ಬಂಗಾಳ ಬಂದ್ | ರಾಜ್ಯದಲ್ಲಿ ಪ್ರಜಾಪ್ರಭುತ್ವ ಇಲ್ಲ: ರಾಜ್ಯ ಬಿಜೆಪಿ ಮುಖ್ಯಸ್ಥ
x
ಬಿಜೆಪಿ ನಾಯಕ ರಾಹುಲ್ ಸಿನ್ಹಾ ಮತ್ತಿತರರು ಪಕ್ಷದ ಕಾರ್ಯಕರ್ತರೊಂದಿಗೆ ಬಂದ್‌ ವೇಳೆ ಪ್ರತಿಭಟಿಸಿದರು.

ಬಂಗಾಳ ಬಂದ್ | 'ರಾಜ್ಯದಲ್ಲಿ ಪ್ರಜಾಪ್ರಭುತ್ವ ಇಲ್ಲ': ರಾಜ್ಯ ಬಿಜೆಪಿ ಮುಖ್ಯಸ್ಥ

ನಬನ್ನಾ ಅಭಿಯಾನದಲ್ಲಿ ವ್ಯಾಪಕ ಹಿಂಸಾಚಾರವನ್ನು ಖಂಡಿಸಿ, ಬಿಜೆಪಿ ಕರೆ ಕೊಟ್ಟಿದ್ದ 12 ಗಂಟೆಗಳ ಬಂದ್‌ ಹೆಚ್ಚು ಪರಿಣಾಮಕಾರಿ ಆಗಿರಲಿಲ್ಲ. ಬಂಗಾಳ ಸರ್ಕಾರ ಬಂದ್‌ಗೆ ಸ್ಪಂದಿಸದಂತೆ ಜನರನ್ನು ಒತ್ತಾಯಿಸಿತ್ತು ಮತ್ತು ಜನಜೀವನಕ್ಕೆ ತೊಂದರೆಯಾಗದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿತ್ತು.


ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಾಯೋಜಿತ 12 ಗಂಟೆಗಳ ಬಂದ್‌ನಿಂದ ಕೆಲವು ಭಾಗಗಳಲ್ಲಿ ದೈನಂದಿನ ಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ಥಗೊಂಡಿತು.

ಕೋಲ್ಕತ್ತಾದ ರಸ್ತೆಗಳಲ್ಲಿ ಬೆಳಗಿನ ವೇಳೆಯ ವಾಹನ ಸಂಚಾರ ಕಡಿಮೆಯಿದ್ದು, ಬಸ್‌ಗಳು, ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳ ವಿರಳ ಸಂಚಾರ ಇದ್ದಿತ್ತು. ಮಾರುಕಟ್ಟೆಗಳು ಮತ್ತು ಅಂಗಡಿಗಳು ಎಂದಿನಂತೆ ತೆರೆದಿದ್ದರೂ, ಖಾಸಗಿ ವಾಹನಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇತ್ತು.

ಶಾಲೆಗಳು ಮತ್ತು ಕಾಲೇಜುಗಳು ತೆರೆದಿದ್ದವು. ಆದರೆ, ಹೆಚ್ಚಿನ ಖಾಸಗಿ ಕಚೇರಿಗಳಲ್ಲಿ ಹಾಜರಿ ಕಡಿಮೆಯಿತ್ತು; ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಲು ಕೇಳಲಾಯಿತು.

ಬಿಜೆಪಿಯಿಂದ ಪ್ರತಿಭಟನೆ, ರಸ್ತೆ ತಡೆ: ಭಬಾನಿಪುರದಲ್ಲಿ ಬಿಜೆಪಿ ಶಾಸಕ ಅಗ್ನಿಮಿತ್ರ ಪಾಲ್ ಅವರು ವಾಹನಗಳನ್ನು ಹೊರಗೆ ತೆಗೆಯದಂತೆ ಜನರನ್ನು ಒತ್ತಾಯಿಸಿದರು.

ಉತ್ತರ 24 ಪರಗಣದ ಬೊಂಗಾವ್ ನಿಲ್ದಾಣ, ದಕ್ಷಿಣ 24 ಪರಗಣಗಳ ಗೋಚರಣ್ ನಿಲ್ದಾಣ ಮತ್ತು ಮುರ್ಷಿದಾಬಾದ್ ನಿಲ್ದಾಣದಲ್ಲಿ ಬಂದ್‌ಗೆ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿದರು. ಬಿಜೆಪಿ ಬೆಂಬಲಿಗರು ಮತ್ತು ಟಿಎಂಸಿ ಕಾರ್ಯಕರ್ತರು ಮುಖಾಮುಖಿಯಾದ ಕಾರಣ ಉತ್ತರ 24 ಪರಗಣದ ಬಾರಕ್‌ಪೋರ್ ನಿಲ್ದಾಣದಲ್ಲಿ ಉದ್ವಿಗ್ನತೆ ಉಂಟಾಗಿತ್ತು.

ಹೂಗ್ಲಿ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಸ್ಥಳೀಯ ರೈಲಿಗೆ ಅಡ್ಡಿಪಡಿಸಿದರು. ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಧರಣಿ ನಡೆಸಿ ಸಂಚಾರಕ್ಕೆ ತಡೆಯೊಡ್ಡಿದರು.

ಮಾಲ್ಡಾದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಕೈ ಮಿಲಾಯಿಸಿದರು. ಕಾದಾಡುತ್ತಿದ್ದ ಗುಂಪುಗಳನ್ನು ಚದುರಿಸಲು ಪೊಲೀಸರು ಕ್ರಮ ಕೈಗೊಂಡರು.

ಬಂಕುರಾ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪೊಲೀಸರೊಂದಿಗೆ ಮಾತಿನ ಚಕಮಕಿ: ಅಲಿಪುರ್‌ದುವಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ‘ದಫಾ ಏಕ್ ದಾಬಿ ಏಕ್, ಮುಖ್ಯಮಂತ್ರಿರ್ ಪದತ್ಯಾ‌ಗ್‌ʼ (ಒಂದೇ ಬೇಡಿಕೆ, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು) ಎಂದು ಘೋಷಣೆ ಕೂಗುತ್ತಾ, ಆರ್ಟಿರಿಯಲ್ ರಸ್ತೆ ತಡೆಗೆ ಯತ್ನಿಸಿ, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಒತ್ತಾಯಿಸಿ ಮಂಗಳವಾರ ನಡೆದ ‘ನಬನ್ನಾ ಅಭಿಯಾನ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲಿನ ಪೊಲೀಸ್ ಕ್ರಮವನ್ನು ವಿರೋಧಿಸಿ ಬಿಜೆಪಿಯು ಬಂದ್‌ ಗೆ ಕರೆ ನೀಡಿತ್ತು.

ಬಂದ್ ಕರೆಗೆ ಸ್ಪಂದಿಸಬೇಡಿ: ಬಿಜೆಪಿಯ ಸಾರ್ವತ್ರಿಕ ಮುಷ್ಕರಕ್ಕೆ ಪ್ರತಿಕ್ರಿಯಿಸದಂತೆ ಪಶ್ಚಿಮ ಬಂಗಾಳ ಸರ್ಕಾರ ಜನರನ್ನು ಒತ್ತಾಯಿಸಿದೆ. ಬುಧವಾರ ಯಾವುದೇ ಬಂದ್‌ಗೆ ಸರ್ಕಾರ ಅವಕಾಶ ನೀಡುವುದಿಲ್ಲ. ಜನರು ಭಾಗವಹಿಸಬಾರದೆಂದು ಒತ್ತಾಯಿಸುತ್ತೇವೆ. ಜನಜೀವನಕ್ಕೆ ತೊಂದರೆಯಾಗದಂತೆ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಖ್ಯ ಸಲಹೆಗಾರ ಅಲಾಪನ್ ಬಂಡೋಪಾಧ್ಯಾಯ ಹೇಳಿದ್ದಾರೆ.

ಎಲ್ಲಾ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಎಲ್ಲಾ ಉದ್ಯೋಗಿಗಳು ಆಗಸ್ಟ್ 28 ರಂದು ಕರ್ತವ್ಯಕ್ಕೆ ಹಾಜರಾಗಬೇಕು. ಅನಧಿಕೃತ ಗೈರುಹಾಜರಿಗೆ ಶೋಕಾಸ್ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿತ್ತು.

ನಬನ್ನಾ ಅಭಿಯಾನ್‌ ಹಿಂಸೆಗೆ ತಿರುಗಿದ್ದು ಹೇಗೆ?: ಪಶ್ಚಿಮ ಬಂಗ ಛಾತ್ರ ಸಮಾಜ ಮತ್ತು ನೌಕರರ ವೇದಿಕೆ ಸಂಗ್ರಾಮಿ ಜೂತ ಮಂಚ್‌ ಕರೆ ನೀಡಿದ್ದ ಅಭಿಯಾನವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿತ್ತು.

ಆದರೆ, ಪ್ರತಿಭಟನಾಕಾರರು ನಿಲುಗಡೆಯ ಸ್ಥಳಗಳಲ್ಲಿ ಪೊಲೀಸರೊಂದಿಗೆ ಜಗಳವಾಡಿದರು. ಸುಮಾರು ನಾಲ್ಕು ಗಂಟೆ ಕಾಲ ನಡೆದ ಹಿಂಸಾಚಾರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಮಹಿಳಾ ಪ್ರತಿಭಟನಾಕಾರರು ಗಾಯಗೊಂಡರು. ರಾಜ್ಯಾದ್ಯಂತ 200ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ತೂರಿದರು. ಕೋಲ್ಕತ್ತಾ ಪೊಲೀಸ್‌ನ 15 ಮತ್ತು ರಾಜ್ಯ ಪೊಲೀಸ್ ಪಡೆಯ 14 ಸಿಬ್ಬಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ನಬನ್ನಾದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್, ಜಲಫಿರಂಗಿ ಮತ್ತು ಅಶ್ರುವಾಯು ಶೆಲ್‌ಗಳನ್ನು ಬಳಸಿದರು.

17 ಮಹಿಳೆಯರು ಸೇರಿದಂತೆ 160ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.



Read More
Next Story