
ಕೇವಲ 5 ರೂಪಾಯಿಗೆ ಸಿಗುತ್ತೆ ಫುಲ್ ಮೀಲ್ಸ್! ವಿವಿಧ ರಾಜ್ಯಗಳ ಜನಪ್ರಿಯ ಭೋಜನ ಯೋಜನೆಗಳು
ಭಾರತದ ವಿವಿಧ ರಾಜ್ಯ ಸರ್ಕಾರಗಳು ಬಡವರಿಗಾಗಿ ಜಾರಿಗೆ ತಂದಿರುವ ಸಬ್ಸಿಡಿ ದರದ ಊಟದ ಯೋಜನೆಗಳ ಬಗ್ಗೆ ತಿಳಿಯಿರಿ. ಕರ್ನಾಟಕದ ಇಂದಿರಾ ಕ್ಯಾಂಟೀನ್ನಿಂದ ತಮಿಳುನಾಡಿನ ಅಮ್ಮ ಉಣವಗಂವರೆಗೆ ಸಂಪೂರ್ಣ ವಿವರ.
ಕರ್ನಾಟಕದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ದೆಹಲಿಯ ಬಿಜೆಪಿ ಸರ್ಕಾರ ಮಹತ್ವಾಕಾಂಕ್ಷೆಯ 'ಅಟಲ್ ಕ್ಯಾಂಟೀನ್' ಯೋಜನೆಯನ್ನು ಜಾರಿಗೆ ತಂದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಸ್ಮರಣಾರ್ಥವಾಗಿ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಗುರುವಾರ ನಗರದ ವಿವಿಧೆಡೆ 100 ಕ್ಯಾಂಟೀನ್ಗಳ ಪೈಕಿ ಮೊದಲ ಹಂತದಲ್ಲಿ 45 ಕ್ಯಾಂಟೀನ್ಗಳನ್ನು ಉದ್ಘಾಟಿಸಿದರು. ಇನ್ನು ಯಾವೊಬ್ಬ ನಾಗರಿಕನೂ ಹಸಿವಿನಿಂದ ಮಲಗಬಾರದು ಎಂಬುದೇ ಈ ಯೋಜನೆಯ ಗುರಿ. ಇದು ಕೇವಲ ಆಹಾರ ವಿತರಣೆಯಲ್ಲ, ಬಡವರಿಗೆ ಗೌರವಯುತ ಜೀವನ ನೀಡುವ ಪ್ರಯತ್ನ.
ಇನ್ನು ಈ ಭೋಜನ ಯೋಜನೆಗಳು ಕರ್ನಾಟಕ, ದೆಹಲಿಯಲ್ಲಿ ಮಾತ್ರವಲ್ಲದೇ ದೇಶದ ಇತರೆ ರಾಜ್ಯಗಳಲ್ಲೂ ಈ ಜನಪ್ರಿಯ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯನ್ನು ಮೊದಲಿಗೆ ಜಾರಿಗೆ ತಂದಿದ್ದು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ. ವಿವಿಧ ರಾಜ್ಯಗಳ ಭೋಜನ ಯೋಜನೆಗಳ ಪಟ್ಟಿ ಇಲ್ಲಿವೆ.
ವಿವಿಧ ರಾಜ್ಯಗಳ ₹5 ಭೋಜನ ಯೋಜನೆಗಳು
- ಕರ್ನಾಟಕ (ಇಂದಿರಾ ಕ್ಯಾಂಟೀನ್): ನಗರ ಪ್ರದೇಶದ ಬಡವರಿಗಾಗಿ ಜಾರಿಯಾಗಿರುವ ಈ ಯೋಜನೆಯಲ್ಲಿ ಬೆಳಿಗ್ಗೆ ₹5 ಕ್ಕೆ ಉಪಹಾರ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ₹10 ಕ್ಕೆ ಊಟ ನೀಡಲಾಗುತ್ತದೆ. ಇತ್ತೀಚೆಗೆ ಸರ್ಕಾರ ಇದನ್ನು ರಾಜ್ಯಾದ್ಯಂತ ವಿಸ್ತರಿಸಿದೆ.
- ತಮಿಳುನಾಡು (ಅಮ್ಮ ಉಣವಗಂ): ಇದು ದೇಶದ ಮೊದಲ ಯಶಸ್ವಿ ಮಾದರಿಯಾಗಿದೆ. ಇಲ್ಲಿ ಇಡ್ಲಿ ಕೇವಲ ₹1 ಕ್ಕೆ ಲಭ್ಯವಿದ್ದರೆ, ವಿವಿಧ ಬಗೆಯ ಅನ್ನದ ಖಾದ್ಯಗಳನ್ನು (ಪೊಂಗಲ್, ಸಾಂಬಾರ್ ರೈಸ್) ₹5 ಕ್ಕೆ ನೀಡಲಾಗುತ್ತದೆ.
- ಮಹಾರಾಷ್ಟ್ರ (ಶಿವ ಭೋಜನ ಥಾಲಿ): ಮಹಾರಾಷ್ಟ್ರ ಸರ್ಕಾರದ ಈ ಯೋಜನೆಯಡಿ ಕೇವಲ ₹5 ಕ್ಕೆ ಪೌಷ್ಟಿಕಾಂಶಯುಕ್ತ ಥಾಲಿಯನ್ನು ಬಡವರಿಗೆ ಒದಗಿಸಲಾಗುತ್ತಿದೆ.
- ಹರಿಯಾಣ (ಅಟಲ್ ಕಿಸಾನ್ ಮಜ್ದೂರ್ ಕ್ಯಾಂಟೀನ್): ಮಾರುಕಟ್ಟೆ ಸಮಿತಿಗಳಲ್ಲಿ ರೈತರು ಮತ್ತು ಕಾರ್ಮಿಕರಿಗಾಗಿ ₹5 ಸಬ್ಸಿಡಿ ದರದಲ್ಲಿ ಊಟ ಒದಗಿಸಲಾಗುತ್ತಿದೆ (ಹಿಂದೆ ಇದು ₹10 ಇತ್ತು).
- ಗುಜರಾತ್ (ಶ್ರಮಿಕ್ ಅನ್ನಪೂರ್ಣ ಯೋಜನೆ): ನೊಂದಾಯಿತ ನಿರ್ಮಾಣ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಪೌಷ್ಟಿಕ ಆಹಾರವನ್ನು ಕೇವಲ ₹5 ಕ್ಕೆ ನೀಡುವ ವಿಶಿಷ್ಟ ಯೋಜನೆ ಇದಾಗಿದೆ.
- ಆಂಧ್ರಪ್ರದೇಶ (ಅಣ್ಣಾ ಕ್ಯಾಂಟೀನ್): ಇತ್ತೀಚೆಗೆ ಪುನರಾರಂಭಗೊಂಡ ಈ ಯೋಜನೆಯಡಿ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಅಂದರೆ ₹5 ಕ್ಕೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ.
- ಛತ್ತೀಸ್ಗಢ (ಶಹೀದ್ ವೀರ್ ನಾರಾಯಣ್ ಸಿಂಗ್ ಭೋಜ್ ಯೋಜನೆ): ಇಲ್ಲಿನ ಕಾರ್ಮಿಕರಿಗೆ ಸಬ್ಸಿಡಿ ದರದಲ್ಲಿ ಕೇವಲ ₹5 ಕ್ಕೆ ಬಿಸಿ ಮತ್ತು ಪೌಷ್ಟಿಕ ಊಟ ನೀಡಲಾಗುತ್ತದೆ
Next Story

