
ಮಂಡ್ಯದಲ್ಲಿ ದೇಶದ ಮೊದಲ ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ ಸ್ಥಾಪನೆಗೆ ರಾಜ್ಯ ಒಪ್ಪಿಗೆ
ರಾಜ್ಯ ಸರ್ಕಾರವು ದೇಶದ ಪ್ರಪ್ರಥಮ ನಿರ್ಮಾಣ ಕಾಮಗಾರಿ ಮತ್ತು ಮೂಲಸೌಕರ್ಯ ಸಾಧನ ಪರೀಕ್ಷಾ ಮೂಲಸೌಕರ್ಯ ಸ್ಥಾವರ ನಿರ್ಮಾಣಕ್ಕೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಜಮೀನು ಲಭ್ಯವಿದೆ.
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ 'ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ' (ಎಆರ್ಎಐ) ಸ್ಥಾಪಿಸಲು ಉದ್ದೇಶಿಸಿರುವ, ದೇಶದ ಅತ್ಯಂತ ಪ್ರತಿಷ್ಠಿತ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರಕ್ಕೆ 105 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಯೋಜನೆಯನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ.
ಈ ಸಂಬಂಧ ಕೇಂದ್ರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರವು ದೇಶದ ಪ್ರಪ್ರಥಮ ನಿರ್ಮಾಣ ಕಾಮಗಾರಿ ಮತ್ತು ಮೂಲಸೌಕರ್ಯ ಸಾಧನ ಪರೀಕ್ಷಾ ಮೂಲಸೌಕರ್ಯ ಸ್ಥಾವರ ನಿರ್ಮಾಣಕ್ಕೆ ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸಚಿವರು ಅಪೇಕ್ಷಿಸಿದ್ದ 100 ಎಕರೆ ಜಮೀನು ಲಭ್ಯವಿದೆ. ಈ ಸಂಬಂಧ ಭಾರತೀಯ ಆಟೋಮೋಟೀವ್ ಸಂಶೋಧನಾ ಒಕ್ಕೂಟಕ್ಕೆ (ಎ.ಆರ್.ಎ.ಐ) ಸೂಕ್ತ ನಿರ್ದೇಶನ ನೀಡಿ, ಯೋಜನಾ ಪ್ರಸ್ತಾವನೆ ಕಳಿಸಿಕೊಡಲು ಸೂಚಿಸಬೇಕು ಎಂದು ಹೇಳಿದೆ.
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅವರಿಗೆ ಪತ್ರ ಬರೆದಿರುವ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಮಂಡ್ಯ ಜಿಲ್ಲೆಯಲ್ಲಿ ಈ ಯೋಜನೆಯನ್ನು ಸ್ಥಾಪಿಸಲು ಅಗತ್ಯವಾದ ಸಹಕಾರವನ್ನು ಘೋಷಿಸಿದೆ. ಸುಮಾರು 500 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕೇಂದ್ರವು, ಭಾರತದಲ್ಲೇ ಇಂತಹ ಮೊದಲನೆಯ ಸೌಲಭ್ಯವಾಗಲಿದೆ. ರಸ್ತೆ ನಿರ್ಮಾಣ, ಬೃಹತ್ ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯ ವಲಯದಲ್ಲಿ ಬಳಸುವ ಯಂತ್ರೋಪಕರಣಗಳ ಗುಣಮಟ್ಟ ಪರೀಕ್ಷೆ , ದೃಢೀಕರಣ ಮತ್ತು ಪ್ರಮಾಣೀಕರಣ ಪ್ರಕ್ರಿಯೆಗಳು ಇಲ್ಲಿ ನಡೆಯಲಿವೆ. ಮಂಡ್ಯ ಜಿಲ್ಲಾಧಿಕಾರಿಗಳು ನೀಡಿರುವ ಮಾಹಿತಿಯಂತೆ, ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 105 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ. ಈ ಸ್ಥಳವು ನಾಗಮಂಗಲ-ಮಂಡ್ಯ ರಾಜ್ಯ ಹೆದ್ದಾರಿಯಿಂದ ಕೇವಲ 500 ಮೀಟರ್ ದೂರದಲ್ಲಿದ್ದು, ಬೃಹತ್ ಯಂತ್ರೋಪಕರಣಗಳ ಸಾಗಾಟ ಮತ್ತು ಕೇಂದ್ರದ ನಿರ್ಮಾಣಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದ್ದಾರೆ.
ಉದ್ದೇಶಿತ ಸ್ಥಾವರ ಸ್ಥಾಪಿಸಲು ಕೇಂದ್ರ ಸಚಿವರು ಕೇಳಿದ್ದಕ್ಕಿಂತ ಹೆಚ್ಚಿನ ಭೂಮಿ ಇದೆ. ಆದ್ದರಿಂದ ಎಆರ್ಎಐ ಪ್ರತಿನಿಧಿಗಳು ಮತ್ತು ಅವರ ಸಚಿವಾಲಯದ ತಂಡ ಎರಡೂ ರಾಜ್ಯಕ್ಕೆ ಭೇಟಿ ನೀಡಿ, ಈ ಭೂಮಿಯು ತಮಗೆ ಸೂಕ್ತವಾಗಿದೆಯೇ ಎನ್ನುವುದನ್ನು ನಿರ್ಧರಿಸಲು ಜಂಟಿ ಪರಿಶೀಲನೆ ನಡೆಸುವಂತೆ ತ್ವರಿತವಾಗಿ ಸೂಚಿಸಬೇಕು. ಇದು ಸೂಕ್ತವಾಗಿದೆ ಎನಿಸಿದರೆ, ನಂತರ ಇದನ್ನು ಉದ್ದೇಶಿತ ಸ್ಥಾವರ ಸ್ಥಾಪನೆಗೆ ಮಂಜೂರು ಮಾಡಲಾಗುವುದು. ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಅವರು, ಪ್ರಸ್ತಾವಿತ ಸ್ಥಳವನ್ನು ವೀಕ್ಷಿಸಲು ಕೇಂದ್ರದ ಭಾರಿ ಕೈಗಾರಿಕೆಗಳ ಸಚಿವಾಲಯ ಮತ್ತು ARAI ಅಧಿಕಾರಿಗಳಿಗೆ ಆಹ್ವಾನ ನೀಡಿದ್ದಾರೆ. ಈ ಜಂಟಿ ಪರಿಶೀಲನೆಯಲ್ಲಿ ಸ್ಥಳವು ಯೋಜನೆಗೆ ಸೂಕ್ತವೆಂದು ದೃಢಪಟ್ಟ ತಕ್ಷಣವೇ, ಅಗತ್ಯವಿರುವ ಯೋಜನಾ ವರದಿಗಳನ್ನು ಪಡೆದು ಭೂಮಿಯನ್ನು ಅಧಿಕೃತವಾಗಿ ಹಂಚಿಕೆ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಕೇಂದ್ರವು ಸ್ಥಾಪನೆಯಾಗುವುದರಿಂದ ಮಂಡ್ಯ ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗುವ ನಿರೀಕ್ಷೆಯಿದೆ. ಸ್ಥಳೀಯ ಯುವಕರಿಗೆ ತಾಂತ್ರಿಕ ಮತ್ತು ಕೌಶಲ್ಯಾಧಾರಿತ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಮಂಡ್ಯ ಜಿಲ್ಲೆಯು ರಾಷ್ಟ್ರಮಟ್ಟದ ಕೈಗಾರಿಕಾ ಸಂಶೋಧನಾ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಬೆಳೆಯಲು ಇದು ಪೂರಕವಾಗಲಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾದ ಇದಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಮನ್ವಯದೊಂದಿಗೆ ಜಾರಿಗೆ ಬರುತ್ತಿರುವುದು ಜನತೆಯಲ್ಲಿ ಸಂತಸ ಮೂಡಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶವು ಭಾರತದ ಮೂಲಸೌಕರ್ಯ ಕ್ಷೇತ್ರದ ತಾಂತ್ರಿಕ ಕೇಂದ್ರವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

