ವೈರಲ್‌ ಆದ ಗಂಭೀರ್ ಅವರ ಶ್ರೀ ಕೃಷ್ಣ ಪೋಸ್ಟ್‌
x

ವೈರಲ್‌ ಆದ ಗಂಭೀರ್ ಅವರ 'ಶ್ರೀ ಕೃಷ್ಣ' ಪೋಸ್ಟ್‌

ಕೆಕೆಆರ್ ಮೆಂಟರ್ ಗೌತಮ್ ಗಂಭೀರ್, ಕೋಲ್ಕತ್ತಾ ಆಟಗಾರರು ಮತ್ತು ಅಭಿಮಾನಿಗಳಿಂದ ಹೆಚ್ಚು ಪ್ರಶಂಸೆಗೆ ಪಾತ್ರರಾಗಿದ್ದಾರೆ


ಗೌತಮ್‌ ಗಂಭೀರ್ ತಮ್ಮ ಎಕ್ಸ್‌ ಖಾತೆಯಲ್ಲಿ ʻಯಾರ ಆಲೋಚನೆಗಳು ಮತ್ತು ಕಾರ್ಯಗಳು ಸತ್ಯವಾಗಿರುತ್ತವೆಯೋ, ಅವರ ರಥವನ್ನು ಶ್ರೀ ಕೃಷ್ಣ ಇಂದೂ ಚಲಾಯಿಸುತ್ತಾನೆ,ʼ ಎಂಬ ಸೋಮವಾರ (ಮೇ 27) ಬೆಳಗಿನ ಜಾವ ಮಾಡಿದ ಟ್ವೀಟ್‌ ವೈರಲ್‌ ಆಗಿದೆ. 20 ಲಕ್ಷ ವೀಕ್ಷಣೆ, ಒಂದು ಸಾವಿರಕ್ಕೂ ಹೆಚ್ಚು ಮರು ಟ್ವೀಟ್‌ ಮತ್ತು ಒಂದು ಲಕ್ಷಕ್ಕೂ ಹೆಚ್ಚು ಇಷ್ಟಪಟ್ಟಿದ್ದಾರೆ. ಆದರೆ, ಅವರು ಭಾನುವಾರ ರಾತ್ರಿ ಮಾಡಿದ ಟ್ವೀಟ್ ಹೆಚ್ಚು ಮಂದಿ ಕಣ್ಣಿಗೆ ಬೀಳಲಿಲ್ಲ.

ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಕೆಕೆಆರ್‌ ಜಯ ಗಳಿಸಿದ ಬಳಿಕ ಎಲ್ಲೆಡೆಯಿಂದ ಗಂಭೀರ್ ಅವರ ಶ್ಲಾಘನೆ ಆರಂಭವಾಯಿತು. ಅವರು 2012 ಮತ್ತು 2014 ರಲ್ಲಿ ಎರಡು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದರು. ಋತುವಿನ ಆರಂಭದ ಮೊದಲು ಫ್ರಾಂಚೈಸಿಗೆ ಮೆಂಟರ್ ಆಗಿ ಮರಳಿದರು. ತಂಡದ ಮಾಜಿ ನಾಯಕ, ಕೆಕೆಆರ್ ಆಟಗಾರ ನಿತೀಶ್ ರಾಣಾ ಅವರು ಗಂಭೀರ್ ಅವರನ್ನು ಮೆಂಟರ್ ಆಗಿ ನೇಮಿಸಿದ ನಂತರ ಅವರೊಂದಿಗೆ ನಡೆಸಿದ ಮಾತುಕತೆಯನ್ನು ಬಹಿರಂಗಪಡಿಸಿದರು.

ʻಜಿಜಿ (ಗೌತಮ್ ಗಂಭೀರ್) ಅವರನ್ನು ಮಾರ್ಗದರ್ಶಕ ಎಂದು ಹೆಸರಿಸಿದಾಗ, ನಾನು ನಿಜವಾಗಿಯೂ ಸಂತೋಷಪಟ್ಟೆ. ಅವರಿಗೆ ದೀರ್ಘ ಸಂದೇಶ ಕಳುಹಿಸಿದೆ. ಪ್ರತಿಕ್ರಿಯಿಸಿದ ಅವರು, ʻಟ್ರೋಫಿಯನ್ನು ಕೈಯಲ್ಲಿ ಹಿಡಿದು ವೇದಿಕೆಯಲ್ಲಿ ನಿಂತರೆ ನನಗೆ ಸಂತೋಷವಾಗುತ್ತದೆ' ಎಂದು ಹೇಳಿದರು. ಆ ದಿನ ಮತ್ತು ಆ ಸಂದೇಶವನ್ನು ನಾನು ಎಂದಿಗೂ ಮರೆಯುವುದಿಲ್ಲʼ ಎಂದು ರಾಣಾ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡುತ್ತ ಹೇಳಿದರು.

ಅದೇ ಚಾನೆಲ್‌ನಲ್ಲಿ ಕೆಕೆಆರ್‌ನ ಬೌಲಿಂಗ್ ಕೋಚ್ ಭರತ್ ಅರುಣ್, ಸುನಿಲ್ ನರೈನ್ ಅವರು ಬ್ಯಾಟಿಂಗ್ ಆರಂಭಿಸಬೇಕೆಂಬ ಗಂಭೀರ್ ಅವರ ನಿರ್ಧಾರ ಹೇಗೆ ಫಲಪ್ರದವಾಯಿತು ಎಂದು ವಿವರಿಸಿದರು.ʻಸುನೀಲ್ ನರೈನ್ ನಮ್ಮ ಬ್ಯಾಟಿಂಗ್‌ಗೆ ವಿಭಿನ್ನ ಆಯಾಮ ನೀಡಿದರು. ಸನ್ನಿ (ನರೈನ್) ಆಟ ಆರಂಭಿಸಬೇಕೆಂದು ಗೌತಮ್ ಒತ್ತಾಯಿಸಿದರುʼ ಎಂದು ಅರುಣ್ ಹೇಳಿದರು.

ನರೈನ್ ಮತ್ತು ಅವರ ಆರಂಭಿಕ ಪಾಲುದಾರ ಫಿಲ್ ಸಾಲ್ಟ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದರು. ನರೈನ್‌ ಐಪಿಎಲ್ 2024 ರಲ್ಲಿ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಯನ್ನು ಗೆದ್ದರು. 488 ರನ್ ಗಳಿಸಿ 17 ವಿಕೆಟ್ ಪಡೆದರು. ನರೈನ್ ಈಗ ಮೂರು ಐಪಿಎಲ್‌ ಟ್ರೋಫಿ ಗೆದ್ದಿದ್ದಾರೆ.

ಕೆಕೆಆರ್‌ ಗೆಲುವಿನ ನಂತರ ನರೈನ್, ಗಂಭೀರ್‌ ಅವರನ್ನು ಹಾಗೂ ಆನಂತರ ಗಂಭೀರ್‌ ಕೂಡ ನರೈನ್‌ ಅವರನ್ನು ಮೇಲೆತ್ತಿದರು.

Read More
Next Story