Budget Session| ನೀಟ್‌ ಕುರಿತು ಕಾಂಗ್ರೆಸ್, ಸರ್ಕಾರ ಕಿತ್ತಾಟ
x

Budget Session| ನೀಟ್‌ ಕುರಿತು ಕಾಂಗ್ರೆಸ್, ಸರ್ಕಾರ ಕಿತ್ತಾಟ

ಪ್ರತಿಪಕ್ಷಗಳ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಪ್ರಧಾ‌ನ್‌, ನೀಟ್‌ ಪರೀಕ್ಷೆಗೆ ಸಂಬಂಧಿದಂತೆ ಸ ರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ ಮತ್ತು ʻಒಂದೇ ಒಂದು ಅವ್ಯವಹಾರದ ಪ್ರಕರಣʼವನ್ನು ಸಿಬಿಐ ತನಿಖೆ ನಡೆಸುತ್ತಿದೆ ಎಂದು ಹೇಳಿದರು.


ಸಂಸತ್ತಿನ ಬಜೆಟ್ ಅಧಿವೇಶನವು ಸೋಮವಾರ (ಜುಲೈ 22) ಕೋಲಾಹಲದೊಂದಿಗೆ ಆರಂಭಗೊಂಡಿತು; ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳು ನೀಟ್ ಪರೀಕ್ಷೆಯಲ್ಲಿನ ಅಕ್ರಮ ಕುರಿತು ವಾದ-ಪ್ರತಿವಾದ ನಡೆಸಿದವು.

ಪ್ರತಿಪಕ್ಷಗಳ ಪರವಾಗಿ ಆಕ್ರಮಣ ಆರಂಭಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ , ʻದೇಶದ ಲಕ್ಷಾಂತರ ವಿದ್ಯಾರ್ಥಿಗಳು ಏನು ನಡೆಯುತ್ತಿದೆ ಎಂಬ ಬಗ್ಗೆ ಆತಂಕಗೊಂಡಿದ್ದಾರೆ ಮತ್ತು ದೇಶದ ಪರೀಕ್ಷಾ ವ್ಯವಸ್ಥೆಯು ವಂಚನೆ ಎಂದು ಅವರಿಗೆ ಮನವರಿಕೆಯಾಗಿದೆ. ನೀವು ಶ್ರೀಮಂತರಾಗಿದ್ದರೆ ಮತ್ತು ನಿಮ್ಮ ಬಳಿ ಹಣವಿದ್ದರೆ, ನೀವು ದೇಶದ ಪರೀಕ್ಷಾ ವ್ಯವಸ್ಥೆಯನ್ನು ಖರೀದಿಸಬಹುದು ಎಂದು ಲಕ್ಷಾಂತರ ಜನರು ನಂಬುತ್ತಾರೆ ಮತ್ತು ಪ್ರತಿಪಕ್ಷಗಳಿಗೂ ಇದೇ ಭಾವನೆ ಇದೆ,ʼ ಎಂದು ಹೇಳಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ನೀಟ್‌ ಸೇರಿದಂತೆ ನಮ್ಮ ಎಲ್ಲಾ ಪ್ರಮುಖ ಪರೀಕ್ಷೆಗಳಲ್ಲಿ ಬಹಳ ಗಂಭೀರವಾದ ಸಮಸ್ಯೆ ಇದೆ ಎಂಬುದು ಇಡೀ ದೇಶಕ್ಕೆ ಸ್ಪಷ್ಟವಾಗಿದೆ. ಸಚಿವರು (ಧರ್ಮೇಂದ್ರ ಪ್ರಧಾನ್) ತಮ್ಮನ್ನು ಹೊರತುಪಡಿಸಿ, ಎಲ್ಲರನ್ನೂ ದೂಷಿಸಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ,ʼ ಎಂದು ಹೇಳಿದರು.

ʻಕಳೆದ ಏಳು ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ನಡೆದಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲʼ ಎಂದು ಪ್ರಧಾನ್ ಲೋಕಸಭೆಗೆ ತಿಳಿಸಿದರು.

ʻ ಪರೀಕ್ಷಾ ಪ್ರಕ್ರಿಯೆಯಲ್ಲಿನ ತೀವ್ರ ಉಲ್ಲಂಘನೆ ಬೆಳಕಿನಲ್ಲಿನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಹೊಣೆ ಹೊತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡುತ್ತಾರೆಯೇ?ʼ ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಕೇಳಿದರು.

ರಾಹುಲ್ ಅವರಿಗೆ ಛೀಮಾರಿ: ʻನಾನು ನನ್ನ ನಾಯಕ, ಪ್ರಧಾನ ಮಂತ್ರಿ ಅವರ ಕರುಣೆಯಿಂದ ಇಲ್ಲಿದ್ದೇನೆ (ಶಿಕ್ಷಣ ಸಚಿವ ಹುದ್ದೆ). ಉತ್ತರದಾಯಿತ್ವದ ಪ್ರಶ್ನೆ ಬಂದಾಗಲೆಲ್ಲ ನನ್ನ ಸರ್ಕಾರವು ಅದಕ್ಕೆ ಉತ್ತರಿಸುತ್ತದೆ,ʼ ಎಂದು ಹೇಳಿದರು.

ʼಸರ್ಕಾರವು ಇಲ್ಲಿಯವರೆಗೆ ಏನನ್ನೂ ಮುಚ್ಚಿಟ್ಟಿಲ್ಲ. ಬಿಹಾರದಲ್ಲಿ ಕೇವಲ ಒಂದು ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ. ಸಿಬಿಐ ತನಿಖೆ ನಡೆಸುತ್ತಿದೆ,ʼ ಎಂದು ಹೇಳಿದರು.

ಪ್ರಸ್ತುತ ಪರೀಕ್ಷಾ ವ್ಯವಸ್ಥೆಯನ್ನು ʻಕಸʼ ಎಂದು ಕರೆದ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರನ್ನು ಪ್ರಧಾನ್ ಖಂಡಿಸಿದರು. ʻಖಾಸಗಿ ಕಾಲೇಜುಗಳ ಲಾಬಿಯ ಒತ್ತಡದಿಂದ ಮತ್ತು ಭ್ರಷ್ಟಾಚಾರದಿಂದ 2010 ರಲ್ಲಿ ಕಾಂಗ್ರೆಸ್ ಶಿಕ್ಷಣ ಸುಧಾರಣೆ ಮಸೂದೆಗಳನ್ನು ಹಿಂಪಡೆದಿದೆ,ʼ ಎಂದು ಅವರು ಆರೋಪಿಸಿದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸರ್ಕಾರದ ರಕ್ಷಣೆಗೆ ಧಾವಿಸಿದರು.ʻವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳು ಸೇರಿದಂತೆ ದೇಶಾದ್ಯಂತ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದೆ. ಪರೀಕ್ಷಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಸರಿಯಲ್ಲ,ʼ ಎಂದು ಸ್ಪೀಕರ್ ಹೇಳಿದರು.

ಡಿಎಂಕೆ ಸಂಸದ ಕೆ. ವೀರಸ್ವಾಮಿ ಅವರು ನೀಟ್ ರದ್ದುಗೊಳಿಸುವಂತೆ ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪ್ರಧಾನ್, ʻ2010ರಲ್ಲಿ ಆಗಿನ ಸರ್ಕಾರ ನೀಟ್ ಅನ್ನು ಆರಂಭಿಸಿತು. ಆನಂತರ ಎರಡು ಬಾರಿ ನೀಟ್ ವಿಷಯ ಸುಪ್ರೀಂ ಕೋರ್ಟ್‌ ಮುಂದೆ ಬಂದಿದೆ. ಎರಡೂ ಸಂದರ್ಭಗಳಲ್ಲಿ ಒಂದೇ ಪರೀಕ್ಷೆಯ ಅಗತ್ಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ನೀಟ್‌ ವಿರುದ್ಧದ ಪ್ರತಿಭಟನೆ ಸಂಪೂರ್ಣ ರಾಜಕೀಯ ಕಾರಣಗಳಿಗೆ ನಡೆಯುತ್ಗಾತಿದೆ,ʼ ಎಂದು ಅವರು ಹೇಳಿದರು.

Read More
Next Story