ಕಾಪಿ ಕ್ಯಾಟ್​ ಪಾಕಿಸ್ತಾನ; ಭಾರತದಂತೆಯೇ ವಿದೇಶಕ್ಕೆ ಕಳುಹಿಸಲು ಪ್ರತಿನಿಧಿ ತಂಡ ರಚನೆ!
x

'ಕಾಪಿ ಕ್ಯಾಟ್​' ಪಾಕಿಸ್ತಾನ; ಭಾರತದಂತೆಯೇ ವಿದೇಶಕ್ಕೆ ಕಳುಹಿಸಲು ಪ್ರತಿನಿಧಿ ತಂಡ ರಚನೆ!

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸೇರಿದಂತೆ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಏಳು ಸರ್ವಪಕ್ಷೀಯ ನಿಯೋಗಗಳನ್ನು ಕಳುಹಿಸಲು ನಿರ್ಧರಿಸಿದ ತಕ್ಷಣ ಪಾಕಿಸ್ತಾನವು ತನ್ನ ಪ್ರತಿನಿಧಿ ತಂಡವನ್ನು ಕಳುಹಿಸುವ ನಿರ್ಧಾರವನ್ನು ಪ್ರಕಟಿಸಿದೆ.


ಭಾರತದೊಂದಿಗಿನ ಇತ್ತೀಚಿನ ಸಂಘರ್ಷದ ಕುರಿತು ತನ್ನ ದೇಶದ ನಿಲುವನ್ನು ಜಾಗತಿಕವಾಗಿ ಪ್ರಮುಖ ರಾಷ್ಟ್ರಗಳಿಗೆ ತಿಳಿಸಲು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಅವರು ಉನ್ನತ ಮಟ್ಟದ ತಂಡವನ್ನು ಕಳುಹಿಸಲು ನಿರ್ಧರಿಸಿದ್ದಾರೆ. ಭಾರತವು ತನ್ನ ಭಯೋತ್ಪಾದನಾ-ವಿರೋಧಿ ನಿಲುವನ್ನು ವಿವರಿಸಲು ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಸರ್ವಪಕ್ಷೀಯ ಪ್ರತಿನಿಧಿ ತಂಡಗಳನ್ನು ಕಳುಹಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ. ಈ ಮೂಲಕ ಭಾರತದ ಮತ್ತೊಂದು ಯೋಜನೆಯನ್ನು ಪಾಕ್​ ನಕಲು ಮಾಡಿದೆ.

ಪಾಕಿಸ್ತಾನದ ಪ್ರಧಾನಮಂತ್ರಿ ಕಚೇರಿ ತಿಳಿಸಿರುವಂತೆ, ಶೆಹಬಾಜ್ ಶರೀಫ್ ಅವರು ಮಾಜಿ ವಿದೇಶಾಂಗ ಸಚಿವ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೊ ಜರ್ದಾರಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ. ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸೇರಿದಂತೆ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಏಳು ಸರ್ವಪಕ್ಷೀಯ ನಿಯೋಗಗಳನ್ನು ಕಳುಹಿಸಲು ನಿರ್ಧರಿಸಿದ ತಕ್ಷಣ ಪಾಕಿಸ್ತಾನವು ತನ್ನ ಪ್ರತಿನಿಧಿ ತಂಡವನ್ನು ಕಳುಹಿಸುವ ನಿರ್ಧಾರವನ್ನು ಪ್ರಕಟಿಸಿದೆ.

ಸರ್ಕಾರಿ ಸ್ವಾಮ್ಯದ ರೇಡಿಯೋ ಪಾಕಿಸ್ತಾನ ವರದಿ ಮಾಡಿರುವಂತೆ, ಪ್ರಧಾನಮಂತ್ರಿ ಶೆಹಬಾಜ್ ಅವರು, ಪ್ರಮುಖ ಜಾಗತಿಕ ರಾಜಧಾನಿಗಳಿಗೆ ಉನ್ನತ ಮಟ್ಟದ ತಂಡವನ್ನು ಕಳುಹಿಸಿ ಭಾರತದ ವಿರುದ್ಧ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.

ಈ ನಿಯೋಗವನ್ನು ಬಿಲಾವಲ್ ಭುಟ್ಟೊ ಜರ್ದಾರಿ ಅವರು ಮುನ್ನಡೆಸಲಿದ್ದಾರೆ. ಶನಿವಾರ ಎಕ್ಸ್​ನಲ್ಲಿ ನಲ್ಲಿ ಬರೆದುಕೊಂಡಿರುವ ಬಿಲಾವಲ್, "ಇಂದು ಬೆಳಿಗ್ಗೆ ಪ್ರಧಾನಮಂತ್ರಿ [ಶೆಹಬಾಜ್ ಶರೀಫ್] ಅವರು ನನ್ನನ್ನು ಸಂಪರ್ಕಿಸಿ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಶಾಂತಿ ಪರ ನಿಲುವು ಮಂಡಿಸಲು ಒಂದು ಪ್ರತಿನಿಧಿ ತಂಡವನ್ನು ಮುನ್ನಡೆಸುವಂತೆ ಕೋರಿದರು. ಈ ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ ಮತ್ತು ಈ ಸವಾಲಿನ ಸಮಯದಲ್ಲಿ ಪಾಕಿಸ್ತಾನಕ್ಕೆ ಸೇವೆ ಸಲ್ಲಿಸಲು ಬದ್ಧನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಬಿಲಾವಲ್ ಅವರೊಂದಿಗೆ ಇಂಧನ ಸಚಿವ ಮುಸಾದಿಕ್ ಮಲಿಕ್, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ನಾಯಕ ಖುರ್ರಂ ದಸ್ತಗೀರ್ ಖಾನ್, ಸೆನೆಟರ್ ಶೆರ್ರಿ ರೆಹಮಾನ್, ಮಾಜಿ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್, ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್ ಶಾಸಕ ಫೈಸಲ್ ಸಬ್ಜ್‌ವಾರಿ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿಗಳಾದ ತೆಹಮೀನಾ ಜಂಜುವಾ ಮತ್ತು ಜಲೀಲ್ ಅಬ್ಬಾಸ್ ಜಿಲಾನಿ ಈ ನಿಯೋಗದಲ್ಲಿ ಇರಲಿದ್ದಾರೆ.

ಶರೀಫ್ ಅವರ ಕಚೇರಿ ತಿಳಿಸಿರುವಂತೆ, ಈ ನಿಯೋಗವು "ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಪಾಕಿಸ್ತಾನದ ಪ್ರಾಮಾಣಿಕ ಪ್ರಯತ್ನಗಳನ್ನು ಒತ್ತಿಹೇಳಲಿದೆ." ಪಾಕಿಸ್ತಾನದ ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಈ ತಂಡವು ಶೀಘ್ರದಲ್ಲೇ ಅಮೆರಿಕ ಸಂಯುಕ್ತ ಸಂಸ್ಥಾನ, ಯುಕೆ, ಬ್ರಸೆಲ್ಸ್, ಫ್ರಾನ್ಸ್ ಮತ್ತು ರಷ್ಯಾಗಳಿಗೆ ಭೇಟಿ ನೀಡಿ ಇತ್ತೀಚಿನ ಸಂಘರ್ಷದ ಬಗ್ಗೆ ಪಾಕಿಸ್ತಾನದ ನಿಲುವನ್ನು ಸ್ಪಷ್ಟಪಡಿಸಲಿದೆ ಎಂದು ಹೇಳಿದ್ದಾರೆ.

ಭಾರತವು ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಕ್ಕೆ ಪ್ರತಿಕ್ರಿಯೆಯಾಗಿ ಮೇ 7 ರಂದು 'ಆಪರೇಷನ್ ಸಿಂದೂರ್' ಅಡಿಯಲ್ಲಿ ಭಯೋತ್ಪಾದಕ ಮೂಲಸೌಕರ್ಯದ ಮೇಲೆ ನಿಖರ ದಾಳಿಗಳನ್ನು ನಡೆಸಿತ್ತು. ಭಾರತದ ಈ ಕ್ರಮದ ನಂತರ ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಭಾರತೀಯ ಸೈನಿಕ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು. ಉಭಯ ದೇಶಗಳು ಮೇ 10ರಂದು ನಾಲ್ಕು ದಿನಗಳ ತೀವ್ರ ಗಡಿಪಾರು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ನಂತರ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಬಂದಿದ್ದವು.

Read More
Next Story