
ಅಬುಜಾಮಾದಿಯಾ ಆದಿವಾಸಿ ಕುಟುಂಬಗಳ ಮಕ್ಕಳು ಇತ್ತೀಚೆಗೆ ತಮ್ಮ ಗ್ರಾಮಗಳನ್ನು ತೊರೆದು ನಾರಾಯಣಪುರ ವಿಸ್ತರಿತ ಪುನರ್ವಸತಿ ಕಾಲನಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಆದಿವಾಸಿಗಳು ಈಗ ಗುಡಿಸಲುಗಳಲ್ಲಿ ಅಥವಾ ತಾತ್ಕಾಲಿಕ ಟೆಂಟ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರೆಲ್ಲರೂ ನಾರಾಯಣಪುರ ಪಟ್ಟಣದಲ್ಲಿ ಅಲೆಮಾರಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ. –ಇಲ್ಲಿನ ಎಲ್ಲ ಚಿತ್ರಗಳು: ದೀಪಕ್ ದವೇರೆ.
Battle for Bastar Part 5: ಇಡೀ ಭದ್ರತಾ ವ್ಯವಸ್ಥೆಯನ್ನೇ ದಂಗುಬಡಿಸಿದ ಆಪರೇಷನ್ ಕೋರಾಪುಟ್
ಐದು ಭಾಗಗಳನ್ನು ಒಳಗೊಂಡ ಈ ಸರಣಿಯ ಕೊನೆಯ ಭಾಗ ಇಲ್ಲಿದೆ. ಈ ಭಾಗದಲ್ಲಿ ಶರಣಾಗಿರುವ ಇಬ್ಬರು ಮಾವೋವಾದಿ ಬಂಡುಕೋರರು ಭಾರತೀಯ ಭದ್ರತಾ ವ್ಯವಸ್ಥೆ ವಿರುದ್ಧ ನಡೆಸಿದ ಭಯಾನಕ ದಾಳಿಗಳ ಮೈನವಿರೇಳಿಸುವ ಚಿತ್ರಣವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ.
ಅದು 2003ರ ಅಕ್ಟೋಬರ್ ತಿಂಗಳ ಮಧ್ಯಭಾಗ. ಮೂವತ್ತು ಮಂದಿ ಕಾಮ್ರೇಡ್ ಗಳೊಂದಿಗೆ ಒಡಿಶಾದ ಕೋರಾಪುಟ್ ಗೆ ಈ ಕ್ಷಣವೇ ಹೊರಟುಬಿಡು ಎಂದು ಮಂಗಲ್ ಮುದಿಯಾಗೆ ತನ್ನ ಕಮಾಂಡರ್ ಗಳಿಂದ ಆದೇಶ ಬರುತ್ತದೆ.
ಮುಂದೇನು ಮಾಡಬೇಕು? ಎಲ್ಲಿ ದಾಳಿ ನಡೆಸಬೇಕು? ಎಂಬ ಯಾವ ಸುಳಿವನ್ನೂ ಆ ಗೆರಿಲ್ಲಾ ತಂಡಕ್ಕೆ ಕೊಡಲಿಲ್ಲ. ತಕ್ಷಣ ಹೊರಟು ಬಿಡು ಎಂಬುದಷ್ಟೇ ಆದೇಶ. ಅದನ್ನು ಅವರು ಶಿರಸಾವಹಿಸಿ ಪಾಲಿಸಿದರು.
ಮಂಗಲ್ ಮುದಿಯಾಗೆ ಆಗಿನ್ನೂ 19ರ ತಾರುಣ್ಯ. ಅಷ್ಟರಲ್ಲಾಗಲೇ ಆತ ದಕ್ಷಿಣ ಬಸ್ತಾರ್ ದಟ್ಟಾರಣ್ಯದ ಪೀಪಲ್ ವಾರ್ ಗ್ರೂಪ್(PWG) ನ ಏರಿಯಾ ಕಮಾಂಡರ್ ಆಗಿದ್ದ. ಸಶಸ್ತ್ರ ಕ್ರಾಂತಿಯನ್ನು ಕಾರ್ಯರೂಪಕ್ಕೆ ತಂದೇ ತರುವ ಹುಮ್ಮಸ್ಸು ಆತನಲ್ಲಿತ್ತು.
ಮುದಿಯಾಗೆ ನಿಯೋಜಿಸಲಾಗಿರುವ ಕಾರ್ಯಾಚರಣೆಯ ಕಾರಸ್ಥಾನವಾದ ಕೋರಾಪುಟ್ ಇರುವುದಾದರೂ ಎಲ್ಲಿ? 265 ಕಿ.ಮೀ. ಆಚೆಗೆ. ಅದು ಇಂದಿನ ಬಿಜಾಪುರ ಜಿಲ್ಲೆಯ ಗಂಗಾಲೂರ್ ನಿಂದ ಪಶ್ಚಿಮ ಒಡಿಶಾ ಭಾಗದಲ್ಲಿದೆ. ಅದಕ್ಕೆ ಭಗವಾನ್ ರಾಮ 13 ವರ್ಷಗಳ ಕಾಲ ವನವಾಸ ಮಾಡಿದನೆನ್ನಲಾದ ದಂಡಕಾರಣ್ಯವನ್ನು ದಾಟಿ ಸಾಗಬೇಕು. ಅದು ಕಠಿಣಾತಿ ಕಠಿಣ ಹಾದಿ. ಅಷ್ಟೂ ದಾರಿಯನ್ನು ಕಾಲ್ನಡಿಗೆಯಲ್ಲಿಯೇ ತೆರಳಬೇಕು. ಅದೊಂದು ದೊಡ್ಡ ಸವಾಲಿನ ಕೆಲಸ. ಆದರೆ ಯುವಕರ ಕಣ್ಣ ಮುಂದೆ ಸಶಸ್ತ್ರ ಕಾಂತ್ರಿಯ ಕನಸಿತ್ತಲ್ಲ? ಕಾಲ್ನಡಿಗೆಯಲ್ಲಿ ಸಾಗಲು ಅಷ್ಟು ಪ್ರೇರಣೆ ಸಾಕಾಗಿತ್ತು.
ಪರಿಪೂರ್ಣ ಯೋಜನೆ
ಹಾಗಂತ ಅದು ನೇರವಾಗಿ ಎದ್ದು ಹೊರಟುಬಿಡುವಂತಹ ಸೀದಾಸಾದ ಹಾದಿಯಾಗಿರಲಿಲ್ಲ. ಅದಕ್ಕೆ ಕರಾರುವಕ್ಕಾದ ಪ್ಲಾನ್ ಮಾಡಬೇಕಾಗಿತ್ತು. ಎಲ್ಲವೂ ರಹಸ್ಯವಾಗಿಯೇ ನಡೆಯಬೇಕಾಗಿತ್ತು.
ಮೊದಲಿಗೆ ಅವರು ನಡಿಗೆ ಆರಂಭಿಸಿದ್ದು ಕೊಂಟಾಗೆ. ಅದು ಬಸ್ತಾರ್ ನ ಈಗಿನ ಸುಕ್ಮಾ ಜಿಲ್ಲೆಯಲ್ಲಿದೆ. ಕೊಂಟಾಗೆ ತೆರಳಬೇಕಾದರೆ ಬಸಗುಡಾ ಮತ್ತು ಜಗರಗೊಂಡಾದ ಕಾನನದ ನಡುವಿನಿಂದ ಸಾಗಬೇಕು. ಅದು ಆಗಿನ ಪಿಡಬ್ಲ್ಯುಜಿಯ ಭದ್ರಕೋಟೆಯಾಗಿತ್ತು. ಅಲ್ಲಿಂದ ಮುಂದೆ ಆಂಧ್ರ ಪ್ರದೇಶದ ಕರಾವಳಿ ಭಾಗವಾದ ವಿಶಾಖಪಟ್ಟಣಂ ಮತ್ತು ಶ್ರೀಕಾಕುಲಂ ಕಡೆಗೆ ನಡಿಗೆ ಬೆಳೆಸಬೇಕು.
“ಅಲ್ಲಿ ನಾವು ನಮ್ಮ ಉನ್ನತ ಮಟ್ಟದ ನಾಯಕರಿಂದ ಆದೇಶ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಳೆದಿದ್ದು ಭರೋಬ್ಬರಿ ಎರಡು ತಿಂಗಳು. ಪ್ರತಿ ದಿನ ನಮ್ಮ ಮುಂದಿನ ದಾಳಿ ಮತ್ತು ದಾಳಿಯ ನಂತರ ಮದ್ದುಗುಂಡುಗಳು ಮತ್ತು ಆಯುಧಗಳೊಂದಿಗೆ ಪಲಾಯನ ಮಾಡುವುದು ಹೇಗೆ ಮತ್ತು ಶಸ್ತ್ರಾಸ್ತ್ರಗಳನ್ನು ಲೂಟಿ ಹೊಡೆಯುವುದು ಹೇಗೆ ಎಂಬುದರ ಕಠಿಣ ತಾಲೀಮು ಮಾಡುವುದೇ ನಮ್ಮ ಕೆಲಸವಾಗಿತ್ತು” ಎಂದು ಇಂದು 41 ವರ್ಷ ವಯಸ್ಸು ದಾಟಿರುವ ಮುದಿಯಾ ವಿವರಿಸುತ್ತಾನೆ.
ಹಿಂದಿಯಲ್ಲಿ ಮಾತನಾಡುವ ಮುದಿಯಾನ ಉಚ್ಛಾರಣೆ ಆತನ ಮಾದಿಯಾ ಮಾತೃಭಾಷೆಯಲ್ಲಿತ್ತು. ತಿಳಿನೀಲಿ ಬಣ್ಣದ ಸಾದಾ ಶರ್ಟ್ ಮತ್ತು ಕಡುನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದ ಈತ ತನ್ನ ವಯಸ್ಸಿಗಿಂತ ಹೆಚ್ಚು ಮುದಿಯನಾಗಿ ಕಾಣುತ್ತಿದ್ದ.
ಅವರು ಕೋರಾಪುಟ್ ಗುರಿಯನ್ನು ತುಲುಪಲು ಇನ್ನೂ ಸಾಕಷ್ಟು ತಿಂಗಳುಗಳು ಬೇಕಾಗಿತ್ತು. ಸಾಗುವ ಹಾದಿಯ ಉದ್ದಕ್ಕೂ ತಾಲೀಮನ್ನು ತಪ್ಪಿಸುವಂತಿರಲಿಲ್ಲ. ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತ ಸ್ಥಳೀಯ ಬುಡಕಟ್ಟು ಜನರೊಂದಿಗೆ ಮಾತುಕತೆ ನಡೆಸುತ್ತ ಮುಂದೆ ಮುಂದೆ ಸಾಗಬೇಕಾಗಿತ್ತು.
“ಅಂತಹುದೊಂದು ನಡಿಗೆಗೆ, ಕಾರ್ಯಾಚರಣೆಗೆ ಬಹಳ ತಾಳ್ಮೆ ಬೇಕಾಗಿತ್ತು” ಎನ್ನುತ್ತಾನೆ ಈತ.
ಶ್ರೀಕಾಕುಲಂನಲ್ಲಿ ಆಗಲೇ ಇತರ ತಂಡಗಳೂ ಬಂದು ಸೇರಿದ್ದವು. ಆಗ ಅವರು ತೀರಾ ಹಳೆಯದಾದ ವಾಹನಗಳನ್ನು ತಂದಿದ್ದರು. ಒಂದು ಲಾರಿ, ಒಂದು ಕಮಾಂಡರ್ ಜೀಪು, ಎರಡು 307 ಟೆಂಪೋ ಮೆಟಾಡರ್ ಮತ್ತು ಕೆಲವು ಬೈಕ್ ಗಳು ಅಲ್ಲಿ ಜಮಾಯಿಸಿದ್ದವು.
ಅಂದು ಕಾಮ್ರೆಡ್ ಗಳ ಮಧ್ಯೆ ‘ಗೋಪಿ’ ಎಂದೇ ಕರೆಸಿಕೊಳ್ಳುತ್ತಿದ್ದ ಮುದಿಯಾ ಶ್ರೀಕಾಕುಲಂನಿಂದ ತನ್ನ ಟೀಮ್ ನೊಂದಿಗೆ ಜೀಪ್ ಏರಿ ಕೋರಾಪುಟ್ ಗೆ ಪ್ರಯಾಣ ಬೆಳೆಸಿದ. ಜೀಪಿನಲ್ಲಿದ್ದ ಅಷ್ಟೂ ಮಂದಿ ಸಾದಾಸೀದಾ ನಾಗರಿಕರಂತೆ ಡ್ರೆಸ್ ಹಾಕಿದ್ದರು. ಆದರೆ ಅವರ ಜೀಪಿನ ತುಂಬಾ ಆಯುಧಗಳು ತುಂಬಿದ್ದವು.
ಮಹಾ ದುಸ್ಸಾಹಸಕ್ಕೆ ಸಿದ್ಧತೆ
ಆ ಹೊತ್ತಿಗೆ ಅವರಿಗೆ ಮಾಡಬೇಕಾದ ಕಾರ್ಯ ಮತ್ತು ಪಲಾಯನಗೈಯಬೇಕಾದ ಮಾರ್ಗದ ಅರಿವಿತ್ತು. ಅವರ ಗುರಿ ಕೋರಾಪುಟ್ ಪೊಲೀಸ್ ಶಸ್ತ್ರಾಗಾರ. ಜಿಲ್ಲಾ ಪೊಲೀಸ್ ಶಸ್ತ್ರಕೋಠಿ ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡುವುದು ಅವರ ಮುಂದಿರುವ ಟಾಸ್ಕ್. ನಿಜಕ್ಕೂ ಅದೊಂದು ದುಸ್ಸಾಹಸವೇ ಆಗಿತ್ತು.
ಪಿಡ್ಲ್ಯುಜಿ ಮತ್ತು ಎಂಸಿಸಿ (ಮಾವೋವಾದಿ ಕಮ್ಯುನಿಸ್ಟ್ ಸೆಂಟರ್) ವಿಲೀನಗೊಂಡು ಹೊಚ್ಚಹೊಸ ಹಾಗೂ ಬಹುದೊಡ್ಡ ನಕ್ಸಲೇಟ್ ಸಿಪಿಐ (ಮಾವೋವಾದಿ) ಸಂಘಟನೆ ಅಸ್ತಿತ್ವಕ್ಕೆ ಬರುವ (ಸೆ.2004) ಕೆಲವೇ ತಿಂಗಳಿಗೆ ಮೊದಲು ಇಂತಹುದೊಂದು ಭಾರೀ ಸ್ಕೆಚ್ ರೂಪುಗೊಂಡಿತ್ತು. ಇದು ಸಶಸ್ತ್ರ ಚಳವಳಿಯ ಇತಿಹಾಸದಲ್ಲಿಯೇ ರಕ್ತಸಿಕ್ತ ಅಧ್ಯಾಯ. ಇಂತಹುದೊಂದು ದರೋಡೆಯಿಂದ ಗೆರಿಲ್ಲಾಗಳಿಗೆ ದೀರ್ಘಕಾಲದ ತನಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.
ಗೆರಿಲ್ಲಾ ಯುದ್ಧದಲ್ಲಿ ಅಪಾರ ಅನುಭವವನ್ನು ಹೊಂದಿದ್ದ ಮುದಿಯಾ ಬಿಜಾಪುರ ಪೊಲೀಸರ ಮುಂದೆ ಶಸ್ತ್ರ ತ್ಯಾಗ ಮಾಡಿದ್ದು 2020ರಲ್ಲಿ. ಆ ಹೊತ್ತಿಗೆ ಆತ ನಿಷೇಧಿತ ಸಂಘಟನೆಯಲ್ಲಿ ಬರೋಬ್ಬರಿ ಹತ್ತೊಂಭತ್ತು ವರ್ಷಗಳ ಕಾಲ ತನ್ನ ಜೀವವನ್ನೇ ಸವೆಸಿದ್ದ. ಇಂದು ಮುದಿಯಾ ಛತ್ತೀಸಗಢದ ನಕ್ಸಲ್ ನಿಗ್ರಹ ಪಡೆ ಜಿಲ್ಲಾ ಮೀಸಲು ಕಾವಲುಪಡೆ (ಡಿ.ಆರ್.ಜಿ)ಯಲ್ಲಿ ಕಾನ್-ಸ್ಟೇಬಲ್. ಈತನ ಕೆಲಸ: ಬಂಧಿತ ಅಥವಾ ಮೃತ ಬಂಡುಕೋರರಿಂದ ವಶಪಡಿಸಿಕೊಳ್ಳಲಾದ ಕರಪತ್ರಗಳು ಮತ್ತು ಸುತ್ತೋಲೆಗಳನ್ನು ಭಾಷಾಂತರ ಮಾಡುವಲ್ಲಿ ಪೊಲೀಸರಿಗೆ ಸಹಾಯಮಾಡುವುದು. ಜೊತೆಗೆ ಕೆಲವೊಮ್ಮೆ ವಿಚಾರಣೆಯ ಸಂದರ್ಭದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವುದು.
ಬಸ್ತರ್ ನಲ್ಲಿ ಸಶಸ್ತ್ರ ಚಳವಳಿಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರವಹಿಸಿದ ಶರಣಾದ ಕೆಡೆಟ್ ಗಳಲ್ಲಿ ಮುದಿಯಾ ಕೂಡ ಒಬ್ಬ.
ಏಳು ಮಂದಿ ಒಡಹುಟ್ಟಿದವರಲ್ಲಿ ಒಬ್ಬರಾದ ಮುದಿಯಾ ಮಾವೋವಾದಿ ವಿಭಾಗೀಯ ಸಮಿತಿ ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಸದಸ್ಯನಾಗಿದ್ದು ಬಹಳ ಚಿಕ್ಕ ವಯಸ್ಸಿನಲ್ಲಿ. ಈ ಮಾವೋವಾದಿ ಸಮಿತಿಯು ಬಹಳ ವರ್ಷಕಾಲ ಮಹಾರಾಷ್ಟ್ರ, ಛತ್ತೀಸಗಢ ಮತ್ತು ಒಡಿಶಾದ ಭಾಗಗಳನ್ನು ಆವರಿಸಿದ ಮಧ್ಯ ಭಾರತದ ‘ಕೆಂಪು ವಲಯ’ದಲ್ಲಿ ಪ್ರಭಾವ ಹೊಂದಿತ್ತು. ಆದರೆ ಈತನ ಕಾರ್ಯಾಚರಣೆಯ ವಲಯವು ಹೆಚ್ಚಾಗಿ ಪಶ್ಚಿಮ ಬಸ್ತರ್ ದಲ್ಲಿತ್ತು.
ನಾರಾಯಣಪುರದಲ್ಲಿ ಮಾವೋವಾದಿಗಳಿಗೆ ಆಶ್ರಯ ಒದಗಿಸಲು ಸ್ಥಾಪಿಸಲಾದ ಶಾಂತಿ ಕುಂಜ್ ಕಾಲನಿಯಲ್ಲಿ ಶರಣಾಗತ ಮಾವೋವಾದಿಗಳು.
ಬಸವರಾಜುವಿನ ಮಾಸ್ಟರ್ ಮೈಂಡ್
“ಪಕ್ಷಗಳ ವಿಲೀನದ ಆರಂಭಿಕ ಹಂತದಲ್ಲಿ ನಾವು ಪೊಲೀಸ್ ಠಾಣೆಗಳ ಮೇಲೆ ಹಲವು ಬಾರಿ ದಾಳಿ ಮಾಡಿದ್ದೆವು. ಆದರೆ ಕೋರಾಪುಟ್ ಶಸ್ತ್ರಕೋಠಿಯ ಲೂಟಿ ಮಾತ್ರ ಭಾರೀ ದೊಡ್ಡದು ಮತ್ತು ಅದನ್ನು ಅತ್ಯಂತ ಅಚ್ಚುಕಟ್ಟಾಗಿ ಪ್ಲಾನ್ ಮಾಡಲಾಗಿತ್ತು” ಎಂದು ಮುದಿಯಾ ವಿವರಿಸುತ್ತಾನೆ.
ಅಂದು ನಾನಾ ವಲಯಗಳಿಂದ ಬಂದ ಸುಮಾರು ಗೆರಿಲ್ಲಾಗಳು ನಿದ್ದೆಯ ಮಂಪರಿನಲ್ಲಿದ್ದ ಒಡಿಶಾ ಪಟ್ಟಣದ ಮೇಲೆ ಏಕಾಏಕಿ ಎರಗಿದ್ದರು. ಅದು 2004ರ ಫೆಬ್ರುವರಿ 4. ಗೆರಿಲ್ಲಾಗಳಲ್ಲಿ ಹೆಚ್ಚಿನವರು ನಾನಾ ಮಾರ್ಗಗಳಿಂದ ಬಂದು ಅಲ್ಲಿ ಒಗ್ಗೂಡಿದ್ದರು. ಮಹಾರಾಷ್ಟ್ರದಿಂದ ಛತ್ತೀಸಗಢವನ್ನು ಪ್ರತ್ಯೇಕಿಸುವ ಇಂದ್ರಾವತಿ ನದಿಯ ಪಶ್ಚಿಮದ ಭಾಗದಲ್ಲಿರುವ ಬಹುದೂರದ ಗಡ್ಚಿರೋಲಿ ಕಡೆಗಳಿಂದಲೂ ಬಂದಿದ್ದರು. ಈ ಕೆಚ್ಚೆದೆಯ ದಾಳಿಯ ತಿಂಗಳುಗಳಿಗೂ ಮೊದಲು ಅವರ ‘ಯಾನ’ ಆರಂಭವಾಗಿತ್ತು.
19 ವರ್ಷಗಳ ಕಾಲ ಸಶಸ್ತ್ರ ಗೆರಿಲ್ಲಾ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡು 2020ರಲ್ಲಿ ಬಿಜಾಪುರ ಪೊಲೀಸರ ಮುಂದೆ ಶಸ್ತ್ರ ತ್ಯಾಗ ಮಾಡಿ ಶರಣಾದ ಮಂಗಲ್ ಮುದಿಯಾ. ಈತ ಈಗ ಛತ್ತೀಸಗಢದ ನಕ್ಸಲ್ ನಿಗ್ರಹ ಪಡೆಯಲ್ಲಿ ಕಾನ್-ಸ್ಟೇಬಲ್ ಆಗಿ ಕೆಲಸ ಮಾಡುತ್ತಾನೆ
ಅಂತಹುದೊಂದು ದುಸ್ಸಾಹಸದ ಪೂರ್ತಿಗೆ ಪೂರ್ತಿ ಪ್ಲಾನ್ ಸಿದ್ಧಪಡಿಸಿದ್ದು ಬಸವರಾಜು ಯಾನೆ ನಂಬಳ ಕೇಶವ ರಾವ್. ಸಿಪಿಐ ಮಾವೋವಾದಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಸವರಾಜುವನ್ನು 2025ರ ಮೇ 21ರ ಮುಂಜಾನೆ ನಾರಾಯಣಪುರ ಜಿಲ್ಲೆಯ ಅಬುಜಾಮಧ್ ಪ್ರದೇಶದಲ್ಲಿ ನಡೆದ ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಬಸವರಾಜು ಆಗ ಪಿಡಬ್ಲ್ಯುಜಿಯ ಮಿಲಿಟರಿ ಘಟಕದ ನೇತೃತ್ವ ವಹಿಸಿದ್ದ.
ಅಂದು ನಡೆದ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಇನ್ನೊಬ್ಬ ವ್ಯಕ್ತಿ ಎಂದರೆ ವಲಯ ಸಮಿತಿಯ ಮಾಜಿ ಸದಸ್ಯ ಜಲಂಸಾಯ್ ಲಾಲ್ಸಾಯ್ ಸಡಮೆಕ್. ಈತ ಹತ್ತು ವರ್ಷಗಳಷ್ಟು ಹಿಂದೆಯೇ ಮಹಾರಾಷ್ಟ್ರ ಪೊಲೀಸರ ಮುಂದೆ ಶರಣಾಗಿದ್ದ. “ನಾನು ಅಂದು ಮಧ್ಯ ಗಡಚಿರೋಲಿಯಿಂದ ಹೊರಟ ಟೀಮ್ ನಲ್ಲಿದ್ದೆ” ಎಂದು ಈಗ 53 ವರ್ಷ ವಯಸ್ಸಾಗಿರುವ ಸಡಮೆಕ್ ಹೇಳುತ್ತಾನೆ.
ಪಕ್ಷದ ಮಿಲಿಟರಿ ಸದಸ್ಯನಾಗಿ ಬಂದೂಕನ್ನು ತನ್ನ ಹೆಗಲಿಗೆ ನೇತುಹಾಕಿಕೊಂಡು ದಟ್ಟಡವಿಯಲ್ಲಿ ಸಡಮೆಕ್ ಅಂಡಲೆದಿದ್ದು 20 ವರ್ಷಗಳಿಗೂ ಅಧಿಕ. ಈಗ ಈತ ವಿವಾಹಿತನಾಗಿದ್ದು ಗಡಚಿರೋಲಿ ಪೊಲೀಸರ ನಕ್ಸಲ್ ವಿಭಾಗದಲ್ಲಿ ಕೆಲಸಮಾಡುತ್ತಾನೆ. “ಅಂದು ನಡೆದಿದ್ದು ಅತ್ಯಂತ ಭಯಾನಕ ಕಾರ್ಯಾಚರಣೆ. ಸುದೀರ್ಘ ನಡಿಗೆಯ ಮಾತು ಹಾಗಿರಲಿ, ಭಾರೀ ಪ್ರಮಾಣದ ಮದ್ದುಗುಂಡುಗಳನ್ನು ಹೊತ್ತು ಸಾಗಬೇಕಾಗಿತ್ತು,” ಎಂದು ಸಡಮೆಕ್ ನೆನಪುಮಾಡಿಕೊಳ್ಳುತ್ತಾನೆ.
ಅಸಲಿಗೆ ಸಡಮೆಕ್ ಮುದಿಯಾಗಿಂತ ಬಹಳಷ್ಟು ಹಿರಿಯ. ಅವರಿಬ್ಬರೂ ಅನೇಕ ಸಂದರ್ಭಗಳಲ್ಲಿ ಜೊತೆ ಜೊತೆಯಾಗಿ ಕೆಲಸ ಮಾಡಿದ್ದರು. ಅವರಿಬ್ಬರೂ ಒಂದೇ ಆಧಾರದಲ್ಲಿ ತಮ್ಮ ತಮ್ಮ ರಾಜ್ಯದ ಪೊಲೀಸ್ ಪಡೆಗಳ ಮುಂದೆ ಶಸ್ತ್ರ ತ್ಯಾಗ ಮಾಡಿದ್ದರು. ಆ ಕಾರಣವಿಷ್ಟೇ; ಅವರಿಗೆ ತಮ್ಮ ಸಶಸ್ತ್ರ ಪ್ರತಿರೋಧದ ನಿಷ್ಪ್ರಯೋಜಕತೆ ಅರ್ಥವಾಗಿತ್ತು. ತೀವ್ರಗೊಳ್ಳುತ್ತಿರುವ ಭದ್ರತಾ ಕಾರ್ಯಾಚರಣೆಗಳ ಎದುರು ಗೆಲ್ಲುವ ಯಾವ ಸಾಧ್ಯತೆಯೂ ಅವರಿಗೆ ಕಾಣಿಸಿರಲಿಲ್ಲ.
ಬಿಜಾಪುರ-ಜಗರ್ಗೊಂಡ ರಸ್ತೆ ನಿರ್ಮಾಣದ ವೇಳೆ ನಡೆದ ಮಾವೋವಾದಿಗಳ ದಾಳಿಯಲ್ಲಿ ಮೃತಪಟ್ಟ ಯೋಧರ ಸ್ಮಾರಕ
ಪೊಲೀಸರ ಯಡವಟ್ಟು
ಇಡೀ ಕೋರಾಪುಟ್ ಕಾರ್ಯಾಚರಣೆಯಲ್ಲಿ ಮಾವೋವಾದಿಗಳು ಯಾವುದೇ ಪ್ರತಿರೋಧವನ್ನು ಎದುರಿಸಲಿಲ್ಲ ಎಂದು ಮುದಿಯಾ ನೆನಪುಮಾಡಿಕೊಳ್ಳುತ್ತಾನೆ. ಕೇವಲ ಒಂದು ಪೊಲೀಸ್ ಗಸ್ತು ತಂಡ ಕೆಲ ಅನುಮಾನದ ಮೇಲೆ ಕೋರಾಪುಟ್ ಗೆ ತೆರಳುತ್ತಿದ್ದ ವಾಹನವನ್ನು ದಾರಿ ಮಧ್ಯೆ ತಡೆದಿತ್ತು. ಅದರಲ್ಲಿ ಮುದಿಯಾ ಕೂಡ ಇದ್ದ. ಅಂದು ವಿಚಾರಣೆಯ ವೇಳೆ ಅವರ ತಂಡ 2000 ರೂಗಳಷ್ಟು ಅತ್ಯಲ್ಪ ಲಂಚವನ್ನು ನೀಡಿ ತಪ್ಪಿಸಿಕೊಂಡಿತ್ತು. ಅದಾಗಿ ಕೆಲವೇ ಗಂಟೆಗಳಲ್ಲಿ ಒಡಿಶಾದಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.
ಅಂದು ರಾತ್ರಿ ಒಂಭತ್ತು ಗಂಟೆಯ ಹೊತ್ತಿಗೆ ಎಲ್ಲವೂ ಕೈಮೀರಿ ಹೋಗಿತ್ತು. ನಕ್ಸಲ್ ಗೆರಿಲ್ಲಾ ಪಡೆಗಳು ನಡೆಸಿದ್ದು ಸತತ ಆರು ಗಂಟೆಗಳ ಕಾರ್ಯಾಚರಣೆ. ಆ ದಾಳಿಯಿಂದ ಒಡಿಶಾ ಮತ್ತು ಭಾರತದ ಬಹುಪಾಲು ಭದ್ರತಾ ವ್ಯವಸ್ಥೆ ದಂಗುಬಡಿದು ಹೋಗಿತ್ತು.
ಅಂದು ರಾತ್ರಿ ಪಟ್ಟಣವನ್ನು ತಲುಪಿದ ಮಾವೋವಾದಿ ಬಂಡುಕೋರರು ಎರಡು ಭಿನ್ನ ಗುಂಪುಗಳಾಗಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿ ತಕ್ಷಣ ಜಾಗ ಖಾಲಿ ಮಾಡುವಂತೆ ಬೆದರಿಕೆಯೊಡ್ಡಿದರು. ಆ ಬಳಿಕ ಇಡೀ ಪೊಲೀಸ್ ವ್ಯವಸ್ಥೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
“ನಾವು ಜಿಲ್ಲಾ ಶಸ್ತ್ರಕೋಠಿಯನ್ನು ತಲುಪಿದಾಗ ಅದನ್ನು ಕಾಯುತ್ತಿದ್ದವನು ಒಬ್ಬನೇ ಒಬ್ಬ ಸೆಂಟ್ರಿ. ಅಲ್ಲಿ ನಮಗೆ ಯಾವ ಪ್ರತಿರೋಧವೂ ಎದುರಾಗಲಿಲ್ಲ,” ಎಂದು ಮುದಿಯಾ ನೆನಪಿನ ಬುತ್ತಿ ಬಿಚ್ಚುತ್ತಾನೆ.
ಭಯಾನಕ ದಾಳಿ
ಸೆಂಟ್ರಿ ನಕುಲ್ ನಾಯಕ್ ತಕ್ಷಣ ತನ್ನ ಬಂದೂಕಿನಿಂದ ಗುಂಡು ಹಾರಿಸಿದನಾದರೂ ನಕ್ಸಲರ ದೊಡ್ಡ ಪಡೆಯ ಮುಂದೆ ಆತನ ಆಟ ನಡೆಯಲಿಲ್ಲ. ಅಂದಿನ ಸಂಘರ್ಷದಲ್ಲಿ ನಾಗರಿಕರೂ ಸೇರಿದಂತೆ ಹನ್ನೊಂದು ಮಂದಿ ಹತರಾಗಿದ್ದರು.
ಮಾವೋವಾದಿಗಳು ದಾಳಿ ಮಾಡುವುದಕ್ಕೆ ಕೆಲವೇ ನಿಮಿಷ ಮೊದಲು ಕೋರಾಪುಟ್ ಎಸ್.ಪಿ. ಅರುಣ್ ಬೋಥ್ರಾ ಅವರು ತಮ್ಮ ಕಚೇರಿಯನ್ನು ತೊರೆದಿದ್ದರಿಂದ ಅದೃಷ್ಟವಶಾತ್ ಪಾರಾಗಿದ್ದರು. ಅವರು ಮರಳಿ ತಮ್ಮ ಕಚೇರಿಗೆ ಧಾವಿಸಿದಾಗ ಬಂಡುಕೋರರು ಪೊಲೀಸರ ಬಳಿಯಿದ್ದ ಬಂದೂಕುಗಳನ್ನು ಲೂಟಿಮಾಡುತ್ತಿದ್ದರು. ಆದರೆ ಹಾಗೆ ಬಂದ ಅವರನ್ನು ನಾಗರಿಕ ಎಂದು ತಪ್ಪು ತಿಳಿದ ನಕ್ಸಲರು ತಕ್ಷಣ ಕಚೇರಿಯನ್ನು ತೊರೆಯುವಂತೆ ಹೇಳಿದರು.
ಮುಂದೆ ಎಸ್.ಪಿ. ಅರುಣ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಒಂದು ಮನೆಯ ಮೇಲೆ ಏರಿ ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಲು ಶುರುಮಾಡಿದರು. ಆದರೆ ಆ ಪ್ರತಿರೋಧ ಯಾವ ಫಲವನ್ನೂ ನೀಡಲಿಲ್ಲ ಎಂದು ವರದಿಯಾಗಿತ್ತು.
ಒಡಿಶಾ ಪಟ್ಟಣದ ಈ ಶಸ್ತ್ರಕೋಠಿಯನ್ನು ಲೂಟಿ ಮಾಡಿ ಹಿಂದಿರುಗುವಾಗ ಮಾವೋವಾದಿಗಳು ಕಕರಿಗುಮಾ, ಲಕ್ಷ್ಮಿಪುರ ಮತ್ತು ನಾರಾಯಣಪಟ್ನಾ ಪೊಲೀಸ್ ಠಾಣೆಗಳಿಗೂ ನುಗ್ಗಿ ಲೂಟಿ ಮಾಡಿದ್ದರು.
ನಂತರ ಪಿಡಬ್ಲ್ಯುಜಿ ಒಂದು ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಅದರಲ್ಲಿ, ಅಂದಿನ ದಾಳಿಯಲ್ಲಿ ಲೂಟಿಮಾಡಿದ ವಸ್ತುಗಳಲ್ಲಿ 50 ಕೋಟಿ ರೂ.ಗಳಷ್ಟು ಮೌಲ್ಯದ ಆಯುಧಗಳು, ಗ್ರನೇಡ್ ಗಳು, ಮದ್ದುಗುಂಡುಗಳು ಸೇರಿದ್ದವು ಎಂದು ತಿಳಿಸಲಾಗಿತ್ತು.
ಸದ್ಯ ಛತ್ತೀಸಗಢ ಪೊಲೀಸ್ ಕಾನ್-ಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ಒಂದು ಕಾಲದ ಮಾವೋವಾದಿ ಬಂಡುಕೋರ ರಾಮ್ ಸಿಂಗ್ ಕೋರಮ್ ನಾರಾಯಣಪುರ ಕಾಲನಿಯಲ್ಲಿ ತನ್ನ ಪತ್ನಿ ಲಚ್ಚಾದೇವಿ ಕೋರಮ್ ಜೊತೆ.
ಭರ್ಜರಿ ಬೇಟೆ
ಮುದಿಯಾ ಹೇಳುವುದೇನೆಂದರೆ, ಮಾವೋವಾದಿಗಳು ಅಂದು ಸುಮಾರು 500 ನಾನಾ ರೀತಿಯ ಶಸ್ತ್ರಾಸ್ತ್ರಗಳನ್ನು (303 ರೈಫಲ್ ಗಳು, ಎಲ್ಎಂಜಿ, ಎಸ್ಎಲ್ಆರ್, ಮೊರ್ಟರ್, ಸ್ಟೆನ್ ಗನ್, ರಿವಾಲ್ವರ್ ಮತ್ತು ಪಿಸ್ತೂಲ್ ಗಳು) ಮತ್ತು 30 ಸಾವಿರ ಬುಲೆಟ್ ಗಳು ಹಾಗೂ ಅನೇಕ ಸಂಖ್ಯೆಯ ಮೊರ್ಟರ್ ಶೆಲ್ ಗಳು ಮತ್ತು ಗ್ರನೇಡ್ ಗಳನ್ನು ಲೂಟಿ ಮಾಡಿದ್ದರು.
“ಈ ಕಾರ್ಯಾಚರಣೆ ಮುಗಿದ ಬಳಿಕ ಬಸ್ತರ್ ಪಕ್ಕದ ಅರಣ್ಯದಲ್ಲಿ ಮೊದಲೇ ನಿರ್ಧರಿಸಲಾದ ಸ್ಥಳದಲ್ಲಿ ಮದ್ದುಗುಂಡುಗಳು ಮತ್ತು ಆಯುಧಗಳನ್ನು ಹೂತುಹಾಕಿದೆವು. ಅದಾದ ನಂತರ ನಮ್ಮ ಎಲ್ಲ ವಾಹನಗಳನ್ನು ಸುಟ್ಟು ಬೂದಿಮಾಡಿದೆವು” ಎಂದು ಮುದಿಯಾ ಮೈನವಿರೇಳಿಸುವ ಘಟನೆಯನ್ನು ವಿವರಿಸುತ್ತಾ ಹೋಗುತ್ತಾರೆ.
“ಅಂದಿನ ಕಾರ್ಯಾಚರಣೆಯ ಬಲು ಕಷ್ಟದ ಕೆಲಸವೇನಿದ್ದರೂ ನಮ್ಮ ನೆಲೆಗಳಿಗೆ ಅಷ್ಟು ಭಾರದ ಮದ್ದುಗುಂಡುಗಳನ್ನು ಹೊತ್ತು ಸಾಗುವುದು. ನೂರಾರು ಕಿ.ಮೀ.ಗಳಷ್ಟು ದೂರ ದಿನಗಟ್ಟಳೆ ನಡೆದು ಶಸ್ತ್ರಾಸ್ತ್ರಗಳನ್ನು ಅತ್ಯಂತ ರಹಸ್ಯವಾಗಿ ಹೊತ್ತು ತರುವುದು ಸುಲಭದ ಕೆಲಸವಾಗಿರಲಿಲ್ಲ,” ಎಂದು ಆತ ಹೇಳುತ್ತಾನೆ.
ಗಡಚಿರೋಲಿಯಲ್ಲಿ ಶಸ್ತ್ರಾಸ್ತ್ರ ಹೂತುಹಾಕಿದ ಸ್ಥಳಕ್ಕೆ ಎರಡು ಬಾರಿ ತನ್ನ ಸಹವರ್ತಿಗಳ ಜೊತೆ ಹೋಗಿ ತಮ್ಮ ಪಾಲಿನ ಆಯುಧಗಳು ಮತ್ತು ಮದ್ದುಗುಂಡುಗಳನ್ನು ಹೊತ್ತು ತಂದಿರುವುದಾಗಿ ಹೇಳುವ ಸಡಮೆಕ್, ನಮ್ಮ ಶಸ್ತ್ರಾಸ್ತ್ರಗಳನ್ನು ಪಡೆಯಲು ಒಂದು ವರ್ಷಕ್ಕೂ ಅಧಿಕ ಕಾಲ ಕೆಲಸ ಮಾಡಬೇಕಾಯಿತು. ಜೊತೆಗೆ ಪ್ರತಿಯೊಂದು ಕೆಲಸವನ್ನೂ ಎಷ್ಟು ಕರಾರುವಕ್ಕಾಗಿ ಮತ್ತು ತಿಂಗಳುಗಳ ಸಹನೆಯೊಂದಿಗೆ ಮಾಡಲಾಯಿತು ಎಂದರೆ ಅದನ್ನು ಮರೆಯಲು ಸಾಧ್ಯವಿಲ್ಲ ಎನ್ನುತ್ತಾನೆ.
ಬಸವರಾಜು ಮತ್ತು ಆತನ ಖಾಸಗಿ ಪಡೆ ಅನೇಕ ಬಾರಿ ಕೋರಾಪುಟ್ ಗೆ ಪೂರ್ವಯೋಜಿತ ಭೇಟಿ ನೀಡಿತ್ತು. ದಾಳಿ ಹೇಗೆ ಮಾಡಬೇಕು, ಪಲಾಯನ ಹೇಗೆ ಮಾಡಬೇಕು, ಪರಾರಿಯಾಗುವ ಮಾರ್ಗಗಳು ಮತ್ತು ಎದುರಾಗಬಹುದಾದ ಅಪಾಯಗಳು ಯಾವುದೆಲ್ಲ ಎಂಬುದನ್ನು ನಿಖರವಾಗಿ ಪ್ಲಾನ್ ಮಾಡಲಾಗಿತ್ತು. ಆ ಒಟ್ಟಾರೆ ಕಾರ್ಯಾಚರಣೆ ಇಡೀ ಚಳವಳಿಗೆ ದೊಡ್ಡ ಪ್ರೇರಣೆಯಾಯಿತು ಎಂದು ಮುದಿಯಾ ಹೇಳಲು ಮರೆಯುವುದಿಲ್ಲ.
ಕೋರಾಪುಟ್ ಆಪರೇಷನ್ ಬಳಿಕ ಪ್ರತಿಯೊಬ್ಬರಿಗೂ ಶಸ್ತ್ರಾಸ್ತ್ರ ಬಳಕೆಯ ಬಗ್ಗೆ ಕಠಿಣ ತರಬೇತಿ ನೀಡಲಾಯಿತು. ಅದು ಮಾವೋವಾದಿಗಳ ಮಿಲಿಟರಿ ಘಟಕವನ್ನು ಬಲಿಷ್ಠಗೊಳಿಸಿತು. ಅದರಿಂದಾಗಿ ದಂಡಕಾರಣ್ಯದಾದ್ಯಂತ ಪೊಲೀಸರ ವಿರುದ್ಧ ದಂಗುಬಡಿಸುವಂತಹ ದಾಳಿಗಳನ್ನು ನಡೆಸಲು ಸಾಧ್ಯವಾಯಿತು ಎಂದು ಆತ ಹೇಳುತ್ತಾನೆ.
ಸ್ಥಳೀಯರಲ್ಲಿ ಹೆಚ್ಚಿದ ನಂಬಿಕೆ
ಬಂಡುಕೋರರ ಕೈಗೆ ಯಾವತ್ತು ಭರ್ಜರಿ ಬಂದೂಕುಗಳು ಬಂದು ಸೇರಿದವೋ ಅಂದಿನಿಂದ ಸ್ಥಳೀಯರ ಬೆಂಬಲವೂ ಸಿಗತೊಡಗಿತು. ಒಂದು ಭಯದಿಂದ ಮತ್ತು ಇನ್ನೊಂದು ತಮಗೆ ಅಂತಿಮವಾಗಿ ‘ನ್ಯಾಯ’ ಸಿಗುತ್ತದೆ ಎಂಬ ನಂಬಿಕೆಯಿಂದ. ಇದರಿಂದ ಅಲ್ಲಿನ ಬುಡಕಟ್ಟು ಜನಾಂಗದವರು ತಮ್ಮ ‘ಜಲ-ಜಂಗಲಿ-ಜಮೀನ್’ನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಬಲವಾಯಿತು.
ಇದೇ ರೀತಿ ನಡೆದ ಇನ್ನೊಂದು ದಾಳಿ ಎಂದರೆ ಒಡಿಶಾದ ನಯಾಗಢ ಜಿಲ್ಲೆಯ ಪೊಲೀಸ್ ಠಾಣೆಗಳು ಮತ್ತು ಶಸ್ತ್ರಾಸ್ತ್ರಕೋಠಿಯ ಮೇಲೆ. ಅದು ನಡೆದಿದ್ದು 2008ರ ಫೆಬ್ರುವರಿ ತಿಂಗಳಲ್ಲಿ. ಮಾವೋವಾದಿಗಳು ಅಂದು ಇಡೀ ಪಟ್ಟಣವನ್ನು ಅಕ್ಷರಶಃ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಅಂದಿನ ದಾಳಿ 13 ಪೊಲೀಸರು ಮತ್ತು ಒಬ್ಬ ನಾಗರಿಕನ ಹತ್ಯೆಗೆ ಕಾರಣವಾಗಿತ್ತು.
ಅದು ಕೋರಾಪುಟ್ ದಾಳಿಯ ಪಡಿಯಚ್ಚಿನಂತಿತ್ತು. ಬಹಳ ದೊಡ್ಡ ಪ್ರಮಾಣದ ಆಯುಧಗಳು ಮತ್ತು ಮದ್ದುಗುಂಡುಗಳನ್ನು ನಕ್ಸಲರು ಲೂಟಿಮಾಡಿದ್ದರು. ಆ ದಾಳಿಯನ್ನು ಸ್ಥಳೀಯ ಮಾವೋವಾದಿ ಕಾರ್ಯಕರ್ತರೇ ರೂಪಿಸಿದ್ದರು ಎಂಬುದು ಇನ್ನೊಂದು ವಿಶೇಷ. ಈ ದಾಳಿಗಳೆಲ್ಲವೂ ಮಾವೋವಾದಿಗಳು ದೊಡ್ಡ ಮಟ್ಟಿನ ತಾಕತ್ತನ್ನು ನೀಡಿತ್ತು. ಆ ಬಳಿಕ ಪೊಲೀಸರ ಆಯುಧಗಳು ಮತ್ತು ಮದ್ದುಗುಂಡುಗಳನ್ನು ದೋಚುವ ಹಲವಾರು ಘಟನೆಗಳು ಸಂಭವಿಸಿದವು.
ಸಲ್ವಾ ಜುಡುಂ ಪರಿಣಾಮ
ಜನ ಈಗ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಬಸ್ತರ್ ನ ಬುಡಕಟ್ಟು ಜನಾಂಗಗಳು ವಾಸಿಸುವ ಹೃದಯ ಭಾಗದಲ್ಲಿ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು ಮತ್ತು ಬಕೆಟ್ ಗಳು ಸ್ಥಾನ ಪಡೆಯುತ್ತಿವೆ.
“ಅನೇಕ ದಾಳಿಗಳಲ್ಲಿ ಮತ್ತು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆನಾರೂ ನಾನು ಹಿಂದೆಯೂ ಯಾರನ್ನೂ ಕೊಲ್ಲಲಿಲ್ಲ, ಆ ಬಳಿಕವೂ ಕೂಡ,” ಎಂದು ಹೇಳುತ್ತಾನೆ ಮುದಿಯಾ. ಅದು ನಿಷೇಧಿತ ಪಕ್ಷಕ್ಕೆ ಸಹಿಸಲಾರದ ಸಂಗತಿಯಾಗಿತ್ತು. ಈ ಕಾರಣಕ್ಕೆ ಆತನ ವಿರುದ್ಧ ಆಂತರಿಕ ತನಿಖೆಗಳೂ ನಡೆದಿದ್ದವು.
“ಸಲ್ವಾ ಜುಡುಂ ಅವಧಿಯಲ್ಲಿ (2005-2015) ನಾನು ಅನೇಕ ರಕ್ತಸಿಕ್ತ ಕದನಗಳನ್ನು ನೋಡಿದೆ” ಎಂದು ಆತ ಹೇಳುತ್ತಾನೆ. ಈ ಅವಧಿಯಲ್ಲಿ ಮಾವೋವಾದಿಗಳಿಗೆ ಸ್ಥಳೀಯರಿಂದ ಅಭೂತಪೂರ್ವವಾದ ಬೆಂಬಲ ದೊರೆತಿತ್ತು. ಸಾಕಷ್ಟು ಮಂದಿ ಕಾರ್ಯಕರ್ತರು ಸಂಘಟನೆಯನ್ನು ಸೇರಿಕೊಂಡರು ಎಂಬುದನ್ನು ಆತ ತಿಳಿಸುತ್ತಾನೆ.
“ಆದರೆ ವರ್ಷಗಳು ಕಳೆಯುತ್ತ ಹೋದ ಹಾಗೆ ನನಗೆ ಭ್ರಮನಿರಸನವಾಯಿತು. ಎಲ್ಲಕ್ಕಿಂತ ವಿಶೇಷವಾಗಿ ಮೊಬೈಲ್ ಫೋನ್ ಗಳು ಪ್ರತಿ ಮೂಲೆ ಮೂಲೆಯನ್ನೂ ತಲುಪಲು ಆರಂಭಿಸಿದಾಗ. ಹೊರಪ್ರಪಂಚದಲ್ಲಿ ಬಹಳ ದೊಡ್ಡಮಟ್ಟಿನ ಬದಲಾವಣೆ ಕಾಣುತ್ತಿದೆ, ವಿಭಿನ್ನ ಜಗತ್ತು ತೆರೆದುಕೊಳ್ಳುತ್ತಿದೆ ಎಂಬುದರ ಅರಿವಾಯಿತು,” ಎಂದು ಮುದಿಯಾ ಪರಿವರ್ತನೆಯ ದಿನಗಳ ಕಡೆಗೆ ಬೊಟ್ಟು ಮಾಡುತ್ತಾನೆ.
“ಅಂದು ನಾವು ಎತ್ತಿದ್ದ ಸಮಸ್ಯೆಗಳು ಹೆಚ್ಚು ವಾಸ್ತವಕ್ಕೆ ಹತ್ತಿರವಾಗಿದ್ದವು. ಆದರೆ ನಾವು ಹಿಡಿದ ದಾರಿ, ಕಂಡುಕೊಂಡ ವಿಧಾನ ಶುದ್ಧ ತಪ್ಪಾಗಿದ್ದವು,” ಎನ್ನುವ ಮುದಿಯಾ ಮಾತಿನಲ್ಲಿ ಇಡೀ ಮಾವೋವಾದಿ ಚಳವಳಿಯ ಸತ್ವ ಅಡಗಿದೆ.