ಅಹಮದಾಬಾದ್ ವಿಮಾನ ದುರಂತ: ಸಾವಿನ ದವಡೆಯಿಂದ ಪಾರಾದ ರಮೇಶ್‌ ಮನದಲ್ಲೀಗ ಕರಾಳ ನೆನಪುಗಳು...
x

ಅಹಮದಾಬಾದ್ ವಿಮಾನ ದುರಂತ: ಸಾವಿನ ದವಡೆಯಿಂದ ಪಾರಾದ ರಮೇಶ್‌ ಮನದಲ್ಲೀಗ ಕರಾಳ ನೆನಪುಗಳು...

ಶುಕ್ರವಾರ ಮುಂಜಾನೆ ಅಹಮದಾಬಾದ್‌ಗೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.


ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ, 40 ವರ್ಷದ ವಿಶ್ವಾಸ್ ಕುಮಾರ್ ರಮೇಶ್ ಅವರು ಪವಾಡಸದೃಶವಾಗಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಆದರೆ, ಅವಘಡದ ಜೀವಂತ ದೃಶ್ಯಗಳು ಅವರ ಮನಸ್ಸಿನಿಂದ ಅಳಿಸಿಹೋಗದೆ ಇನ್ನೂ ಆಘಾತದಲ್ಲೇ ಮುಳುಗಿದ್ದಾರೆ.

"ನಾನು ಹೇಗೆ ಬದುಕುಳಿದೆ ಗೊತ್ತಾಗುತ್ತಿಲ್ಲ" ಇದು, ಮೃತ್ಯುಂಜಯನಾಗಿ ಹೊರಬಂದಿರುವ ರಮೇಶ್‌ರ ತುಟಿಯಿಂದ ಹೊರಬಿದ್ದ ಮೊದಲ ಮಾತು.

ಶುಕ್ರವಾರ ಮುಂಜಾನೆ ಅಹಮದಾಬಾದ್‌ಗೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ರಮೇಶ್‌ರ ಯೋಗಕ್ಷೇಮವನ್ನೂ ವಿಚಾರಿಸಿದ್ದಾರೆ. ಬಳಿಕ, ಮಾಧ್ಯಮದವರು ಘಟನೆಯ ಬಗ್ಗೆ ಅವರ ಅನುಭವ ಕೇಳಲು ಪ್ರಯತ್ನಿಸಿದಾಗ, ಇನ್ನೂ ಆಘಾತದಲ್ಲಿದ್ದ ರಮೇಶ್, ತಾನು ಕಂಡ ಭಯಾನಕ ದೃಶ್ಯಗಳನ್ನು ನೆನೆದು ಭಾವುಕರಾದರು.

ಒಂದು ಕ್ಷಣ, ನಾನೂ ಸಾಯುತ್ತೇನೆ ಎಂದು ಅನಿಸಿತು

"ಒಂದು ಕ್ಷಣ, ನಾನೂ ಸಾಯುತ್ತೇನೆ ಎಂದು ಅನಿಸಿತು. ಬದುಕು ಮುಗಿದೇಬಿಟ್ಟಿತು ಅಂದುಕೊಂಡಿದ್ದೆ" ರಮೇಶ್‌ರ ಧ್ವನಿ ನಡುಗುತ್ತಿತ್ತು. "ಆದರೆ, ಕಣ್ಣು ತೆರೆದು ನೋಡಿದಾಗ, ನಾನು ಜೀವಂತವಾಗಿದ್ದೇನೆ ಎಂಬುದು ಗೊತ್ತಾಯಿತು. ಸೀಟ್ ಬೆಲ್ಟ್ ಓಪನ್ ಮಾಡಿ, ಅಲ್ಲಿಂದ ಹೊರ ನಡೆದೆ. ನನ್ನ ಸುತ್ತಲೂ ಗಗನಸಖಿಯರು, ಆಂಟಿ, ಅಂಕಲ್, ಮಕ್ಕಳು ಎಲ್ಲರ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆ ದೃಶ್ಯ ನನ್ನಲ್ಲಿ ವಿಪರೀತ ಭಯ ಆವರಿಸಿತು. ಏನು ಮಾಡಬೇಕೆಂದು ತೋಚದೇ ಓಡತೊಡಗಿದೆ. ಅಷ್ಟರಲ್ಲೇ ಯಾರೋ ನನ್ನ ಹಿಡಿದು ಎಳೆದಂತಾಯಿತು" ಎಂದು ಅವರು ಘಟನೆಯ ಕ್ಷಣಗಳನ್ನು ನೆನಪಿಸಿಕೊಂಡರು.

ರಮೇಶ್ ಅವರ ಸೀಟ್ ಸಂಖ್ಯೆ 11ಎ, ಎಮರ್ಜೆನ್ಸಿ ಡೋರ್​ ಪಕ್ಕದಲ್ಲೇ ಇತ್ತು. ವಿಮಾನವು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದಾಗ, ಆ ರಭಸಕ್ಕೆ ತುರ್ತು ನಿರ್ಗಮನ ಬಾಗಿಲು ತನ್ನಿಂದ ತಾನೇ ತೆರೆದುಕೊಂಡಿತು. ಇದೇ ಅವರಿಗೆ ಪುನರ್ಜನ್ಮಕ್ಕೆ ದಾರಿಯಾಯಿತು. "ನಾನು ಕೆಳಕ್ಕೆ ಬಿದ್ದ ಕೂಡಲೇ ಅಲ್ಲಿಂದ ಒಂದು ದಾರಿ ಕಂಡಿತು. ನಾನು ಅಲ್ಲಿಂದ ಓಡಿಕೊಂಡು ಹೊರಬಂದೆ. ಕ್ಷಣಮಾತ್ರದಲ್ಲಿ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿತು. ನನ್ನ ಕೈಗಳಿಗೆ, ಮುಖಕ್ಕೆ ಸ್ವಲ್ಪ ಬೆಂಕಿ ತಾಗಿತು. ಕೂದಲೆಳೆ ಅಂತರದಲ್ಲಿ ಪಾರಾದೆ. ನನ್ನ ಕಣ್ಣು ಮುಂದೆಯೇ ಇಬ್ಬರು ಗಗನಸಖಿಯರು ಸುಟ್ಟು ಕರಕಲಾದರು" ಎಂದು ಹೇಳುತ್ತಿದ್ದಂತೆ ರಮೇಶ್ ಮತ್ತೊಮ್ಮೆ ಕಣ್ಣೀರಿಟ್ಟರು.

ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ...

ವಿಮಾನ ಪತನಗೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ, "ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಸ್ಟಕ್ ಆದಂತೆ ಭಾಸವಾಯಿತು. ನಂತರ ಹಸಿರು ಮತ್ತು ಬಿಳಿ ಬಣ್ಣದ ಲೈಟ್ ಗಳು ಗೋಚರಿಸಿದವು. ಪೈಲಟ್ ಗಳು ವಿಮಾನವನ್ನು ಮೇಲಕ್ಕೇರಿಸಲು ಪ್ರಯತ್ನಿಸಿದರೂ, ವಿಮಾನವು ಅತಿ ವೇಗದಲ್ಲಿ ಕೆಳಮುಖವಾಗಿ ಸಾಗಿ, ಕಟ್ಟಡಕ್ಕೆ ಡಿಕ್ಕಿ ಹೊಡೆಯಿತು" ಎಂದು ರಮೇಶ್ ವಿವರಿಸಿದರು.

Read More
Next Story