ಕೋಚಿಂಗ್ ಸೆಂಟರ್ ಸಾವು: ಹೈಕೋರ್ಟ್‌ನಿಂದ ಬುಧವಾರ ಮನವಿ ಆಲಿಕೆ
x

ಕೋಚಿಂಗ್ ಸೆಂಟರ್ ಸಾವು: ಹೈಕೋರ್ಟ್‌ನಿಂದ ಬುಧವಾರ ಮನವಿ ಆಲಿಕೆ


ದೆಹಲಿಯ ಹಳೆಯ ರಾಜಿಂದರ್ ನಗರದ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿನ ಘಟನೆಯ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ.

ಹಂಗಾಮಿ ಮು.ನ್ಯಾ. ಮನಮೋಹನ್ ಮತ್ತು ನ್ಯಾ. ತುಷಾರ್ ರಾವ್ ಗೆಡೆಲಾ ಅವರ ಪೀಠದ ಮುಂದೆ ಮಂಗಳವಾರ (ಜುಲೈ 30) ತುರ್ತು ವಿಚಾರಣೆಗೆ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ಕ್ರಮಬದ್ಧವಾಗಿದ್ದರೆ ಬುಧವಾರ (ಜುಲೈ 31) ಪಟ್ಟಿ ಮಾಡಲಾಗುವುದು ಎಂದು ಹೇಳಿದರು.

ಸೋಮವಾರ (ಜುಲೈ 29) ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಸುವಂತೆ ಅರ್ಜಿದಾರರ ಪರ ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದರು. ಆಕ್ಷೇಪಗಳಿದ್ದರೆ ತೆಗೆದುಹಾಕಬೇಕು. ಆನಂತರ ಅರ್ಜಿಯನ್ನು ಬುಧವಾರ (ಜುಲೈ 31) ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಮೂವರು ಐಎಎಸ್ ಆಕಾಂಕ್ಷಿಗಳಾದ ಉತ್ತರ ಪ್ರದೇಶದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಮತ್ತು ಕೇರಳದ ನೆವಿನ್ ಡಾಲ್ವಿನ್ , ಜುಲೈ 27 ರಂದು ಕಟ್ಟಡದ ನೆಲಮಾಳಿಗೆಯಲ್ಲಿ ನೀರು ತುಂಬಿ ಮೃತಪಟ್ಟಿದ್ದರು.ಕಾನೂನು ಬಾಹಿರವಾಗಿ ನಡೆಯುತ್ತಿರುವ ಮತ್ತು ಸುರಕ್ಷಣೆ ಮಾನದಂಡಗಳನ್ನು ಅನುಸರಿಸದ ಕೋಚಿಂಗ್ ಕೇಂದ್ರಗಳ ವಿರುದ್ಧ ತನಿಖೆ ನಡೆಸಿ, ವರದಿ ಸಲ್ಲಿಸಲು ಸಮಿತಿಯನ್ನು ರಚಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

Read More
Next Story