ಅತ್ಯಾಚಾರ ಆರೋಪಿ, ಆಪ್ ಶಾಸಕ ಪಠಾಣ್​ಮಾಜ್ರಾ ಆಸ್ಟ್ರೇಲಿಯಾಗೆ ಪರಾರಿ
x

ಅತ್ಯಾಚಾರ ಆರೋಪಿ, ಆಪ್ ಶಾಸಕ ಪಠಾಣ್​ಮಾಜ್ರಾ ಆಸ್ಟ್ರೇಲಿಯಾಗೆ ಪರಾರಿ

ಈ ಬೆಳವಣಿಗೆಯು ಪಂಜಾಬ್ ಪೊಲೀಸರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಶಾಸಕನ ಸಂಭಾವ್ಯ ಅಡಗುತಾಣಗಳ ಮೇಲೆ ಹಲವು ಬಾರಿ ದಾಳಿ ನಡೆಸಿದರೂ, ಅವರನ್ನು ಪತ್ತೆಹಚ್ಚಲು ಪೊಲೀಸರು ವಿಫಲರಾಗಿದ್ದರು.


Click the Play button to hear this message in audio format

ಅತ್ಯಾಚಾರ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್ 2 ರಿಂದ ತಲೆಮರೆಸಿಕೊಂಡಿದ್ದ ಪಂಜಾಬ್‌ನ ಸನೌರ್​ ಕ್ಷೇತ್ರದ ಆಮ್ ಆದ್ಮಿ ಪಕ್ಷದ (AAP) ಶಾಸಕ ಹರ್ಮಿತ್ ಸಿಂಗ್ ಪಠಾಣ್‌ಮಾಜ್ರಾ, ಇದೀಗ ಆಸ್ಟ್ರೇಲಿಯಾಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಆಸ್ಟ್ರೇಲಿಯಾ ಮೂಲದ ಪಂಜಾಬಿ ವೆಬ್ ಚಾನೆಲ್‌ಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಕಾಣಿಸಿಕೊಂಡಿರುವ ಅವರು, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದ ನಂತರವೇ ತವರಿಗೆ ಹಿಂತಿರುಗುವುದಾಗಿ ಹೇಳಿದ್ದಾರೆ.

ಈ ಬೆಳವಣಿಗೆಯು ಪಂಜಾಬ್ ಪೊಲೀಸರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಶಾಸಕನ ಸಂಭಾವ್ಯ ಅಡಗುತಾಣಗಳ ಮೇಲೆ ಹಲವು ಬಾರಿ ದಾಳಿ ನಡೆಸಿದರೂ, ಅವರನ್ನು ಪತ್ತೆಹಚ್ಚಲು ಪೊಲೀಸರು ವಿಫಲರಾಗಿದ್ದರು. ಅಲ್ಲದೆ, ಪಟಿಯಾಲ ಪೊಲೀಸರು ಶಾಸಕರ ವಿರುದ್ಧ ಲುಕ್‌ಔಟ್ ನೋಟಿಸ್ ಕೂಡ ಜಾರಿಗೊಳಿಸಿದ್ದರು.

ಸಂದರ್ಶನದಲ್ಲಿ ಮಾತನಾಡಿದ ಪಠಾಣ್‌ಮಾಜ್ರಾ, ಇದು ತಮ್ಮ ವಿರುದ್ಧದ "ರಾಜಕೀಯ ಷಡ್ಯಂತ್ರ" ಎಂದಿದ್ದಾರೆ. ಪಂಜಾಬ್ ಜನರ ಪರವಾಗಿ ಮಾತನಾಡುವ ಧ್ವನಿಗಳನ್ನು ಹತ್ತಿಕ್ಕಲು ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. "ಪಂಜಾಬ್‌ನಲ್ಲಿ ಪ್ರಮುಖ ವಿಷಯಗಳ ಬಗ್ಗೆ ಸಚಿವರು ಮತ್ತು ಶಾಸಕರನ್ನು ಸಂಪರ್ಕಿಸುವುದಿಲ್ಲ. ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದೆ," ಎಂದು ಅವರು ಆರೋಪಿಸಿದ್ದು, ನ್ಯಾಯಾಂಗದ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ

ಜಿರಕ್‌ಪುರ್ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಸೆಪ್ಟೆಂಬರ್ 1 ರಂದು ಪಟಿಯಾಲದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ತಾನು ವಿಚ್ಛೇದಿತ ಎಂದು ಸುಳ್ಳು ಹೇಳಿ, ಶಾಸಕರು ತಮ್ಮೊಂದಿಗೆ ಸಂಬಂಧ ಬೆಳೆಸಿದರು ಮತ್ತು ಈಗಾಗಲೇ ಮದುವೆಯಾಗಿದ್ದರೂ 2021 ರಲ್ಲಿ ತಮ್ಮನ್ನು ವಿವಾಹವಾದರು ಎಂದು ಮಹಿಳೆ ಆರೋಪಿಸಿದ್ದರು. ನಂತರ ನಿರಂತರವಾಗಿ ಲೈಂಗಿಕ ಶೋಷಣೆ, ಬೆದರಿಕೆ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಶಾಸಕ

ಪ್ರಕರಣ ದಾಖಲಾದ ನಂತರ ಶಾಸಕರನ್ನು ಬಂಧಿಸಲು ಹರಿಯಾಣದ ಕರ್ನಾಲ್‌ಗೆ ಪಂಜಾಬ್ ಪೊಲೀಸರ ತಂಡ ತೆರಳಿದ್ದಾಗ, ಅವರು ನಾಟಕೀಯವಾಗಿ ತಪ್ಪಿಸಿಕೊಂಡಿದ್ದರು. ಕರ್ನಾಲ್ ಜಿಲ್ಲೆಯ ದಬ್ರಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿದ್ದ ಶಾಸಕರನ್ನು ಬಂಧಿಸಲು ಪೊಲೀಸರು ಹೋದಾಗ, ಅವರ ಬೆಂಬಲಿಗರು ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದರು. ಆದರೆ, ಈ ಆರೋಪವನ್ನು ನಿರಾಕರಿಸಿದ್ದ ಪಠಾಣ್‌ಮಾಜ್ರಾ, "ನಕಲಿ ಎನ್‌ಕೌಂಟರ್‌ನಲ್ಲಿ" ತಮ್ಮನ್ನು ಕೊಲ್ಲುವ ಸಂಚಿನ ಬಗ್ಗೆ ತಿಳಿದು ಪರಾರಿಯಾಗಿದ್ದಾಗಿ ಹೇಳಿದ್ದರು.

ಪಟಿಯಾಲ ನ್ಯಾಯಾಲಯವು ಈಗಾಗಲೇ ಪಠಾಣ್‌ಮಾಜ್ರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ ಮತ್ತು ಅವರನ್ನು "ಘೋಷಿತ ಅಪರಾಧಿ" ಎಂದು ಘೋಷಿಸುವ ಪ್ರಕ್ರಿಯೆಗಳನ್ನು ಆರಂಭಿಸಿದೆ. ನವೆಂಬರ್ 12 ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ.

Read More
Next Story