
ಅಮೆರಿಕದಿಂದ ಗಡಿಪಾರಾದ ಅನ್ಮೋಲ್ ಬಿಷ್ಣೋಯಿ 11 ದಿನಗಳ ಕಾಲ ಎನ್ಐಎ ವಶಕ್ಕೆ
ಅನ್ಮೋಲ್ ಬಿಷ್ಣೋಯಿಯನ್ನು ಕಸ್ಟಡಿಗೆ ಪಡೆಯುವ ಅಗತ್ಯತೆಯನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಂಡ ಎನ್ಐಎ ಅಧಿಕಾರಿಗಳು, ಈತನ ವಿಚಾರಣೆಯು ಬಿಷ್ಣೋಯಿ ಗ್ಯಾಂಗ್ನ ಅಪರಾಧ ಜಾಲವನ್ನು ಭೇದಿಸಲು ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹೋದರ ಮತ್ತು ಬಾಬಾ ಸಿದ್ದಿಕಿ ಹತ್ಯೆ ಹಾಗೂ ಸಲ್ಮಾನ್ ಖಾನ್ ಮನೆ ಎದುರಿನ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅನ್ಮೋಲ್ ಬಿಷ್ಣೋಯಿಯನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆತನನ್ನು ಔಪಚಾರಿಕವಾಗಿ ಬಂಧಿಸಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಿತು. ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರು ಆರೋಪಿಯನ್ನು 11 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ವಿಚಾರಣೆಯನ್ನು 'ಇನ್-ಕ್ಯಾಮೆರಾ' (ರಹಸ್ಯವಾಗಿ) ನಡೆಸಲಾಯಿತು. ಅಮೆರಿಕದಿಂದ ಗಡೀಪಾರು ಮಾಡಲ್ಪಟ್ಟ ಸುಮಾರು 200 ಭಾರತೀಯ ಪ್ರಜೆಗಳ ತಂಡದಲ್ಲಿ ಅನ್ಮೋಲ್ ಬಿಷ್ಣೋಯಿ ಕೂಡ ಒಬ್ಬರಾಗಿದ್ದು, ಪಂಜಾಬ್ ಮತ್ತು ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಈತ ಕಳೆದ ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಎನ್ಐಎ ಕಸ್ಟಡಿಗೆ ಕೋರಿಕೆ ಏಕೆ?
ಅನ್ಮೋಲ್ ಬಿಷ್ಣೋಯಿಯನ್ನು ಕಸ್ಟಡಿಗೆ ಪಡೆಯುವ ಅಗತ್ಯತೆಯನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಂಡ ಎನ್ಐಎ ಅಧಿಕಾರಿಗಳು, ಈತನ ವಿಚಾರಣೆಯು ಬಿಷ್ಣೋಯಿ ಗ್ಯಾಂಗ್ನ ಅಪರಾಧ ಜಾಲವನ್ನು ಭೇದಿಸಲು ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಮುಖ್ಯವಾಗಿ, ಈ ಅಪರಾಧ ಕೃತ್ಯಗಳಿಗೆ ಹಣಕಾಸು ಎಲ್ಲಿಂದ ಹರಿದು ಬರುತ್ತಿದೆ, ಸಿಂಡಿಕೇಟ್ನ ಇತರ ಸದಸ್ಯರು ಯಾರು ಮತ್ತು ಕಾರ್ಯಾಚರಣೆಗಳು ಹೇಗೆ ನಡೆಯುತ್ತವೆ ಎಂಬುದನ್ನು ಪತ್ತೆಹಚ್ಚಲು ಕಸ್ಟಡಿ ಅವಶ್ಯಕ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಅನ್ಮೋಲ್ ಬಾಯ್ಬಿಡುವ ಮಾಹಿತಿಯು ಗ್ಯಾಂಗ್ಗೆ ಸಂಬಂಧಿಸಿದ ಇನ್ನಷ್ಟು ಆರೋಪಿಗಳನ್ನು ಬಂಧಿಸಲು ನೆರವಾಗಲಿದೆ ಎಂದು ಎನ್ಐಎ ವಾದಿಸಿದೆ.
ಎನ್ಐಎ ಪ್ರಕಾರ, ಅನ್ಮೋಲ್ ಬಿಷ್ಣೋಯಿ ವಿರುದ್ಧ ಸುಮಾರು 35 ಕೊಲೆ ಪ್ರಕರಣಗಳು ಮತ್ತು 20ಕ್ಕೂ ಹೆಚ್ಚು ಅಪಹರಣ, ಬೆದರಿಕೆ ಹಾಗೂ ಹಿಂಸಾಚಾರದ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಈತ ಎರಡು ಭಾರತೀಯ ಪಾಸ್ಪೋರ್ಟ್ಗಳನ್ನು ಹೊಂದಿದ್ದು, ಅದರಲ್ಲಿ ಒಂದು ನಕಲಿ ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಮುಖ ಪ್ರಕರಣಗಳಲ್ಲಿ ಭಾಗಿ
ಅನ್ಮೋಲ್ ಬಿಷ್ಣೋಯಿ ಹೆಸರು ದೇಶದ ಹಲವು ಹೈ-ಪ್ರೊಫೈಲ್ ಅಪರಾಧ ಪ್ರಕರಣಗಳಲ್ಲಿ ಕೇಳಿಬಂದಿದೆ. 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ, 2024ರಲ್ಲಿ ಎನ್ಸಿಪಿ ನಾಯಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ.
ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ವಿರುದ್ಧ ದ್ವೇಷ ಸಾಧಿಸುತ್ತಿರುವ ಬಿಷ್ಣೋಯಿ ಗ್ಯಾಂಗ್, ಸಲ್ಮಾನ್ ಖಾನ್ಗೆ ಆಪ್ತರಾಗಿದ್ದ ಕಾರಣಕ್ಕೇ ಬಾಬಾ ಸಿದ್ದಿಕಿ ಅವರನ್ನು ಹತ್ಯೆಗೈದಿದೆ ಎಂದು ಆರೋಪಿಸಲಾಗಿದೆ. ಸಿಧು ಮೂಸೆವಾಲಾ ಹತ್ಯೆಯ ನಂತರ ಅನ್ಮೋಲ್ ನಕಲಿ ಪಾಸ್ಪೋರ್ಟ್ ಬಳಸಿ ಭಾರತದಿಂದ ಪರಾರಿಯಾಗಿದ್ದನು ಎಂದು ಶಂಕಿಸಲಾಗಿದೆ.
ಅಮೆರಿಕದಲ್ಲಿ ಬಂಧನ ಮತ್ತು ಗಡೀಪಾರು
ಸಿಧು ಮೂಸೆವಾಲಾ ಹತ್ಯೆಯ ನಂತರ 2022ರಲ್ಲಿ ದೇಶ ಬಿಟ್ಟಿದ್ದ ಅನ್ಮೋಲ್, ನಕಲಿ ದಾಖಲೆಗಳೊಂದಿಗೆ ಪ್ರಯಾಣಿಸುತ್ತಿದ್ದ ಆರೋಪದ ಮೇಲೆ ಕಳೆದ ವರ್ಷ ಅಮೆರಿಕದಲ್ಲಿ ಸಿಕ್ಕಿಬಿದ್ದಿದ್ದನು. ಅಲ್ಲಿ ಆತ ಸಲ್ಲಿಸಿದ್ದ ರಾಜಕೀಯ ಆಶ್ರಯದ (Asylum) ಅರ್ಜಿಯನ್ನು ಅಮೆರಿಕದ ನ್ಯಾಯಾಲಯ ಕಳೆದ ವಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆತನ ಗಡೀಪಾರು ಪ್ರಕ್ರಿಯೆಗೆ ವೇಗ ದೊರೆಯಿತು.
2023ರಲ್ಲಿ ಎನ್ಐಎ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಅನ್ಮೋಲ್, ವಾಂಟೆಡ್ ಗ್ಯಾಂಗ್ಸ್ಟರ್ಗಳಾದ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯಿ ಅವರಿಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಹಾಯ ಮಾಡಿದ್ದಾಗಿ ಆರೋಪಿಸಲಾಗಿತ್ತು. ಈತನ ಸುಳಿವು ನೀಡಿದವರಿಗೆ ಎನ್ಐಎ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿತ್ತು. ವಿದೇಶದಲ್ಲಿದ್ದುಕೊಂಡೇ ಈತ ಬಿಷ್ಣೋಯಿ ಸಿಂಡಿಕೇಟ್ನ ಪ್ರಮುಖ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದನು ಹಾಗೂ ಸುಲಿಗೆ ದಂಧೆಯನ್ನು ನಡೆಸುತ್ತಿದ್ದನು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.

