
ಸದನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಶಾಸಕ ಮುನಿರತ್ನ ಮಾತನಾಡಿದರು.
ಸದನದಲ್ಲಿ 'ಟೋಪಿ-ಚಡ್ಡಿ' ವಾರ್: 'ನನಗಿಂತ ಆರ್ಎಸ್ಎಸ್ನಲ್ಲಿ ನೀವೇ ಸೀನಿಯರ್' ಎಂದು ಡಿಕೆಶಿ ಕಾಲೆಳೆದ ಮುನಿರತ್ನ!
ಈ ವೇಳೆ 'ಚಡ್ಡಿ' ಮತ್ತು 'ಟೋಪಿ' ಪ್ರಸ್ತಾಪವಾಗುತ್ತಿದ್ದಂತೆ ಮುನಿರತ್ನ ಅವರು ಡಿಕೆಶಿಯವರ ಹಳೆಯ ಹಿನ್ನೆಲೆಯನ್ನು ಕೆದಕಿ ಕಾಲೆಳೆದರು. "ನೀವು ನನಗಿಂತಲೂ ಆರ್ಎಸ್ಎಸ್ಗೆ ಹಳಬರು ಸರ್. 'ನಮಸ್ತೆ ಸದಾ ವತ್ಸಲೇ' ಗೀತೆಯನ್ನು ಹಾಡಿದ್ದೀರಿ ಎಂದರು.
ವಿಧಾನಸಭೆಯ ಅಧಿವೇಶನದಲ್ಲಿ ಇಂದು ಬೆಂಗಳೂರಿನ ಬೀದಿ ದೀಪಗಳ ದುರಸ್ತಿ ವಿಚಾರವಾಗಿ ಆರಂಭವಾದ ಚರ್ಚೆ, ಅಂತಿಮವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವಿನ 'ಆರ್ಎಸ್ಎಸ್' ನಂಟಿನ ಜಟಾಪಟಿಗೆ ತಿರುಗಿತು. "ನನಗಿಂತಲೂ ಆರ್ಎಸ್ಎಸ್ನಲ್ಲಿ ನೀವೇ ಹಳಬರು, 'ನಮಸ್ತೆ ಸದಾ ವತ್ಸಲೇ' ಗೀತೆಯನ್ನು ಮೊದಲು ಕಲಿತವರೇ ನೀವು," ಎಂದು ಮುನಿರತ್ನ ಅವರು ಡಿಕೆಶಿಯವರ ಕಾಲೆಳೆದ ಪ್ರಸಂಗ ನಡೆಯಿತು.
ಬೀದಿ ದೀಪದ ಬೆಳಕಿನಡಿ ಕತ್ತಲೆಯ ಚರ್ಚೆ
ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರು ಸುಮನಹಳ್ಳಿ ಮೇಲ್ಸೇತುವೆ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಕೆಟ್ಟುಹೋಗಿರುವ ಬಗ್ಗೆ ಸರ್ಕಾರದ ಗಮನ ಸೆಳೆದರು. "ಬೀದಿ ದೀಪಗಳನ್ನು ಸರಿಪಡಿಸಿರುವುದಾಗಿ ಸರ್ಕಾರ ಉತ್ತರ ನೀಡಿದೆ. ಆದರೆ, ಅಲ್ಲಿ ದೀಪಗಳೇ ಇಲ್ಲದಿದ್ದಾಗ ಸರಿಪಡಿಸುವ ಮಾತೇಲ್ಲಿ ಬರುತ್ತದೆ?" ಎಂದು ಪ್ರಶ್ನಿಸಿದರು. "ನನ್ನ ಕ್ಷೇತ್ರ ಬಹಳ ದೊಡ್ಡದಿದ್ದು, ರಿಂಗ್ ರೋಡ್ 30 ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತದೆ. ಸಂಜೆ ಸ್ವಿಚ್ ಹಾಕಿದರೂ ದೀಪಗಳು ಉರಿಯುವುದಿಲ್ಲ. ನೂರು ಲೈಟ್ ಇದ್ದರೆ ಅದರಲ್ಲಿ ಅರವತ್ತು ಉರಿಯೋದಿಲ್ಲ, ಇದರಿಂದ ಅಪಘಾತಗಳು ಸಂಭವಿಸುತ್ತಿವೆ," ಎಂದು ಅಧಿಕಾರಿಗಳ ಸಭೆ ನಡೆಸುವಂತೆ ಒತ್ತಾಯಿಸಿದರು.
ಸಭೆಗೆ ಟೋಪಿ ಹಾಕಿ ಬಂದಿದ್ದಕ್ಕೆ ಡಿಕೆಶಿ ಕಿಡಿ
ಮುನಿರತ್ನ ಅವರ ಪ್ರಶ್ನೆಗೆ ಉತ್ತರಿಸಲು ಎದ್ದು ನಿಂತ ಡಿಸಿಎಂ ಡಿ.ಕೆ. ಶಿವಕುಮಾರ್, ಹಳೆಯ ಘಟನೆಯನ್ನು ನೆನಪಿಸಿಕೊಂಡರು. "ನಿಮ್ಮ ಕ್ಷೇತ್ರದ ಸಮಸ್ಯೆ ಆಲಿಸಲು ನಾವು ಗೌರವಯುತವಾಗಿ ಸಭೆ ಕರೆದಿದ್ದೆವು. ಆದರೆ ನೀವು ಆ ಸಭೆಗೆ ಟೋಪಿ ಹಾಕಿಕೊಂಡು ಬಂದು ಏನೇನೋ ಮಾಡಿದ್ರಿ," ಎಂದು ಕಿಚಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ, "ಮೂಗು ಇರೋವರೆಗೂ ನೆಗಡಿ ಹೋಗೋದಿಲ್ಲ, ಅದು ನಡೆಯುತ್ತಲೇ ಇರುತ್ತೆ ಬಿಡಿ ಸರ್," ಎಂದರು.
ತಕ್ಷಣವೇ ಡಿಕೆಶಿ, "ಅದು ನಿಮ್ಮ ಚರಿತ್ರೆಯಲ್ಲೇ ಬಂದುಬಿಟ್ಟಿದೆ," ಎಂದು ಟಾಂಗ್ ನೀಡಿದರು. ಮತ್ತೆ ವಿಷಯಕ್ಕೆ ಮರಳಲು ಯತ್ನಿಸಿದ ಮುನಿರತ್ನ, "ಅದು ಹೋಗೋದಿಲ್ಲ ಬಿಡಿ ಸರ್, ಈಗ ಸಮಸ್ಯೆ ಬಗ್ಗೆ ಹೇಳಿ," ಎಂದರು. ಆದರೆ ಡಿಕೆಶಿ ಬಿಡಲಿಲ್ಲ, "ಬಾ ಅಂತಾ ಕರೆದರೆ ಚಡ್ಡಿ ಹಾಕಿಕೊಂಡು ಕುಳಿತುಕೊಂಡೆ. ನಿನ್ನ ಆ ರೂಪಕ್ಕೆ ಉತ್ತರ ಕೊಡಬೇಕಲ್ವಾ ನಾನು? ಟೋಪಿ ಹಾಕಬೇಡ ಅಂತಾ ಹೇಳೋದಿಲ್ಲ, ಹಾಕು ನಿನಗೆ ಅದು ಹೊಸದು," ಎಂದು ತಿರುಗೇಟು ನೀಡಿದರು.
ಆರ್ಎಸ್ಎಸ್ನಲ್ಲಿ ನೀವೇ ಹಳಬರು!
ಈ ವೇಳೆ 'ಚಡ್ಡಿ' ಮತ್ತು 'ಟೋಪಿ' ಪ್ರಸ್ತಾಪವಾಗುತ್ತಿದ್ದಂತೆ ಮುನಿರತ್ನ ಅವರು ಡಿಕೆಶಿಯವರ ಹಳೆಯ ಹಿನ್ನೆಲೆಯನ್ನು ಕೆದಕಿ ಕಾಲೆಳೆದರು. "ನೀವು ನನಗಿಂತಲೂ ಆರ್ಎಸ್ಎಸ್ಗೆ ಹಳಬರು ಸರ್. 'ನಮಸ್ತೆ ಸದಾ ವತ್ಸಲೇ' ಗೀತೆಯನ್ನು ಹಾಡಿದ್ದೀರಿ. ಆರ್ಎಸ್ಎಸ್ ಗೀತೆಯನ್ನು ಫಸ್ಟ್ ನೀವು ಕಲಿತವರು, ನೀವು ಸೀನಿಯರ್," ಎಂದು ಚಾಟಿ ಬೀಸಿದರು.
ಇದಕ್ಕೆ ನಗುತ್ತಲೇ ಉತ್ತರಿಸಿದ ಡಿಕೆಶಿ, "ನನ್ನ ಗರಡಿಯಲ್ಲಿ ನೀನು ಕಲಿತವನು. ನಿನ್ನ ಕ್ಷೇತ್ರದ ಬಗ್ಗೆ ಚರ್ಚಿಸಲು ಗೌರವದಿಂದ ಕರೆದಿದ್ದೆವು, ಆಗ ನೀವು ಬರಲಿಲ್ಲ. ಬೇಕಾದರೆ ಇನ್ನೊಂದು ಬಾರಿ ಆಹ್ವಾನ ನೀಡೋಣ," ಎಂದು ಚರ್ಚೆಗೆ ತೆರೆ ಎಳೆದರು.

