![Milkipur Bypolls : ಪ್ರತಿಷ್ಠಿತ ಮಿಲ್ಕಿಪುರ ಕ್ಷೇತ್ರದಲ್ಲಿ ಜಯ ಸಾಧಿಸಿದ ಬಿಜೆಪಿ Milkipur Bypolls : ಪ್ರತಿಷ್ಠಿತ ಮಿಲ್ಕಿಪುರ ಕ್ಷೇತ್ರದಲ್ಲಿ ಜಯ ಸಾಧಿಸಿದ ಬಿಜೆಪಿ](https://karnataka.thefederal.com/h-upload/2025/02/08/511497-bjp-1.webp)
Milkipur Bypolls : ಪ್ರತಿಷ್ಠಿತ ಮಿಲ್ಕಿಪುರ ಕ್ಷೇತ್ರದಲ್ಲಿ ಜಯ ಸಾಧಿಸಿದ ಬಿಜೆಪಿ
Milkipur Bypolls : ಮಿಲ್ಕಿಪುರದಲ್ಲಿ ಬಿಜೆಪಿಗೆ ಗೆದ್ದು ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿದ್ದರೆ, ತಮಿಳುನಾಡಿನ ಈರೋಡ್ನಲ್ಲಿ ಡಿಎಂಕೆ ಗೆಲುವು ಸಾಧಿಸಿದೆ.
ದೆಹಲಿಯ ವಿಧಾನಸಭಾ ಫಲಿತಾಂಶದ ಜತೆಗೆ ಶನಿವಾರ (ಫೆ. 8) ಉತ್ತರ ಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶವೂ ಪ್ರಕಟಗೊಂಡಿದೆ. ಜಿದ್ದಾಜಿದ್ದಿನ ಈ ಸ್ಪರ್ಧೆಯಲ್ಲಿ ಬಿಜೆಪಿ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು. ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಿಲ್ಕಿಪುರ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇಲ್ಲಿನ ಶಾಸಕ ಸಮಾಜವಾದಿ ಪಾರ್ಟಿ (SP)ಯ ಅವಧೇಶ್ ಪ್ರಸಾದ್ ರಾಜೀನಾಮೆ ನೀಡಿ ಫೈಝಾಬಾದ್ ಸಂಸದರಾಗಿ ಆಯ್ಕೆಯಾಗಿದ್ದರು. ಇದೀಗ ಅವರ ಪುತ್ರನನ್ನೇ ನಿಲ್ಲಿಸಿದ್ದರು. ಅವರನ್ನು ಬಿಜೆಪಿಯ ಚಂದ್ರಭಾನು ಪಾಸ್ವಾನ್ ಮಣಿಸಿದ್ದಾರೆ.
ಮತ ಎಣಿಕೆ ಪೂರ್ಣಗೊಂಡಾಗ ಬಿಜೆಪಿಯ ಚಂದ್ರಭಾನು ಪಾಸ್ವಾನ್ 1,46,397 ಮತ ಗಳಿಸಿ ಗೆಲುವಿನ ನಗೆ ಬೀರಿದರೆ. ಎಸ್ಪಿ ಅಭ್ಯರ್ಥಿ, ಅವಧೇಶ್ ಪ್ರಸಾದ್ ಪುತ್ರ ಅಜಿತ್ ಪ್ರಸಾದ್ 84,687 ಮತ ಪಡೆದು 61,710 ವೋಟುಗಳ ಅಂತರದಿಂದ ಸೋಲೋಪ್ಪಿಕೊಂಡಿದ್ದಾರೆ.
ಸೇಡು ತೀರಿಸಿಕೊಂಡ ಬಿಜೆಪಿ
2024ರ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯ ರಾಮ ಮಂದಿರ ಇರುವ ಫೈಝಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದೇ ಭಾವಿಸಲಾಗಿತ್ತು. ಅದೇ ವರ್ಷ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆದಿದ್ದು ಗೆಲುವಿಗೆ ಪೂರಕ ಎನ್ನುವ ಲೆಕ್ಕಾಚಾರವಿತ್ತು. ಆದರೆ ಬಿಜೆಪಿ 54,000 ಮತಗಳ ಅಂತರದಿಂದ ಎಸ್ಪಿ ಅಭ್ಯರ್ಥಿ ಅವಧೇಶ್ ಪ್ರಸಾದ್ ವಿರುದ್ಧ ಸೋತಿತ್ತು.
ಈ ಕಾರಣಕ್ಕೆ ಮಿಲ್ಕಿಪುರ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಬದಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಘಟಾನುಘಟಿಗಳು ಪ್ರಚಾರ ಮಾಡಿದ್ದರು. ರಾಷ್ಟ್ರೀಯತೆ ಮತ್ತು ವಂಶಪಾರಂಪರ್ಯ ರಾಜಕಾರಣದ ನಡುವಿನ ಸ್ಪರ್ಧೆ ಎಂದೇ ಹೇಳಿದ್ದರು. ಅಯೋಧ್ಯೆಯ ಸೋಲಿಗೆ ಪ್ರತೀಕಾರ ತೀರಿಸುವಂತೆ ಅವರು ಮತದಾರರಿಗೆ ಕರೆ ನೀಡಿದ್ದರು.
ಈರೋಡ್ ಉಪಚುನಾವಣೆಯಲ್ಲಿ ಡಿಎಂಕೆಗೆ ಗೆಲುವು
ತಮಿಳುನಾಡಿನ ಈರೋಡ್ ವಿಧಾನಸಭೆಯ ಉಪಚುನಾವಣೆಯಲ್ಲಿ ಡಿಎಂಕೆ (DMK) ಜಯ ಗಳಿಸಿದೆ. ಆಡಳಿತರೂಢ ಡಿಎಂಕೆಯ ವಿ.ಸಿ.ಚಂದಿರಕುಮಾರ್ (VC Chandirakumar) ವಿಜಯಶಾಲಿಯಾಗಿದ್ದಾರೆ. ತಮಿಳು ನ್ಯಾಶನಲಿಸ್ಟ್ ಪಾರ್ಟಿ, ನಾಮ್ ತಮಿಳರ್ ಕಚ್ಚಿಯ ಎಂ.ಕೆ.ಸೀತಾಲಕ್ಷ್ಮೀ 2ನೇ ಸ್ಥಾನ ಪಡೆದಿದ್ದಾರೆ. ಎಐಎಡಿಎಂಕೆ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ. ಕಾಂಗ್ರೆಸ್ ಶಾಸಕರಾಗಿದ್ದ ಎಲನ್ಗೋವನ್ ನಿಧನ ಹೊಂದಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು.