ಆರ್‌ಟಿಐ ಕಾಯ್ದೆಯಡಿ ಮಾಹಿತಿ ಒದಗಿಸದ ಆರೋಪ; ಮಾಲೂರು ತಹಶೀಲ್ದಾರ್‌ಗೆ ದಂಡ
x

ಆರ್‌ಟಿಐ ಕಾಯ್ದೆಯಡಿ ಮಾಹಿತಿ ಒದಗಿಸದ ಆರೋಪ; ಮಾಲೂರು ತಹಶೀಲ್ದಾರ್‌ಗೆ ದಂಡ

ಮಾಹಿತಿ ಆಯೋಗದ ಆದೇಶವಿದ್ದರೂ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿರುವುದು ಹಾಗೂ ವಿಚಾರಣೆಗೆ ಗೈರು ಹಾಜರಾಗಿದ್ದರಿಂದ ತಹಶೀಲ್ದಾರ್‌ ಅವರಿಗೆ ದಂಡ ವಿಧಿಸಲಾಗಿದೆ.


Click the Play button to hear this message in audio format

ಸಾರ್ವಜನಿಕರು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗಳಿಗೆ ಸಕಾಲದಲ್ಲಿ ಮಾಹಿತಿ ಒದಗಿಸದ ಮಾಲೂರು ತಹಶೀಲ್ದಾರ್‌ ರೂಪ ಅವರಿಗೆ ಕರ್ನಾಟಕ ಮಾಹಿತಿ ಆಯೋಗವು ಪ್ರತ್ಯೇಕ ಮೂರು ಪ್ರಕರಣಗಳಿಂದ ಒಟ್ಟು 60 ಸಾವಿರ ರೂ. ದಂಡ ವಿಧಿಸಿದೆ.

ಎರಡು ಪ್ರಕರಣಗಳಲ್ಲಿ ತಲಾ 25 ಸಾವಿರ ರೂ. ಹಾಗೂ ಒಂದು ಪ್ರಕರಣದಲ್ಲಿ 10 ಸಾವಿರ ರೂ. ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗದ ಪೀಠ -5 ರ ರಾಜ್ಯ ಮಾಹಿತಿ ಆಯುಕ್ತ ರಾಜಶೇಖರ. ಎಸ್ ಆದೇಶ ಹೊರಡಿಸಿದ್ದಾರೆ.

ಮಾಹಿತಿ ಆಯೋಗದ ಆದೇಶವಿದ್ದರೂ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿರುವುದು ಹಾಗೂ ವಿಚಾರಣೆಗೆ ಗೈರು ಹಾಜರಾಗಿದ್ದರಿಂದ ತಹಶೀಲ್ದಾರ್‌ ಅವರಿಗೆ ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ವೇತನದಲ್ಲಿ ಒಂದೇ ಬಾರಿಗೆ ಕಡಿತ ಮಾಡಿ ಆಯೋಗದ ಖಾತೆಗೆ ತುಂಬುವಂತೆ ಕೋಲಾರ ಸಹಾಯಕ ಆಯುಕ್ತರು ಹಾಗೂ ಕೋಲಾರ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಏನಿದು ಘಟನೆ?

ಮಾಲೂರು ತಾಲೂಕಿನ ಭೈರತ್ನಹಳ್ಳಿಯ ವಿಜಯಕುಮಾರ್ ಬಿ.ಎಂ. ಅವರು ಬ್ಯಾಟರಾಯನಹಳ್ಳಿ ಗ್ರಾಮದ ಸರ್ವೆ ನಂ. 5 ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಆರ್‌ಟಿಐ ಕಾಯ್ದೆಯಡಿ ಕೋರಿದ್ದರು. ಆದರೆ, ಮಾಲೂರು ತಹಶೀಲ್ದಾರ್‌ ರೂಪ ಅವರು ಯಾವುದೇ ದಾಖಲೆ ನೀಡದೇ ಆಯೋಗದ ಆದೇಶವನ್ನು ಗಾಳಿಗೆ ತೂರಿದ್ದರಿಂದ 25 ಸಾವಿರ ರೂ. ದಂಡ ವಿಧಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಮಾಲೂರು ತಾಲೂಕಿನ ಪುರುಷನಹಳ್ಳಿ ಗ್ರಾಮದ ರಮೇಶ್ ಕೆ. ಅವರು ತಮ್ಮ ಜಮೀನು ಸರ್ವೇ ನಂ.78 ಪೋಡಿ ಆಗಿದ್ದು, ಹೊಸ ಸರ್ವೇ ನಂಬರ್ ಪ್ರಕಾರ ಆಕಾರ್ ಬಂದ್, ಹಿಸ್ಸಾ ಟಿಪ್ಪಣಿ ಹಾಗೂ ಇತರೆ ದಾಖಲೆಗಳನ್ನು ಕೋರಿದ್ದರು. ಆದರೆ, ಯಾವುದೇ ಮಾಹಿತಿ ನೀಡಿರಲಿಲ್ಲ. ಆಯೋಗದಿಂದ ಕಾರಣ ಕೇಳಿ ನೋಟಿಸ್ ಜಾರಿಯಾಗಿದ್ದರೂ ಮೂರು ವಿಚಾರಣೆಗೆ ತಹಶೀಲ್ದಾರ್‌ ಅವರು ಸತತ ಗೈರು ಹಾಜರಾಗಿದ್ದರು. ಆದ್ದರಿಂದ ಈ ಪ್ರಕರಣದಲ್ಲಿ 25 ಸಾವಿರ ರೂ. ದಂಡ ವಿಧಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಬೆಂಗಳೂರು ಕಾಮಾಕ್ಷಿಪಾಳ್ಯದ ಮಂಜುನಾಥ್ ಟಿ. ನಾಯಕ್ ಅವರು ಮಾಲೂರು ತಾಲೂಕಿನ ಚನ್ನಿಗರಾಯಪುರದ ಸರ್ವೇ ನಂ 6 ರ ಸಾಗುವಳಿ ಚೀಟಿ ಹಾಗೂ ಇತರೆ ದಾಖಲೆ ಕೋರಿದ್ದರು. ಈ ಪ್ರಕರಣದಲ್ಲಿಯೂ ಯಾವುದೇ ದಾಖಲೆ ನೀಡದೆ ವಿಚಾರಣೆಗೂ ಗೈರು ಹಾಜರಾಗಿದ್ದರಿಂದ 10 ಸಾವಿರ ರೂ. ದಂಡ ವಿಧಿಸಿ ಆದೇಶ ಮಾಡಿದೆ.

Read More
Next Story