
ಅಹಮದಾಬಾದ್ ವಿಮಾನ ದುರಂತ: ಘಟನಾ ಸ್ಥಳದಲ್ಲಿ ರಾಷ್ಟ್ರೀಯ ಭದ್ರತಾ ಪಡೆ ನಿಯೋಜನೆ
ಎನ್ಎಸ್ಜಿ ತಂಡವನ್ನು ಇತರ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗೆ ನೆರವು ನೀಡಲು ನಿಯೋಜಿಸಲಾಗಿದೆಯೇ ಹೊರತು, ಅವರಿಗೆ ಯಾವುದೇ ತನಿಖಾ ಅಧಿಕಾರವಿಲ್ಲ.
ಗುರುವಾರ ಅಹಮದಾಬಾದ್ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ದುರಂತದ ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಗಳಿಗೆ ನೆರವಾಗಲು ರಾಷ್ಟ್ರೀಯ ಭದ್ರತಾ ಪಡೆ (NSG) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಧಿಕೃತ ಮೂಲಗಳ ಪ್ರಕಾರ, NSG ತಂಡವನ್ನು ಇತರ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗೆ ನೆರವು ನೀಡಲು ನಿಯೋಜಿಸಲಾಗಿದೆಯೇ ಹೊರತು, ಅವರಿಗೆ ಯಾವುದೇ ತನಿಖಾ ಅಧಿಕಾರವಿಲ್ಲ.
ಗುರುವಾರ ಮಧ್ಯಾಹ್ನ 1.39ರ ಸುಮಾರಿಗೆ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಈ ದುರಂತದಲ್ಲಿ ಕನಿಷ್ಠ 265 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ 1993ರ ಇಂಡಿಯನ್ ಏರ್ಲೈನ್ಸ್ ದುರಂತವನ್ನು ನೆನಪಿಸಿದೆ.
ಕೇಂದ್ರದಿಂದ ಉನ್ನತ ಮಟ್ಟದ ಸಮಿತಿ ರಚನೆ
ವಿಮಾನ ದುರಂತದ ತನಿಖೆಗಾಗಿ ಕೇಂದ್ರ ಸರ್ಕಾರವು ಗೃಹ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ದುರ್ಘಟನೆಯ "ಮೂಲ ಕಾರಣ"ವನ್ನು ಪತ್ತೆ ಹಚ್ಚುವ ಜೊತೆಗೆ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ಎದುರಿಸಲು ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವಂತೆ ಸಮಿತಿಗೆ ನಿರ್ದೇಶನ ನೀಡಲಾಗಿದೆ.
ಸಮಿತಿಯು ವಿಮಾನದ ದತ್ತಾಂಶ, ಕಾಕ್ಪಿಟ್ನ ಧ್ವನಿ ದಾಖಲೆ, ವಿಮಾನ ನಿರ್ವಹಣಾ ದಾಖಲೆಗಳು, ಎಟಿಸಿ ಲಾಗ್ ಹಾಗೂ ಪ್ರತ್ಯಕ್ಷ ಸಾಕ್ಷ್ಯಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿದೆ. ತನ್ನ ವರದಿಯನ್ನು ಮೂರು ತಿಂಗಳೊಳಗೆ ಸಲ್ಲಿಸಲು ಸಮಿತಿಗೆ ಕಾಲಾವಕಾಶ ನೀಡಲಾಗಿದೆ.
ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈಗಾಗಲೇ ತನಿಖೆ ನಡೆಸುತ್ತಿದೆ. ಇದರ ಜೊತೆಗೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಇತರ ತಂಡಗಳು ಶುಕ್ರವಾರ ಅಪಘಾತ ಸ್ಥಳವಾದ ಮೇಘನಿ ನಗರಕ್ಕೆ ಭೇಟಿ ನೀಡಿವೆ ಎಂದು ಮೂಲಗಳು ತಿಳಿಸಿವೆ.