ಭಯೋತ್ಪಾದನೆಯ ಭಯವಿಲ್ಲದೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ: ಪ್ರಧಾನಿ
x

ಭಯೋತ್ಪಾದನೆಯ ಭಯವಿಲ್ಲದೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ: ಪ್ರಧಾನಿ


ಏಪ್ರಿಲ್‌ 12- ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ, ದಾಳಿ, ಕಲ್ಲು ತೂರಾಟ ಮತ್ತು ಗಡಿಯಾಚೆಗಿನ ಗುಂಡಿನ ದಾಳಿಯ ಭಯವಿಲ್ಲದೆ ದಶಕಗಳ ಬಳಿಕ ಚುನಾವಣೆ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಉಧಂಪುರದಲ್ಲಿ ಚುನಾವಣೆ ಸಭೆಯಲ್ಲಿ ಮಾತನಾಡಿ, ಜಮ್ಮು-ಕಾಶ್ಮೀರದ ಜನರ ದೀರ್ಘಾವಧಿಯ ನೋವುಗಳನ್ನು ಕೊನೆಗೊಳಿಸುವ ಭರವಸೆಯನ್ನು ಈಡೇರಿಸಿದ್ದೇನೆ. ಬಿಜೆಪಿ 2019ರ ಆಗಸ್ಟ್‌ನಲ್ಲಿ ಸಂವಿಧಾನದ 370 ನೇ ವಿಧಿಯನ್ನು ಹಿಂಪಡೆದಿದೆ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಾಧ್ಯವಿದ್ದರೆ ವಿಧಿ 370 ಜಾರಿಗೊಳಿಸಲಿ ಎಂದು ಸವಾಲು ಹಾಕಿದರು.

ʻಕಳೆದ ಐದು ದಶಕಗಳಿಂದ ನಾನು ಜಮ್ಮು-ಕಾಶ್ಮೀರಕ್ಕೆ ಬರುತ್ತಿದ್ದೇನೆ. 1992 ರಲ್ಲಿ ಶ್ರೀನಗರದ ಹೃದಯ ಭಾಗದಲ್ಲಿರುವ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ನಡೆಸಿದ ಏಕತಾ ಯಾತ್ರೆಯನ್ನು ನೆನಪಿಸಿಕೊಳ್ಳುತ್ತೇನೆ. 2014 ರಲ್ಲಿ ವೈಷ್ಣೋದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಇದೇ ಸ್ಥಳದಲ್ಲಿ ನಡೆದ ಸಭೆಯಲ್ಲಿ ಭಯೋತ್ಪಾದನೆಯಿಂದ ಜನರನ್ನು ಮುಕ್ತಗೊಳಿಸುವ ಭರವಸೆ ನೀಡಿದ್ದೆ. ನಿಮ್ಮ ಆಶೀರ್ವಾದದಿಂದ ಆ ಭರವಸೆಯನ್ನು ಈಡೇರಿಸಿದ್ದೇನೆʼ ಎಂದು ಹೇಳಿದರು.

ಆರ್ಟಿಕಲ್ 370 ಹಿಂಪಡೆಯಲು ಸವಾಲು: 370 ನೇ ವಿಧಿಯ ರದ್ದು ಹಿಂಪಡೆಯಲು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ಸವಾಲು ಹಾಕಿದ ಅವರು,ʻಅದನ್ನು ಮಾಡಲು ನಿಮಗೆ ಸಾಧ್ಯವಿಲ್ಲʼ ಎಂದು ಹೇಳಿದರು. ʻ60 ವರ್ಷಗಳಿಂದ ಜಮ್ಮು-ಕಾಶ್ಮೀರವನ್ನು ಕಾಡುತ್ತಿರುವ ಸಮಸ್ಯೆಗಳನ್ನು ತೊಡೆದುಹಾಕುತ್ತೇನೆ. ಕಳೆದ 10 ವರ್ಷದಲ್ಲಿ ಜಮ್ಮು-ಕಾಶ್ಮೀರ ಸಂಪೂರ್ಣವಾಗಿ ರೂಪಾಂತರಗೊಂಡಿದ್ದು, ಕೊಟ್ಟ ಭರವಸೆಯನ್ನು ಈಡೇರಿಸಿದ್ದೇನೆʼ ಎಂದು ಹೇಳಿದರು.

ಉಧಂಪುರ ಕ್ಷೇತ್ರದಿಂದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮೂರನೇ ಬಾರಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಚೌಧರಿ ಲಾಲ್ ಸಿಂಗ್ ಮತ್ತು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಜಿ.ಎಂ. ಸರೂರಿ ಅವರನ್ನು ಕಣಕ್ಕಿಳಿಸಿದೆ. ಜಮ್ಮುವಿನಿಂದ ಜುಗಲ್ ಕಿಶೋರ್ ಬಿಜೆಪಿ ಅಭ್ಯರ್ಥಿ.

Read More
Next Story