕೊಳ್ಳಬೇಕಾಗುತ್ತದೆ,ʼ ಎಂದು ಎಕ್ಸ್‌ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ರೈತ ಸಮುದಾಯಕ್ಕೆ ಮಾಡಿದ ಅವಮಾನ: ಹಿಮಾಚಲ ಅಸೆಂಬ್ಲಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಹರ್ಷವರ್ಧನ್ ಚೌಹಾಣ್, ಕಂಗನಾ ಅವರ ಹೇಳಿಕೆ ರೈತ ಸಮುದಾಯಕ್ಕೆ ಅವಮಾನ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಅವರು ಕಂಗನಾ ಅವರ ಹೇಳಿಕೆ ವೈಯಕ್ತಿಕ ಮತ್ತು ಪಕ್ಷದ ದೃಷ್ಟಿಕೋನವಲ್ಲ ಎಂದು ಹೇಳುತ್ತಿದ್ದಂತೆ, ಎರಡೂ ಕಡೆಯ ಸದಸ್ಯರು ಘೋಷಣೆ ಕೂಗಲಾರಂಭಿಸಿದರು. ಸದನದಲ್ಲಿ ಹಾಜರಿಲ್ಲದ ವ್ಯಕ್ತಿ ಬಗ್ಗೆ ಚರ್ಚೆ ನಡೆಸುವಂತಿಲ್ಲ ಎಂದು ಠಾಕೂರ್‌ ಹೇಳಿದರು.

ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ನಿರ್ಣಯವನ್ನು ಬೆಂಬಲಿಸಿದರು. ಈ ಕುರಿತು ಚರ್ಚಿಸಲು ಬಿಜೆಪಿ ಮುಂದೆ ಬರಬೇಕಿತ್ತು ಎಂದು ಹೇಳಿದರು. ನಿರ್ಣಯವನ್ನು ಬೆಂಬಲಿಸಿದ ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ, ಕಂಗನಾ ಹೇಳಿಕೆಯಿಂದ ರೈತರು ಕೋಪಗೊಂಡಿದ್ದಾರೆ. ಬಿಜೆಪಿ ಅವರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು. ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ, ಕಂಗನಾ ಹೇಳಿಕೆಯನ್ನು ಖಂಡಿಸುವ ನಿರ್ಣಯವನ್ನು ಸದನವು ಅಂಗೀಕರಿಸಿದೆ. ಈ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ ಎಂದು ಹೇಳಿದರು.

ಅಖಿಲೇಶ್‌ ಯಾದವ್ ಖಂಡನೆ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ರನೌತ್ ಅವರ ಹೇಳಿಕೆ ಉದ್ದೇಶಪೂರ್ವಕವಾಗಿದ್ದು, ಗುರಾಣಿ ಆಗಿ ಬಳಸಲ್ಪಡುತ್ತವೆ. ಇದು ಬಿಜೆಪಿಯ ಸ್ಕ್ರಿಪ್ಟ್. ಉನ್ನತ ನಿರ್ದೇಶಕರ ಸೂಚನೆ ಮೇರೆಗೆ ನಟಿಯೊಬ್ಬರು ಸಂಭಾಷಣೆ ಓದುತ್ತಿದ್ದಾರೆ. ರೈತರ ರಾಜ್ಯದಲ್ಲಿ ರೈತ ಚಳವಳಿ ಬಗ್ಗೆ ನಿಂದನೀಯ ಭಾಷೆ ಬಳಕೆಯಿಂದ ಹಾನಿಯಾಗುತ್ತದೆ ಎಂದು ಸಾಮಾನ್ಯ ರಾಜಕಾರಣಿಗೆ ಗೊತ್ತಿರುವಾಗ ಬಿಜೆಪಿಯ ಚಾಣಕ್ಯನಿಗೆ ಅರ್ಥವಾಗುವುದಿಲ್ಲವೇ?,ʼ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಸಾವಿರಾರು ರೈತರು ಈಗ ರದ್ದಾದ ಕೃಷಿ ಕಾನೂನುಗಳನ್ನು ವಿರೋಧಿಸಿ, ದೆಹಲಿಯ ಗಡಿಯಲ್ಲಿ ಹಲವು ತಿಂಗಳು ಆಂದೋಲನ ನಡೆಸಿದ್ದರು.

Read More
Next Story