
ಗುರುಗ್ರಾಮ: ಹಳೆ ದ್ವೇಷಕ್ಕೆ ಸಹಪಾಠಿಯನ್ನೇ ಶೂಟ್ ಮಾಡಿದ ವಿದ್ಯಾರ್ಥಿಗಳು, ಇಬ್ಬರು ಬಾಲಕರು ವಶಕ್ಕೆ
ನವೆಂಬರ್ 8ರ ರಾತ್ರಿ ಸುಮಾರು 9.30ರ ಸಮಯದಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಸಂತ್ರಸ್ತ ವಿದ್ಯಾರ್ಥಿಯನ್ನು ಆತನ ಸಹಪಾಠಿಯೇ ತನ್ನ ತಂದೆಯ ಪರವಾನಗಿ ಹೊಂದಿದ ಪಿಸ್ತೂಲ್ನಿಂದ ಶೂಟ್ ಮಾಡಿದ್ದಾನೆ.
ಶಾಲೆಯಲ್ಲಿ ನಡೆದಿದ್ದ ಹಳೆ ಜಗಳದ ದ್ವೇಷಕ್ಕೆ, 11ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಆತನ ಸಹಪಾಠಿಗಳೇ ಭೇಟಿಯಾಗಲು ಕರೆದು, ಗುಂಡಿಕ್ಕಿ ಹತ್ಯೆಗೈಯಲು ಯತ್ನಿಸಿರುವ ಆಘಾತಕಾರಿ ಘಟನೆ ಗುರುಗ್ರಾಮದ ಸೆಕ್ಟರ್ 48ರ ಪ್ರತಿಷ್ಠಿತ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವೆಂಬರ್ 8ರ ರಾತ್ರಿ ಸುಮಾರು 9.30ರ ಸಮಯದಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಸಂತ್ರಸ್ತ ವಿದ್ಯಾರ್ಥಿಯನ್ನು ಆತನ ಸಹಪಾಠಿಯೇ ತನ್ನ ತಂದೆಯ ಪರವಾನಗಿ ಹೊಂದಿದ ಪಿಸ್ತೂಲ್ನಿಂದ ಶೂಟ್ ಮಾಡಿದ್ದಾನೆ. ಸಂತ್ರಸ್ತನ ಕುತ್ತಿಗೆಗೆ ಗುಂಡು ಹೊಕ್ಕಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಕುಟುಂಬಸ್ಥರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿದಿದೆ.
ಸಂತ್ರಸ್ತ ವಿದ್ಯಾರ್ಥಿಯ ತಾಯಿ ನೀಡಿದ ದೂರಿನ ಪ್ರಕಾರ, ಸುಮಾರು ಎರಡು ತಿಂಗಳ ಹಿಂದೆ ತನ್ನ ಮಗ ಮತ್ತು ಆತನ ಸ್ನೇಹಿತನ ನಡುವೆ ಶಾಲೆಯಲ್ಲಿ ಜಗಳ ನಡೆದಿತ್ತು. ಈ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿ, ನವೆಂಬರ್ 8ರಂದು ಸಂತ್ರಸ್ತನಿಗೆ ಕರೆ ಮಾಡಿ, ತನ್ನ ಬಾಡಿಗೆ ಅಪಾರ್ಟ್ಮೆಂಟ್ಗೆ ಬರುವಂತೆ ಆಹ್ವಾನಿಸಿದ್ದಾನೆ. ಆರಂಭದಲ್ಲಿ ಹೋಗಲು ಹಿಂದೇಟು ಹಾಕಿದರೂ, ತಾನೇ ಬಂದು ಕರೆದುಕೊಂಡು ಹೋಗುವುದಾಗಿ ಒತ್ತಾಯಿಸಿದ್ದಾನೆ. ನಂತರ, ಖೇರ್ಕಿ ದೌಲಾ ಟೋಲ್ ಬಳಿ ಭೇಟಿಯಾಗಲು ತಾಯಿ ಅನುಮತಿ ನೀಡಿದ್ದಾರೆ.
ಪೂರ್ವಯೋಜಿತ ಕೃತ್ಯ
ದೂರಿನಲ್ಲಿ, "ಹಳೆ ದ್ವೇಷದ ಹಿನ್ನೆಲೆಯಲ್ಲಿ ನನ್ನ ಮಗನ ಸ್ನೇಹಿತ ಆತನನ್ನು ಮನೆಗೆ ಕರೆದೊಯ್ದು, ಮತ್ತೊಬ್ಬ ಸ್ನೇಹಿತನೊಂದಿಗೆ ಸೇರಿ, ಕೊಲ್ಲುವ ಉದ್ದೇಶದಿಂದಲೇ ಗುಂಡು ಹಾರಿಸಿದ್ದಾನೆ" ಎಂದು ತಾಯಿ ಆರೋಪಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇದು ಪೂರ್ವಯೋಜಿತ ಕೃತ್ಯ ಎಂಬುದು ದೃಢಪಟ್ಟಿದೆ. ಆರೋಪಿಗಳು ಸಂತ್ರಸ್ತನಿಗೆ ಕರೆ ಮಾಡಿ, ದಾರಿಯಲ್ಲಿ ಊಟ-ತಿಂಡಿ ಕೊಡಿಸಿ, ನಂತರ ಮತ್ತೊಬ್ಬ ಸ್ನೇಹಿತನನ್ನು ಪಿಕ್-ಅಪ್ ಮಾಡಿಕೊಂಡು ಫ್ಲಾಟ್ಗೆ ತೆರಳಿದ್ದಾರೆ. ಅಲ್ಲಿ ಈ ಕೃತ್ಯ ಎಸಗಲಾಗಿದೆ.
ಪೊಲೀಸರ ತನಿಖೆ
ಪೊಲೀಸ್ ನಿಯಂತ್ರಣ ಕೊಠಡಿಯಿಂದ ಮಾಹಿತಿ ಪಡೆದ ಸದರ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಒಂದು ಪಿಸ್ತೂಲ್, ಎರಡು ಮ್ಯಾಗಜೀನ್, 70 ಜೀವಂತ ಕಾಡತೂಸುಗಳು ಮತ್ತು ಒಂದು ಖಾಲಿ ಬುಲೆಟ್ ಶೆಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಆರೋಪಿಯ ತಂದೆ ಪ್ರಾಪರ್ಟಿ ಡೀಲರ್ ಆಗಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿಟ್ಟಿದ್ದ ಅವರ ಪರವಾನಗಿ ಸಹಿತ ಪಿಸ್ತೂಲ್ ಅನ್ನು ಈ ಕೃತ್ಯಕ್ಕೆ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರವೃತ್ತಿ ಮತ್ತು ಪರವಾನಗಿ ಪಡೆದ ಶಸ್ತ್ರಾಸ್ತ್ರಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

