ರಾಜಕೀಯದಲ್ಲಿ ಓಡದಿದ್ದರೆ ಟ್ರೇನ್ ಮಿಸ್ ಆಗುತ್ತದೆ; ಸಿದ್ದರಾಮಯ್ಯ ಕುರಿತು ಸತೀಶ್ ಜಾರಕಿಹೊಳಿ ಮಾತಿನ ಮರ್ಮವೇನು?
x
ಸತೀಶ್​ ಜಾರಕಿಹೊಳಿ

'ರಾಜಕೀಯದಲ್ಲಿ ಓಡದಿದ್ದರೆ ಟ್ರೇನ್ ಮಿಸ್ ಆಗುತ್ತದೆ'; ಸಿದ್ದರಾಮಯ್ಯ ಕುರಿತು ಸತೀಶ್ ಜಾರಕಿಹೊಳಿ ಮಾತಿನ ಮರ್ಮವೇನು?

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನಲ್ಲಿ ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, "ಸೈಡ್‌ಲೈನ್ ಎನ್ನುವುದು ಎಲ್ಲ ಪಕ್ಷಗಳಲ್ಲೂ ಇರುವ ರಾಜಕೀಯ ಪ್ರಕ್ರಿಯೆ ಎಂದು ಹೇಳಿದರು.


Click the Play button to hear this message in audio format

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ರಾಜಕೀಯ ಚರ್ಚೆಗಳ ನಡುವೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜಕಾರಣದಲ್ಲಿ ನಿರಂತರವಾಗಿ ಜನರ ಸಂಪರ್ಕದಲ್ಲಿರಬೇಕು. ಇಲ್ಲದಿದ್ದರೆ ಜನರು ಹೊಸ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯವನ್ನು ರೈಲು ಪ್ರಯಾಣಕ್ಕೆ ಹೋಲಿಸಿ, "ಇದು ಸ್ಪೀಡ್ ಇರುವ ಕಾಲ. ನಾವು ಕೂಡ ಅದೇ ವೇಗದಲ್ಲಿ ಓಡಬೇಕು. ಓಡದಿದ್ದರೆ ಟ್ರೇನ್ ಮಿಸ್ ಆಗುತ್ತದೆ. ಟ್ರೇನ್ ಮಿಸ್ ಆದರೆ ತುಮಕೂರಿಗೋ, ಅರಸೀಕೆರೆಯವರೆಗೂ ಕಾರಿನಲ್ಲಿ ಹೋಗಿಯಾದರೂ ಟ್ರೇನ್ ಹತ್ತಬೇಕು. ಇಲ್ಲದಿದ್ದರೆ ಜನರೇ ಮರೆತುಬಿಡುತ್ತಾರೆ" ಎಂದು ಹೇಳಿದರು.

'ಜನರ ಸಂಪರ್ಕ ಇರುವವರೆಗೂ ನಾಯಕ'

ರಾಜಕೀಯದಲ್ಲಿ ನಾಯಕತ್ವ ಉಳಿಸಿಕೊಳ್ಳಲು ಜನರ ಸಂಪರ್ಕವೇ ಪ್ರಮುಖ ಅಂಶ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟರು. "ಒಬ್ಬ ನಾಯಕ ಜನರೊಂದಿಗೆ ಎಷ್ಟರ ಮಟ್ಟಿಗೆ ಸಂಪರ್ಕದಲ್ಲಿರುತ್ತಾರೋ ಅಷ್ಟರವರೆಗೆ ಅವರು ನಾಯಕನಾಗಿ ಉಳಿಯುತ್ತಾರೆ. ಕೆಲವರು ಬೆಂಗಳೂರಿನಲ್ಲಿ ಓಡಾಡಿ ರಾಜಕಾರಣ ಮಾಡುತ್ತಾರೆ, ಇನ್ನೂ ಕೆಲವರು ಮೈಸೂರಿನಲ್ಲೇ ಕುಳಿತು ರಾಜಕಾರಣ ಮಾಡಬಹುದು. ಪ್ರತಿಯೊಬ್ಬರಿಗೂ ತಮ್ಮದೇ ಆದ ರಾಜಕೀಯ ಶೈಲಿ ಇರುತ್ತದೆ" ಎಂದು ಹೇಳಿದರು.

ಸಿದ್ದರಾಮಯ್ಯರನ್ನು ಸೈಡ್‌ಲೈನ್ ಮಾಡಲಾಗುತ್ತಿದೆಯೇ?

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನಲ್ಲಿ ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, "ಸೈಡ್‌ಲೈನ್ ಎನ್ನುವುದು ಎಲ್ಲ ಪಕ್ಷಗಳಲ್ಲೂ ಇರುವ ರಾಜಕೀಯ ಪ್ರಕ್ರಿಯೆ. ಒಬ್ಬರನ್ನು ಹಿಂದೆ ಸರಿಸಿದಾಗ ಮತ್ತೊಬ್ಬರು ಮುಂದೆ ಬರುತ್ತಾರೆ. ಇದು ರಾಜಕೀಯದ ಸಹಜ ಸ್ವಭಾವ" ಎಂದು ಹೇಳಿದರು.

"ನಾವೂ ಕೂಡ ಅಷ್ಟೇ ವೇಗದಲ್ಲಿ ಓಡಬೇಕು. ಮನೆಯಲ್ಲಿ ಕುಳಿತರೆ ಟ್ರೇನ್ ಹತ್ತಿ ಹೋಗುವವರು ಹೋಗಿಬಿಡುತ್ತಾರೆ. ನಾವು ಓಡಿ ಹೋಗಿ ಟ್ರೇನ್ ಹಿಡಿಯಬೇಕು. ರಾಜಕೀಯದಲ್ಲೂ ಅದೇ ರೀತಿ ನಿರಂತರ ಪ್ರಯತ್ನ ಮಾಡಬೇಕು" ಎಂದು ಹೇಳಿದರು.

'ಫೈಟ್ ಮಾಡಿದವರು ಮಾತ್ರ ಉಳಿಯುತ್ತಾರೆ'

ರಾಜಕೀಯದಲ್ಲಿ ಹೋರಾಟದ ಮನೋಭಾವ ಅಗತ್ಯ ಎಂದು ಸತೀಶ್ ಜಾರಕಿಹೊಳಿ ಹೇಳಿದರು. "ಯಾರು ಫೈಟ್ ಮಾಡುತ್ತಾರೋ ಅವರು ಮಾತ್ರ ರಾಜಕೀಯದಲ್ಲಿ ಉಳಿಯುತ್ತಾರೆ. ಹೋರಾಟ ಮಾಡದಿದ್ದರೆ ಜನರೂ ಮರೆಯುತ್ತಾರೆ. ನಾವು ಫ್ರಂಟ್‌ಲೈನ್‌ನಲ್ಲಿ ಕಾಣಿಸಿಕೊಳ್ಳದಿದ್ದರೆ ಜನ ಹೊಸ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ" ಎಂದು ಅಭಿಪ್ರಾಯಪಟ್ಟರು.

'ಸಿದ್ದರಾಮಯ್ಯ ಅವರದ್ದೇ ಆದ ಶೈಲಿ ಇದೆ'

ಸಿದ್ದರಾಮಯ್ಯ ಅವರ ರಾಜಕೀಯ ಶೈಲಿಯ ಬಗ್ಗೆ ಮಾತನಾಡಿದ ಜಾರಕಿಹೊಳಿ, "ಸಿದ್ದರಾಮಯ್ಯ ಅವರು ಸುಮಾರು 20 ವರ್ಷಗಳಿಂದ ಪಕ್ಷದಲ್ಲಿದ್ದಾರೆ. ಅವರಿಗೆ ಅವರದ್ದೇ ಆದ ಶಕ್ತಿ ಇದೆ. ಅವರದ್ದೇ ಆದ ದೊಡ್ಡ ಬೆಂಬಲಿಗರ ಬಳಗವಿದೆ. ಅವರು ತಮ್ಮದೇ ಶೈಲಿಯಲ್ಲಿ ರಾಜಕಾರಣ ಮಾಡುತ್ತಾರೆ" ಎಂದರು.

"ಅವರು ಮೈಸೂರಿನಲ್ಲಿ ಕೂತು ರಾಜಕಾರಣ ಮಾಡಬಹುದು. 'ನಾನು ಇಲ್ಲೇ ಕುಳಿತು ಕೆಲಸ ಮಾಡುತ್ತೇನೆ' ಎಂದು ಹೇಳಬಹುದು. ಅದು ಅವರ ರಾಜಕೀಯ ಶೈಲಿ. ಒಬ್ಬೊಬ್ಬ ನಾಯಕನಿಗೆ ಒಂದೊಂದು ಶೈಲಿ ಇರುತ್ತದೆ" ಎಂದು ಹೇಳಿದರು.

ಖರ್ಗೆ, ಯಡಿಯೂರಪ್ಪ, ದೇವೇಗೌಡರ ಉದಾಹರಣೆ

ಪ್ರತಿಯೊಬ್ಬ ನಾಯಕನ ಕಾರ್ಯಶೈಲಿ ವಿಭಿನ್ನವಾಗಿರುತ್ತದೆ ಎಂದು ಹೇಳಿದ ಜಾರಕಿಹೊಳಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಉದಾಹರಣೆ ನೀಡಿದರು.

"ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಶೈಲಿ, ಯಡಿಯೂರಪ್ಪ ಅವರಿಗೆ ಒಂದು ಶೈಲಿ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಮತ್ತೊಂದು ಶೈಲಿ ಇದೆ. ಹಾಗೆಯೇ ಸಿದ್ದರಾಮಯ್ಯ ಅವರಿಗೂ ತಮ್ಮದೇ ಆದ ರಾಜಕೀಯ ಶೈಲಿ ಇದೆ" ಎಂದು ಹೇಳಿದರು.

ಕೆಂಪೇಗೌಡ ಜಯಂತಿ ಪೋಸ್ಟರ್ ವಿವಾದಕ್ಕೂ ಪ್ರತಿಕ್ರಿಯೆ

ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಪೋಸ್ಟರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಬಳಸದೇ ಇದ್ದ ವಿಚಾರಕ್ಕೂ ಪ್ರತಿಕ್ರಿಯಿಸಿದ ಜಾರಕಿಹೊಳಿ, "ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾರ ಭಾವಚಿತ್ರ ಬಳಸಬೇಕು ಎಂಬುದಕ್ಕೆ ಅಧಿಕೃತ ನಿಯಮಗಳಿವೆ. ಉಪಮುಖ್ಯಮಂತ್ರಿಯವರ ಭಾವಚಿತ್ರವನ್ನೂ ಹಾಕಿಲ್ಲ. ಬಿಡಿಎ ವತಿಯಿಂದ ಕಾರ್ಯಕ್ರಮ ನಡೆದಿದ್ದರೆ ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು. ನಾವು ಈ ಬಗ್ಗೆ ಹೇಳುವುದು ಸರಿಯಲ್ಲ" ಎಂದು ಹೇಳಿದರು.

ಸಿದ್ದರಾಮಯ್ಯ ಸ್ಪೀಡ್ ಕಡಿಮೆಯೇ?

"ಸಿದ್ದರಾಮಯ್ಯ ಅವರ ಸ್ಪೀಡ್ ಯಾಕೆ ಕಡಿಮೆಯಾಗಿದೆ ಎಂಬ ಪ್ರಶ್ನೆಯನ್ನು ಅವರನ್ನೇ ಕೇಳಬೇಕು. ನಾವು ಅವರಿಗೆ ರಾಜಕೀಯದಲ್ಲಿ ನಿರಂತರವಾಗಿ ಓಡಬೇಕು ಎಂದು ಹೇಳುತ್ತೇವೆ. ಆದರೆ ಪ್ರತಿಯೊಬ್ಬ ನಾಯಕನ ಕೆಲಸ ಮಾಡುವ ವಿಧಾನ ವಿಭಿನ್ನವಾಗಿರುತ್ತದೆ" ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.

ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆಗಳು ಕಾಂಗ್ರೆಸ್‌ನ ಆಂತರಿಕ ರಾಜಕೀಯದ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಮತ್ತಷ್ಟು ಇಂಧನ ತುಂಬಿದ್ದು, ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಬೆಳವಣಿಗೆಗಳ ಮೇಲೆ ರಾಜಕೀಯ ವಲಯದ ಗಮನ ಕೇಂದ್ರೀಕೃತವಾಗಿದೆ.

Read More
Next Story