ಸೈಬರ್ ವಂಚನೆ: ದುಬೈ, ದೆಹಲಿಯಲ್ಲಿದ್ದ 11.26 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇ.ಡಿ. ವಶಕ್ಕೆ
x

ಸೈಬರ್ ವಂಚನೆ: ದುಬೈ, ದೆಹಲಿಯಲ್ಲಿದ್ದ 11.26 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇ.ಡಿ. ವಶಕ್ಕೆ

ವಂಚನೆಯಿಂದ ಗಳಿಸಿದ ಹಣವನ್ನು ಯುಎಇಯಿಂದ ಬ್ಯಾಂಕಿಂಗ್ ಅಲ್ಲದ, ಅಂದರೆ ಹವಾಲಾ ಮಾರ್ಗಗಳ ಮೂಲಕ ಭಾರತಕ್ಕೆ ತಂದು, ಇಲ್ಲಿ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ಇ.ಡಿ. ತನಿಖೆಯಿಂದ ತಿಳಿದುಬಂದಿದೆ.


Click the Play button to hear this message in audio format

ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದ್ದ ಬೃಹತ್ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ (ED) ಮಹತ್ವದ ಕಾರ್ಯಾಚರಣೆ ನಡೆಸಿದೆ. ಪ್ರಕರಣದ ಪ್ರಮುಖ ಆರೋಪಿ ತುಷಾರ್ ಖರ್ಬಂದಾಗೆ ಸೇರಿದ ದೆಹಲಿ-ಎನ್‌ಸಿಆರ್, ದುಬೈ ಮತ್ತು ಯುಎಇಯಲ್ಲಿನ 11.26 ಕೋಟಿ ರೂಪಾಯಿ ಮೌಲ್ಯದ ಏಳು ಸ್ಥಿರಾಸ್ತಿಗಳನ್ನು ಇ.ಡಿ. ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.

ತುಷಾರ್ ಖರ್ಬಂದಾ ಮತ್ತು ಆತನ ಸಹಚರರು, ತಮ್ಮನ್ನು ತಾವು ತನಿಖಾಧಿಕಾರಿಗಳು ಎಂದು ಪರಿಚಯಿಸಿಕೊಂಡು ವಿದೇಶಿ ಪ್ರಜೆಗಳನ್ನು ಸಂಪರ್ಕಿಸುತ್ತಿದ್ದರು. ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದಾಗಿ ಬೆದರಿಸಿ, ಅವರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದರು ಎಂದು ಸಿಬಿಐ ಮತ್ತು ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಈ ಹಣವನ್ನು ನಂತರ ಕ್ರಿಪ್ಟೋಕರೆನ್ಸಿಗಳಾಗಿ ಪರಿವರ್ತಿಸಿ, ಖರ್ಬಂದಾ ನಿಯಂತ್ರಿಸುತ್ತಿದ್ದ ವಾಲೆಟ್‌ಗಳಿಗೆ ವರ್ಗಾಯಿಸಲಾಗುತ್ತಿತ್ತು.

ಹವಾಲಾ ಮೂಲಕ ಹಣ ವರ್ಗಾವಣೆ, ದುಬೈನಲ್ಲಿ ಆಸ್ತಿ ಖರೀದಿ

ವಂಚನೆಯಿಂದ ಗಳಿಸಿದ ಹಣವನ್ನು ಯುಎಇಯಿಂದ ಬ್ಯಾಂಕಿಂಗ್ ಅಲ್ಲದ, ಅಂದರೆ ಹವಾಲಾ ಮಾರ್ಗಗಳ ಮೂಲಕ ಭಾರತಕ್ಕೆ ತಂದು, ಇಲ್ಲಿ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ಇ.ಡಿ. ತನಿಖೆಯಿಂದ ತಿಳಿದುಬಂದಿದೆ. ಅಲ್ಲದೆ, ಯುಎಇಯಲ್ಲಿ ನೇರ ನಗದು ವಹಿವಾಟಿನ ಮೂಲಕವೂ ಹಲವು ಸ್ಥಿರಾಸ್ತಿಗಳನ್ನು ಖರ್ಬಂದಾ ಖರೀದಿಸಿದ್ದಾನೆ.

280 ಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಪತ್ತೆ!

ತನಿಖೆಯ ವೇಳೆ, ಆರೋಪಿಯು ತನ್ನ ವಿವಿಧ ಕ್ರಿಪ್ಟೋ ವಾಲೆಟ್‌ಗಳಲ್ಲಿ 351.806 ಬಿಟ್‌ಕಾಯಿನ್‌ಗಳನ್ನು (BTC) ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಇದರ ಇಂದಿನ ಮಾರುಕಟ್ಟೆ ಮೌಲ್ಯ ಬರೋಬ್ಬರಿ 280 ಕೋಟಿ ರೂಪಾಯಿ!. ಈ ಅಕ್ರಮ ಸಂಪಾದನೆಯನ್ನು ಮತ್ತಷ್ಟು ಮರೆಮಾಚಲು, ಅದನ್ನು ಯುಎಸ್‌ಡಿ ಟೆಥರ್ (USDT) ಆಗಿ ಪರಿವರ್ತಿಸಿ, ಬೇರೆ ಬೇರೆ ವಾಲೆಟ್‌ಗಳಿಗೆ ವರ್ಗಾಯಿಸಲಾಗಿತ್ತು.

ಈ ಹಿಂದೆ ಆಗಸ್ಟ್ 6 ರಂದು ಕೂಡ ಇ.ಡಿ. ಅಧಿಕಾರಿಗಳು ಖರ್ಬಂದಾಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆ ವೇಳೆ, ನೋಯ್ಡಾ ಮತ್ತು ಯುಎಇಯಲ್ಲಿನ ಆತನ ಆಸ್ತಿಗಳು ಹಾಗೂ ಕ್ರಿಪ್ಟೋ ವಾಲೆಟ್‌ಗಳಲ್ಲಿದ್ದ ಸಂಪತ್ತಿನ ಬಗ್ಗೆ ಸುಳಿವು ಸಿಕ್ಕಿತ್ತು. ಈ ಪ್ರಕರಣವು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರುಬಿಟ್ಟಿರುವ ಬೃಹತ್ ಸೈಬರ್ ವಂಚನೆಯ ಜಾಲವಾಗಿದ್ದು, ಇ.ಡಿ. ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

Read More
Next Story