Maha Kumbh Bus Accident | ಮಹಾಕುಂಭ ಯಾತ್ರಿಗಳ ಬಸ್ ಅಪಘಾತ: 10 ಮಂದಿ ಸಾವು, 19 ಜನರಿಗೆ ಗಾಯ
x
ಅಪಘಾತ

Maha Kumbh Bus Accident | ಮಹಾಕುಂಭ ಯಾತ್ರಿಗಳ ಬಸ್ ಅಪಘಾತ: 10 ಮಂದಿ ಸಾವು, 19 ಜನರಿಗೆ ಗಾಯ

ರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಜಿ.ಟಿ. ಮಿರ್ಜಾಪುರ-ವಾರಣಾಸಿ ಗಡಿಯಲ್ಲಿರುವ ಕಚವಾನ್ ಮತ್ತು ಮಿರ್ಜಾಮುರಾಡ್ ನಡುವಿನ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ


ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ಯಾತ್ರಿಗಳಿದ್ದ ಬಸ್ ಪ್ರಯಾಗರಾಜ್-ಮಿರ್ಜಾಪುರ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಬೊಲೆರೋ‌ ವಾಹನಕ್ಕೆ ಡಿಕ್ಕಿಯಾಗಿ 10 ಮಂದಿ ಭಕ್ತರು ಮೃತಪಟ್ಟಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ವರೂಪ್ ರಾಣಿ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್ ಮತ್ತು ಬೊಲೆರೊದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ನಿವಾಸಿಗಳು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 19 ಜನ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರೆಲ್ಲಾ ಸಂಗಮದಲ್ಲಿ ಸ್ನಾನ ಮಾಡಿ ವಾರಣಾಸಿಗೆ ಹಿಂತಿರುಗುತ್ತಿದ್ದರು. ಎಲ್ಲಾ ಗಾಯಾಳುಗಳನ್ನು ರಾಮನಗರದ ಸಿಎಚ್‌ಸಿಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ನಿವಾಸಿಗಳು. ಅಪಘಾತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಜಿ.ಟಿ. ಮಿರ್ಜಾಪುರ-ವಾರಣಾಸಿ ಗಡಿಯಲ್ಲಿರುವ ಕಚವಾನ್ ಮತ್ತು ಮಿರ್ಜಾಮುರಾಡ್ ನಡುವಿನ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಮಿರ್ಜಾಪುರ) ಅಭಿನಂದನ್ ಹೇಳಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಸಂಭವಿಸಿದ ಬಸ್ ಮತ್ತು ಬೊಲೆರೊ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ನಿರ್ದೇಶಿಸಿದ್ದಾರೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆಯ ಬಗ್ಗೆಯೂ ಮುಖ್ಯಮಂತ್ರಿ ಮಾತನಾಡಿದ್ದಾರೆ.

Read More
Next Story