ದೋಡಾದಲ್ಲಿ ಗುಂಡಿನ ಚಕಮಕಿ: ಸೇನಾಧಿಕಾರಿ ಸಾವು
x
ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನ ಹೊರಗೆ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿರುವುದು

ದೋಡಾದಲ್ಲಿ ಗುಂಡಿನ ಚಕಮಕಿ: ಸೇನಾಧಿಕಾರಿ ಸಾವು


ಜಮ್ಮು ಪ್ರದೇಶದ ದೋಡಾ ಜಿಲ್ಲೆಯಲ್ಲಿ ಬುಧವಾರ ನಡೆದ ಚಕಮಕಿಯಲ್ಲಿ ಸೇನೆಯ ಕ್ಯಾಪ್ಟನ್ ಒಬ್ಬರು ಮರಣ ಹೊಂದಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಟ್ಟಿಗೆ ಸೇನಾ ಮುಖ್ಯಸ್ಥ ಮತ್ತು ಎನ್‌ಎಸ್‌ಎ ಭಾಗವಹಿಸಿದ್ದ ಉನ್ನತ ಮಟ್ಟದ ಸಭೆ ಬಳಿಕ ಚಕಮಕಿ ನಡೆದಿದೆ.

ಜಮ್ಮು ಪ್ರದೇಶದ ದೋಡಾ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ನಂಬಲಾಗಿದೆ.

ಶಿವಗಢ-ಅಸ್ಸಾರ್ ಬಳಿ ಅಡಗಿದ್ದ ವಿದೇಶಿ ಭಯೋತ್ಪಾದಕರ ಗುಂಪನ್ನು ಪತ್ತೆಹಚ್ಚಲು ಜಂಟಿ ತಂಡವು ನಡೆಸಿದ ಕಾರ್ಯಾಚರಣೆ ವೇಳೆ ದಟ್ಟ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಅಧಿಕಾರಿಗಳು ಹೇಳಿದರು. ಚಕ ಮಕಿ ನಡೆದ ಸ್ಥಳದಿಂದ ಅಮೆರಿಕ ನಿರ್ಮಿತ ಎಂ4 ಅಸಾಲ್ಟ್ ರೈಫಲ್ ಮತ್ತು ನಾಲ್ಕು ರಕ್ತ ಲೇಪಿತ ಬೆನ್ನು ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ʻಭಯೋತ್ಪಾದಕರು ಅಸ್ಸಾರ್‌ನ ನದಿ ಸಮೀಪದಲ್ಲಿ ಅಡಗಿಕೊಂಡಿದ್ದಾರೆ. ಗುಂಡಿನ ಚಕಮಕಿ ನಂತರ ಭಯೋತ್ಪಾದಕರು ಪಕ್ಕದ ಉಧಂಪುರ ಜಿಲ್ಲೆಯ ಪಟ್ನಿಟಾಪ್ ಬಳಿಯ ಅರಣ್ಯದಿಂದ ದೋಡಾಗೆ ದಾಟಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಅಧಿಕಾರಿಗಳ ಪ್ರಕಾರ, ಭದ್ರತಾ ಪಡೆಗಳು ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಉಧಂಪುರದಲ್ಲಿ ಚಕಮಕಿ ಆರಂಭಿಸಿದವು. ಬುಧವಾರ ಬೆಳಗ್ಗೆ 7.30ರ ಸುಮಾರಿಗೆ ಮತ್ತೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಪ್ರದೇಶದಲ್ಲಿ, ವಿಶೇಷವಾಗಿ ಪೀರ್ ಪಂಜಾಲ್ ಶ್ರೇಣಿಯ ದಕ್ಷಿಣ ಭಾಗದಲ್ಲಿ, ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ.ದಟ್ಟ ಕಾಡು ಮತ್ತು ಕಡಿದಾದ ಪರ್ವತಗಳಿರುವ ಪ್ರದೇಶ ಇದು. ಈ ಪ್ರದೇಶದಲ್ಲಿ ಉಗ್ರಗಾಮಿಗಳ ಪುನರುಜ್ಜೀವನವು ಆತಂಕ ಉಂಟುಮಾಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ನಡೆಸಿದ್ದರು.

Read More
Next Story