Vizag Steel Plant: 4200 ಕಾರ್ಮಿಕರನ್ನು ಕೆಲಸದಿಂದ ತೆಗೆದಿಲ್ಲ- ಎಚ್ಡಿಕೆ ಸ್ಪಷ್ಟನೆ
x

Vizag Steel Plant: 4200 ಕಾರ್ಮಿಕರನ್ನು ಕೆಲಸದಿಂದ ತೆಗೆದಿಲ್ಲ- ಎಚ್ಡಿಕೆ ಸ್ಪಷ್ಟನೆ

ಸೆ. 27ರಂದು ಸೇವೆಯಿಂದ ತೆಗೆದುಹಾಕಲಾದ ಕಾರ್ಖಾನೆಯ 4,200 ಗುತ್ತಿಗೆ ಕಾರ್ಮಿಕರನ್ನು ಕೇವಲ 48 ಗಂಟೆಗಳ ಒಳಗಾಗಿ ಮರು ನೇಮಕ ಮಾಡಿಕೊಳ್ಳಲಾಗಿದೆ. ಸೆ.29ಕ್ಕೆಲ್ಲ ಎಲ್ಲಾ ನೌಕರರಿಗೂ ಮತ್ತೆ ಉದ್ಯೋಗ ಕಲ್ಪಿಸಲಾಗಿದೆ. ಇದರ ಬಗ್ಗೆ ಎಳ್ಳಷ್ಟೂ ಮಾಹಿತಿ ಇಲ್ಲದ ವೇಣುಗೋಪಾಲ್ ಅವರು ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.


ವೈಜಾಗ್ ಸ್ಟೀಲ್ ಕಾರ್ಖಾನೆಯಲ್ಲಿ ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆದಿಲ್ಲ. ಕಾಂಗ್ರೆಸ್ ಪಕ್ಷ ಸುಖಾಸುಮ್ಮನೆ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಎತ್ತಿರುವ ಪ್ರಶ್ನೆಗಳಿಗೆ ತೀಕ್ಷ್ಣ ಮಾತುಗಳಲ್ಲಿ ಉತ್ತರ ನೀಡಿದ್ದಾರೆ.

ಕೆ.ಸಿ.ವೆಣುಗೋಪಾಲ್ ಅವರು ವೈಜಾಗ್ ಉಕ್ಕು ಕಾರ್ಖಾನೆಯ ಬಗ್ಗೆ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. ಅವರ ಹೇಳಿಕೆಯಲ್ಲಿ ಹುರುಳಿಲ್ಲ. ರಾಜಕೀಯ, ಮತಬ್ಯಾಂಕ್ ರಾಜಕಾರಣಕ್ಕಾಗಿ ಅವರು ಕಾರ್ಖಾನೆಯ ಕಾರ್ಮಿಕರು, ಸಾರ್ವಜನಿಕರ ಭಾವನೆಗಳ ಜತೆ ಆಟವಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ವೈಜಾಗ್ ಉಕ್ಕು ಕಾರ್ಖಾನೆಯಲ್ಲಿ ಯಾವ ಕಾರ್ಮಿಕರನ್ನು ಕೆಲಸದಿಂದ ತೆಗೆದಿಲ್ಲ. ಎಲ್ಲಾ 4200 ಕಾರ್ಮಿಕರನ್ನು 48 ಗಂಟೆಗಳೊಳಗೆ ಮರು ನೇಮಕ ಮಾಡಲಾಗಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಕೈಗಾರಿಭಿವೃದ್ಧಿ, ಅದರಲ್ಲಿ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳಿಗೆ ಶಕ್ತಿ ತುಂಬಲಾಗುತ್ತಿದೆ. ಆದರೆ, ಯುಪಿಎ ಸರ್ಕಾರದ ಕಾಲದಲ್ಲಿ ಇವುಗಳನ್ನು ಸಂಪೂರ್ಣ ಹಾಳು ಮಾಡಲಾಗಿತ್ತು ಎಂದು ದೂರಿದ್ದಾರೆ.

ಸೆ. 27ರಂದು ಸೇವೆಯಿಂದ ತೆಗೆದುಹಾಕಲಾದ ಕಾರ್ಖಾನೆಯ 4,200 ಗುತ್ತಿಗೆ ಕಾರ್ಮಿಕರನ್ನು ಕೇವಲ 48 ಗಂಟೆಗಳ ಒಳಗಾಗಿ ಮರು ನೇಮಕ ಮಾಡಿಕೊಳ್ಳಲಾಗಿದೆ. ಸೆ.29ಕ್ಕೆಲ್ಲ ಎಲ್ಲಾ ನೌಕರರಿಗೂ ಮತ್ತೆ ಉದ್ಯೋಗ ಕಲ್ಪಿಸಲಾಗಿದೆ. ಇದರ ಬಗ್ಗೆ ಎಳ್ಳಷ್ಟೂ ಮಾಹಿತಿ ಇಲ್ಲದ ವೇಣುಗೋಪಾಲ್ ಅವರು ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಿಮ್ಮ ಮಾಹಿತಿ ತಪ್ಪು, ಕೇವಲ ಇಂಥ ಮಾಹಿತಿಗಳನ್ನು ಹಬ್ಬಿಸಲು ಎಲ್ಲಿಲ್ಲದ ಆತುರಪಡುತ್ತಿದ್ದೀರಿ ಎಂದು ಕೇಂದ್ರ ಸಚಿವರು ಕಿಡಿಕಾರಿದ್ದಾರೆ.

ವೈಜಾಗ್ ಉಕ್ಕು ಕಾರ್ಖಾನೆಯನ್ನು ಉಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ನಾನು ಕೂಡ ವಿಶಾಖಪಟ್ಟಣಕ್ಕೆ ತೆರಳಿ ಕಾರ್ಖಾನೆಯನ್ನು ವೀಕ್ಷಿಸಿದ್ದೇನೆ. ಕಾರ್ಮಿಕರು, ಕಾರ್ಮಿಕ ಸಂಘಟನೆಗಳು, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಚಿವಾಲಯದಲ್ಲಿ ಕೂಡ ಹಲವಾರು ಸಭೆಗಳನ್ನು ನಡೆಸಿದ್ದೇನೆ. ನನ್ನ ಸಹೋದ್ಯೋಗಿ ಸಚಿವರಾದ ಶ್ರೀನಿವಾಸ ಭೂಪತಿರಾಜು ವರ್ಮ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅಲ್ಲದೆ; ಕಾರ್ಖಾನೆಯ ಭವಿಷ್ಯದ ಬಗ್ಗೆ ಪ್ರಧಾನಿಗಳಿಗೆ ಮನವಿ ಮಾಡಿದ್ದೇನೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೂ ಸಮಾಲೋಚನೆ ನಡೆಸಿದ್ದೇನೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

Read More
Next Story