
ಪ್ರತಿಪಕ್ಷದ ನಾಯಕ ಆರ್. ಅಶೋಕ್
ಮೊದಲು ತೆರಿಗೆ ಲೂಟಿ ನಿಲ್ಲಿಸಿ": ತೈಲ ಬೆಲೆ ವಿಚಾರದಲ್ಲಿ ಡಿಕೆಶಿಗೆ ಆರ್. ಅಶೋಕ ತಿರುಗೇಟು
ತಮ್ಮ ಪೋಸ್ಟ್ನಲ್ಲಿ ಕೆಲವು ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಆರ್. ಅಶೋಕ, ರಾಜ್ಯ ಸರ್ಕಾರದ ತೆರಿಗೆ ದಾಹದಿಂದಾಗಿಯೇ ತೈಲ ಬೆಲೆ ಏರಿಕೆಯಾಗಿದೆ ಎಂದು ದೂಷಿಸಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿದ್ದನ್ನು 'ಚುನಾವಣಾ ಗಿಮಿಕ್' ಎಂದು ಟೀಕಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಎಕ್ಸ್ (ಹಿಂದಿನ ಟ್ವಿಟರ್) ಮೂಲಕ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
"ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ, ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವ ಮುನ್ನ, ನಿಮ್ಮದೇ ಸರ್ಕಾರ ಕನ್ನಡಿಗರ ಜೇಬಿಗೆ ಹೇಗೆ ಕತ್ತರಿ ಹಾಕುತ್ತಿದೆ ಎಂಬುದಕ್ಕೆ ಮೊದಲು ಉತ್ತರಿಸಿ. ನಿಮ್ಮ ಸರ್ಕಾರದ ತೆರಿಗೆ ಲೂಟಿಯನ್ನು ನಿಲ್ಲಿಸಿ, ನಂತರ ಬೇರೆಯವರಿಗೆ ಬುದ್ಧಿ ಹೇಳಿ" ಎಂದು ಅಶೋಕ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಜೋಡಿಯು ತಮ್ಮ 'ಗ್ಯಾರಂಟಿ'ಗಳ ವೈಫಲ್ಯವನ್ನು ಮುಚ್ಚಿಕೊಳ್ಳಲು, ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆದು ಪೆಟ್ರೋಲ್-ಡೀಸೆಲ್ ಅನ್ನು ತಮ್ಮ ಎಟಿಎಂ (ATM) ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಿಂದ 5.5 ರೂಪಾಯಿ ಡೀಸೆಲ್ ಬೆಲೆ ಏರಿಕೆ
ತಮ್ಮ ಪೋಸ್ಟ್ನಲ್ಲಿ ಕೆಲವು ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಆರ್. ಅಶೋಕ, ರಾಜ್ಯ ಸರ್ಕಾರದ ತೆರಿಗೆ ದಾಹದಿಂದಾಗಿಯೇ ತೈಲ ಬೆಲೆ ಏರಿಕೆಯಾಗಿದೆ ಎಂದು ದೂಷಿಸಿದ್ದಾರೆ. "ಜೂನ್ 2024ರಲ್ಲಿ ಪೆಟ್ರೋಲ್ ಬೆಲೆಯನ್ನು ಸುಮಾರು 3 ರೂಪಾಯಿ ಮತ್ತು ಡೀಸೆಲ್ ಬೆಲೆಯನ್ನು 3.5 ರೂಪಾಯಿ ಹೆಚ್ಚಿಸಿದ ಕಾಂಗ್ರೆಸ್ ಸರ್ಕಾರ, ಮತ್ತೆ ಏಪ್ರಿಲ್ 2025ರಲ್ಲಿ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಿಸಿದೆ. ಒಟ್ಟಾರೆಯಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಡೀಸೆಲ್ ಬೆಲೆ ಬರೋಬ್ಬರಿ 5. 5 ರೂಪಾಯಿ ಏರಿಕೆಯಾಗಿದೆ. ಇದು ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತವಲ್ಲ, ಕೇವಲ ರಾಜ್ಯ ಸರ್ಕಾರದ ತೆರಿಗೆ ದಾಹ" ಎಂದು ಟೀಕಿಸಿದ್ದಾರೆ. ರೈತರು ಹಾಗೂ ವಾಹನ ಸವಾರರಿಗೆ ನೀಡುತ್ತಿರುವ ಈ ಶಿಕ್ಷೆಗೆ ನಿಮ್ಮ ಬಳಿ ಉತ್ತರವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಯುಪಿಎ ಕಾಲದ ಹಳೆಯ ಸಾಲವನ್ನು ಮೋದಿ ಸರ್ಕಾರ ತೀರಿಸುತ್ತಿದೆ
ಕೇಂದ್ರದತ್ತ ಬೊಟ್ಟು ಮಾಡುವ ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮದೇ ಪಕ್ಷದ ಇತಿಹಾಸ ನೆನಪಿಲ್ಲ ಎಂದು ಕಾಲೆಳೆದಿರುವ ಅಶೋಕ, "ಯುಪಿಎ ಅವಧಿಯಲ್ಲಿ (2005-2010) ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಸರ್ಕಾರ 1.34 ಲಕ್ಷ ಕೋಟಿ ರೂಪಾಯಿ ಮೌಲ್ಯದ 'ಆಯಿಲ್ ಬಾಂಡ್ಗಳನ್ನು' ಬಿಡುಗಡೆ ಮಾಡಿತ್ತು. ಅಂದು ನೀವು ಮಾಡಿದ ಸಾಲವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರ್ಕಾರ ತೀರಿಸುತ್ತಿದೆ" ಎಂದು ತಿರುಗೇಟು ನೀಡಿದ್ದಾರೆ. ಮೋದಿ ಸರ್ಕಾರ ಕೇಂದ್ರ ತೆರಿಗೆಯನ್ನು 10 ರೂ. ರಷ್ಟು ಕಡಿತಗೊಳಿಸಿ ಜನರಿಗೆ ನೆರವು ನೀಡಿದೆ. ಆದರೆ ನೀವು 10 ಪೈಸೆಯನ್ನೂ ಕಡಿಮೆ ಮಾಡಿಲ್ಲ; ನಿಮಗೆ ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇದ್ದರೆ, ನೀವು ಏರಿಸಿರುವ 5.5 ರೂಪಾಐಈ ದರವನ್ನು ವಾಪಸ್ ಪಡೆಯಿರಿ ಎಂದು ಸವಾಲು ಹಾಕಿದ್ದಾರೆ.

