BEO shows humanity: Officer personally brought a student who had gone to work in his car to write the exam!
x

ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣೀಗೆರೆ ಹಾಗೂ ವಿದ್ಯಾರ್ಥಿನಿ ಪಲ್ಲವಿ ಹಳ್ಳಿಕೇರಿ

ಮಾನವೀಯತೆ ಮೆರೆದ ಬಿಇಓ: ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ಸ್ವಂತ ಕಾರಿನಲ್ಲಿ ಕರೆತಂದು ಪರೀಕ್ಷೆ ಬರೆಸಿದರು

ಅನಾರೋಗ್ಯ ಪೀಡಿತ ತಂದೆಯ ಔಷಧಿಗಾಗಿ ಹಣ ಹೊಂದಿಸಲು ಪಲ್ಲವಿ ಅನಿವಾರ್ಯವಾಗಿ ಪರೀಕ್ಷೆ ಬಿಟ್ಟು ದ್ರಾಕ್ಷಿ ತೋಟದಲ್ಲಿ ಮೆಣಸಿನಕಾಯಿ ಬಿಡಿಸುವ ಕೂಲಿ ಕೆಲಸಕ್ಕೆ ತೆರಳಿದ್ದರು.


Click the Play button to hear this message in audio format

ಅಧಿಕಾರ ಎನ್ನುವುದು ಕೇವಲ ಆದೇಶ ಹೊರಡಿಸಲಿಕ್ಕಷ್ಟೇ ಅಲ್ಲ, ಒಬ್ಬ ವ್ಯಕ್ತಿಯ ಬದುಕನ್ನೇ ಬದಲಿಸಬಲ್ಲ ಶಕ್ತಿ ಎಂಬುವುದನ್ನು ಮುಂಡರಗಿಯ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಗಂಗಾಧರ ಅಣ್ಣಿಗೇರಿ ಅವರು ಸಾಬೀತುಪಡಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗೈರಾಗಿ, ತಂದೆಯ ಚಿಕಿತ್ಸೆಗಾಗಿ ದ್ರಾಕ್ಷಿ ತೋಟದಲ್ಲಿ ಕೂಲಿ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುವ ಮೂಲಕ ಅವರು 'ಶಿಕ್ಷಣಾಧಿಕಾರಿ' ಎಂಬ ಹೆಸರಿಗೆ ಸಾರ್ಥಕತೆ ತಂದಿದ್ದಾರೆ.

ಪರೀಕ್ಷಾ ಕೇಂದ್ರದಿಂದ ದ್ರಾಕ್ಷಿ ತೋಟಕ್ಕೆ

ಮುಂಡರಗಿ ತಾಲೂಕಿನ ಆಲೂರು ಗ್ರಾಮದ ಪಲ್ಲವಿ ಹಳ್ಳಿಕೇರಿ ಎಂಬ ವಿದ್ಯಾರ್ಥಿನಿ ವಿಜ್ಞಾನ ಪರೀಕ್ಷೆಯ ದಿನ ಗೈರಾಗಿದ್ದರು. ಪರೀಕ್ಷಾ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಬಿಇಓ ಅಣ್ಣಿಗೇರಿ ಅವರು ಈ ಗೈರುಹಾಜರಿಯನ್ನು ಕೇವಲ ಸಂಖ್ಯೆಯಾಗಿ ನೋಡಲಿಲ್ಲ. ಬದಲಿಗೆ, ಆಕೆಯ ಮನೆಯ ಪರಿಸ್ಥಿತಿಯನ್ನು ವಿಚಾರಿಸಿದಾಗ ತಿಳಿದಿದ್ದು ಬಡತನದ ಬಗ್ಗೆ. ಅನಾರೋಗ್ಯ ಪೀಡಿತ ತಂದೆಯ ಔಷಧಿಗಾಗಿ ಹಣ ಹೊಂದಿಸಲು ಪಲ್ಲವಿ ಅನಿವಾರ್ಯವಾಗಿ ಪರೀಕ್ಷೆ ಬಿಟ್ಟು ದ್ರಾಕ್ಷಿ ತೋಟದಲ್ಲಿ ಮೆಣಸಿನಕಾಯಿ ಬಿಡಿಸುವ ಕೂಲಿ ಕೆಲಸಕ್ಕೆ ತೆರಳಿದ್ದರು.

ಇಲಾಖೆ ಕಾರಿನಲ್ಲೇ ವಿದ್ಯಾರ್ಥಿನಿ ಪಯಣ

ವಿಷಯ ತಿಳಿಯುತ್ತಿದ್ದಂತೆಯೇ ಬಿಇಓ ಅವರು ಕ್ಷಣಾರ್ಧವೂ ವ್ಯರ್ಥ ಮಾಡಲಿಲ್ಲ. ಪರೀಕ್ಷೆ ಆರಂಭವಾಗಲು ಇನ್ನು ಕೆಲವೇ ಸಮಯವಿತ್ತು. ತಕ್ಷಣವೇ ದ್ರಾಕ್ಷಿ ತೋಟಕ್ಕೆ ಧಾವಿಸಿದ ಅವರು, ಅಲ್ಲಿ ಬೆವರಿನಲ್ಲಿ ನೆಂದಿದ್ದ ಪಲ್ಲವಿಯ ಪೋಷಕರ ಮನವೊಲಿಸಿದರು. "ಹಣ ಇವತ್ತು ಬರುತ್ತದೆ, ನಾಳೆ ಹೋಗುತ್ತದೆ. ಆದರೆ ಈ ಪರೀಕ್ಷೆ ತಪ್ಪಿದರೆ ಮಗಳ ಭವಿಷ್ಯವೇ ಮಣ್ಣಾಗುತ್ತದೆ" ಎಂದು ತಿಳಿಹೇಳಿ, ಆಕೆಯನ್ನು ತಮ್ಮದೇ ಸರ್ಕಾರಿ ಕಾರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತಂದರು.

"ಒಂದು ವೇಳೆ ಈ ವಿದ್ಯಾರ್ಥಿನಿ ಇಂದು ಪರೀಕ್ಷೆ ತಪ್ಪಿಸಿಕೊಂಡಿದ್ದರೆ ಆಕೆಯ ಒಂದು ವರ್ಷದ ಪರಿಶ್ರಮ ವ್ಯರ್ಥವಾಗುತ್ತಿತ್ತು. ಮಕ್ಕಳ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ" ಎಂದು ಮುಂಡರಗಿ ಬಿಇಓ ಗಂಗಾಧರ ಅಣ್ಣಿಗೇರಿ ತಿಳಿಸಿದ್ದಾರೆ.

ಸಾರ್ವಜನಿಕರಿಂದ ಮೆಚ್ಚುಗೆ

ಒಬ್ಬ ಅಧಿಕಾರಿ ಮನಸ್ಸು ಮಾಡಿದ್ದರೆ 'ಗೈರು ಹಾಜರಿ' ಎಂದು ಮಾರ್ಕ್ ಮಾಡಿ ಸುಮ್ಮನಾಗಬಹುದಿತ್ತು. ಆದರೆ ಗಂಗಾಧರ ಅಣ್ಣಿಗೇರಿ ಅವರು ತೋರಿದ ಈ ಸಮಯಪ್ರಜ್ಞೆ ಮತ್ತು ಕಾಳಜಿಯಿಂದಾಗಿ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯ ಶೈಕ್ಷಣಿಕ ವರ್ಷ ಉಳಿದಿದೆ. ಇಲಾಖೆಯ ನಿಯಮಗಳಿಗಿಂತ ಮನುಷ್ಯತ್ವ ದೊಡ್ಡದು ಎಂದು ಸಾರಿದ ಅವರ ನಡೆಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

Read More
Next Story