
ತಿರುವನಂತಪುರಂ ಪಾಲಿಕೆ ಗದ್ದುಗೆ ಹಿಡಿದ ಬಿಜೆಪಿ; 40 ವರ್ಷಗಳ ಎಡಪಂಥೀಯರ ಪ್ರಭುತ್ವಕ್ಕೆ ತೆರೆ
ಪ್ರಸ್ತುತ ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ವಿ.ವಿ. ರಾಜೇಶ್ ಅವರ ಆಯ್ಕೆಯು ರಾಜ್ಯದಲ್ಲಿ ಪಕ್ಷದ ಸಂಘಟನಾ ಶಕ್ತಿಯ ಪ್ರತೀಕವಾಗಿದೆ.
ಕೇರಳದ ರಾಜಕೀಯ ಭೂಪಟದಲ್ಲಿ ಕಮಲ ಅರಳುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿತವಾಗಿದೆ. ಸುಮಾರು ನಾಲ್ಕು ದಶಕಗಳಿಂದ ಎಡರಂಗದ (LDF) ಭದ್ರಕೋಟೆಯಾಗಿದ್ದ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ವಿ.ವಿ. ರಾಜೇಶ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕೇರಳದ ಪ್ರಮುಖ ಪಾಲಿಕೆಯೊಂದರಲ್ಲಿ ಅಧಿಕಾರ ಹಿಡಿದ ಮೊದಲ ಬಿಜೆಪಿ ಮೇಯರ್ ಎಂಬ ಹೆಗ್ಗಳಿಕೆಗೆ ರಾಜೇಶ್ ಪಾತ್ರರಾಗಿದ್ದಾರೆ.
ಶುಕ್ರವಾರ ನಡೆದ ಅತ್ಯಂತ ಕುತೂಹಲಕಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ವಿ. ರಾಜೇಶ್ ಅವರು ನಿರೀಕ್ಷಿತ ಬಹುಮತ ಪಡೆಯುವಲ್ಲಿ ಯಶಸ್ವಿಯಾದರು. ಒಟ್ಟು 101 ಸದಸ್ಯರ ಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು 51 ಸದಸ್ಯರ ಬೆಂಬಲ ಅಗತ್ಯವಿತ್ತು. ಚುನಾವಣೆಯಲ್ಲಿ ರಾಜೇಶ್ ಅವರು 51 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾದರು. ಅವರಿಗೆ ಒಬ್ಬರು ಸ್ವತಂತ್ರ ಸದಸ್ಯರ ಬೆಂಬಲವೂ ದೊರೆತಿದ್ದು ವಿಜಯದ ಹಾದಿಯನ್ನು ಸುಗಮಗೊಳಿಸಿತು. ಮತ್ತೊಂದೆಡೆ, ಎಲ್ಡಿಎಫ್ ಅಭ್ಯರ್ಥಿ ಪಿ. ಶಿವಜಿ ಅವರು 29 ಮತಗಳನ್ನು ಪಡೆದರೆ, ಯುಡಿಎಫ್ ಪರವಾಗಿ ಕಣಕ್ಕಿಳಿದಿದ್ದ ಕೆ.ಎಸ್. ಶಬರಿನಾಥನ್ ಕೇವಲ 19 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಚುನಾವಣೆಯಲ್ಲಿ ಎರಡು ಮತಗಳು ಅಮಾನ್ಯಗೊಂಡಿದ್ದು, ಒಬ್ಬ ಸದಸ್ಯರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.
ರಾಜಧಾನಿಯಲ್ಲಿ ಕೇಸರಿ ಪಡೆಗೆ ಆನೆಬಲ
ಪ್ರಸ್ತುತ ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ವಿ.ವಿ. ರಾಜೇಶ್ ಅವರ ಆಯ್ಕೆಯು ರಾಜ್ಯದಲ್ಲಿ ಪಕ್ಷದ ಸಂಘಟನಾ ಶಕ್ತಿಯ ಪ್ರತೀಕವಾಗಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ 50 ವಾರ್ಡ್ಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ರಾಜೇಶ್ ಅವರ ಪದಗ್ರಹಣ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಮತ್ತು ಕೆ. ಸುರೇಂದ್ರನ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದು ಸಂಭ್ರಮಿಸಿದರು. ಇದೇ ವೇಳೆ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯ ಮಹಿಳಾ ನಾಯಕಿ ಜಿ.ಎಸ್. ಆಶಾ ನಾಥ್ ಅವರ ಹೆಸರನ್ನು ಪಕ್ಷ ಅಧಿಕೃತವಾಗಿ ಘೋಷಿಸಿದೆ.
ಎಡರಂಗಕ್ಕೆ ಮುಖಭಂಗ, ಯುಡಿಎಫ್ಗೆ ಇತರ ನಗರಗಳಲ್ಲಿ ಮುನ್ನಡೆ
ತಿರುವನಂತಪುರಂನಲ್ಲಿ ಸಂಭವಿಸಿರುವ ಈ ಸೋಲು ಆಡಳಿತಾರೂಢ ಎಲ್ಡಿಎಫ್ಗೆ ಭಾರಿ ರಾಜಕೀಯ ಹಿನ್ನಡೆಯನ್ನು ತಂದೊಡ್ಡಿದೆ. ಕಳೆದ 40 ವರ್ಷಗಳಿಂದ ಪಾಲಿಕೆಯಲ್ಲಿ ಅಡೆತಡೆಯಿಲ್ಲದೆ ಅಧಿಕಾರ ನಡೆಸುತ್ತಿದ್ದ ಎಡಪಂಥೀಯರಿಗೆ ರಾಜಧಾನಿಯಲ್ಲಿ ಹಿನ್ನಡೆಯಾದರೂ, ಕೊಯಿಕ್ಕೋಡ್ ಕಾರ್ಪೋರೇಶನ್ ಸೇರಿದಂತೆ ಕೆಲವು ನಗರಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ರಾಜ್ಯದ ಆರು ಮಹಾನಗರ ಪಾಲಿಕೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ನಾಲ್ಕು ಸ್ಥಾನಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದೆ. ಕೊಚ್ಚಿಯಲ್ಲಿ ವಿ.ಕೆ. ಮಿನಿಮೋಲ್, ತ್ರಿಶೂರ್ನಲ್ಲಿ ಡಾ. ನಿಜಿ ಜಸ್ಟಿನ್ ಸೇರಿದಂತೆ ಕೊಲ್ಲಂ ಮತ್ತು ಕಣ್ಣೂರಿನಲ್ಲೂ ಯುಡಿಎಫ್ ಅಭ್ಯರ್ಥಿಗಳು ಮೇಯರ್ ಪೀಠವನ್ನು ಅಲಂಕರಿಸಲಿದ್ದಾರೆ.
ಪಾಲದಲ್ಲಿ ಇಪ್ಪತ್ತೊಂದರ ಹರೆಯದ ಯುವತಿಯ ಸಾಧನೆ
ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಮತ್ತೊಂದು ವಿಶೇಷವೆಂದರೆ ಪಾಲ ನಗರಸಭೆಯ ಅಧ್ಯಕ್ಷರ ಆಯ್ಕೆ. ಕೇವಲ 21 ವರ್ಷದ ದಿಯಾ ಬಿನು ಪುಳಿಕ್ಕಂಕಂದಂ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಅತೀ ಕಿರಿಯ ನಗರಸಭಾ ಅಧ್ಯಕ್ಷೆ ಎಂಬ ದಾಖಲೆ ಬರೆದಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ದಿಯಾ ಬಿನು ಅವರ ಕುಟುಂಬ ಯುಡಿಎಫ್ಗೆ ಬೆಂಬಲ ನೀಡಿದೆ. ಈ ಬೆಳವಣಿಗೆಯಿಂದಾಗಿ ಪಾಲ ಭಾಗದಲ್ಲಿ ದಶಕಗಳಿಂದ ಅಧಿಪತ್ಯ ಸ್ಥಾಪಿಸಿದ್ದ ಕೇರಳ ಕಾಂಗ್ರೆಸ್ (ಮಣಿ) ಬಣಕ್ಕೆ ದೊಡ್ಡ ಆಘಾತ ಎದುರಾದಂತಾಗಿದೆ. ತಿರುವನಂತಪುರಂ ಜೊತೆಗೆ ತ್ರಿಪುನಿತುರಾ ಹಾಗೂ ಪಾಲಕ್ಕಾಡ್ ನಗರಸಭೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದ್ದು, ಕೇರಳದ ಸ್ಥಳೀಯ ರಾಜಕಾರಣದಲ್ಲಿ ಬಿಜೆಪಿ ಹೊಸ ಆಯಾಮವನ್ನು ಸೃಷ್ಟಿಸುತ್ತಿದೆ.

