ದೇಗುಲದಲ್ಲಿ ಕಾಲ್ತುಳಿತ: ಜೆಹಾನಾಬಾದ್‌ನಲ್ಲಿ 7 ಮಂದಿ ಸಾವು, 16 ಮಂದಿಗೆ ಗಾಯ
x

ದೇಗುಲದಲ್ಲಿ ಕಾಲ್ತುಳಿತ: ಜೆಹಾನಾಬಾದ್‌ನಲ್ಲಿ 7 ಮಂದಿ ಸಾವು, 16 ಮಂದಿಗೆ ಗಾಯ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.


ಬಿಹಾರದ ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರದಲ್ಲಿರುವ ಬಾಬಾ ಸಿದ್ಧನಾಥ ದೇವಸ್ಥಾನದಲ್ಲಿ ಭಾನುವಾರ ರಾತ್ರಿ (ಆಗಸ್ಟ್ 11) ಸಂಭವಿಸಿದ ಕಾಲ್ತುಳಿತದಲ್ಲಿ ಆರು ಮಹಿಳೆಯರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ರಾತ್ರಿ 11.30 ರ ಸುಮಾರಿಗೆ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ. ದೇವಾಲಯದ ಭದ್ರತಾ ಸಿಬ್ಬಂದಿ ತ್ವರಿತವಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲಂಕೃತಾ ಪಾಂಡೆ ಅವರು ತಿಳಿಸಿದರು.

ʻಜೆಹಾನಾಬಾದ್‌ನ ಬರಾಬರ್ ಪಹಾಡಿಯ ಬಾಬಾ ಸಿದ್ದನಾಥ ದೇವಸ್ಥಾನದಲ್ಲಿ ಕಾಲ್ತುಳಿತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 16 ಜನರು ಗಾಯಗೊಂಡಿದ್ದಾರೆ. ಪ್ಯಾರೆ ಪಾಸ್ವಾನ್ (30), ನಿಶಾ ದೇವಿ (30), ಪೂನಮ್ ದೇವಿ (30), ನಿಶಾ ಕುಮಾರಿ (21) ಮತ್ತು ಸುಶೀಲಾ ದೇವಿ (64) ಮೃತರು. ಇನ್ನೊಬ್ಬ ಮಹಿಳೆಯ ಗುರುತು ಪತ್ತೆಯಾಗಿಲ್ಲ,ʼ ಎಂದು ಹೇಳಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಪರಿಹಾರಕ್ಕೆ ಆದೇಶಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಗಾಯಾಳುಗಳನ್ನು ಮುಕುಂದಾಪುರ ಮತ್ತು ಹತ್ತಿರದ ಪ್ರದೇಶದ ವೈದ್ಯಕೀಯ ಸೌಲಭ್ಯಗಳಿಗೆ ದಾಖಲಿಸಲಾಗಿದೆ. ಪ್ರಥಮ ಚಿಕಿತ್ಸೆ ನಂತರ 10 ಜನರು ಮನೆಗೆ ಮರಳಿದ್ದಾರೆ ಮತ್ತು ಆರು ಮಂದಿ ಆಸ್ಪತ್ರೆಯಲ್ಲಿದ್ದಾರೆ. ಯಾತ್ರಾರ್ಥಿಗಳ ಹೆಚ್ಚು ಸಂಖ್ಯೆಯಲ್ಲಿ ನೆರೆದಿರುವುದರಿಂದ, ಜಿಲ್ಲಾಡಳಿತ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದಾರೆ.

ಕವಾಡಿಗಳ ನಡುವಿನ ವಿವಾದ ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಎಂದು ಡಿಎಂ ಶಂಕಿಸಿದ್ದಾರೆ. ʻದೇವಾಲಯದ ಹೊರಗೆ ಕವಾಡಿಗಳು ಮತ್ತು ಹೂವು ಮಾರಾಟಗಾರರ ನಡುವಿನ ತೀವ್ರ ವಾಗ್ವಾದ ಘಟನೆಯನ್ನು ಪ್ರಚೋದಿಸಿರಬಹುದು. ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಲಿದೆ,ʼ ಎಂದು ಹೇಳಿದರು. ಅಂತಿಮ ಸಂಸ್ಕಾರಕ್ಕಾಗಿ ಆಡಳಿತ ತಲಾ 20,000 ರೂ.ನೀಡಲಿದೆ. ಗಾಯಾಳುಗಳಿಗೆ ತಲಾ 50,000 ರೂ.ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ಆರ್‌ಜೆಡಿ ನಾಯಕರಾದ ಲಾಲು ಪ್ರಸಾದ್, ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ದುಃಖ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.

Read More
Next Story