Bridge Man, Padma Shri awardee Dr. Girish Bhardwaj passes away: The master of suspension bridges is no more
x

ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ 

'ಬ್ರಿಡ್ಜ್ ಮ್ಯಾನ್', ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ನಿಧನ

1989ರಲ್ಲಿ ತಮ್ಮ ಸ್ವಗ್ರಾಮವಾದ ಸುಳ್ಯದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಕೇವಲ ಮೂರೇ ತಿಂಗಳಲ್ಲಿ ಮೊದಲ ಕಡಿಮೆ ವೆಚ್ಚದ ತೂಗು ಸೇತುವೆಯನ್ನು ನಿರ್ಮಿಸಿದರು. ಇದು ಅವರ ಐತಿಹಾಸಿಕ ಪಯಣದ ಮೊದಲ ಹೆಜ್ಜೆಯಾಗಿತ್ತು.


Click the Play button to hear this message in audio format

ಭಾರತದ ‘ಬ್ರಿಡ್ಜ್ ಮ್ಯಾನ್’ ಹಾಗೂ ‘ತೂಗು ಸೇತುವೆಗಳ ಸರದಾರ’ ಎಂದೇ ಖ್ಯಾತರಾಗಿದ್ದ, ದೇಶದ ನೂರಾರು ದುರ್ಗಮ ಪ್ರದೇಶಗಳ ಜನರಿಗೆ ಆಶಾಕಿರಣವಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ (ಜು.7) ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ತೀವ್ರ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮೃತರು ಪುತ್ರರಾದ ಸುದರ್ಶನ್, ಪತಂಜಲಿ, ಪುತ್ರಿ ರಶ್ಮಿಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

‘ಸುಳ್ಯದ ವಿಶ್ವೇಶ್ವರಯ್ಯ’ನ ಸಾಧನೆಯ ಹಾದಿ

1950ರ ಮೇ 2ರಂದು ಸುಳ್ಯದಲ್ಲಿ ಜನಿಸಿದ ಗಿರೀಶ್ ಭಾರದ್ವಾಜ್ ಅವರು, 1973ರಲ್ಲಿ ಮಂಡ್ಯದ ಪಿಇಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಪದವಿ ಮುಗಿದ ತಕ್ಷಣ ದೊಡ್ಡ ಕಾರ್ಪೊರೇಟ್ ಕಂಪನಿಗಳತ್ತ ಮುಖ ಮಾಡದ ಅವರು, ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ತಾಂತ್ರಿಕ ಪರಿಹಾರ ನೀಡಲು ಬಯಸಿದರು. ಇದಕ್ಕಾಗಿ ಅವರು 'ಆಯಶ್ಯಿಲ್ಪ ಎಂಜಿನಿಯರಿಂಗ್ ವರ್ಕ್ಸ್' ಎಂಬ ಸಂಸ್ಥೆಯನ್ನು ಆರಂಭಿಸಿ ಸಮಾಜಮುಖಿ ಕಾರ್ಯಕ್ಕೆ ಧುಮುಕಿದರು.

ಗ್ರಾಮೀಣ ಭಾಗದ ಜನರು ನದಿ, ತೋಡುಗಳನ್ನು ದಾಟಲು ಪಡುತ್ತಿದ್ದ ಪಾಡನ್ನು ಕಂಡು ಮರುಗಿದ ಅವರು, 1989ರಲ್ಲಿ ತಮ್ಮ ಸ್ವಗ್ರಾಮವಾದ ಸುಳ್ಯದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಕೇವಲ ಮೂರೇ ತಿಂಗಳಲ್ಲಿ ಮೊದಲ ಕಡಿಮೆ ವೆಚ್ಚದ ತೂಗು ಸೇತುವೆಯನ್ನು ನಿರ್ಮಿಸಿದರು. ಇದು ಅವರ ಐತಿಹಾಸಿಕ ಪಯಣದ ಮೊದಲ ಹೆಜ್ಜೆಯಾಗಿತ್ತು.

140ಕ್ಕೂ ಹೆಚ್ಚು ಸೇತುವೆಗಳ ಕ್ರಾಂತಿ!

ದುರ್ಗಮ ಕಾಡುಗಳು, ನದಿ ದಾಟಲು ಕೇವಲ ದೋಣಿಯನ್ನೇ ಆಶ್ರಯಿಸಿದ್ದ ಹಳ್ಳಿಗಳು ಹಾಗೂ ಸೂಕ್ತ ರಸ್ತೆ ಸಂಪರ್ಕವಿಲ್ಲದ ನೂರಾರು ಹಳ್ಳಿಗಳಿಗೆ ಗಿರೀಶ್ ಭಾರದ್ವಾಜ್ ಅವರ ಪರಿಸರ ಸ್ನೇಹಿ ತೂಗು ಸೇತುವೆಗಳು ಹೊಸ ಆಶಾಕಿರಣ ಮೂಡಿಸಿದವು. ಸಾಮಾನ್ಯ ಕಾಂಕ್ರೀಟ್ ಸೇತುವೆಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಹಾಗೂ ವರ್ಷಗಟ್ಟಲೆ ಸಮಯ ತಗುಲುತ್ತಿತ್ತು. ಆದರೆ ಡಾ. ಗಿರೀಶ್ ಅವರು ಕೇವಲ ಶೇ. 10 ರಷ್ಟು ವೆಚ್ಚದಲ್ಲಿ, ಕೇವಲ 3 ತಿಂಗಳ ಅವಧಿಯಲ್ಲಿ ಅತ್ಯಂತ ಸುಭದ್ರವಾದ ತೂಗು ಸೇತುವೆಗಳನ್ನು ನಿರ್ಮಿಸಿಕೊಡುವ ಅಪೂರ್ವ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದರು.

ದಾಖಲೆಯ ಮೈಲಿಗಲ್ಲು

ಕರ್ನಾಟಕ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಒಡಿಶಾದ ದುರ್ಗಮ ಭಾಗಗಳಲ್ಲಿ ಇವರು 140ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ಯಶಸ್ವಿಯಾಗಿ ನಿರ್ಮಿಸಿದ್ದಾರೆ. ಇವರು ನಿರ್ಮಿಸಿದ ಐತಿಹಾಸಿಕ 100ನೇ ತೂಗು ಸೇತುವೆಯು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ತವರೂರಾದ ಸುಳ್ಯದ ಮಂಡೆಕೋಲಿನಲ್ಲಿ ತಲೆಎತ್ತಿ ನಿಂತಿದೆ. ಇವರ ಈ ಅದ್ವಿತೀಯ ಎಂಜಿನಿಯರಿಂಗ್ ಕೌಶಲ್ಯಕ್ಕಾಗಿ ಜನ ಇವರನ್ನು ಪ್ರೀತಿಯಿಂದ "ಸುಳ್ಯದ ವಿಶ್ವೇಶ್ವರಯ್ಯ" ಎಂದೇ ಕರೆಯುತ್ತಿದ್ದರು.

ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ಯ ಗರಿ

ಗ್ರಾಮೀಣ ಭಾರತದ ಮೂಲಸೌಕರ್ಯ ಮತ್ತು ತಾಂತ್ರಿಕ ವಲಯಕ್ಕೆ ಡಾ. ಗಿರೀಶ್ ಭಾರದ್ವಾಜ್ ಅವರು ನೀಡಿದ ಈ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ, ಭಾರತ ಸರ್ಕಾರ 2017 ರಲ್ಲಿ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ನೀಡಿ ಗೌರವಿಸಿತ್ತು. ಇದರೊಂದಿಗೆ ಕರ್ನಾಟಕದ ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಸೇರಿ ಹತ್ತಾರು ಪ್ರತಿಷ್ಠಿತ ಗೌರವಗಳು ಇವರ ಮುಡಿಗೇರಿದ್ದವು.

Read More
Next Story