ರೈತ ಹೋರಾಟ | ಸಚಿವರೊಂದಿಗಿನ ಮಾತುಕತೆ ವಿಫಲ: ‘ದೆಹಲಿ ಚಲೋ’ ಖಾತರಿ
x

ರೈತ ಹೋರಾಟ | ಸಚಿವರೊಂದಿಗಿನ ಮಾತುಕತೆ ವಿಫಲ: ‘ದೆಹಲಿ ಚಲೋ’ ಖಾತರಿ


ನವದೆಹಲಿ (ಫೆ. 13): ರೈತರ ಬೇಡಿಕೆಗಳ ಕುರಿತು ಇಬ್ಬರು ಕೇಂದ್ರ ಸಚಿವರೊಂದಿಗೆ ಸುದೀರ್ಘ ಐದು ಗಂಟೆಗಳ ಕಾಲ ನಡೆದ ಸಂಧಾನ ಸಭೆ ಮುರಿದುಬಿದ್ದಿದ್ದು, ಮಂಗಳವಾರ(ಫೆ.13) 'ದೆಹಲಿ ಚಲೋ' ಟ್ರ್ಯಾಕ್ಟರ್ ರ್ಯಾಲಿ ನಿಗದಿಯಂತೆ ನಡೆಯಲಿದೆ ಎಂದು ಪ್ರತಿಭಟನಾನಿರತ ರೈತರು ಘೋಷಿಸಿದ್ದಾರೆ.

ಆದಾಗ್ಯೂ, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ರೈತ ಮುಖಂಡರೊಂದಿಗೆ ಎರಡನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸಿದ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ, ರೈತ ಬೇಡಿಕೆಯ ಬಹುತೇಕ ವಿಷಯಗಳ ಬಗ್ಗೆ ಒಮ್ಮತಕ್ಕೆ ಬರಲಾಯಿತು ಮತ್ತು ಕೆಲವು ಪರಿಹಾರಕ್ಕೆ ಸೂತ್ರವನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.

ಸಭೆಯು ಸೆಕ್ಟರ್ 26 ರಲ್ಲಿನ ಮಹಾತ್ಮಾ ಗಾಂಧಿ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನಲ್ಲಿ ಸೋಮವಾರ ಸಂಜೆ 6.30 ರ ಸುಮಾರಿಗೆ ಪ್ರಾರಂಭವಾಯಿತು ಮತ್ತು ಮಧ್ಯರಾತ್ರಿಯ ಮೊದಲು ಮುಕ್ತಾಯವಾಯಿತು.

ಸರ್ಕಾರ ಗಂಭೀರವಾಗಿಲ್ಲ: ಎಸ್‌ ಕೆಎಂ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿಪಡಿಸುವ ಕಾನೂನು ಜಾರಿಗೆ ತರುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ಮಂಗಳವಾರ ದೆಹಲಿ ಚಲೋ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಘೋಷಿಸಿವೆ.

ಎಸ್‌ ಕೆಎಂ (ರಾಜಕೀಯೇತರ) ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

"ನಮ್ಮ ಯಾವುದೇ ಬೇಡಿಕೆಗಳ ಬಗ್ಗೆ ಸರ್ಕಾರವು ಗಂಭೀರವಾಗಿದೆ ಎಂದು ನಮಗೆ ಅನಿಸುತ್ತಿಲ್ಲ. ಅವರಿಗೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮನಸಿಲ್ಲ. ನಾಳೆ, ನಾವು ಅಂದುಕೊಂಡಂತೆ ಬೆಳಿಗ್ಗೆ 10 ಗಂಟೆಗೆ ದೆಹಲಿಯತ್ತ ಮೆರವಣಿಗೆ ನಡೆಸುತ್ತೇವೆ" ಎಂದು ಪಂಧೇರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಧ್ಯರಾತ್ರಿಯ ಮೊದಲ ಸಭೆಯಲ್ಲಿ, 2020-21ರ ಆಂದೋಲನದ ಸಂದರ್ಭದಲ್ಲಿ ದಾಖಲಾದ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರವು ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ರೈತ ಮುಖಂಡರು ತಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವ ಬಗ್ಗೆ ಅಚಲರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಘರ್ಷ ತಪ್ಪಿಸಲು ಬಯಸುತ್ತೇವೆ

ಸಭೆಯ ನಂತರ ಪಂಧೇರ್, "ನಾವು ಸರ್ಕಾರದೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ ಮತ್ತು ನಾವು ಪ್ರತಿಯೊಂದು ವಿಷಯದ ಬಗ್ಗೆಯೂ ಚರ್ಚಿಸಿದ್ದೇವೆ. ಯಾವುದೇ ಸಂಘರ್ಷವನ್ನು ತಪ್ಪಿಸುವುದು ನಮ್ಮ ಪ್ರಯತ್ನವಾಗಿದೆ. ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕೆಂದು ನಾವು ಬಯಸಿದ್ದೇವೆ. ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದ್ದರೆ, ಆಗ ನಾವು ನಮ್ಮ ಆಂದೋಲನವನ್ನು ಮರುಪರಿಶೀಲಿಸಬಹುದಿತ್ತು. ಆದರೆ ಸರ್ಕಾರದ ಉದ್ದೇಶ ಪ್ರಾಮಾಣಿಕವಾಗಿಲ್ಲ" ಎಂದು ಕಿಡಿಕಾರಿದರು.

ಸಚಿವರು ಏನೇ ಪ್ರಸ್ತಾವನೆ ಸಲ್ಲಿಸಿದ್ದರೂ ನಮ್ಮ ವೇದಿಕೆಯಲ್ಲಿ ಆ ಬಗ್ಗೆ ಚರ್ಚಿಸಲಾಗುವುದು ಎಂದ ಅವರು, ನಮ್ಮ ಆಂದೋಲನ ಮುಂದುವರಿಯಲಿದೆ. ನಾಳೆ ಬೆಳಗ್ಗೆ 10 ಗಂಟೆಗೆ ದೆಹಲಿಯತ್ತ ಪಾದಯಾತ್ರೆ ನಡೆಸುತ್ತೇವೆ ಎಂದರು.

ನಂತರ ಗೋಯಲ್ ಅವರೊಂದಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಮುಂಡಾ, "ಸರ್ಕಾರ ಯಾವಾಗಲೂ ಪ್ರತಿಯೊಂದು ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಲು ಬಯಸುತ್ತದೆ.

ಈ ಉದ್ದೇಶದಿಂದ, ನಾವು ಭಾರತ ಸರ್ಕಾರದ ಪ್ರತಿನಿಧಿಗಳಾಗಿ ಇಲ್ಲಿಗೆ ಬಂದಿದ್ದೇವೆ. ನಾವು ಪ್ರತಿಯೊಂದು ವಿಷಯವನ್ನು ಚರ್ಚಿಸಿದ್ದೇವೆ. ಯಾವುದೇ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬಹುದು ಎಂದು ನಾವು ಭಾವಿಸುತ್ತೇವೆ. ನಾವು ಮುಕ್ತ ಮನಸ್ಸಿನಿಂದ ಸಿದ್ಧರಿದ್ದೇವೆ" ಎಂದು ಅವರು ಹೇಳಿದರು.

ಒಮ್ಮತಕ್ಕೆ ತಲುಪಿದೆ: ಮುಂಡಾ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಂಡಾ, ಹೆಚ್ಚಿನ ವಿಷಯಗಳಲ್ಲಿ ಒಮ್ಮತಕ್ಕೆ ಬರಲಾಯಿತು ಎಂದು ಹೇಳಿದರು.

ಒಮ್ಮತದ ಆಧಾರದ ಮೇಲೆ ಮುನ್ನಡೆದಿದ್ದೇವೆ.ಸಮಿತಿ ರಚನೆಯ ಮೂಲಕ ಕೆಲವು ಸಮಸ್ಯೆಗಳನ್ನು ಬಗೆಹರಿಸುವ ಸೂತ್ರವನ್ನು ನೀಡಿದ್ದೇವೆ ಎಂದೂ ಮುಂಡಾ ಹೇಳಿದರು.

ಎಸ್ಕೆಎಂ (ರಾಜಕೀಯೇತರ) ನಾಯಕ ದಲ್ಲೆವಾಲ್ ಮಾತನಾಡಿ, "ಎಂಎಸ್ಪಿಗೆ ಕಾನೂನು ಖಾತರಿ ನೀಡುವುದು, ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನದ ವಿಷಯಗಳ ಕುರಿತು ಸಮಿತಿಯನ್ನು ರಚಿಸಲು ಸರ್ಕಾರ ಬಯಸಿದೆ. ಸಭೆಯಲ್ಲಿ ಏನಾಯಿತು ಎಂದು ನಾವು ನಮ್ಮ ರೈತರಿಗೆ ವೇದಿಕೆಯಲ್ಲಿ ತಿಳಿಸಿ ಚರ್ಚಿಸುತ್ತೇವೆ" ಎಂದರು.

‘ದೆಹಲಿ ಚಲೋ’ ಕರೆ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ದೆಹಲಿಗೆ ಹೋಗುವುದು ನಮಗೆ ಅನಿವಾರ್ಯವಾಗಿದೆ" ಎಂದರು.

ಎಂಎಸ್ಪಿಗೆ ಕಾನೂನು ಖಾತರಿಯ ಜೊತೆಗೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ʼನ್ಯಾಯʼ, ಭೂ ಸ್ವಾಧೀನ ಕಾಯಿದೆ 2013ರ ಮರು ಜಾರಿ, ವಿಶ್ವ ವ್ಯಾಪಾರ ಸಂಸ್ಥೆಯಿಂದ ಹೊರಬರುವುದು, ಹಿಂದಿನ ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಹೋರಾಟ ಆರಂಭಿಸಿದ್ದಾರೆ.

ಪ್ರಕರಣ ಹಿಂಪಡೆಯಲು ಸಿದ್ಧ: ಸರ್ಕಾರ

ಸಭೆಯಲ್ಲಿ, ಕೇಂದ್ರದ ನಿಯೋಗವು 2020-21 ರ ಆಂದೋಲನದ ಸಮಯದಲ್ಲಿ ದಾಖಲಾದ ರೈತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಜೊತೆಗೆ ಹಿಂದಿನ ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದ ಯಾವುದೇ ರೈತರ ಕುಟುಂಬಗಳಿಗೆ ಪರಿಹಾರ ನೀಡಲು ಕೇಂದ್ರ ಸಚಿವರು ಒಪ್ಪಿಕೊಂಡಿದ್ದಾರೆ ಎಂದು ನಂಬಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಪಂಜಾಬ್ ಸಚಿವ ಕುಲದೀಪ್ ಸಿಂಗ್ ಧಲಿವಾಲ್, ರಾಜ್ಯ ಸರ್ಕಾರ ರೈತರೊಂದಿಗೆ ನಿಂತಿದೆ ಎಂದು ಹೇಳಿದರು.

Read More
Next Story