
ಸಚಿವ ಪ್ರಿಯಾಂಕ್ ಖರ್ಗೆ
ಎಂಇಎಸ್ಗೆ ಕಾನೂನು ನೆರವು; ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಗರಂ
“ನಮ್ಮ ನೆಲ, ಜಲ ಮತ್ತು ಭಾಷೆ ವಿಚಾರ ಬಂದಾಗ ನಾವು ಯಾವುದೇ ಕಾರಣಕ್ಕೂ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ. ಎದುರಾಳಿಗಳು ಯಾರೇ ಇರಲಿ, ನಮ್ಮ ಹಿತಾಸಕ್ತಿ ರಕ್ಷಿಸಿಕೊಳ್ಳಲು ಬದ್ಧರಾಗಿದ್ದೇವೆ" ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಿರಂತರವಾಗಿ ಕನ್ನಡಿಗರು ಮತ್ತು ರಾಜ್ಯದ ಸಾರ್ವಭೌಮತ್ವದ ವಿರುದ್ಧ ಪುಂಡಾಟ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಕಾನೂನು ನೆರವು ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮಹಾರಾಷ್ಟ್ರ ನಡೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
“ನಮ್ಮ ನೆಲ, ಜಲ ಮತ್ತು ಭಾಷೆ ವಿಚಾರ ಬಂದಾಗ ನಾವು ಯಾವುದೇ ಕಾರಣಕ್ಕೂ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ. ಎದುರಾಳಿಗಳು ಮಹಾರಾಷ್ಟ್ರ ಇರಲಿ, ಗೋವಾ ಇರಲಿ, ತಮಿಳುನಾಡು ಅಥವಾ ಆಂಧ್ರಪ್ರದೇಶವೇ ಇರಲಿ, ನಮ್ಮ ಹಿತಾಸಕ್ತಿ ರಕ್ಷಿಸಿಕೊಳ್ಳಲು ಬದ್ಧರಾಗಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
ಕಾನೂನಾತ್ಮಕ ಗೆರೆ ದಾಟುವಂತಿಲ್ಲ
ಗಡಿ ವಿವಾದದ ಸೂಕ್ಷ್ಮತೆ ಪ್ರಸ್ತಾಪಿಸಿದ ಸಚಿವರು, "ಏನೇ ಗಡಿ ವಿಚಾರ ಇದ್ದರೂ ಅದನ್ನು ಕಾನೂನಾತ್ಮಕವಾಗಿ, ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಯಾವುದೋ ಒಂದು ಪುಂಡರ ಸಂಘಟನೆಯವರು ಹೇಳುತ್ತಾರೆ ಅಥವಾ ಅಲ್ಲಿನ ಮುಖ್ಯಮಂತ್ರಿಗಳು ಹೇಳುತ್ತಾರೆ ಎಂದು ತಮಗೆ ಬೇಕಾದ ರೀತಿ ಅಡ್ಡಾದಿಡ್ಡಿ ಗೆರೆ ಎಳೆಯೋಕೆ ಬರಲ್ಲ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಕಾನೂನು ನಿಯಮಗಳಿವೆ" ಎಂದು ಮಹಾರಾಷ್ಟ್ರದ ನಾಯಕರ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ಕಿಡಿಕಾರಿದ್ದಾರೆ.
ಎಚ್ಚರಿಕೆ ಅಂತಾದರೂ ತಿಳಿದುಕೊಳ್ಳಲಿ
"ನನ್ನ ಈ ಹೇಳಿಕೆಯನ್ನು ಮಹಾರಾಷ್ಟ್ರದವರು ಎಚ್ಚರಿಕೆ ಎಂದಾದರೂ ತಿಳಿದುಕೊಳ್ಳಲಿ ಅಥವಾ ಕಳಕಳಿಯ ಮನವಿ ಅಂತಾದರೂ ಭಾವಿಸಲಿ. ನಮ್ಮ ರಾಜ್ಯದ ಗಡಿಯೊಳಗೆ ಬಂದು ಪುಂಡಾಟಿಕೆ ಮಾಡುವುದು, ಭಾಷಾ ನಿಂದನೆ ಮಾಡುವುದು ಹಾಗೂ ಸೌಹಾರ್ದತೆ ಕೆಡಿಸಿ ಘರ್ಷಣೆ ನಡೆಸುವುದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು" ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗೆ ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎಂಇಎಸ್ ನಾಯಕರಿಗೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಮಟ್ಟದಲ್ಲಿ ಕಾನೂನು ಹೋರಾಟ ನಡೆಸಲು ಸರ್ಕಾರಿ ವೆಚ್ಚದಲ್ಲಿ ವಿಶೇಷ ವಕೀಲರ ನೆರವು ನೀಡುವುದಾಗಿ ಘೋಷಿಸಿತ್ತು.
ಮಹಾರಾಷ್ಟ್ರದ ಈ ಪ್ರಚೋದನಾತ್ಮಕ ತೀರ್ಮಾನಕ್ಕೆ ಈಗ ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ರಾಜ್ಯ ಸರ್ಕಾರವೂ ಸಹ ಕಾನೂನು ಹಾಗೂ ಆಡಳಿತಾತ್ಮಕವಾಗಿ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗಿದೆ.

