
ಇಂದು ಸಚಿವ ಸಂಪುಟ ಸಭೆಯಲ್ಲಿ SIR ಬಗ್ಗೆ ಮಹತ್ವದ ಚರ್ಚೆ
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (SIR) ಜಾರಿಗೆ ತರಲು ಕೇಂದ್ರ ಚುನಾವಣಾ ಆಯೋಗದ ನಿರ್ಧಾರಿಸಿದ್ದು, ಈ ಪರಿಷ್ಕರಣೆಯಿಂದ ಲಕ್ಷಾಂತರ ಮತದಾರರು ಪಟ್ಟಿಯಿಂದ ಹೊರಬೀಳುವ ಭೀತಿ ಸರ್ಕಾರಕ್ಕೆ ಎದುರಾಗಿದೆ.
ಮತಕಳವು ಮತ್ತು ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್ಐಆರ್) ಬಗ್ಗೆ ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿ ಎಸ್ಐಆರ್ ಜಾರಿಗೆ ತರಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಬಿಹಾರ ಮಾದರಿಯನ್ನು ರಾಜ್ಯದಲ್ಲಿಯೂ ಅನುಷ್ಠಾನಗೊಳಿಸಲು ಆಯೋಗ ಮುಂದಾಗಿರುವ ಬೆನ್ನಲ್ಲೇ, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಈ ನಡೆಯನ್ನು ರಾಜಕೀಯವಾಗಿ ಹೇಗೆ ಎದುರಿಸಬೇಕು ಎಂಬ ಬಗ್ಗೆ ತಂತ್ರ ರೂಪಿಸುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೆ ಮೊದಲ ಭಾರಿಗೆ ಮತಕಳವು ಬಗ್ಗೆ ಬೆಂಗಳೂರಿನಿಂದಲೇ ಅಭಿಯಾನ ಶುರು ಮಾಡಿದ್ದರು. ಅಂದು ಲೋಕಸಭಾ ಚುನಾವಣಾ ವ್ಯಾಪ್ತಿಯ ಮಹದೇವಪುರ ಕ್ಷೇತ್ರದಲ್ಲಿ ಮತಕಳವು ನಡೆದಿದೆ ಎಂದು ಆರೋಪಿಸಿದ್ದರು. ಆದರೀಗ ಕೇಂದ್ರ ಚುನಾವಣಾ ಆಯೋಗ ನಡೆಸಲು ಉದ್ದೇಶಿರುವ ಎಸ್ಐಆರ್ ವಿರುದ್ದ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹರಿಹಾಯ್ದಿದ್ದರು. ನಿಜವಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಆರೋಪಿಸಿದ್ದರು.
ಏನಿದು ಬಿಹಾರ ಮಾದರಿ?
ಇತ್ತೀಚೆಗೆ ಬಿಹಾರದಲ್ಲಿ ಚುನಾವಣಾ ಆಯೋಗವು SIR ಅಳವಡಿಸಿಕೊಂಡು ಮತದಾರರ ಪಟ್ಟಿಯನ್ನು ಪರಿಷ್ಕರಿಸಿತ್ತು. ಈ ಪ್ರಕ್ರಿಯೆಯಲ್ಲಿ ಸರಿಸುಮಾರು 65 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಕರಡು ವರದಿಯಲ್ಲಿ ತಿಳಿಸಲಾಗಿತ್ತು. ದಾಖಲೆಗಳ ಕೊರತೆ ಅಥವಾ ತಾಂತ್ರಿಕ ಕಾರಣ ನೀಡಿ ಇಷ್ಟೊಂದು ದೊಡ್ಡ ಸಂಖ್ಯೆಯ ಮತದಾರರನ್ನು ತೆಗೆದುಹಾಕಿರುವುದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈಗ ಇದೇ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತಂದರೆ ಲಕ್ಷಾಂತರ ಮತದಾರರು ಪಟ್ಟಿಯಿಂದ ಹೊರಬೀಳುವ ಭೀತಿ ಎದುರಾಗಿದೆ.
SIR ಪರ ನಿಲುವು
ಕಾಂಗ್ರೆಸ್ ಈ ಯೋಜನೆಯನ್ನು 'ಮತದಾರರ ಹಕ್ಕು ಕಸಿಯುವ ಸಂಚು' ಎಂದು ಕರೆಯುತ್ತಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ವಿರೋಧ ಪಕ್ಷಗಳು SIR ಪರವಾಗಿವೆ. ಮತದಾರರ ಪಟ್ಟಿಯಲ್ಲಿರುವ ಅಕ್ರಮಗಳು, ನಕಲಿ ಮತದಾರರು ಮತ್ತು ದ್ವಿಪ್ರತಿಗಳನ್ನು ತೆಗೆದುಹಾಕಲು ಇದು ಅವಶ್ಯಕ ಎಂಬುದು ವಿರೋಧ ಪಕ್ಷಗಳ ವಾದವಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಇಂದು SIR ವಿರುದ್ಧ ನಿರ್ಣಯ ಕೈಗೊಳ್ಳುವ ಅಥವಾ ಇದನ್ನು ಕಾನೂನಾತ್ಮಕವಾಗಿ ಎದುರಿಸುವ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಒಂದು ವರ್ಗದ ಅಥವಾ ಒಂದು ಪಕ್ಷದ ಬೆಂಬಲಿಗರ ಮತಗಳನ್ನು ಕಡಿತಗೊಳಿಸುವ ಆರೋಪ ಕೇಳಿಬರುತ್ತಿದೆ.

